ಸುಟ್ಟು ಭಸ್ಮವಾದ ಆ ಕಾರಿನ ಫೋಟೊ ನೆನಪಿದೆಯೇ?


ಡಿಸೆಂಬರ್ 30, 2022, ಅದು ರಿಷಭ್ ಪಂತ ಮರುಜನ್ಮ ಪಡೆದ ದಿನ. ಆ ದಿನ ಮುಂಜಾವಿನ ನಸುಕಿನಲ್ಲಿ ಪ್ರತಿ ಗಂಟೆಗೆ ನೂರು ಕಿಮೀಗೂ ವೇಗವಾಗಿ ಓಡುತ್ತಿದ್ದ ರಿಷಭ್ ಪಂತನ ಎಸ್ಯುವಿ ಕಾರು ಹೈವೆಯ ಡಿವೈಡರ್ಗೆ ಜಜ್ಜಿ ನುಚ್ಚು ನೂರಾಗಿತ್ತು. ಅಪಘಾತದ ಫೋಟೊವನ್ನು ನೀವು ನೋಡಿದರೆ ಅದರೊಳಗೆ ಇದ್ದವರು ಜೀವಂತವಾಗಿ ಹೊರಬರಲು ಸಾಧ್ಯವೇ ಇಲ್ಲವೆಂದೆಸುತ್ತದೆ. ಅದರೊಳಗಿದ್ದವನು ಬೇರೆ ಯಾರೂ ಅಲ್ಲ, ಕಳೆದ ವಾರವಷ್ಟೇ ಆರ್ ಸಿ ಬಿ ವಿರುದ್ಧ ಶತಕವನ್ನು ಸಿಡಿಸಿದ ರಿಷಭ್ ಪಂತ್, ಲಕ್ನೌ ತಂಡದ ಕಪ್ತಾನ. ಯಾವುದೋ ದೈವ ಶಕ್ತಿಯೇ ಆತನನ್ನು ಆ ಕ್ಷಣ ಹೊರಗಡೆಗೆ ಕರೆತಂದು ಸುಟ್ಟು ಭಸ್ಮವಾದ ಕಾರಿನಿಂದ ಕಾಪಾಡಿತ್ತು. ದೇವರೆಲ್ಲಿ? ಎಂದು ಪ್ರಶ್ನೆ ಕೇಳುವವರಿಗೆ ಮತ್ತೆ ಮತ್ತೆ ಇಂತಹ ಘಟನೆಗಳು ದೇವರನ್ನು ನೆನಪಿಸುತ್ತವೆ!
ಆ ಅವಘಡದ ಸುದ್ದಿ ಕೇಳಿ, ಅದರ ವಿಡಿಯೋವನ್ನು ನೋಡಿದಾಗ ಪಂತ ಮತ್ತೊಮ್ಮೆ ವಿಕೆಟ್ ಹಿಂದೆ ನಿಲ್ಲಬಹುದು ಎನ್ನುವ ಒಂದು ಎಳ್ಳಷ್ಟೂ ನಿರೀಕ್ಷೆ ಇರಲಿಲ್ಲ. ವಿಮಾನದಲ್ಲಿ ಎತ್ತಿಕೊಂಡು ತಂದು ಮುಂಬಯಿಯ ಆಸ್ಪತ್ರೆಗೆ ಸೇರಿಸಿದ್ದರು. ಅದೆಷ್ಟು ಹೊಲಿಗೆ ಬಿದ್ದಿದ್ದವೋ? ವೈದ್ಯರ ಲೆಕ್ಕಕ್ಕೂ ಬಾರದಿರಬಹುದು. ಸಂಪೂರ್ಣವಾಗಿ ಛಿದ್ರವಾದ ಕಾಲುಗಳನ್ನು ಸರಿಯಾಗಿ ಕೂರಿಸಲು ಮೂರು ಲಿಗಾಮೆಂಟ್ ಸರ್ಜರಿ ಮಾಡಿದ್ದರಂತೆ! ಮತ್ತೆ ಆತ ನಿಂತು ನಡೆದರೆ ಸಾಕು ಎನ್ನುವ ಪರಿಸ್ಥಿತಿ. ಒಂದು ತಿಂಗಳು ಅಲುಗಾಡದೆ, ಆತ ಹಾಸಿಗೆಯ ಮೇಲೆ ಇದ್ದಿದ್ದನಂತೆ.
ತುಸು ಕಾಲದ ನಂತರ ತಾನೇ ತನ್ನ ಕೆಲಸ ಮಾಡಿಕೊಳ್ಳಲಾರಂಭಿಸಿದ, ಕೋಲಿನ ಸಹಾಯದಿಂದ ಕಾಲೂರ ತೊಡಗಿದ, ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ ಮತ್ತೆ ಸಾಮಾನ್ಯರಂತೆ ಬದಲಾದ. ಯಾರೂ, ಆತ ಮತ್ತೆ ಎಂದೂ ಕ್ರಿಕೆಟ್ ಗೆ ಮರಳಬಹುದು ಎನಿಸಿರಲಿಲ್ಲ. ಮನೆಯವರಂತೂ, ಆ ಭಯಾನಕ ಅಪಘಾತದ ನಂತರ ಆತ ಬದುಕುಳಿದರೆ ಸಾಕು ಎಂದು ಪ್ರಾರ್ಥಿಸಿದ್ದರು. ಆ ಹಿನ್ನೆಲೆಯಿಂದ ಬಂದು ನಿಲ್ಲಬೇಕು, ನಡೆಯಬೇಕು, ಓಡಬೇಕು, ಮರಳಿ ಕ್ರಿಕೆಟ್ ಆಡಬೇಕು, ರಾಜ್ಯದ ತಂಡದಲ್ಲಿ ಆಯ್ಕೆಯಾಗಬೇಕು, ರಣಜಿ ಆಡಬೇಕು, ಅಂತರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾದರೂ ಅಲ್ಲಿ ಆಡಲು ಅವಕಾಶ ಸಿಗಬೇಕು, ಸಿಕ್ಕರೂ ಅಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕು. ದಾರಿ ಎಷ್ಟೊಂದು ದೂರ. ಯಾರೇ ಸಾಮಾನ್ಯ ಮನಸ್ಥಿತಿಯುಳ್ಳವರು ಖಂಡಿತವಾಗಿಯೂ 'ಗಿವ್ ಅಪ್' ಮಾಡದೇ ಇರುತ್ತಿರಲಿಲ್ಲ. ಮಣ್ಣಾದ ಅರಮನೆಯನ್ನು ಮತ್ತೆ ಕಲ್ಲಿಗೆ ಕಲ್ಲಿಟ್ಟು ಕಟ್ಟುತ್ತಿರಲಿಲ್ಲ. ಆದರೆ ಪಂತ್ ಬಿಡಲಿಲ್ಲ, ನಿರಂತರವಾಗಿ ಪ್ರಯತ್ನ ಮಾಡುತ್ತಾ ಹೋದ.
ಮನಸ್ಸನ್ನು ಒಂದೇ ಕಡೆ ಕೇಂದ್ರೀಕರಿಸಿ ಪ್ರಯತ್ನ ಮಾಡುವುದೇ ತಪ್ಪಸ್ಸು. ರಿಷಭ್ ಪಂತನ ಆ ತಪಸ್ಸು ಆತನನ್ನು ಮತ್ತೆ ತಂಡಕ್ಕೆ ತಂದಿತು. ವೈದ್ಯರು ಎರಡು ವರ್ಷಗಳಲ್ಲಿ ಆತ ಸರಿಯಾಗಬಹುದು ಎಂದಿದ್ದರಂತೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡಬಹುದು ಎಂದಿರಲಿಲ್ಲ! ಆದರೆ ಕೇವಲ ಒಂದೇ ವರ್ಷದಲ್ಲಿ ಆತ ಐಪಿಎಲ್ ತಂಡವನ್ನು ಸೇರಿದ್ದ, ಆಸ್ಟ್ರೇಲಿಯಾದಲ್ಲಿ ಅತ್ಯುತ್ತಮ ಪ್ರದರ್ಶನ ಕೊಟ್ಟ, ಭಾರತವು ಟಿಟ್ವೆಂಟಿ ವಿಶ್ವಕಪ್ ಗೆದ್ದಾಗ ಆ ತಂಡದಲ್ಲಿದ್ದ. ಇದನ್ನು ಯಾರಾದರೂ ಸಿನೇಮಾ ಮಾಡಿದರೆ ಅದನ್ನು ಯಾರೂ ಸಾಕ್ಷ್ಯಚಿತ್ರ ಎಂದು ನಂಬಲಾರರು. ಕಳೆದ ವಾರ ಆತ ಐಪಿಎಲ್ ನಲ್ಲಿ ಶತಕ ಸಿಡಿಸಿದಾಗ ಇಡೀ ಜಗತ್ತೇ ಬೆರಗಾಯಿತು, ಸಂಭ್ರಮದಿಂದ ಆತ ಹಾರಿ ಕುಣಿದಾಗ ಲೋಕವೇ ಮೆಚ್ಚಿಕೊಂಡಿತು. ಚಚ್ಚಿಹೋದ ಕಾರಿನಿಂದ ಉಸಿರನ್ನು ಉಳಿಸಿಕೊಂಡು ಹೊರಬಂದು ಮತ್ತೆ ಬ್ಯಾಟ್ ಹಿಡಿದು ಶತಕ ಸಿಡಿಸುವ ತನಕದ ಆ ಪಯಣದ ಅರಕವೇ ಆ ಸಂಭ್ರಮದಲ್ಲಿತ್ತು. ಅದನ್ನು ವರ್ಣಿಸಲು ಬಹುಶಃ ಯಾರಿಂದಲೂ ಸಾಧ್ಯವಿಲ್ಲ.
ಪ್ರತಿಬಾರಿ ಲಕ್ನೋ ತಂಡದ ಪಂದ್ಯವನ್ನು ನೋಡುವಾಗ ರಿಷಭ್ ಪಂತ್ ಕಾಣುತ್ತಾನೆ, ನನ್ನೆದುರಿಗೆ ಆ ಅಪಘಾತದ ಚಿತ್ರಗಳು ಬಂದು ಹೋಗುತ್ತದೆ, ಮತ್ತೆ ಮತ್ತೆ ಅಲ್ಲಿದ್ದವರು ಯಾರು ಆತ ಎಂದು ಸುದ್ದಿಯನ್ನು ಮೆಲಕು ಹಾಕಿ ಅದು ಇವನೇ ಆಗಿದ್ದ ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತೇನೆ. ಮನಃಶಕ್ತಿ ಇದ್ದಲ್ಲಿ ಚಮತ್ಕಾರ ಆಗದೇ ಇರದು. ನಮ್ಮ ಬದುಕಿನಲ್ಲಿ ಎಷ್ಟೋ ಬಾರಿ ಇಂತಹ ಅಪಘಾತಗಳು ನಡೆದು ಹೋಗುತ್ತವೆ. ಇನ್ನೇನು ಬದುಕೇ ಮುಗಿದು ಹೋಯಿತು ಎನಿಸುತ್ತದೆ, ದಾರಿಗೆ ಇದೇ ಅಂತ್ಯ ಬಿಂದು ಎಂಬಂತೆ ತೋರುತ್ತದೆ. ಕೆಲವೊಮ್ಮೆ ನಾವು ದಾರಿ ತಪ್ಪಿರುವಾಗ, ಯಶಸ್ಸಿನ ಕೊಬ್ಬು ಹೆಚ್ಚಾದಾಗ ನಮ್ಮನ್ನು ಬದಲಿಸಲು, ನಮ್ಮೊಳಗಿನ ಸಂಪೂರ್ಣ ಸಾಮರ್ಥ್ಯವನ್ನು ಹೊರತರಲು, ನಮ್ಮ ಬದುಕಿನ ಉದ್ದೇಶವನ್ನು ಮತ್ತೆ ಜಾಗೃತಿಗೊಳಿಸಲು ಇಂತಹ ಘಟನೆಗಳು ನಡೆಯುವುದೋ? ಹಾಗಾದಾಗ ಸೋಲಬಾರದು, ಹೋರಾಟ ನಡೆಸಬೇಕು. ಮತ್ತೊಮ್ಮೆ ಬದುಕುವ ಅವಕಾಶ ಸಿಕ್ಕಿದೆ ಎಂದು ಮನಸ್ಸು ಬಿಚ್ಚಿ ಬದುಕಿ ಬಿಡಬೇಕು, ಕಷ್ಟಗಳನ್ನು ಇಷ್ಟಪಟ್ಟು ಎದುರಾದ ಸವಾಲುಗಳನ್ನು ಸ್ವೀಕರಿಸಿ ನಮ್ಮ ನೂರರ ನೂರು ಪಾಲನ್ನು ನಮಗರಿವಾದ ಉದ್ದೇಶಕ್ಕೆ ಕೊಟ್ಟುಬಿಡಬೇಕು. ವಿಧಿಗೆ ಶರಣಾಗಿ ಸತತವಾದ ಪ್ರಯತ್ನದಲ್ಲಿ ತೊಡಗಬೇಕು ಆಗ ಸಾಧನೆಗಳ ಸುರಿಮಳೆ ತನ್ನಷ್ಟಕ್ಕೆ ತಾನೇ ಹೋಯ್ದುಬಿಡುತ್ತದೆ! ಅಂದು ರಿಷಭ್ ಸೋತಿದ್ದರೆ ಇಂದು ಎಲ್ಲೋ ಮನೆಯ ಮೂಲೆಯಲ್ಲಿ ಕೂತು ಪಂದ್ಯವನ್ನು ನೋಡುತ್ತಿದ್ದ, ಆದರೆ ಇಂದು ಆತನ ಆಟವನ್ನು ನೋಡಿ ಜಗತ್ತೇ ಮೆಚ್ಚುಗೆ ಪಡುತ್ತಿದೆ. ಸೋಲು ಹಾಗೂ ಗೆಲುವಿನ ನಡುವೆ ಇರುವ ಸಣ್ಣ ಗೆರೆ ಅಂದರೆ ಛಲ!
(ಫೇಸ್ಬುಕ್ ನಲ್ಲಿ ಕಂಡ ಅರ್ಜುನ್ ನಾಯ್ಕ್ ಅವರ ಆಂಗ್ಲ ಬರಹದ ಕನ್ನಡಾನುವಾದ)
-ಸಂತೋಷ್ ಕುಮಾರ್, ಸುರತ್ಕಲ್
ಚಿತ್ರ ಕೃಪೆ: ಇಂಟರ್ನೆಟ್ ತಾಣ