ಸಿಂಪರಣೆಯಿಂದ ವಾಸಿಯಾಗದ ಅಡಿಕೆಯ ಎಲೆಚುಕ್ಕೆ ರೋಗ ! (ಭಾಗ ೧)

ಅಡಿಕೆಗೆ ಬಾಧಿತವಾದ ಎಲೆ ಚುಕ್ಕೆ ರೋಗ ವಾಸಿ ಮಾಡುವುದಕ್ಕೆ ತಜ್ಞರು ಬಹಳಷ್ಟು ಸಲಹೆಗಳನ್ನು ನೀಡುತ್ತಿದ್ದಾರೆ. ಅವರ ಸಲಹೆಯನ್ನು ಪಾಲಿಸಿದವರಲ್ಲಿ ಈ ರೋಗ ಒಮ್ಮೆ ಹತೋಟಿಯಾದಂತೆ ಕಂಡರೂ ಮತ್ತೆ ನಾನಿದ್ದೇನೆ ಎಂದು ಮರುಕಳಿಸುತ್ತಿದೆ. ದುಬಾರಿ ಬೆಲೆಯ ಶಿಲೀಂದ್ರ ನಾಶಕ- ದುಬಾರಿ ಕೂಲಿ ಸಂಭಾವನೆಯೊಂದಿಗೆ ಎಲೆಚುಕ್ಕೆ ರೋಗ ಓಡಿಸುವ ರೈತರ ಶ್ರಮ ಹೇಳತೀರದು. ಎಲೆ ಚುಕ್ಕೆ ರೋಗವನ್ನು ಅಲ್ಪ ಕಾಲದ ತನಕ ಹತೋಟಿ ಮಾಡಬಹುದೇ ಹೊರತು ಇಲ್ಲದಂತೆ ಮಾಡಲು ಪ್ರಕೃತಿಯೇ ಸಹಕರಿಸಬೇಕು.
ಎಲೆಚುಕ್ಕೆ ರೋಗ ಅಡಿಕೆ ಬೆಳೆಗಾರರ ಪಾಲಿಗೆ ಇಷ್ಟು ದೊಡ್ಡ ಸಮಸ್ಯೆಯಾಗಿ ಪರಿಣಮಿಸೀತು ಎಂದು ಯಾರೂ ಊಹಿಸಿಯೂ ಇರಲಿಕ್ಕಿಲ್ಲ. ಈ ರೋಗ ಇಲ್ಲದ ಅಡಿಕೆ ತೋಟವೇ ಇಲ್ಲ ಎಂದರೂ ತಪ್ಪಾಗಲಾರದು. ಕೆಲವು ಕಡೆ ಸ್ವಲ್ಪ ಕಡಿಮೆ ಇರಬಹುದು, ಆದರೂ ಸೋಂಕು ಇದ್ದೇ ಇದೆ. ಕೆಲವು ಕಡೆ ವಿಪರೀತವಾಗಿ ಕಾಣಿಸುತ್ತಿದೆ. ಅದರಲ್ಲೂ ಒಂದೇ ತೋಟದಲ್ಲಿ ಕೆಲವು ಮರಗಳು ಅತಿಯಾಗಿ ಸೋಂಕಿಗೆ ಒಳಗಾಗಿರುವುದು ಮತ್ತೆ ಕೆಲವು ಅಲ್ಪ ಸ್ವಲ್ಪ ಸ್ವಲ್ಪ, ಕೆಲವು ಸೋಂಕು ತಗಲದೇ ಸುರಕ್ಷಿತವಾಗಿ ಇರುವುದನ್ನೂ ನಾವು ಗಮನಿಸಬಹುದು. ಇದೆಲ್ಲಾ ಯಾಕೆ ಆಗುತ್ತದೆ ಎಂಬುದನ್ನು ಸ್ವಲ್ಪ ಯೋಚಿಸಬೇಕಾಗುತ್ತದೆ. ಸಸ್ಯಗಳಲ್ಲಿ ಅಂತರ್ಗತವಾಗಿ ನಿರೋಧಕ ಶಕ್ತಿ ಎಂಬುದು ಇರುತ್ತದೆ. ಇದು ಎಲ್ಲಾ ಸಸ್ಯಗಳಲ್ಲೂ ಕಾಣಬಹುದು. ಒಂದೇ ತೋಟದಲ್ಲಿ ಗರಿಷ್ಟ ಪ್ರಮಾಣದಲ್ಲಿ ಕೊಳೆ ರೋಗ ಬಂದಾಗಲೂ ಕೆಲವು ಮರಗಳು ರೋಗದ ಸೋಂಕಿನಿಂದ ಮುಕ್ತವಾಗಿ ಇರುತ್ತವೆ. ಹೆಚ್ಚಿನ ಮರಗಳಿಗೆ ಹಳದಿ ಎಲೆ ರೋಗ ಬಂದರೂ ಕೆಲವು ಏನೂ ಆಗದ ಮರಗಳಿರುತ್ತವೆ. ನಮ್ಮ ತೋಟದಲ್ಲೇ ರೋಗ ಇರುವವುಗಳೂ ರೋಗ ನಿರೋಧಕ ಶಕ್ತಿ ಹೊಂದಿದ ಸಸ್ಯಗಳೂ ಇರುತ್ತವೆ. ಇವುಗಳನ್ನು ನಾವು ನಿರಂತರ ಗಮನಿಸುತ್ತಾ ಇದ್ದರೆ ತಿಳಿಯುತ್ತದೆ. ಅಡಿಕೆ ತೋಟಕ್ಕೆ ಎಲೆ ಚುಕ್ಕೆ ರೋಗ ಈಗ ಬಂದದಲ್ಲ. ಬಹಳ ಹಿಂದಿನಿಂದಲೂ ಇದು ಇತ್ತು. ಈಗ ಮಾತ್ರ ಇದು ಉಲ್ಬಣವಾಗಿದೆ. ಇದಕ್ಕೆ ಕಾರಣ ಹವಾಮಾನ ಎಂಬುದಾಗಿ ಹೇಳಲಾಗುತ್ತದೆ. ಹವಾಮಾನ ಒಂದು ಕಾರಣವಾಗಿರಬಹುದು. ಆದರೆ ಈಗಿನ ಎರಡು ಮೂರು ವರ್ಷಗಳ ಹವಾಮಾನದ ತರಹವೇ ಈ ಹಿಂದೆಯೂ ಆಗಿತ್ತು. ಹಾಗಿರುವಾಗ ಹವಾಮಾನ ಒಂದೇ ಇದಕ್ಕೆ ಕಾರಣ ಎನ್ನಲಾಗುವುದಿಲ್ಲ. ಬಹುಷಃ ಇದು ಉಲ್ಬಣಾವಸ್ಥೆಗೆ ಬರಲು ಜೀವ ವೈವಿಧ್ಯಗಳ ಅಸಮತೋಲನ ಕಾರಣ ಇರಬಹುದೇ ಎಂಬ ಬಗ್ಗೆ ತಜ್ಞರು ಅಧ್ಯಯನ ಮಾಡಬೇಕಾಗಿದೆ.
ಎಲ್ಲವೂ ಏಕ ಬೆಳೆಯಾದುದೇ ತೊಂದರೆ: ಒಂದು ಕಾಲ ಅದು ಸುಮಾರು ೧೫ ವರ್ಷಕ್ಕೆ ಹಿಂದೆ. ರಬ್ಬರ್ ಬೆಳೆಗೆ ಭಾರೀ ಭವಿಷ್ಯ ಇದೆ ಎಂದು ಜನ ಭಾರೀ ಪ್ರಮಾಣದಲ್ಲಿ ರಬ್ಬರ್ ಬೆಳೆಯನ್ನು ಹಾಕಿದರು. ಅದು ಸೊಪ್ಪಿನ ಬೆಟ್ಟ ಎಂದು ಖಾಲಿ ಬಿಟ್ಟಿದ್ದ ಸ್ಥಳದಲ್ಲಿ. ಆ ಸಮಯದಲ್ಲಿ ಕರಾವಳಿ ಭಾಗದಲ್ಲಿ ಬಹುತೇಕ ಸಸ್ಯ ಜೀವ ವೈವಿಧ್ಯಗಳು ನಾಶವಾಗಿವೆ. ಮಲೆನಾಡಿನ ಜನ ಸ್ವಲ್ಪ ಮಟ್ಟಿಗೆಯಾದರೂ ಸೊಪ್ಪಿನ ಬೆಟ್ಟ, ಇತ್ಯಾದಿಗಳನ್ನು ಉಳಿಸಿಕೊಂಡಿದ್ದಾರೆ. ಅ ನಂತರ ಅಡಿಕೆಯ ಬೆಲೆ ಭಾರೀ ಏರಿಕೆಯಾಗಲಾರಂಭಿಸಿದಾಗ ಅಳಿದುಳಿದ ಸ್ಥಳದಲ್ಲೂ ಅಡಿಕೆ ಕೃಷಿ ಮಾಡಿದೆವು. ಆಗಲೂ ಸಸ್ಯ ಜೀವ ವೈವಿಧ್ಯಗಳಿಗೆ ಭಾರೀ ಏಟು ಬಿತ್ತು. ಈಗ ಮೀಸಲು ಅರಣ್ಯದಲ್ಲಿ ಮಾತ್ರ ಮರಮಟ್ಟುಗಳು ಉಳಿದುಕೊಂಡಿವೆ. ಯಾರೂ ಹಕ್ಕುದಾರರು ಇಲ್ಲದ ಕೆಲವೇ ಕೆಲವು ಸ್ಥಳಗಳಲ್ಲಿ ಕುರುಚಲು ಗಿಡಗಳಿವೆ. ಅದೆಷ್ಟೋ ಸಸ್ಯ ವೈವಿದ್ಯಗಳು ಕಣ್ಮೆರೆಯಾಗಿವೆ. ಉದಾ: ಕಾಸರಕನ ಮರ ಕಾಣೆ. ಕನಪ್ಪಟೆ ಕಾಣೆ. ನೆಲದಲ್ಲಿ ಬೆಳೆಯುವ ಹುಲ್ಲು ಸಸ್ಯಗಳಲ್ಲೂ ( ಮುಳಿ ಹುಲ್ಲಿನ ಚಾವಣಿಗೆ ಬಳಸುತ್ತಿದ್ದ ಹುಲ್ಲು) ಒಂದಷ್ಟು ವೈವಿಧ್ಯಗಳು ಕಾಣೆಯಾಗಿವೆ. ಕಾಡು ಮತ್ತು ನಾಡಿನಲ್ಲೂ ಸ್ಥಳೀಯ ಸಸ್ಯ ವೈವಿಧ್ಯದ ಬೆಳವಣಿಗೆಯನ್ನು ಹತ್ತಿಕ್ಕುವ ಬಳ್ಳಿಗಳು, ಕಳೆ ಸಸ್ಯಗಳು ತಮ್ಮ ಪ್ರಾಭಲ್ಯವನ್ನು ಹೆಚ್ಚಿಸಿಕೊಳ್ಳುತ್ತಿವೆ. ಎಲ್ಲಿ ನೋಡಿದರಲ್ಲಿ ಅಡಿಕೆ ತೋಟ, ರಬ್ಬರ್ ತೋಟವೇ. ಎಲ್ಲಾ ಕಡೆ ಏಕ ಬೆಳೆಯೇ ಆಗಿರುವ ಕಾರಣ ರೋಗ ಕಾರಕಗಳಿಗೆ ಅದೇ ಆಶ್ರಯವಾಗಿವೆ. ಅಲ್ಲಿಂದ ಅದು ಹೋಗುವುದು ಇಲ್ಲ. ಹೋಗಲು ಅವಕಾಶವೂ ಇಲ್ಲದ ಸ್ಥಿತಿ ಉಂಟಾಗಿದೆ. ಕರಾವಳಿ ಭಾಗದಲ್ಲಿ ರಬ್ಬರ್ ಬೆಳೆಯ ಮುಚ್ಚಲು ಬೆಳೆ (ಮುಖುನ) ಬಹಳಷ್ಟು ಸಸ್ಯ ಜೀವ ವೈವಿಧ್ಯವನ್ನು ನಾಶಮಾಡಿದೆ!
ರೋಗಕಾರಕಗಳು ಒಂದು ಸಸ್ಯವನ್ನು ಆಶ್ರಯಿಸಿದ್ದರೆ, ಆ ಸಸ್ಯ ನಾಶವಾದಾಗ ಅದರ ಆಶ್ರಯಪಡೆದಿದ್ದ ಪರಾವಲಂಭಿ ಜೀವಿ ಸಹ ನಾಶವಾಗುವುದೂ ಇದೆ. ಎರಡು ಮೂರು ಸಸ್ಯಗಳನ್ನು ಆಶ್ರಯಿಸಿರುವ ಪರಾವಲಂಭಿ ಜೀವಿ ಒಂದು ನಾಶವಾದರೆ ಮತ್ತೊಂದನ್ನು ಹೆಚ್ಚು ಆಶ್ರಯಿಸುತ್ತದೆ.
(ಇನ್ನೂ ಇದೆ)
ಚಿತ್ರ- ಮಾಹಿತಿ: ರಾಧಾಕೃಷ್ಣ ಹೊಳ್ಳ