ಸಿರಿಕಂಠದ ಸ್ವರ ವಾಣಿ - ವಾಣಿ ಜಯರಾಮ್

ಸಿರಿಕಂಠದ ಸ್ವರ ವಾಣಿ - ವಾಣಿ ಜಯರಾಮ್

ಭಾವವೆಂಬ ಹೂವು ಅರಳಿ

ಗಾನವೆಂಬ ಗಂಧ ಚೆಲ್ಲಿ

 

ಈ ಶತಮಾನದ ಮಾದರಿ ಹೆಣ್ಣು

ಸ್ವಾಭಿಮಾನದ ಸಾಹಸಿ ಹೆಣ್ಣು

ಈ ಹಾಡುಗಳನ್ನು ರೇಡಿಯೋದಲ್ಲಿ ಕೇಳಿದಾಗ ಅದೇನೋ ಮೋಡಿ ಮಾಡುವ ಸ್ವರ. ಸಾವಿರಾರು ಹಾಡುಗಳನ್ನು ಹಾಡಿ ಜನಮಾನಸದಲ್ಲಿ ಸ್ಥಾನ ಪಡೆದ ನೆಚ್ಚಿನ ಸಿರಿಕಂಠದ ಸ್ವರ ವಾಣಿ, ಗಾಯಕಿ, ವಾಣಿ ಜಯರಾಂ ಇನ್ನಿಲ್ಲವೆಂದು ಕೇಳಿದ ಸುದ್ದಿಗೆ ಈಗ ಒಂದು ವರ್ಷ(ನಿಧನ : ಫೆಬ್ರವರಿ ೪, ೨೦೨೩). ಮತ್ತೆ ಒಂದಷ್ಟು ಅವರು ಹಾಡಿದ ಹಾಡುಗಳು ಗುಂಯ್ ಗುಡಲು, ರಿಂಗಣ ಹೊಡೆಯಲು ಆರಂಭಿಸಿತು.

'ದಾರಿ ಕಾಣದಾಗಿದೆ ರಾಘವೇಂದ್ರನೆ' ಎಂಥ ಭಕ್ತಿಭಾವ ತುಂಬಿದ ಗಾಯನ. ಚಿತ್ರರಂಗದಲ್ಲಿ ಹಾಡಿನಲ್ಲಿ ಓರ್ವ ಉನ್ನತ ಛಾಪನ್ನು ಮೂಡಿಸಿದ ದೈತ್ಯ ಪ್ರತಿಭೆ ವಾಣಿಯಮ್ಮನವರೆಂದರೆ ತಪ್ಪಾಗಲಾರದು. ಭಾರತದ ಸರಿಸುಮಾರು ೧೪ ಭಾಷೆಗಳಲ್ಲೂ ಹಾಡಿದ್ದಾರಂತೆ. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕರಗತ ಮಾಡಿಕೊಂಡ ಇವರು ಖ್ಯಾತ ಸಿತಾರ್ ವಾದಕ ಜಯರಾಂ ರವರನ್ನು ಪತಿಯಾಗಿ ಪಡೆದವರು.

ಅನೇಕ ಆಲ್ಬಂ ಹಾಡುಗಳನ್ನು ಸಹ ಹಾಡಿದವರು. ಗಝಲ್, ಭಜನ್, ಭಕ್ತಿಗೀತೆಗಳ ಹಾಡಿನಲ್ಲೂ ಪರಿಣಿತರು

೧೯೪೫ರ ನವಂಬರ ೩೦ ರಂದು ಬುವಿಯ ಬೆಳಕನ್ನು ಕಂಡ ಇವರು, ಚಿಕ್ಕಂದಿನಲ್ಲೇ ಸಂಗೀತವನ್ನು ವಿದ್ವಾನ್ ರಂಗಾರಾಮಾನುಜ ಅಯ್ಯಂಗಾರ್ ಅವರ ಶಿಷ್ಯೆಯಾಗಿ, ಶ್ರೀನಿವಾಸ ಅಯ್ಯಂಗಾರ್ ಅವರಲ್ಲಿ ಸಂಗೀತ ಅಭ್ಯಾಸ ಮಾಡಿದರಂತೆ.೧೦ ವರುಷದ ಚಿಕ್ಕ ಬಾಲಕಿಯ ಸಂಗೀತ ಕಛೇರಿ ಮರೆಯಲಾಗದ ಕ್ಷಣ.

ಚೆನ್ನೈ ಸಂಗೀತ,ನೃತ್ಯಗಳ ಆಡೊಂಬಲ. ಉತ್ತಮ ಸಂಗೀತ ಶಿಕ್ಷಣದೊಂದಿಗೆ, ಅರ್ಥಶಾಸ್ತ್ರದಲ್ಲೂ ಸ್ನಾತಕೋತ್ತರ ಪದವಿ ಪಡೆದ ಹೆಗ್ಗಳಿಕೆ ಇವರದು. ಇವರಿಗೆ ದೊರೆತ ಮಾನ-ಸನ್ಮಾನಗಳು ಲೆಕ್ಕವಿಲ್ಲದಷ್ಟು. ಮೂರು ರಾಷ್ಟ್ರ ಪ್ರಶಸ್ತಿ, ವಿವಿಧ ರಾಜ್ಯಗಳಲ್ಲಿ ೨೭ ಶ್ರೇಷ್ಠ ಗಾಯಕಿ ಪ್ರಶಸ್ತಿ, ಕೇಂದ್ರ ಸರಕಾರದ ಅತ್ಯುನ್ನತ ನಾಗರೀಕ ಪದ್ಮವಿಭೂಷಣ ಪ್ರಶಸ್ತಿ, ಅನೇಕ ಸಂಘ ಸಂಸ್ಥೆಗಳಲ್ಲಿ ಅಭಿನಂದನೆ ದೊರೆತ ಮಹಾನ್ ಸಾಮ್ರಾಜ್ಞಿ.

ಚೆನ್ನೈಯಲ್ಲಿ ಮಕ್ಕಳಿಗಾಗಿ ಸಂಗೀತ ರಸಗ್ರಹಣ ಶಿಬಿರ, ವಿಚಾರ ಸಂಕಿರಣ, ಸಂಗೀತ ಸಂಶೋಧನಾ ಕೇಂದ್ರ ನಡೆಸುತ್ತಿದ್ದರು. ಕ್ಯಾನ್ಸರ್ ಪೀಡಿತ ರೋಗಿಗಳ ನೋವನ್ನು ಶಮನ ಮಾಡುವ, 'ನೋವು ನಿವಾರಣಾ ಶಿಬಿರ'ದ ಆಯೋಜನೆಯೂ ಇದೆಯಂತೆ. ಸಂಗೀತದ ಕುರಿತಾಗಿ ಸೆಮಿನಾರ್ ಗಳನ್ನು ಏರ್ಪಡಿಸಿ, ಸಾವಿರಾರು ಸಂಗೀತ ಕಲಿಕೆಯ ವಿದ್ಯಾರ್ಥಿಗಳಿಗೆ ದಾರಿ ತೋರಿಸುತ್ತಿದ್ದರು. ಇವರು ಹಾಡುಗಳನ್ನು ಹಾಡುವ ವೈಖರಿಗೆ ತಲೆದೂಗದವರಿಲ್ಲ ಎನ್ನಬಹುದು. ಒಂದಷ್ಟು ಹಾಡುಗಳು ಸ್ಮೃತಿಪಟಲದಲ್ಲಿ ನಲಿದಾಡುತ್ತಿದೆ ಅಮ್ಮ. 'ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ.'

'ನೀಲಮೇಘ ಶ್ಯಾಮ ನಿತ್ಯಾನಂದ ಧಾಮ'

'ವಸಂತ ಬರೆದನು ಒಲವಿನ ಓಲೆ'

'ಬೆಸುಗೆ ಬೆಸುಗೆ'

'ಏನೇನೋ ಆಸೆ,ನೀ ತಂದ ಭಾಷೆ'.

ಬರೆದರೆ ಬರೆದಷ್ಟೂ ಮುಗಿಯದು.

ನಮ್ಮೆಲ್ಲರ ನೆಚ್ಚಿನ ವಾಣಿಯಮ್ಮ ಇನ್ನಿಲ್ಲವೆಂಬ ಸಂಗತಿ ಅವರ ನಿಧನದ ಒಂದು ವರ್ಷದ ಬಳಿಕವೂ ಅರಗಿಸಿಕೊಳ್ಳಲಾಗುತ್ತಿಲ್ಲ. ಆದರೇನು ಮಾಡೋಣ? ನೀಡುವವನೂ ಕರೆಯಿಸಿಕೊಳ್ಳುವವನೂ ಆತನಲ್ಲವೇ? '೧೦ ಸಾವಿರದವರೆಗೂ ಹಾಡುಗಳನ್ನು ಹಾಡಿದ ವಾಣಿಯಮ್ಮ ನೀವು ನಮ್ಮೆಲ್ಲರನ್ನು ಅಗಲಿ ವರುಷವೊಂದು ಸಂದ ಈ ದಿನ ಭಾವಪೂರ್ಣ ನುಡಿ ನಮನಗಳು .

(ಸಂಗ್ರಹ: ವಿವಿಧ ಮೂಲಗಳಿಂದ)

-ರತ್ನಾ ಕೆ ಭಟ್, ತಲಂಜೇರಿ ಪುತ್ತೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ