ಸುಳ್ಳು ಮತ್ತು ಸತ್ಯದ ಸಂಘರ್ಷ...!

ಸುಳ್ಳು ಮತ್ತು ಸತ್ಯದ ಸಂಘರ್ಷ...!

ಮುಖ್ಯವಾಗಿ ಸಾಮಾಜಿಕ ಜಾಲತಾಣಗಳ ಸುಳ್ಳು ಸುದ್ದಿಗಳು. ಸಾಮಾಜಿಕ ಜಾಲತಾಣಗಳ ಮೇಲೆ ಇರುವ ಒಂದು ದೊಡ್ಡ ಆರೋಪ ಇಲ್ಲಿ ಸುಳ್ಳು ಮತ್ತು ಪ್ರಚೋದನಕಾರಿ ಸಂದೇಶಗಳು ಬಹು ವೇಗವಾಗಿ ಹರಡಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿವೆ. ಅವುಗಳಲ್ಲಿ ಬಿತ್ತರವಾಗುವ ಸಂದೇಶಗಳನ್ನು ಮಾನಿಟರ್ ಮಾಡಬೇಕು ಮತ್ತು ಶಿಕ್ಷೆ ವಿಧಿಸಬೇಕು ಎಂಬ ಕೂಗಿನ ಜೊತೆ ಕೆಲವು Whatsapp ಗುಂಪುಗಳಲ್ಲಿ Forward ಮಾಡುವ ಸಂದೇಶಗಳಿಂದ ನಿರ್ವಾಹಕರು ತೊಂದರೆಗೆ ಆಗುವ ಭಯ ಕಾಡುತ್ತಿದೆ. ಹಾಗಾದರೆ ವಾಸ್ತವ ಏನು ?

ಸುಳ್ಳು ವಂಚನೆ ಮೋಸ ವಿಷ ಕಾರುವ ಪ್ರಚೋದನಕಾರಿ ವಿಷಯಗಳು ಎಲ್ಲಾ ಕಾಲಕ್ಕೂ, ಎಲ್ಲಾ ಸಂದರ್ಭಗಳಿಗೂ ಯಾವಾಗಲೂ ಕಾನೂನು ಬಾಹಿರವೇ, ಅನೈತಿಕವೇ ಮತ್ತು ನಿಷಿದ್ಧವೇ. ಅದು ಸೋಷಿಯಲ್‌ ಮೀಡಿಯಾ ‌ಆಗಲಿ ಅಥವಾ ಎಲ್ಲೇ ಆಗಿರಲಿ ಅದನ್ನು ಒಪ್ಪುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಅದು ಸಾಮಾಜಿಕ ಜಾಲತಾಣಗಳ ಕಾರಣದಿಂದ ಅತ್ಯಂತ ಅಪಾಯಕಾರಿ ಹಂತ ತಲುಪಿದೆ ಎಂದು ಹೇಳಿದರೆ ಇಡೀ ಸಮಾಜದ ಮಾನಸಿಕ ವರ್ತನೆಯ ಬಗ್ಗೆಯೇ ಅನುಮಾನಿಸಬೇಕಾಗುತ್ತದೆ.  ಹಾಗಾದರೆ ನಾವೆಲ್ಲರೂ ಸುಳ್ಳು ವಂಚನೆಯ ಸಮಾಜದಲ್ಲಿ ಬದುಕುತ್ತಿದ್ದೇವೆಯೇ ಅಥವಾ ಅದನ್ನು ಅರ್ಥಮಾಡಿಕೊಳ್ಳುವ ಬುದ್ದಿ ಶಕ್ತಿ ನಮಗಿಲ್ಲವೇ?

ಸ್ವಲ್ಪ ಯೋಚಿಸಿ ನೋಡಿದರೆ ಸಾಮಾಜಿಕ ಜಾಲತಾಣಗಳನ್ನು ಅತಿಹೆಚ್ಚು ಸದುಪಯೋಗ ಮತ್ತು ದುರುಪಯೋಗ ಪಡಿಸಿಕೊಂಡ ಕುಖ್ಯಾತಿ ರಾಜಕೀಯ ಪಕ್ಷಗಳು ಮತ್ತು ಸಂಘಟನಾತ್ಮಕ ಪಂಥಗಳಿಗೆ ಸಲ್ಲುತ್ತದೆ. ಇವು ಈ ಜಾಲತಾಣಗಳ ನಿರ್ವಹಣೆಗೆ ಏಜೆಂಟರುಗಳನ್ನು ನೇಮಿಸಿಕೊಂಡರು. ಕೆಲವು ಅಧೀಕೃತ ಮತ್ತೆ ಕೆಲವು ಅನಧಿಕೃತ. ಇವುಗಳ ಕೆಲಸ ಇತಿಹಾಸವನ್ನು ತಿರುಚುವುದು, ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವುದು, ಮಹಾಪುರುಷರ ಸಂದೇಶಗಳನ್ನು ತಪ್ಪಾಗಿ ಬರೆದು ತಮ್ಮ ಪರವಾಗಿ ತಿದ್ದುವುದು, ವಿರೋಧಿಗಳನ್ನು ದೇಶದ್ರೋಹಿಗಳಂತೆ ಚಿತ್ರಿಸುವುದು, ಇಲ್ಲಸಲ್ಲದ ಆರೋಪಗಳನ್ನು ಜಾಣ್ಮೆಯಿಂದ ಇತರರ ತಲೆಗೆ ಕಟ್ಟುವುದು, ಪೋಟೋ ಶಾಪ್ ಸಂಕಲನ ತಂತ್ರದಿಂದ ಯಾರದೋ ತಲೆಗೆ ಇನ್ಯಾರನ್ನೋ ಜೋಡಿಸುವುದು, ಸುಳ್ಳು ಧ್ವನಿ ಸುರಳಿಗಳನ್ನು ಪ್ರಸಾರ ಮಾಡುವುದು, ಇತ್ತೀಚೆಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮುಸ್ಲಿನೊಬ್ಬ ಹಿಂದೂ ವೇಷ ಧರಿಸಿ, ಹಿಂದೂ ಒಬ್ಬ ಮುಸ್ಲಿಂ ವೇಷ ಧರಿಸಿ ಅನಾಹುಕಾರಿಯಾಗಿ ಮಾತನಾಡುವುದು ಮುಂತಾದ ಅನೇಕ ಕುತಂತ್ರಗಳನ್ನು ಹರಿಯ ಬಿಡುತ್ತಾರೆ. ಇದು ಕೊನೆಗೆ ನಿಜ ಮತ್ತು ಸುಳ್ಳುಗಳ ನಡುವಿನ ವ್ಯತ್ಯಾಸಗಳನ್ನೇ ಗೊಂದಲಗೊಳಿಸಿದೆ. ಅದರ ಲಾಭವನ್ನು ಅವು ಪಡೆದರೆ ನಷ್ಟ ಮಾತ್ರ ಜನರ ಪಾಲಿಗೆ...

ಹಾಗಾದರೆ ಸುದ್ದಿಗಳ ನಿಖರತೆಯನ್ನು ಗುರುತಿಸುವುದು ಹೇಗೆ ? ನೋಡಿ ಈಗಿನ ವ್ಯವಸ್ಥೆಯಲ್ಲಿ ಇದಕ್ಕೆ ದಿಡೀರನೇ ಒಂದು ಸ್ಪಷ್ಟ ಪರಿಹಾರ ಸಿಗುವುದಿಲ್ಲ. ಸತ್ಯ ಹರಿಶ್ಚಂದ್ರರ ಉಗಮವೂ ಆಗುವುದಿಲ್ಲ. ಇರುವುದರಲ್ಲಿ ನಾವು ಒಪ್ಪಬಹುದಾದ ಒಂದು ಸರಳ ಪರಿಹಾರವೆಂದರೆ...

ಏನೇ ಆಪಾದನೆಗಳು, ಪಕ್ಷಪಾತಗಳು, ವಿವೇಚನಾರಹಿತ ವಿಮರ್ಶೆಗಳು, ಸ್ಪರ್ಧಾತ್ಮಕ ತಂತ್ರಗಳು ಇದ್ದರೂ ಈಗಲೂ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಲ್ಲಿ ಹೆಚ್ಚು ಕಡಿಮೆ ‌ನಂಬಲರ್ಹ ಸುದ್ದಿಗಳು ಪ್ರಸಾರವಾಗುತ್ತವೆ. ಅಧೀಕೃತ ಸುದ್ದಿ ಸಂಸ್ಥೆಗಳು, ಸರ್ಕಾರದ ಆಡಳಿತ ವ್ಯವಸ್ಥೆ, ಪೋಲೀಸ್, ಮುಂತಾದ ಎಲ್ಲವೂ ಮೊದಲು ಸುದ್ದಿಗಳನ್ನು ಇವುಗಳಿಗೆ ಕಳುಹಿಸುತ್ತವೆ‌. ಈ ಮಾಧ್ಯಮಗಳಿಗೆ ಗೊತ್ತಿಲ್ಲದ ವಿಶ್ವದ ಯಾವುದೇ ದೊಡ್ಡ ಘಟನೆಗಳು ಇರುವುದೇ ಇಲ್ಲ. ಏನೇ ಅಪರಾಧ, ಅಪಘಾತ, ಅವಘಡ, ಸಾಧನೆ, ಪತನ, ಕ್ರಾಂತಿ, ಬದಲಾವಣೆ ಎಲ್ಲವೂ ಬಹುತೇಕ ಮಾಧ್ಯಮಗಳಿಗೆ ತಿಳಿಸಲಾಗುತ್ತದೆ. ಹಾಗೆಂದು ಸಂಪೂರ್ಣ ಎಲ್ಲವೂ ಎಂದು ಅಲ್ಲ. ಕೆಲವು ಅಪರೂಪದ, ಕುತಂತ್ರದ, ಜನರಿಗೆ ಮರೆಮಾಚಿದ ಸುದ್ದಿಗಳು ಇರುತ್ತವೆ. ಆದರೆ ಅದು ಬಯಲಾಗುವುದು ಸಹ ಮಾಧ್ಯಮಗಳಿಂದಲೇ.

ಯಾರೋ ಒಬ್ಬ ಜನಪ್ರಿಯ ವ್ಯಕ್ತಿಯ ಸಾವು ಮೊದಲು ಅಲ್ಲಿನ ಸ್ಥಳೀಯ ಜನರಿಗೆ ತಲುಪಿ, ಸಾಮಾಜಿಕ ಜಾಲತಾಣಗಳಲ್ಲಿ ಬಂದರೂ ಕೆಲವೇ ಕ್ಷಣಗಳಲ್ಲಿ ಮಾಧ್ಯಮಗಳಲ್ಲಿ ಬಂದೇ ಬರುತ್ತದೆ.  ಹಾಗೆಯೇ ಈ ಮಾಧ್ಯಮಗಳಲ್ಲಿ ಒಂದಷ್ಟು ಊಹೆ, ಆತುರ, ಕೆಟ್ಟ ವಿಮರ್ಶೆ, ವ್ಯಕ್ತಿ ನಿಂದನೆ ಇರುತ್ತದೆ. ಆದರೆ ತಲೆಬುಡವಿಲ್ಲದ ಅತ್ಯಂತ ಅಪಾಯಕಾರಿ ಸುದ್ದಿಗಳನ್ನು ಪ್ರಸಾರ ಮಾಡಲು ಭಯಪಡುತ್ತಾರೆ. ಏಕೆಂದರೆ ಅವರು ಸುದ್ದಿಗಳನ್ನು ಖಚಿತ ಪಡಿಸಿಕೊಳ್ಳುವ ವ್ಯವಸ್ಥೆ ಹೊಂದಿದ್ದಾರೆ ಮತ್ತು Accountability ಇದೆ. ಅವರ ಮೇಲೆಯೂ ಮಾನಹಾನಿ ಮೊಕದ್ದಮೆ ಹೂಡಿಬಹುದು.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಆ ರೀತಿಯ ವ್ಯವಸ್ಥೆ ಇಲ್ಲ. ಯಾರೋ ಒಬ್ಬ ವ್ಯಕ್ತಿ ವೈಯಕ್ತಿಕ ಸಂದೇಶವನ್ನು ಅಥವಾ ದೃಶ್ಯಗಳನ್ನು ಬೇಕಂತಲೇ ಹರಿಯ ಬಿಡಬಹುದು. ಅದು ಹೊಸದೋ ಹಳೆಯದೋ ನಿಜವೋ ಸುಳ್ಳೋ ಯಾರಿಗೂ ತಿಳಿಯುವುದಿಲ್ಲ ಮತ್ತು ಅದಕ್ಕೆ ಯಾರೂ ಜವಾಬ್ದಾರರಿರುವುದಿಲ್ಲ. ನೀವು ಯಾರನ್ನು ಪ್ರಶ್ನಿಸಲು ಸಿಗುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಕೆಲವು ನಿಭಂದನೆಗಳನ್ನು ವಿಧಿಸಿದೆ ಎಂಬ ಮಾಹಿತಿ ಇದೆ. ಇದು ಹೊಸದೇನು ಅಲ್ಲ. ಎಂದಿನಂತೆ ಸುಳ್ಳು ಪ್ರಚೋದನಕಾರಿ ವಿಷಯಗಳಿಗೆ ಮಾತ್ರ ಸಂಬಂಧಿಸಿದೆ. ಸತ್ಯವನ್ನು, ಸ್ವತಂತ್ರ ಅಭಿಪ್ರಾಯವನ್ನು, ಅಧಿಕೃತ ಮಾಹಿತಿಯನ್ನು ಕಾನೂನು ಮತ್ತು ನೈತಿಕತೆಯ ಮಿತಿಯೊಳಗೆ ವ್ಯಕ್ತಪಡಿಸಲು ಯಾವುದೇ ಅಂಜಿಕೆ ಬೇಡ. Forward ಮಾಡುವ ವಿಷಯದಲ್ಲಿ ಮಾತ್ರ ಜಾಗೃತವಾಗಿರಿ. ಒಂದು ವೇಳೆ ಸುದ್ದಿಯೊಂದು ಮಾಧ್ಯಮಗಳಲ್ಲಿ ಪ್ರಸಾರವಾಗದೆ ಕೇವಲ ಜಾಲತಾಣಗಳಲ್ಲಿ ಮಾತ್ರ ಹರಿದಾಡುತ್ತಿದ್ದರೆ ಅದನ್ನು ಅಷ್ಟಾಗಿ ನಂಬಬಾರದು ಮತ್ತು Forward ಮಾಡಬಾರದು. ಯಾರೋ ‌ದೇಶಭಕ್ತಿಯ ಹೆಸರಿನಲ್ಲಿ, ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಭಾವನಾತ್ಮಕವಾಗಿ ಏನನ್ನೋ ಹೇಳಿದರೆ ಅದನ್ನು ಓದಬಹುದೇ ಹೊರತು Forward ಮಾಡಬಾರದು. ಬೇಕಾದರೆ ಅದರ ಸಾರಾಂಶವನ್ನು ಸ್ವತಂತ್ರ ಅಭಿಪ್ರಾಯದೊಂದಿಗೆ ಮತ್ತು ಒಂದು ಅನುಮಾನದೊಂದಿಗೆ ಸ್ವತಃ ಬರೆಯಬಹುದು. 

ಸುಳ್ಳುಗಳನ್ನೇ ಧೈರ್ಯವಾಗಿ ರಾಜಾರೋಷವಾಗಿ ಪ್ರಸಾರ ಮತ್ತು ಪ್ರಚಾರ ಮಾಡುವ ಸಂದರ್ಭದಲ್ಲಿ, ಅದರ ಮುಖಾಂತರವೇ ಸಮಾಜವನ್ನು ನಿಯಂತ್ರಣ ಪಡೆಯುವ ಸಮಯದಲ್ಲಿ ಸತ್ಯ ಹೇಳುವವರು ಹೆದರಿಕೊಳ್ಳಬಾರದು. ಸುಳ್ಳು ಸತ್ಯವನ್ನು ಸೋಲಿಸಲು ಬಿಡಬಾರದು.

ಖಂಡಿತವಾಗಿಯೂ ಸತ್ಯ ಸುಳ್ಳಿಗಿಂತ ಹೆಚ್ಚು ಬಲಶಾಲಿ ಮತ್ತು ಪರಿಣಾಮಕಾರಿ. ಆದರೆ ನಾವು ನಿಜಕ್ಕೂ ಪ್ರಾಮಾಣಿಕರಾಗಿರಬೇಕು ಮತ್ತು ಗಟ್ಟಿ ವ್ಯಕ್ತಿತ್ವ ಹೊಂದಿರಬೇಕು. ನಮಗೆ ಅನುಕೂಲಕರ ಮುಖವಾಡ ತೊಟ್ಟು ಸತ್ಯವನ್ನು ‌ಸಮರ್ಥಿಸಲು ಸಾಧ್ಯವಿಲ್ಲ. ನಮ್ಮ ನಡೆ ನುಡಿ ನೇರವಾಗಿದ್ದರೆ ಸುಳ್ಳನ್ನು ಗೆಲ್ಲುಬಹುದು. ಆದ್ದರಿಂದ ವ್ಯವಸ್ಥೆ ಯಾವುದೇ ಇರಲಿ, ಮಾಧ್ಯಮ ಯಾವುದೇ ಇರಲಿ, ಕಾನೂನು ಏನೇ ಹೇಳಲಿ, ಸುಳ್ಳು ಪ್ರಚೋದನೆ ಅನೈತಿಕತೆ ಖಂಡಿತ ಶಿಕ್ಷಾರ್ಹ ಅಪರಾಧ ಮತ್ತು ಅಮಾನವೀಯ ಹಾಗೂ ದೇಶದ್ರೋಹ. ಆದರೆ ಸತ್ಯಕ್ಕೆ, ಸಮಾಜ ಒಪ್ಪಿತ, ಕಾನೂನಿನ ವ್ಯಾಪ್ತಿಯ ನೈತಿಕತೆಗೆ ಯಾವುದೇ ತಡೆ ಇಲ್ಲ.‌ ಸಾಮಾನ್ಯ ಜ್ಞಾನ ಇಲ್ಲಿ ಮುಖ್ಯ

ಸಾಮಾಜಿಕ ಜಾಲತಾಣಗಳು ಸಾಮಾನ್ಯ ಜನರ ಪ್ರಜಾಪ್ರಭುತ್ವದ ಒಂದು ಅತ್ಯುತ್ತಮ ವೇದಿಕೆ. ಅದರ ಧ್ವನಿ ಅಡಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದು. ಕೆಟ್ಟದ್ದರ ನೆಪದಲ್ಲಿ ಒಳ್ಳೆಯದನ್ನು ನಾಶ ಮಾಡುವುದು ಬೇಡ...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ