ಸುವರ್ಣ ಸಂಭ್ರಮದಲ್ಲಿ ಬಾಂಗ್ಲಾ ವಿಮೋಚನಾ ಯುದ್ಧದ ವಿಜಯ…

ಸುವರ್ಣ ಸಂಭ್ರಮದಲ್ಲಿ ಬಾಂಗ್ಲಾ ವಿಮೋಚನಾ ಯುದ್ಧದ ವಿಜಯ…

ಭಾರತದ ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ನಮ್ಮಿಂದ ಬೇರೆಯಾದ ಪಾಕಿಸ್ತಾನ ಅಂದಿನಿಂದ ಇಂದಿನವರೆಗೆ ನಮ್ಮ ಜೊತೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಯುದ್ಧಗಳನ್ನು ಮಾಡುತ್ತಾ ಬಂದಿದೆ. ಪ್ರತೀ ಸಲ ಸೋಲು ಕಂಡು ಹಿಮ್ಮೆಟ್ಟಿದೆ. ೧೯೭೧ರಲ್ಲಿ ನಾವು ಪಾಕಿಸ್ತಾನದ ವಿರುದ್ಧ ದಾಖಲಿಸಿದ ಅಮೋಘ ವಿಜಯೋತ್ಸವಕ್ಕೆ ಈಗ ಸುವರ್ಣ ಸಂಭ್ರಮ. ಈ ಯುದ್ಧದ ಪರಿಣಾಮವಾಗಿ ಬಾಂಗ್ಲಾ ದೇಶದ ವಿಮೋಚನೆಯಾಯಿತು. ಇದರಿಂದ ಈಶಾನ್ಯ ಭಾಗದಲ್ಲಿ ಭಾರತಕ್ಕೆ ಇದ್ದ ದೊಡ್ದ ಗಂಡಾಂತರವೊಂದು ದೂರವಾಗಿತು. ಈ ಯುದ್ಧದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.

೧೯೬೫ರ ಚೀನಾ ವಿರುದ್ಧದ ಸೋಲಿನ ನಂತರ ಭಾರತೀಯ ಸೈನಿಕರ ಮನೋಬಲ ಕುಗ್ಗಿದಂತಾಗಿತ್ತು. ಇದರಿಂದ ಪುಟಿದೇಳಲು ೧೯೭೧ರ ಭಾರತ ಪಾಕಿಸ್ತಾನ ಯುದ್ಧ ಬಹಳಷ್ಟು ಉಪಯೋಗಕ್ಕೆ ಬಂತು. ಈ ಯುದ್ಧದ ಬಳಿಕ ಬಾಂಗ್ಲಾದೇಶದ ಉದಯವಾಯಿತು. ಭಾರತ ಯಾವ ಕಾರಣಕ್ಕಾಗಿ ಪೂರ್ವ ಪಾಕಿಸ್ತಾನ (ಪೂರ್ವ ಬಂಗಾಳ) ಮತ್ತು ಪಶ್ಚಿಮ ಪಾಕಿಸ್ತಾನಗಳ ನಡುವಿನ ಅಂತರ್ ಯುದ್ಧದ ನಡುವೆ ಪ್ರವೇಶಿಸಿತು? ಇದಕ್ಕೆ ಸ್ಪಷ್ಟ ಉತ್ತರವೆಂದರೆ ೧೯೪೭ರ ದೇಶ ವಿಭಜನೆಯ ಬಳಿಕ ಭಾರತದ ರಕ್ಷಣಾ ವ್ಯವಸ್ಥೆಗೆ ಆದ ಹಾನಿಯನ್ನು ಬಹಳಷ್ಟು ಕಮ್ಮಿ ಮಾಡಬೇಕೆಂದು ಆಗಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರ ಹಂಬಲವಾಗಿತ್ತು. ಈಶಾನ್ಯ ರಾಜ್ಯದಲ್ಲಿ ತಲೆದೋರುತ್ತಿದ್ದ ಕಲಹಗಳು, ಅರುಣಾಚಲ ಪ್ರದೇಶದ ಮೇಲೆ ಚೀನಾದವರ ನಿರಂತರ ಹಕ್ಕು ಸ್ಥಾಪನೆ ಇದರ ನಡುವೆ ಪೂರ್ವ ಪಾಕಿಸ್ತಾನವೂ ಇದ್ದರೆ ಆಡಳಿತ ಹಾಗೂ ರಕ್ಷಣೆಯ ವ್ಯವಸ್ಥೆ ಬಹಳ ಕಷ್ಟವಾಗುತ್ತದೆ ಎಂದು ಮನಗಂಡ ಭಾರತ ಸರಕಾರ ಈ ಯುದ್ಧದಲ್ಲಿ ಪಾಲ್ಗೊಂಡು ಜಯಶಾಲಿಯಾಯಿತು. 

ಆಗಲೇ ನಮ್ಮಿಂದ ವಿಭಜನೆಗೊಂಡ ಪಾಕಿಸ್ತಾನವು ನಮಗೆ ನಿರಂತರ ಕಾಟವನ್ನು ಕೊಡುತ್ತಲೇ ಇತ್ತು. ಇದರ ನಡುವೆಯೇ ಪೂರ್ವ ಪಾಕಿಸ್ತಾನ (ಬಾಂಗ್ಲಾದೇಶದ ಮೊದಲ ಹೆಸರು) ಕೂಡಾ ನಮಗೆ ಮಗ್ಗುಲ ಮುಳ್ಳಾದರೆ ಬಹಳ ಕಷ್ಟವಾಗುತ್ತದೆ ಎಂಬ ವಿಚಾರವನ್ನು ಮನಗಂಡ ಭಾರತ ಈ ಯುದ್ಧದಲ್ಲಿ ಪಾಲ್ಗೊಂಡು ಬಾಂಗ್ಲಾದೇಶವನ್ನು ಪಾಕಿಸ್ತಾನದ ಕಪಿಮುಷ್ಟಿಯಿಂದ ವಿಮೋಚನೆ ಗೊಳಿಸಿತು. ಈ ಯುದ್ಧಕ್ಕೆ ಈಗ ೫೦ ವರ್ಷ ತುಂಬಿದ ಸಂಭ್ರಮ.

ಪೂರ್ವ ಪಾಕಿಸ್ತಾನವು ಪಾಕಿಸ್ತಾನದ ಅಧೀನದಲ್ಲಿದ್ದಾಗ ಅವರು ಅಲ್ಲಿನ ನಾಗರಿಕರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡರು. ಇದಕ್ಕೆ ಪೂರಕವಾಗಿ ೧೯೭೦ರ ಡಿಸೆಂಬರ್ ೬ರಂದು ನಡೆದ ಪೂರ್ವ ಹಾಗೂ ಪಶ್ಚಿಮ ಪಾಕಿಸ್ತಾನದ ನಡುವೆ ನಡೆದ ಚುನಾವಣೆಗಳಲ್ಲಿ ಪೂರ್ವ ಪಾಕಿಸ್ತಾನದ ನಾಯಕ ಅವಾಮಿ ಲೀಗ್ ಪಕ್ಷದ ಶೇಕ್ ಮುಜ್ಬೀರ್ ರೆಹಮಾನ್ ಅವರು ೧೬೨ ಸ್ಥಾನಗಳ ಪೈಕಿ ೧೬೦ ಸ್ಥಾನಗಳನ್ನು ಗೆದ್ದುಕೊಂಡರು. ಅತ್ತ ಪಾಕಿಸ್ತಾನದಲ್ಲಿ ಝುಲ್ಫೀಕರ್ ಅಲಿ ಭುಟ್ಟೊ ಅವರ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಪಕ್ಷವು ೧೩೮ ಸೀಟುಗಳ ಪೈಕಿ ೮೧ರಲ್ಲಿ ಮಾತ್ರ ಗೆಲುವು ಸಾಧಿಸಲು ಶಕ್ತವಾಯಿತು. ಬಹುಮತವಿದ್ದ ಮುಜ್ಬೀರ್ ರೆಹಮಾನ್ ಪ್ರಧಾನಿಯಾಗಬೇಕಿತ್ತು. ಆದರೆ ಸೇನೆಯ ಜೊತೆ ಹೊಂದಾಣಿಕೆಯನ್ನು ಮಾಡಿಕೊಂಡ ಭುಟ್ಟೋ ಮುಜ್ಬೀರ್ ರೆಹಮಾನ್ ಗೆ ಪ್ರಧಾನಿ ಪಟ್ಟ ಸಿಗದಂತೆ ನೋಡಿಕೊಂಡರು. 

ಇದರಿಂದ ನೊಂದ ಮುಜ್ಬೀರ್ ಅವರು ಪ್ರತಿಭಟನೆಯನ್ನು ಪ್ರಾರಂಭಿಸಿದರು. ಪ್ರತಿಭಟನೆಯ ಕಾವು ತೀವ್ರವಾಗುತ್ತಿದ್ದಂತೆ ಪಾಕಿಸ್ತಾನ ಇದನ್ನು ಹತ್ತಿಕ್ಕಲು ತನ್ನ ಸೇನೆಯನ್ನು ಕಳುಹಿಸಿತು. ಅವಾಮಿ ಲೀಗ್ ಪಕ್ಷದ ಪ್ರತಿಭಟನೆಗೆ ಭಾರತ ಬೆಂಬಲ ನೀಡಿತು. ಗಡಿಯಲ್ಲಿ ಕಾವಲು ಕಾಯುವ ಗಡಿ ರಕ್ಷಣಾ ಪಡೆ ಅಲ್ಪ ಪ್ರಮಾಣದ ಸಹಕಾರವನ್ನು ಪ್ರತಿಭಟನಾಕಾರರಿಗೆ ನೀಡಿತು. ಪಾಕಿಸ್ತಾನದ ಆಂತರಿಕ ವಿಷಯದ ನಡುವೆ ಮೂಗು ತೂರಿಸುವ ಒಲವು ಭಾರತಕ್ಕೆ ಇರಲಿಲ್ಲವಾದರೂ, ನಂತರದ ದಿನಗಳಲ್ಲಿ ಬದಲಾದ ಪರಿಸ್ಥಿತಿಯು ಪಾಕಿಸ್ತಾನದ ವಿರುದ್ಧ ನೇರ ಯುದ್ಧ ಮಾಡುವಂತಾಯಿತು. 

೧೯೭೧ರ ಎಪ್ರಿಲ್ ೨೯ ಮತ್ತು ಮೇ ೧೫ರಂದು ಭಾರತದ ಈಸ್ಟರ್ನ್ ಕಮಾಂಡ್, ಆಪರೇಶನ್ ಜಾಕ್ ಪಾಟ್ ಪ್ರಾರಂಭಿಸಿತು. ಈ ಮೂಲಕ ನೇರವಾಗಿ ಬಾಂಗ್ಲಾ ವಿಮೋಚನೆಗಾಗಿ ಹೋರಾಟ ಮಾಡುತ್ತಿದ್ದ ಪ್ರತಿಭಟನಾಕಾರರಿಗೆ ಸಹಕಾರ ನೀಡಿತು. ಜೂನ್ ತಿಂಗಳಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲು ಪ್ರಾರಂಭಿಸಬೇಕು ಎನ್ನುವುದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ತೀರ್ಮಾನವಾಗಿತ್ತು. ಆದರೆ ಅಂದಿನ ಸೇನಾ ದಂಡ ನಾಯಕ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಒಪ್ಪಿಗೆ ಸೂಚಿಸಲಿಲ್ಲ. ಅವರ ಪ್ರಕಾರ ಮಳೆಗಾಲದ ಸಮಯದಲ್ಲಿ ಯುದ್ಧ ಪ್ರಾರಂಭಿಸುವುದು ಅನುಕೂಲ ಸಂದರ್ಭವಾಗಿರಲಿಲ್ಲ. ಆ ಸಮಯ ಯುದ್ಧ ಪ್ರಾರಂಭಿಸಿದರೆ ಪಾಕಿಸ್ತಾನಕ್ಕೆ ಚೀನಾ ಬೆಂಬಲ ನೀಡಿ ತನ್ನ ಸೇನೆಯನ್ನು ಸುಲಭವಾಗಿ ಈಶಾನ್ಯ ರಾಜ್ಯಗಳ ಗಡಿಯೊಳಗೆ ನುಸುಳುವಂತೆ ಮಾಡುತ್ತದೆ ಎನ್ನುವುದು ಮಾಣಿಕ್ ಶಾ ಅವರ ನಿಲುವಾಗಿತ್ತು. ಇಂದಿರಾ ಗಾಂಧಿಯವರು ಮಾಣಿಕ್ ಶಾ ಅವರ ನಿಲುವನ್ನು ಒಪ್ಪಿಕೊಂಡರು. 

ಮಾಣಿಕ್ ಶಾ ಅವರ ಪ್ರಕಾರ ಚಳಿಗಾಲ ಈ ಕಾರ್ಯಾಚರಣೆಗೆ ಸೂಕ್ತ ಸಮಯವಾಗಿತ್ತು. ಅವರು ತಮ್ಮ ಕಾರ್ಯತಂತ್ರವನ್ನು ರೂಪಿಸುತ್ತಿದ್ದಂತೆ, ಪ್ರಧಾನಿಯವರು ರಾಜತಾಂತ್ರಿಕವಾಗಿ ಬೆಂಬಲವನ್ನು ಕ್ರೋಢೀಕರಿಸಿಕೊಂಡರು. 

೧೯೭೧ರ ಡಿಸೆಂಬರ್ ೩ರಂದು ಸಂಜೆ ಪಾಕಿಸ್ತಾನ ವಾಯು ಸೇನೆ ಮತ್ತು ಭೂ ಸೇನೆ ಏಕಾಏಕಿ ಪಂಜಾಬ್ ಮತ್ತು ಜಮ್ಮು ಕಾಶ್ಮೀರದ ಕೆಲವು ಸ್ಥಳಗಳ ಮೇಲೆ ದಾಳಿ ಮಾಡಿತು. ಭಾರತ ಆಗಲೇ ಯುದ್ಧಕ್ಕೆ ಸನ್ನದ್ಧವಾಗಿದ್ದ ಕಾರಣ ಹೆಚ್ಚೇನೂ ಹಾನಿಯಾಗಲಿಲ್ಲ. ಪ್ರಧಾನಿ ಇಂದಿರಾ ಗಾಂಧಿಯವರು ರೇಡಿಯೋ ಮೂಲಕ ದೇಶದ ಜನತೆಗೆ ತಮ್ಮ ಸಂದೇಶವನ್ನು ನೀಡಿ, ಭಾರತ ಈ ದಾಳಿಗೆ ತಕ್ಕ ಉತ್ತರ ನೀಡಲಿದೆ ಎಂದರು. ಅದರಂತೆ ಡಿಸೆಂಬರ್ ೪ ಮತ್ತು ೫ ರಂದು ಭಾರತೀಯ ನೌಕಾ ದಳವು ಪಾಕಿಸ್ತಾನದ ಕರಾಚಿ ಬಂದರು ಮೇಲೆ ದಾಳಿ ಮಾಡಿ ಅವರ ನೌಕಾದಳದ ಶಕ್ತಿಯನ್ನು ಕುಗ್ಗಿಸಿಬಿಟ್ಟಿತು. ಪಾಕಿಸ್ತಾನದ ೭ ಗನ್ ಬೋಟ್, ಸಬ್ ಮೆರಿನ್ ಮೊದಲಾದ ಹಲವಾರು ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಯಿತು. ಪಾಕಿಸ್ತಾನದ ಸುಮಾರು ೧೫೦೦ ಸೈನಿಕರನ್ನು ಸೆರೆ ಹಿಡಿಯಲಾಯಿತು. 

ಇನ್ನೊಂದೆಡೆ ಭೂಸೇನೆಯೂ ಪೂರ್ವ ಹಾಗೂ ಪಶ್ಚಿಮ ಪಾಕಿಸ್ತಾನದ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿತು. ಪೂರ್ವ ಪಾಕಿಸ್ತಾನದ ಢಾಕಾ ತನಕವೂ ಸೇನೆ ಮುನ್ನುಗ್ಗಿ ಅಲ್ಲಿನ ಜನರಲ್ ಅನ್ನು ಶರಣಾಗುವಂತೆ ಮಾಡಿತು. ಕೇವಲ ೧೩ ದಿನಗಳಲ್ಲಿ ಪಾಕಿಸ್ತಾನವು ಭಾರತಕ್ಕೆ ಶರಣಾಯಿತು. ಡಿಸೆಂಬರ್ ೧೬ರಂದು ಪಾಕಿಸ್ತಾನದ ಈಸ್ಟರ್ನ್ ಕಮಾಂಡ್ ನ ಕಮಾಂಡರ್ ಲೆ। ಜ। ಎ ಎ ಕೆ ನಿಯಾಜಿ ಭಾರತದ ಕಮಾಂಡರ್ ಲೆ। ಜ। ಜಗ್ವೀತ್ ಸಿಂಗ್ ಅರೋರಾ ಎದುರು ಮಂಡಿಯೂರಿದರು. ಪಾಕಿಸ್ತಾನದ ಕಮಾಂಡರ್ ಜಿಯಾಜಿ ಶರಣಾಗತಿಯ ಪತ್ರಕ್ಕೆ ಸಹಿ ಹಾಕಿದರು. ಇದು ಪಾಕಿಸ್ತಾನದ ಸಂಪೂರ್ಣ ಸೋಲು ಎಂದು ಒಪ್ಪಿಕೊಳ್ಳಲೇ ಬೇಕಾಯಿತು. ಈ ಗೆಲುವಿನಿಂದಾಗಿ ಬಾಂಗ್ಲಾದೇಶ ಎಂಬ ಹೊಸ ದೇಶದ ಉದಯವಾಯಿತು. 

ಈ ಸೋಲಿನಿಂದ ಪಾಠ ಕಲಿಯದ ಪಾಕಿಸ್ತಾನ ಈಗಲೂ ಭಾರತದ ಮೇಲೆ ಪರೋಕ್ಷವಾಗಿ ಯುದ್ಧ ಮಾಡುತ್ತಲೇ ಇದೆ. ಭಾರತದ ಮೇಲೆ ಪೂರ್ಣ ಪ್ರಮಾಣದ ಯುದ್ಧ ಮಾಡುವ ಸಾಮರ್ಥ್ಯ ಪಾಕಿಸ್ತಾನದಂತಹ ಕುತಂತ್ರಿ ದೇಶಕ್ಕೆ ಎಲ್ಲಿದೆ? ಈ ಕಾರಣದಿಂದಲೇ ಗಡಿಯಲ್ಲಿರುವ ಉಗ್ರಗಾಮಿ ಸಂಘಟನೆಗಳಿಗೆ ಹಣ ಹಾಗೂ ಶಸ್ತ್ರಾಸ್ತ್ರಗಳನ್ನು ಕೊಟ್ಟು ಭಾರತ ದೇಶದ ಒಳಗೆ ರವಾನಿಸಲಾಗುತ್ತದೆ. ಇವರು ಜಮ್ಮು ಮತ್ತು ಕಾಶ್ಮೀರಗಳಲ್ಲಿ ಅಧಿಕವಾಗಿ ಉಗ್ರಗಾಮಿ ಚಟುವಟಿಗೆಗಳನ್ನು ನಡೆಸುತ್ತಾರೆ. ಅಮಾಯಕ ನಾಗರಿಕರ ಜೊತೆಗೆ ನಮ್ಮ ಧೀರ ಯೋಧರನ್ನು ಕೊಲ್ಲುತ್ತಾರೆ. ಇದಕ್ಕೊಂದು ಅಂತ್ಯ ಇಂದಿನ ತುರ್ತು ಅಗತ್ಯ ಅಲ್ಲವೇ?

ಚಿತ್ರ ಕೃಪೆ: ಅಂತರ್ಜಾಲ ತಾಣ