ಸಾವು

ಸಾವು

ಕವನ

 

ಮರ ಸಾಯುತ್ತದೆ

ಋತುಗಳಿಲ್ಲ

ಹಕ್ಕಿಗಳಿಲ್ಲ

ಇಂಚರಗಳಿಲ್ಲ ಎಂದು ತಿಳಿದೊಡನೆ.

 

ನೀರು ಸಾಯುತ್ತದೆ

ಹರಿವ ಪಾತ್ರ

ತುಂಬಿಕೊಳ್ಳುವ ಗಾತ್ರ

ದಾಹ ತೀರಿಸುವ ಗುಣ ಕಳೆದುಕೊಂಡೊಡನೆ.

 

ಭೂಮಿ ಸಾಯುತ್ತದೆ

ಸುರಿಯಲಾರದಿನ್ನು ಮಳೆ

ಬೆಳೆಯಲಾಗದಿನ್ನು ಬೆಳೆ ಎಂದು ತಿಳಿದೊಡನೆ

 

ಮನುಷ್ಯ ಸಾಯುತ್ತಾನೆ

ಬದುಕಿನೆಡೆಗೊಂದು ಬೆರಗುಗಣ್ಣ

ಉತ್ಸಾಹದೊಂದು ಕಿರಣ

ತನ್ನ ಪ್ರೀತಿಸಲೊಂದು ಪ್ರಾಣ

ಇಲ್ಲವೆಂದಾದೊಡನೆ!

------------------------ 

Comments