ಸಾಂಕ್ರಾಮಿಕ ರೋಗಗಳ ಬಗ್ಗೆ ಇರಲಿ ಇನ್ನಿಲ್ಲದ ಎಚ್ಚರ

ಸಾಂಕ್ರಾಮಿಕ ರೋಗಗಳ ಬಗ್ಗೆ ಇರಲಿ ಇನ್ನಿಲ್ಲದ ಎಚ್ಚರ

ರಾಜ್ಯದಲ್ಲಿ ಬೇಸಗೆಯ ಪ್ರಖರತೆ ಹೆಚ್ಚಾಗುತ್ತಿದ್ದು ಜತೆ ಜತೆಯಲ್ಲೇ ಕೊರೋನಾ ಕೇಸುಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಬೇಸಗೆಯ ಧಗೆಯನ್ನು ತಾಳಲಾರದೇ ಜನ ಒದ್ದಾಡುತ್ತಿರುವುದೂ ಕಂಡು ಬರುತ್ತಿದೆ. ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದೂ ಜನರಲ್ಲಿ ಬಗೆಹರಿಯಲಾಗದ ವಿಷಯವಾಗಿದೆ.

ಇತ್ತೀಚೆಗಷ್ಟೇ ಹವಾಮಾನ ಇಲಾಖೆಯೂ ಕರ್ನಾಟಕದಲ್ಲಿ ಭಾರೀ ಪ್ರಮಾಣದ ಬಿಸಿಲ ಬೇಗೆ ಕಾಡಲಿದೆ ಎಂದು ಹೇಳಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ವಾರಗಳ ಕಾಲ ಬಿಸಿಗಾಳಿಯ ಪರಿಣಾಮಗಳು ಹೆಚ್ಚಾಗಬಹುದು ಎಂದಿದೆ. ಗರಿಷ್ಟ ತಾಪಮಾನವೂ ೩೮ ರಿಂದ ೩೯ ಡಿಗ್ರಿ ಸೆಲ್ಸಿಯಸ್ ವರೆಗೆ ಮುಟ್ಟಬಹುದು ಎಂದು ಎಚ್ಚರಿಕೆ ನೀಡಿದೆ. 

ಅಲ್ಲದೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ತಾಪಮಾನ ೪೩-೪೪ ಡಿಗ್ರಿ ಸೆಲ್ಸಿಯಸ್ ವರೆಗೆ ಮುಟ್ಟಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ವಿಚಿತ್ರವೆಂದರೆ, ಈಗಾಗಲೇ ರಾಜ್ಯದಲ್ಲಿ ಬಿಸಿಲಬೇಗೆ ಹೆಚ್ಚೇ ಇದ್ದು, ಜನ ಕಷ್ಟ ಪಡುತ್ತಿದ್ದಾರೆ. ಕಲಬುರಗಿ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತಾಪಮಾನ ೪೦ ಡಿಗ್ರಿ ಸೆಲ್ಸಿಯಸ್ ಗಿಂತಲೂ ಹೆಚ್ಚೇ ಆಗಿದೆ. ಇನ್ನು ಮೈಸೂರು ಸಹಿತ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ೩೬ರಿಂದ ೩೭ ಡಿಗ್ರಿ ಸೆಲ್ಸಿಯಸ್ ತಾಪಮಾನ ಕಾಣಿಸುತ್ತಿದೆ. ಸಾಮಾನ್ಯವಾಗಿ ಕರಾವಳಿ ಜಿಲ್ಲೆಗಳಲ್ಲಿ ಬೇಸಿಗೆ ಕಾಲದಲ್ಲಿ ೩೭ರಿಂದ ೩೮ ಡಿಗ್ರಿ ಸೆಲ್ಸಿಯಸ್ ತಾಪಮಾನ ಕಾಣಿಸುತ್ತದೆ. ಆದರೆ ಈ ಬಾರಿ ಒಂದೆರಡು ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿರುವುದು ಆತಂಕದ ವಿಚಾರವಾಗಿದೆ. 

ಇನ್ನು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿಯೂ ಪ್ರತೀ ಬೇಸಿಗೆ ಕಾಲಕ್ಕಿಂತ ಈ ಬಾರಿ ೨ ರಿಂದ ೩ ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚೇ ಕಾಣಿಸುತ್ತಿದೆ. ಇನ್ನೊಂದೆಡೆ ಕರಾವಳಿ ಸಹಿತ ಇತರೆ ಭಾಗಗಳಲ್ಲಿ ಆಗ್ಗಾಗ್ಗೆ ಮಳೆ ಸುರಿಯಲಿದ್ದು, ಇದಾದ ಬಳಿಕವೂ ಬಿಸಿಲ ಪ್ರಕೋಪ ಹೆಚ್ಚಾಗುತ್ತಿರುತ್ತದೆ ಎಂದೇ ಹವಾಮಾನ ಇಲಾಖೆ ಹೇಳಿಕೊಂಡಿದೆ. ಬೆಂಗಳೂರು ವಿಚಾರದಲ್ಲಿಯೂ ಬಿಸಿಲು ಬೇಗೆ ಹೆಚ್ಚಾಗಿದೆ. ಇಲ್ಲಿ ಸಾಮಾನ್ಯ ಉಷ್ಣಾಂಶಕ್ಕಿಂತ ಈ ಬಾರಿ ೨ ಡಿಗ್ರಿ ಸೆಲ್ಸಿಯಸ್ ಹೆಚ್ಚು ಕಂಡು ಬರುತ್ತಿದೆ. ತಂಪು ನಗರ ಎಂದೇ ಪ್ರಸಿದ್ಧಿಯಾಗಿರುವ ಬೆಂಗಳೂರಿನಲ್ಲಿಯೂ ಬಿಸಿಲಬೇಗೆಯಿಂದ ಜನ ಕಷ್ಟ ಪಡುತ್ತಿದ್ದಾರೆ. 

ಬೇಸಿಗೆ ಕಾಲದಲ್ಲಿ ಜನತೆ ನಿರ್ಜಲೀಕರಣದಿಂದಾಗಿ ಬಳಲುತ್ತಾರೆ. ಏಕೆಂದರೆ ಮನುಷ್ಯರ ದೇಹಕ್ಕೆ ಉಷ್ಣಾಂಶ ಸಹಿಸಿಕೊಳ್ಳುವುದು ತುಂಬಾ ಕಷ್ಟದ ವಿಚಾರ. ಅಲ್ಲದೆ ದೇಹದಲ್ಲಿನ ನೀರಿನ ಅಂಶವೆಲ್ಲವೂ ಹೆಚ್ಚಿನ ಉಷ್ಣಾಂಶದಿಂದಾಗಿ ಹೀರಿ ಕೊಳ್ಳುವುದರಿಂದ ಸುಸ್ತು ಹೆಚ್ಚಾಗುತ್ತದೆ. ಇದರ ಜತೆಗೆ ಡೆಂಗಿ, ಮಲೇರಿಯಾ, ಕೊರೋನಾದಂತಹ ರೋಗಗಳ ಕಾಟವೂ ಈ ಸಂದರ್ಭದಲ್ಲಿ ಹೆಚ್ಚು. ಅಂದರೆ ಡೆಂಗಿ ಮತ್ತು ಮಲೇರಿಯಾ ಬದಲಾದ ವಾತಾವರಣಕ್ಕೆ ತಕ್ಕಂತೆ ಕಾಣಿಸಿಕೊಳ್ಳುತ್ತವೆ. ಜತೆಗೆ ದೇಶದಾದ್ಯಂತ ಕೊರೋನಾ ಕೂಡಾ ಜಾಸ್ತಿಯಾಗಿದ್ದು, ಬಿಸಿಲ ಜತೆಗೆ ಇದೂ ಕೂಡ ಆತಂಕದ ವಿಚಾರವಾಗಿದೆ. ಅಲ್ಲದೆ, ಸಾಮಾನ್ಯ ಜ್ವರ ಪ್ರಕರಣಗಳೂ ಹೆಚ್ಚಾಗುತ್ತಿವೆ. 

ಇಂಥ ಸಂದರ್ಭದಲ್ಲಿ ಆದಷ್ಟು ಜನ ಜಾಗರೂಕತೆಯಿಂದ ಇರಬೇಕಾಗುತ್ತದೆ. ಸುಖಾಸುಮ್ಮನೆ ಬಿಸಿಲಿನಲ್ಲಿ ಓಡಾಡುವುದನ್ನು ಬಿಡಬೇಕಾಗುತ್ತದೆ. ಆಗಾಗ ನೀರು ಕುಡಿಯುವುದು, ಹಣ್ಣಿನ ಜ್ಯೂಸ್, ಎಳನೀರು ಕುಡಿಯುವುದನ್ನು ಮಾಡಬೇಕಾಗುತ್ತದೆ. ಒಂದು ವೇಳೆ ಜ್ವರದ ಬಾಧೆ ಕಾಣಿಸಿಕೊಂಡರೆ, ಆಸ್ಪತ್ರೆಗೆ ಹೋಗಿ ವೈದ್ಯರಲ್ಲಿ ತೋರಿಸಿ ಮದ್ದು ಪಡೆದುಕೊಳ್ಳಬೇಕು. ಇದರ ಜತೆಗೆ ಸರಕಾರವೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕೊರೋನಾ ಹೆಚ್ಚಳದ ಆತಂಕ ಎದುರಾಗಿದ್ದು, ಆಸ್ಪತ್ರೆಗಳನ್ನು ಸನ್ನದ್ಧವಾಗಿಡುವುದು, ವೈದ್ಯರು ಲಭ್ಯರಿರುವಂತೆ ಮಾಡಬೇಕು. ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಂಡರೂ ಅದನ್ನು ನಿವಾರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೭-೦೪-೨೦೨೩