ಸಿದ್ಧಲಿಂಗಯ್ಯನವರ ಅದ್ಭುತ ಕಲಾ ಕಾಣಿಕೆ -ಬೂತಯ್ಯನ ಮಗ ಅಯ್ಯು

ಸಿದ್ಧಲಿಂಗಯ್ಯನವರ ಅದ್ಭುತ ಕಲಾ ಕಾಣಿಕೆ -ಬೂತಯ್ಯನ ಮಗ ಅಯ್ಯು

"ಬೂತಯ್ಯನ ಮಗ ಅಯ್ಯು" ಚಿತ್ರದಲ್ಲಿ ಒಂದು ದೃಶ್ಯ ಬರುತ್ತದೆ. ಅದರಲ್ಲಿ ಬೂತಯ್ಯನ ಪಾತ್ರ ವಹಿಸಿದ ವ್ಯಕ್ತಿ ದೇವರಿಗೆ ಪೂಜೆ ಮಾಡುವಾಗ ಒಂದು ಊದುಕಡ್ಡಿಯನ್ನು ಉರಿಸಿ, ಪೂಜೆ ಮುಗಿದ ತಕ್ಷಣ ಅದನ್ನು ಆರಿಸಿ ನಾಳೆಯ ಪೂಜೆಗೆ ತೆಗೆದಿಡುತ್ತಾನೆ. ಈ ಒಂದು ದೃಶ್ಯದ ಮೂಲಕವೇ ಆ ಬೂತಯ್ಯ ಎಷ್ಟು ಜಿಪುಣ ವ್ಯಕ್ತಿ ಎಂಬ ಅರಿವಾಗುತ್ತದೆ. ಇಂತಹ ಅಪರೂಪದ ಕಲ್ಪನೆಗಳನ್ನು ಹೊತ್ತು, ಕನ್ನಡ ಸಿನೆಮಾ ರಂಗಕ್ಕೆ ಅನೇಕ ಹೊಸತನವನ್ನು ನೀಡಿದ ವ್ಯಕ್ತಿಯೇ ಖ್ಯಾತ ನಿರ್ದೇಶಕ ಸಿದ್ಧಲಿಂಗಯ್ಯನವರು. ಆ ಬೂತಯ್ಯನ ಪಾತ್ರ ವಹಿಸಿದ ವ್ಯಕ್ತಿ ಎಂ ಪಿ ಶಂಕರ್ ಮತ್ತು ಆತನ ಮಗನಾಗಿ ನಟಿಸಿದ ವ್ಯಕ್ತಿ ಲೋಕೇಶ್. ಇವರಿಬ್ಬರ ಜುಗಲ್ ಬಂದಿ ನಟನೆ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದರಲ್ಲಿ ಯಾವುದೇ ಸಂದೇಹವಿಲ್ಲ. ಸಾಹಸ ಸಿಂಹ ವಿಷ್ಣುವರ್ಧನ್ ಅವರೂ ಈ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದರು. ಅದು ಅವರ ಮುಂದಿನ ಚಿತ್ರ ‘ನಾಗರಹಾವು' ಗೆ ಅಡಿಪಾಯವಾಯಿತು.

ನಿಮಗೆ ನೆನಪಿದೆಯೋ ಏನೋ ಗೊತ್ತಿಲ್ಲ, ೯೦ ರ ದಶಕದಲ್ಲಿ ತೆರೆಕಂಡ ‘ದಿಲ್' ಎಂಬ ಹಿಂದಿ ಚಿತ್ರದಲ್ಲೂ ಈ ಮೇಲಿನ ಊದುಕಡ್ಡಿಯ ದೃಶ್ಯ ಇದೆ. ಇದರಲ್ಲೂ ಜಿಪುಣ ಅನುಪಮ್ ಖೇರ್ ಬೂತಯ್ಯ ಮಾಡಿದಂತೆಯೇ ಮಾಡುತ್ತಾನೆ. ೭೦ ರ ದಶಕದಲ್ಲೇ ಇಂತಹ ಅದ್ಭುತ ಯೋಜನೆಗಳ ಮೂಲಕ ಮನೆಮಾತಾಗಿದ್ದರು ನಿರ್ದೇಶಕ ಸಿದ್ಧಲಿಂಗಯ್ಯನವರು. ಇವರ ಚಿತ್ರ ರಂಗದ ಪಯಣ ಹೂವಿನ ಹಾಸಿಗೆಯೇನೂ ಆಗಿರಲಿಲ್ಲ.

೧೯೫೨ರಲ್ಲಿ ಮೈಸೂರಿನ ನವಜ್ಯೋತಿ ಸ್ಟುಡಿಯೋದಲ್ಲಿ ಫ್ಲೋರ್ ಬಾಯ್ ಆಗಿ ಕೆಲಸ ಪ್ರಾರಂಭಿಸಿದ ಸಿದ್ಧಲಿಂಗಯ್ಯನವರು ನಂತರ ಪ್ರೀಮಿಯರ್ ಸ್ಟುಡಿಯೋದಲ್ಲಿ ಲೈಟ್ ಬಾಯ್ ಆಗಿ ದುಡಿದರು. ೧೯೬೯ ಅವರ ಬದುಕಿನ ಮಹೋನ್ನತ ವರ್ಷ ಎನ್ನಬಹುದು. ಆ ವರ್ಷ ಅವರು ನಿರ್ದೇಶಿಸಿದ ಡಾ. ರಾಜ್ ಕುಮಾರ್ ಅಭಿನಯದ ‘ಮೇಯರ್ ಮುತ್ತಣ್ಣ' ನಿರ್ಮಾಣವಾಯಿತು. ಇಲ್ಲಿಂದ ಸಿದ್ಧಲಿಂಗಯ್ಯ ಹಿಂದಿರುಗಿ ನೋಡಿದ್ದೇ ಇಲ್ಲ. ೧೯೭೨ರಲ್ಲಿ ತೆರೆಕಂಡ ‘ಬಂಗಾರದ ಮನುಷ್ಯ' ಸಿನೆಮಾ ರಂಗದಲ್ಲೇ ಅದ್ಭುತ ದಾಖಲೆಯನ್ನು ಬರೆಯಿತು. ಇಂದಿಗೂ ಆ ಚಿತ್ರದ ಪ್ರದರ್ಶನ ಇತಿಹಾಸದ ಪುಟಗಳಲ್ಲಿ ಅಳಿಯಲಾಗದ ದಾಖಲೆಯಾಗಿ ಉಳಿದಿದೆ. ತಮ್ಮ ಮಗನನ್ನು ನಾಯಕನನ್ನಾಗಿ ತೆರೆಗೆ ತರಬೇಕೆಂದು ಸಿದ್ಧಲಿಂಗಯ್ಯನವರು ಪ್ರಯತ್ನ ಪಡುತ್ತಿದ್ದಾಗ ಹಿಯಾಳಿಸಿದವರೇ ಹೆಚ್ಚು ಮಂದಿ. ‘ಕಾಗೆ ಬಣ್ಣದ ಮಗನನ್ನು ಹೀರೋ ಮಾಡುತ್ತಾನಂತೆ..’ ಎಂದು ಕುಹಕಿಗಳು ಆಡಿದ ಮಾತನ್ನು ಚಾಲೆಂಜ್ ಆಗಿ ಸ್ವೀಕರಿಸಿದ ಸಿದ್ಧಲಿಂಗಯ್ಯ ತಮ್ಮ ಮಗ ಮುರಳಿಯನ್ನು ಹಾಕಿಕೊಂಡು ‘ಪೇಮಪರ್ವ' ಚಿತ್ರ ಮಾಡಿ ಗೆದ್ದು ತೋರಿಸಿದರು. 

ಸಿದ್ಧಲಿಂಗಯ್ಯನವರ ಚಿತ್ರಗಳು ಅಂದಿನ ಕಾಲದಲ್ಲೂ ತಾಂತ್ರಿಕವಾಗಿ ಬಹಳ ಶ್ರೀಮಂತವಾಗಿತ್ತು. ಇಂದಿನ ದಿನಗಳಂತೆ ಅಂದು ಕಂಪ್ಯೂಟರ್ ಮೊದಲಾದ ತಂತ್ರಜ್ಞಾನದ ಬೆಂಬಲವಿರಲಿಲ್ಲ. ಆದರೂ ಬೂತಯ್ಯನ ಮಗ ಅಯ್ಯು ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ನೀರಿನ ಪ್ರವಾಹದ ರುದ್ರರಮಣೀಯ ದೃಶ್ಯವನ್ನು ತಮ್ಮ ಕ್ಯಾಮರಾ ಮೆನ್ ರಾಜಾರಾಮ್ ಸಹಕಾರದಿಂದ ಅದ್ಭುತವಾಗಿ ತೋರಿಸಿ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸುತ್ತಾರೆ ಸಿದ್ಧಲಿಂಗಯ್ಯ ಇವರು. ಆ ಪ್ರವಾಹದ ನೀರಿನಲ್ಲಿ ಮುಳುಗುವ ಒಂಟಿ ಮನೆಯ ಮಿನಿಯೇಚರ್ ಅನ್ನು ಸೃಷ್ಟಿಸಿದವರು ನಾಗರಾಜ್. ಇವರೆಲ್ಲರ ಕಲಾ ನೈಪುಣ್ಯವನ್ನು ಸಶಕ್ತವಾಗಿ ಬಳಕೆ ಮಾಡಿದ್ದು ಸಿದ್ಧಲಿಂಗಯ್ಯನವರ ತಾಕತ್ತು. ಬೂತಯ್ಯನ ಮಗ ಅಯ್ಯು ಚಿತ್ರ ಯಶಸ್ಸಿಗೆ ಮತ್ತೊಂದು ಕಾರಣವೆಂದರೆ ಅದರ ಸಂಗೀತ ಮತ್ತು ಹಾಡುಗಳು. ಮರೆಯಲೇ ಬಾರದಂತಹ ಸಂಗೀತ ನೀಡಿದ್ದು ಜಿ ಕೆ ವೆಂಕಟೇಶ್. ಇವರು ಈ ಚಿತ್ರದ ಸಂಗೀತ ನಿರ್ದೇಶಕರೂ ಹೌದು, ಗಾಯಕರೂ ಹೌದು. ಅವರು ಸಂಗೀತ ನಿರ್ದೇಶನ ಮಾಡಿದ ‘ವಿರಸವೆಂಬ ವಿಷಕೆ ಬಲಿಯಾದೆ ಏತಕೆ' ಎಂಬ ಹಾಡು ಈಗಲೂ ಸೂಪರ್ ಹಿಟ್ ಹಾಡಾಗಿ ಉಳಿದಿದೆ. ಮನುಷ್ಯ ಮನುಷ್ಯರ ನಡುವಿನ ವಿರಸವನ್ನು ಬಿಂಬಿಸುವಲ್ಲಿ ಈ ಹಾಡು ಬಹಳ ಪ್ರಭಾವಶಾಲಿಯಾಗಿದೆ. ಈ ಹಾಡನ್ನು ಹಾಡಿದ್ದು ಜಿ ಕೆ ವೆಂಕಟೇಶ್ ಅವರೇ... 

ವಾಸ್ತವವಾಗಿ ಈ ಹಾಡನ್ನು ಹಾಡಬೇಕಾಗಿದ್ದು ಎಸ್ ಪಿ ಬಾಲಸುಬ್ರಹ್ಮಣ್ಯ ಇವರು. ಆದರೆ ಚಿ. ಉದಯಶಂಕರ್ ಬರೆದ ಈ ಹಾಡಿನ ಸಾಲುಗಳನ್ನು ನೋಡಿದಾಗ ಜಿ ಕೆ ವೆಂಕಟೇಶ್ ಅವರಿಗೆ ತಾವೇ ಈ ಹಾಡನ್ನು ಹಾಡಬೇಕು ಎಂಬ ಉತ್ಕಟ ಬಯಕೆಯಾಯಿತಂತೆ. ಸಿದ್ಧಲಿಂಗಯ್ಯರ ಬಳಿ ಹಠ ಹಿಡಿದು, ಅವರನ್ನು ಒಪ್ಪಿಸಿ ಈ ಹಾಡನ್ನು ಹಾಡಿದರು ವೆಂಕಟೇಶ್. ನಿರ್ದೇಶಕರ ಮತ್ತು ಸಾಹಿತ್ಯ ಬರೆದವರ ನಿರೀಕ್ಷೆಯನ್ನು ಸುಳ್ಳು ಮಾಡದೇ ಈ ಹಾಡು ಸೂಪರ್ ಹಿಟ್ ಆಯಿತು. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಅವರು ಜಿ ಕೆ ವೆಂಕಟೇಶ್ ಅವರ ಶಿಷ್ಯರು. 

‘ಬೂತಯ್ಯನ ಮಗ ಅಯ್ಯು' ಚಿತ್ರದ ಕಥೆಯನ್ನು ಸಿದ್ಧಲಿಂಗಯ್ಯನವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ವೈಯ್ಯಾರಿ' ಎಂಬ ಕಥಾ ಸಂಕಲನದಿಂದ ಆಯ್ಕೆ ಮಾಡಿಕೊಂಡರು. ಇದು ಗೊರೂರು ಅವರು ಬರೆದ ಸಣ್ಣ ಕಥೆಗಳ ಸಂಕಲನ. ಪುಟ್ಟ ಕಥೆಯೊಂದನ್ನು ಸಿನೆಮಾ ಒಂದರ ಕಥಾ ವಸ್ತುವನ್ನಾಗಿಸಿದ ಬಗ್ಗೆ ಸಿದ್ಧಲಿಂಗಯ್ಯನವರನ್ನು ಅಪಹಾಸ್ಯ ಮಾಡಿದವರು ಬಹಳಷ್ಟು ಮಂದಿ. ಚಿತ್ರದ ಹೆಸರೂ ಬಹಳಷ್ಟು ಜನರಿಗೆ ನಗು ತರಿಸಿತ್ತು. ‘ಸಿದ್ಧಲಿಂಗಯ್ಯನವರನ್ನು ದೇವರೇ ಕಾಪಾಡಬೇಕು’ ಎನ್ನುವ ಮಾತು ಚಿತ್ರರಂಗದ ಪಡಸಾಲೆಯಲ್ಲಿ ಕೇಳಿಬರುತ್ತಿತ್ತಂತೆ. ಆದರೆ ಸಿದ್ಧಲಿಂಗಯ್ಯನವರು ಬಳಸಿದ ಹೊಸ ನಿರೂಪಣಾ ತಂತ್ರವು ಈ ಚಿತ್ರವನ್ನು ಸೂಪರ್ ಹಿಟ್ ಮಾಡಿಬಿಟ್ಟಿತು. 

ಸಿದ್ಧಲಿಂಗಯ್ಯನವರ ನಿರ್ದೇಶನದಲ್ಲಿ ಮ್ಯಾಜಿಕ್ ಇತ್ತು ಎಂದು ಬಹು ಮಂದಿಯ ಮಾತು. ಬೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಕೇವಲ ಒಂದೆರಡು ದೃಶ್ಯಗಳಲ್ಲಿ ಕಾಣಿಸುವ ಚಮ್ಮಾರ ವೃತ್ತಿಯ ಲೋಕನಾಥ್ ಅವರ ‘ಉಪ್ಪಿನಕಾಯಿ' ಪ್ರಸಂಗ ಪ್ರೇಕ್ಷಕರನ್ನು ನಕ್ಕು ನಗಿಸುವಂತೆ ಮಾಡುತ್ತದೆ. ಹೊಸ ನಟಿ ಭವಾನಿ, ಅಯ್ಯು ಪತ್ನಿಯಾಗಿ ಅಭಿನಯಿಸಿದ ಎಲ್ ವಿ ಶಾರದಾ ಅವರದ್ದು ತೂಕದ ಅಭಿನಯ. ಈ ಕಾರಣಗಳಿಂದಾಗಿ ಚಿತ್ರ ೨೫ ವಾರಗಳ ಪ್ರದರ್ಶನ ಕಂಡಿತು. ತಮಿಳು, ತೆಲುಗು ಭಾಷೆಯಲ್ಲೂ ತಯಾರಾಯಿತು. 

ನಂತರದ ದಿನಗಳಲ್ಲಿ ಸಿದ್ಧಲಿಂಗಯ್ಯನವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಘೋಷಿತವಾದಾಗ ಹಿರಿಯ ಪತ್ರಕರ್ತರೊಬ್ಬರು “ಪುಣ್ಣಣ್ಣ ಕಣಗಾಲ್ ಜೀವಂತವಿದ್ದಿದ್ದರೆ ತಮ್ಮ ಹೆಸರಿನ ಪ್ರಶಸ್ತಿ ಸ್ಥಾಪಿಸುವ ಬದಲು ಸಿದ್ಧಲಿಂಗಯ್ಯ ಅವರ ಹೆಸರಿನಲ್ಲೇ ಪ್ರಶಸ್ತಿ ಸ್ಥಾಪಿಸುವಂತೆ ಸರಕಾರಕ್ಕೆ ಹೇಳುತ್ತಿದ್ದರೇನೋ?” ಎಂದು ಆಡಿದ ಮಾತು ಸಿದ್ಧಲಿಂಗಯ್ಯನವನ ಕಲಾ ಶ್ರೀಮತಿಕೆಗೆ ಸಾಕ್ಷಿ.    

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ