ಸೀತಾಫಲ ಹಣ್ಣಿನ ಆರೋಗ್ಯಕಾರಿ ಗುಣಗಳು

ಸೀತಾಫಲ ಹಣ್ಣಿನ ಆರೋಗ್ಯಕಾರಿ ಗುಣಗಳು

ಈ ಚಿತ್ರದಲ್ಲಿ ಕಂಡು ಬರುವ ಹಣ್ಣನ್ನು ಕೆಲವೆಡೆ ಸೀತಾಫಲವೆಂದೂ ಮತ್ತು ಕೆಲವೆಡೆ ರಾಮಫಲವೆಂದೂ ಕರೆಯುತ್ತಾರೆ. ಸೀತಾಫಲ ಅಧಿಕ ಕ್ಯಾಲೋರಿ ಒಳಗೊಂಡ ಹಣ್ಣು. ಇದರಲ್ಲಿ ಸರಳ ಸಕ್ಕರೆ, ಗ್ಲೂಕೋಸ್, ಫ್ರುಕ್ಟೋಸ್ ಮುಂತಾದವು ಇರುವ ಕಾರಣ ಸೇವಿಸಿದ ತಕ್ಷಣ ಶಕ್ತಿಯನ್ನು ಒದಗಿಸುತ್ತದೆ. ಬಾಳೆ ಹಣ್ಣಿನಂತೆ. ಕಬ್ಬಿಣಾಂಶ ಹೆಚ್ಚಾಗಿರುವ ಕಾರಣ ಅನಿಮಿಯಾದಂತಹ ಖಾಯಿಲೆಗಳಿಗೆ ಇದು ಔಷಧಿ.

ಇದರಲ್ಲಿರುವ ವಿಟಮಿನ್ B5, ವಿಟಮಿನ್ C, ವಿಟಮಿನ್ A, ಸತು ಮತ್ತು ತಾಮ್ರದ ಅಂಶ ಚರ್ಮ ಸಂಬಂಧಿತ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಹುಣ್ಣು ಮತ್ತು ತುರಿಕೆ ಮುಂತಾದ ಅಲರ್ಜಿ ಸಂಬಂಧಿತ ಸಮಸ್ಯೆ ಕಡಿಮೆಯಾಗಲು ಸೀತಾಫಲ ಸೇವಿಸಿದರೆ ಒಳ್ಳೆಯದು. ಹಲವಾರು ಸಂಶೋಧನೆಗಳಿಂದ ದೃಡಪಟ್ಟಂತೆ ಇದು ಕ್ಯಾನ್ಸರ್ ರೋಗವನ್ನು ಸ್ವಲ್ಪ ಮಟ್ಟಿಗೆ ಹತ್ತಿಕ್ಕುವಲ್ಲಿ ಸಹಕಾರಿಯಾಗಿದೆ. ನಿತ್ಯವೂ ಸೀತಾಫಲ ಸೇವಿಸುವುದರಿಂದ ಗೆಡ್ಡೆಯ ಬೆಳವಣಿಗೆ ಕುಂಠಿತವಾಗುತ್ತದೆ. ಉರಿಯೂತ ಕಡಿಮೆಯಾಗುತ್ತದೆ. ಅದೇ ಕಾರಣಕ್ಕೆ ಇದೇ ಕುಟುಂಬದ ಲಕ್ಷ್ಮಣ ಫಲವನ್ನು ಕ್ಯಾನ್ಸರ್ ನಿವಾರಕ ಎಂದು ಪ್ರಚಾರ ಮಾಡಲಾಗುತ್ತದೆ. ಈ ಕಾರಣದಿಂದ ಈ ಹಣ್ಣಿನ ಬೆಲೆಯೂ ಗಗನಕ್ಕೇರಿದೆ.

ಸೀತಾಫಲದಲ್ಲಿ ಪಾಲಿಫಿನೋಲಿಕ್ ಎಂಬ ಅಂಶ ಈ ಹಣ್ಣಿನಲ್ಲಿ ಇರುವ ಕಾರಣ ಇದು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಡಯಬಿಟಿಸ್ ಖಾಯಿಲೆ ಬಾರದಂತೆ ಮಾಡಲು ಈ ಹಣ್ಣು ಸೇವಿಸಬಹುದು. ಈ ಹಣ್ಣಿನಲ್ಲಿರುವ ವಿಟಮಿನ್ B6 ಮೆದುಳಿನ ಚಟುವಟಿಕೆ ಹೆಚ್ಚಿಸಲು ಸಹಕಾರಿ. ನರಸಂಕೇತಗಳನ್ನು ಉತ್ತಮಪಡಿಸಿ, ಮನಸ್ಸಿನ ಕೇಂದ್ರೀಕರಣ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಹೃದಯದ ಸಮರ್ಪಕ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಿರುತ್ತದೆ. ಕೊಬ್ಬು ಮತ್ತು ಒಮೇಗಾ 6 ಪ್ಯಾಟೀ ಅಸಿಡ್ ಇರುವ ಕಾರಣ ಹೃದಯ ವ್ಯವಸ್ಥೆಯನ್ನು ಬಲಪಡಿಸುವುದು. ವಿಟಮಿನ್ C ಹೇರಳವಾಗಿರುವ ಕಾರಣ ಸೀತಾಫಲವು ಆರೋಗ್ಯಕ್ಕೆ ಹಾನಿಕರ ಸೂಕ್ಷ್ಮಾಣು ಜೀವಿಗಳನ್ನು ದೇಹದ ಒಳಗೆ ಪ್ರವೇಶಿಸಲು ಅಡ್ಡಿಪಡಿಸುತ್ತದೆ. ದೇಹದೊಳಗಿನ ವಿಷಾಂಶ ಮತ್ತು ಸ್ವತಂತ್ರ ರಾಡಿಕಲ್ಸ್ ಗಳನ್ನು ಹೊರ ಹಾಕುತ್ತದೆ.

ಕಣ್ಣಿನ ದೃಷ್ಟಿ ಉತ್ತಮವಾಗಿರಿಸಲೂ ಸಹ ಈ ಹಣ್ಣು ಸೇವನೆ ಉತ್ತಮ. ವಿಟಮಿನ್ C ಹೇರಳವಾಗಿರುವ ಕಾರಣ ಕಣ್ಣಿಗೆ ಸಂಬಂಧಿಸಿದ ನರಗಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸಿ  ದೃಷ್ಟಿ ಹಾಳಾಗದಂತೆ ರಕ್ಷಿಸುತ್ತದೆ. ಇದಷ್ಟೇ ಅಲ್ಲದೆ ಅಧಿಕ ನಾರಿನ ಅಂಶ ಇರುವ ಕಾರಣ ಜೀರ್ಣ ಕ್ರಿಯೆಗೆ ಒಳ್ಳೆಯದು. ಮಲವಿಸರ್ಜನೆ ಉತ್ತಮವಾಗಿರುತ್ತದೆ. ಇದರಿಂದಾಗಿ ಗ್ಯಾಸ್ಟ್ರಿಕ್ ಮುಂತಾದ ಸಮಸ್ಯೆ ಕಡಿಮೆಯಾಗುತ್ತದೆ. ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಈ ಬೆಳೆ ಚೆನ್ನಾಗಿ ಬರುವುದಿಲ್ಲ. ಒಣ ಭಾಗಗಳಲ್ಲಿ ಅತ್ಯುತ್ತಮವಾಗಿ ಬರುತ್ತದೆ. ಲಕ್ಷ್ಮಣ ಫಲಕ್ಕೆ ಕಿಲೋಗೆ ೪೦೦ ರೂ.ಗೂ ಅಧಿಕ ಬೆಲೆ ಇದ್ದರೆ ಸೀತಾಫಲ ಹಣ್ಣಿನ ಬೆಲೆ ನೂರರ ಆಸುಪಾಸಿನಲ್ಲಿರುತ್ತದೆ. ಈಗ ‘ಗೋಲ್ಡನ್ ಸೀತಾಫಲ’ ಎಂಬ ಸ್ವಲ್ಪ ದೊಡ್ದ ಗಾತ್ರದ ಸೀತಾಫಲ ಮಾರುಕಟ್ಟೆಗೆ ಬರುತ್ತದೆ. ಈ ಹಣ್ಣಿಗೆ ಅಂದಾಜು ೨೦೦ ರೂ. ಆಸುಪಾಸಿನಲ್ಲಿ ಬೆಲೆ ಇದೆ. (ಚಿತ್ರ ೨)

ಹಣ್ಣಿನ ಬೆಳೆಗಳಲ್ಲಿ ಸೀತಾಫಲ ಉತ್ತಮ ಬೆಲೆ, ಬೇಡಿಕೆ ಉಳ್ಳ ಹಣ್ಣು. ಆರೋಗ್ಯ ಕಾರಣದಿಂದ ಈ ಹಣ್ಣಿಗೆ  ಉತ್ತಮ ಬೇಡಿಕೆ ಇದೆ. ಸೀತಾಫಲ ಅತ್ಯಂತ ರುಚಿಕಟ್ಟಾದ ಹಣ್ಣು. ಒಮ್ಮೆ ಈ ಹಣ್ಣನ್ನು ಸವಿದರೆ ಮತ್ತೆ ಬೇರೆ ಹಣ್ಣು ರುಚಿಸದು. ಅಂಥಹ ರುಚಿ ಹೊಂದಿದೆ. ಹಣ್ಣಿನ ಉತ್ಪಾದನೆ ತುಂಬಾ ಕಡಿಮೆ ಇರುವ ಕಾರಣ ಬಳಕೆದಾರರಿಗೆ  ಬೇಕಾದಂತೆ  ಲಭ್ಯವಾಗದ ಸ್ಥಿತಿ ಇದೆ. ಸೀತಾಫಲದ ಹಣ್ಣು ಸಿಹಿ ರುಚಿ ಮತ್ತು ಮತ್ತು ಅದಕ್ಕೆ ವಿಶಿಷ್ಟ ಸುವಾಸನೆ ಸಹ ಇದೆ. ಸೀತಾಫಲದ ಪ್ರಭೇಧದಲ್ಲಿ ರಾಮ ಫಲ, ಹನುಮಫಲ, ಲಕ್ಷ್ಮಣ ಫಲ ಎಂಬೆಲ್ಲಾ ವಿಧಗಳಿದ್ದು, ರಾಮಫಲ (Annona reticulata) ಸಹ ಉತ್ತಮ ಹಣ್ಣೇ ಆಗಿದ್ದರೂ ಅದರ ಹಣ್ಣಿನ ತಿರುಳು ಬೀಜಕ್ಕೆ ಅಂಟಿಕೊಂಡಿರುತ್ತದೆ. ಇದಕ್ಕೂ ಸುಮಾರು ೨೦೦-೨೫೦ ರೂ. ತನಕ ಬೆಲೆ ಇದೆ. ಹನುಮ ಫಲ ಸ್ವಲ್ಪ ಹುಳಿ. ಔಷಧೀಯ ಬಳಕೆಗೆ ಮಾತ್ರ ಬಳಕೆ. ಇದು Annona squamosa ಕುಟುಂಬಕ್ಕೆ ಸೇರಿದ ಸಸ್ಯ ವರ್ಗ.

ಸೀತಾಫಲವನ್ನು ಅಂಗ್ಲ ಭಾಷೆಯಲ್ಲಿ Custard Apple ಎನ್ನುತ್ತಾರೆ. ಮಹಾರಾಷ್ಟ್ರ, ರಾಜಸ್ಥಾನ ಆಂಧ್ರ ಪ್ರದೇಶ, ತೆಲಂಗಾಣ, ಗುಜರಾತ್, ಮಧ್ಯ ಪ್ರದೇಶಗಳಲ್ಲಿ ಇದರ ಬೇಸಾಯ ಹೆಚ್ಚು. ಕರ್ನಾಟಕದಲ್ಲಿ ಮಹಾರಾಷ್ಟ್ರ ಗಡಿ ಭಾಗದಲ್ಲಿ ಸಾಕಷ್ಟು ಬೇಸಾಯ ಇದೆ. ಇದನ್ನು ತೋಟ ಮಾಡಿಯೂ ಬೆಳೆಸಬಹುದು, ಬದುಗಳ ಸಸ್ಯವಾಗಿಯೂ ಬೆಳೆಸಬಹುದು. ಒಂದು ಗಿಡದಲ್ಲಿ ಸುಮಾರು ೧೫೦೦ ರೂ. ತನಕ ಉತ್ಪತ್ತಿ ಮಾರುಕಟ್ಟೆಗೆ ಮಾರಾಟ ಮಾಡಿದಾಗ ಪಡೆಯಬಹುದು. ಆನ್ ಲೈನ್ ಅಥವಾ ನೇರ ಮಾರುಕಟ್ಟೆ ಮಾಡಿದಾಗ ಹೆಚ್ಚು ಸಿಗುತ್ತದೆ. ಆಮೆಝಾನ್ ಮಾರುಕಟ್ಟೆಯಲ್ಲಿ ಕಿಲೋ ಹಣ್ಣಿಗೆ 250 ರೂ ತನಕ ಬೆಲೆ ಇದೆ. ಇದರಲ್ಲಿ ಅರ್ಕಾ ಸುಹಾನ್ ಎಂಬ ಹಬ್ರೀಡ್ ತಳಿಯನ್ನು  ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಬೆಂಗಳೂರು ಇವರು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಒಂದು ಕಿಲೋಗೂ ಹೆಚ್ಚು ತೂಕದ ಹಣ್ಣು ಬರುತ್ತದೆ. ಇದು ಶುದ್ಧ ಸಿತಾಫಲ ಅಲ್ಲ. ೭೫%  ಸೀತಾ ಫಲ ಮತ್ತು  ೨೫%  ಚೆರಿಮೋಯೋ ಇದೆ. ಇದು ದೇಶದಲ್ಲೇ ಅತ್ಯುತ್ಕೃಷ್ಟ ಹಣ್ಣು ಎಂದು ಗುರುತಿಸಲ್ಪಟ್ಟಿದೆ, ಮಹಾರಾಷ್ಟ್ರದಲ್ಲಿ ಸೂಪರ್ ಗೋಲ್ದ್ , ಹನುಮಾನ್, ಸರಸ್ವತಿ ಸೀತಾಫಲ್  ಎನ್ ಎಂ ಕೆ  ಗೋಲ್ಡನ್ ಎಂಬ ಕೆಲವು ವಿಶಿಷ್ಟ ಸೀತಾಫಲದ ತಳಿಗಳು ಇದ್ದು ಇದರಲ್ಲಿ ಬಣ್ಣದ ತಳಿಗಳೂ ಇವೆ. ಸೋಲಾಪುರದಲ್ಲಿ ಸೀತಾಫಲದ ಸಸಿಗಳನ್ನು ಒದಗಿಸುವ ದೊಡ್ದ ದೊಡ್ಡ ನರ್ಸರಿಗಳಿದ್ದು, ಹೊಸ ಹೊಸ ತಳಿ ಪರಿಚಯಿಸುವಲ್ಲಿ ಇವರು ಮುಂದಿದ್ದಾರೆ. ಮಹಾಬಲೇಶ್ವರದಲ್ಲಿ ರಾಮ ಫಲ ಮತ್ತು ಸೀತಾಫಲವನ್ನು ವ್ಯಾಪಕವಾಗಿ ಬೆಳೆಯುತ್ತಾರೆ.

ಸಾಂಗ್ಲಿ ಜಿಲ್ಲೆಯ ಜೆತ್ತಡ್ಕದ ಸಿದ್ದಣ್ಣ ಎಂಬ ಕೃಷಿಕರು  ಬರೇ ೧೧ ಗಿಡಕ್ಕೆ ೧೮ ಸಾವಿರ ರೂ ಆದಾಯ ಪಡೆದಿದ್ದಾರೆ. ೨ ಕಿಲೋ ತನಕದ ಕಾಯಿಯನ್ನೂ ಪಡೆದಿದ್ದಾರೆ. ಒಂದು ಗಿಡದಲ್ಲಿ ೫೦ರಷ್ಟು ಕಾಯಿಗಳು ಬಂದಿವೆ ಎಂಬ ವರದಿ ಇದೆ. ಅರ್ಕಾ ಸುಹಾನ ಒಂದು ಉತ್ತಮ ತಳಿ. ಇದರಲ್ಲಿ  ಬೀಜ ಕಡಿಮೆ. ಚಮಚದ ಸಹಾಯದಲ್ಲಿ ತಿರುಳನ್ನು ತಿನ್ನಬಹುಹುದು. ಸಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಹಣ್ಣು ಸಿಗುತ್ತದೆ. ಸೀತಾಫಲ ವರ್ಷಕ್ಕೆ ಒಮ್ಮೆ  ಮಾತ್ರ ಇಳುವರಿ ಕೊಡುವಂತದ್ದು. ಮಾರುಕಟ್ಟೆಯಲ್ಲಿ ಬೇರೆ ಹಣ್ಣುಗಳು ತುಂಬಾ ಕಡಿಮೆ  ಇರುವ ಸಮಯ ಸಪ್ಟೆಂಬರ್ - ಅಕ್ಟೋಬರ್ – ನವೆಂಬರ್ ಗೆ  ಫಸಲು ಸಿಗುತ್ತದೆ. ನೆಟ್ಟು 3  ವರ್ಷಕ್ಕೆ ಇಳುವರಿ ಪ್ರಾರಂಭವಾಗುತ್ತದೆ. ಕಸಿ ಮಾಡಿದ ಗಿಡಗಳಾಗಿರಬೇಕು. ಒಣ ಪ್ರದೇಶದಲ್ಲಿ ತೀರಾ ಕಡಿಮೆ  ನೀರಾವರಿಯಲ್ಲಿ ಬೆಳೆಯಬಹುದು. ಜ್ಯೂಸ್ ತಯಾರಿಕೆಗೆ ಅತೀ ಹೆಚ್ಚು ಬಳಕೆಯಾಗುತ್ತದೆ.

ಜವಾರಿ ತಳಿಯಲ್ಲಿ ಬೀಜ ಜಾಸ್ತಿ. ಜವಾರಿ ತಳಿ ಎಲ್ಲಾ ಮುಗಿದ ಮೇಲೆ ಹೈಬ್ರೀಡ್ ತಳಿ ಹಣ್ಣಾಗುತ್ತದೆ. ಹೈಬ್ರೀಡ್ ತಳಿಯನ್ನು  ಹೆಚ್ಚು ಸಮಯ ಅಂದರೆ ೮ ದಿನಗಳ ವರೆಗೂ ಇಡಬಹುದು. ಹೂ ಬಿಟ್ಟು 3  ತಿಂಗಳಲ್ಲಿ ಬೆಳೆದು ಹಣ್ಣಾಗುತ್ತದೆ. ಈ ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮ. ಕ್ಯಾನ್ಸರ್ ಕೋಶಗಳನ್ನೂ ಸಹ ಸಾಯಿಸುತ್ತದೆ ಎನ್ನುತ್ತಾರೆ. ಒಣ ಭೂಮಿಯಲ್ಲಿ  ಬೆಳೆಯಬಹುದಾದ ಅತ್ಯಂತ ಲಾಭದಾಯಕ ಹಣ್ಣಿನ ಬೆಳೆ.

ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ