ಸರಿಯಾಗಿ ಹೇಳಿದಿರಿ, ಅಡ್ವಾಣಿಜೀ
ಸಂಸತ್ ಸದನದಲ್ಲಿ, ವಿರೋಧಿ ನಾಯಕರ ಹತಾಶ ಆವೇಶ, ದಿನದ ’ರಾಜಕೀಯ ಸತ್ಯ’ವನ್ನು ಬಿಚ್ಚಿಟ್ಟಿದೆ! ಆಡಳಿತ ಯುಪಿಎ ಸರ್ಕಾರ ’ಅಕ್ರಮ ಸಂತಾನ’ ಎಂದು ಅವರು, ಬಹುಶಃ, ತತ್ಕ್ಷಣಕ್ಕೆ ಗುಡುಗಿಬಿಟ್ಟಿದ್ದಾರೆ. ಇದು ಸತ್ಯವೂ ಆಗಿದೆ!. ಜನ ಒಂದು ಪಾರ್ಟಿಗೆ ವೋಟು ಹಾಕಿದ್ದಾರೆಂದರೆ, ಅದರ ತತ್ವ-ಸಿದ್ಧಾಂತಗಳನ್ನವರು ಬೆಂಬಲಿಸಿದ್ದಾರೆಂದು ಅರ್ಥ. ಸಿದ್ಧಾಂತ, ಒಂದು ಪಕ್ಷದ ನೈತಿಕ ವೀರ್ಯ. ಚುನಾಯಿತ ವ್ಯಕ್ತಿಗಳು, ಅಧಿಕಾರದಿಂದ ಆದಷ್ಟು ಗೋರಿಕೊಳ್ಳುವ ಅವಕಾಶಕ್ಕಾಗಿ, ನೀಯತ್ತು ಕೆಟ್ಟು ಪರಸ್ಪರ ಕೈಜೋಡಿಸಬಹುದು; ಅದು ಪಕ್ಷ ಸಿದ್ಧಾಂತಗಳ ಕಲಬೆರಕೆಯಾಗುವುದಿಲ್ಲ. ಪಕ್ಷದ ಸಾರ-ಸಾರ್ವಸ್ವವನ್ನೇ ಗಾಳಿಗೆ ತೂರುವ ಮಂದಿ, ಬಹುಮತದ ಸಂಖ್ಯೆ ನೀಡಬಹುದು, ಆದರೆ ಸತ್ವವೆಲ್ಲಿರುತ್ತದೆ; ಯಾವ ಸತ್ಫಲ ಹುಟ್ಟಿ ಬರುತ್ತದೆ? ಅಡ್ವಾಣಿಯವರು ಯುಪಿಎಗೆ ಆಡಿದ ಮಾತು ಎನ್ಡಿಎಗೂ ಯಥಾವತ್ತಾಗಿ ಅನ್ವಯವಾಗುತ್ತದೆ. ಆ ಹತಾಶೆಯನ್ನೇ ಇರಬೇಕು, ಅವರು ಬ್ಲಾಗಿನಲ್ಲಿ ತೋಡಿಕೊಂಡಿರುವುದು. ಎನೇ ಆದರೂ, ದೊಡ್ಡ ರಾಜಕೀಯ ಪಕ್ಷಗಳು ತಮ್ಮ ಪ್ರತ್ಯುತ್ಪನ್ನ ಶಕ್ತಿಯನ್ನು ಕಾದಿಟ್ಟುಕೊಳ್ಳಬೇಕಾದ ಆವಶ್ಯಕತೆಯನ್ನು ಈ ಅಚಾತುರ್ಯದ ಮಾತು ದೃಢೀಕರಿಸುತ್ತದೆ!