ಸುಸ್ಪಷ್ಟ ತೆರೆಯುಳ್ಳ ಫ್ಯಾಬ್ಲೆಟ್
ಸುಸ್ಪಷ್ಟ ತೆರೆಯುಳ್ಳ ಫ್ಯಾಬ್ಲೆಟ್
ಶಾರ್ಪ್ ಮತ್ತು ಎಚ್ ಟಿ ಸಿ ಕಂಪೆನಿಗಳು ಅತ್ಯಂತ ಸುಸ್ಪಷ್ಟವಾಗಿ ಪ್ರದರ್ಶಿಸುವ ಸಾಮರ್ಥ್ಯವಿರುವ ಸ್ಮಾರ್ಟ್ಫೋನ್ ತೆರೆಯನ್ನು ಅಭಿವೃದ್ಧಿ ಪಡಿಸಿವೆ.ಒಂದು ಚದರ ಇಂಚು ತೆರೆಯಲ್ಲಿ ನಾಲ್ಕುನೂರನಲ್ವತ್ತು ಪಿಕ್ಸೆಲ್ ಉಳ್ಳ ಈ ತೆರೆಗಳು ಬಳಸುವ ವಿದ್ಯುಚ್ಛಕ್ತಿಯೂ ಕಡಿಮೆ.ಆಪಲ್ನ ಐಫೋನ್5ರಲ್ಲಿ ಚದರಇಂಚಿಗೆ ಮುನ್ನೂರ ಇಪ್ಪತ್ತಾರು ಪಿಕ್ಸೆಲ್ಗಳ ಸ್ಪಷ್ಟತೆಯಿದೆ.ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ ನಡುವಣ ಸಾಧನದಲ್ಲಿ ಈ ತೆರೆಗಳನ್ನು ಬಳಸಿ,ಸಾಧನಕ್ಕೆ ಫ್ಯಾಬ್ಲೆಟ್ ಎಂದು ನಾಮಕರಣ ಮಾಡುವ ಪ್ರಸ್ತಾಪವೂ ಎಚ್ ಟಿ ಸಿ ಕಂಪೆನಿಗಿದೆ.ಈ ತಂತ್ರಜ್ಞಾನವನ್ನು ಅವು ಇತರ ಕಂಪೆನಿಗಳಿಗೂ ಒದಗಿಸಲು ಉತ್ಸಾಹ ಹೊಂದಿವೆ.ಶಾರ್ಪ್ ಕಂಪೆನಿಯ ತೆರೆಯಲ್ಲಿ ಹೊಸ ಬಗೆಯ ಎಲ್ ಸಿ ಡಿ ತೆರೆಯನ್ನು ಬಳಸಲಾಗಿದೆ.ಸಾಮಾನ್ಯವಾಗಿ ತಿನ್ ಫಿಲ್ಮ್ ಟ್ರಾನ್ಸಿಸ್ಟರ್ ತಂತ್ರಜ್ಞಾನದ ತೆರೆಯನ್ನು ಬಳಸಲಾಗುತ್ತಿದೆ.ಶಾರ್ಪ್ ಕಂಪೆನಿಯು ಇಂಡಿಯಂ ಗ್ಯಾಲಿಯಮ್ ಜಿಂಕ್ ಆಕ್ಸೈಡ್(ಇಗ್ಸೋ) ಎನ್ನುವ ಹೊಸ ಬಗೆಯ ಎಲ್ ಸಿ ಡಿಯನ್ನು ಬಳಸಲಾಗಿದೆ.ಇದರಲ್ಲಿರುವ ದ್ರವವು ಬೆಳಕನ್ನು ಸುಲಭವಾಗಿ ಹಾಯಲು ಅನುವು ಮಾಡುವ ಕಾರಣ ಕಡಿಮೆ ವಿದ್ಯುಚ್ಛಕ್ತಿ ಬಳಸಿಯೂ ಸ್ಪಷ್ಟತೆ ಹೆಚ್ಚು ನೀಡುವ ಸಾಮರ್ಥ್ಯ ಹೊಂದಿದೆ.
-------------------------------------
ಗೂಗಲ್-ಸ್ಯಾಮ್ಸಂಗ್ನ ಹೊಸ ಕ್ರೋಮ್ಬುಕ್
ಸ್ಯಾಮ್ಸಂಗ್ ಕಂಪೆನಿಯು ಹೊಸ ಕ್ರೋಮ್ಬುಕ್ ಎನ್ನುವ ಲ್ಯಾಪ್ಟಾಪ್ಗಳನ್ನು ಅಭಿವೃದ್ಧಿ ಪಡಿಸಿದೆ.ಬರೇ ಎರಡೂವರೆ ಪೌಂಡ್ ತೂಗುವ ಈ ಸಾಧನಗಳು 0.8ಇಂಚು ದಪ್ಪವಿವೆ.11.6 ಇಂಚು ತೆರೆಯನ್ನು ಇದರಲ್ಲಿ ಒದಗಿಸಲಾಗಿದೆ.ಬಳಸಲಾಗುವ ಆಪರೇಟಿಂಗ್ ವ್ಯವಸ್ಥೆಯು ಕ್ರೊಂ ಆಪರೇಟಿಂಗ್ ವ್ಯವಸ್ಥೆಯಾಗಿದ್ದು,ಇದರಲ್ಲಿ ಎರಡು ಜೀಬಿ ರಾಮ್ ಸ್ಮರಣಕೋಶ ಮತ್ತು ಹದಿನಾರು ಜೀಬಿ ಡಿಸ್ಕ್ ಇದೆ.ಗೂಗಲ್ ತನ್ನ ಕ್ಲೌಡ್ ವ್ಯವಸ್ಥೆಯಲ್ಲಿ ನೂರು ಜೀಬಿ ಸಾಮರ್ಥ್ಯದ ಸ್ಥಳಾವಕಾಶವನ್ನು ಒದಗಿಸುತ್ತದೆ.ಹತ್ತು ಸೆಕೆಂಡಿನಲ್ಲಿ ಕ್ರೋಮ್ಬುಕ್ ಚಾಲೂ ಆಗುತ್ತದೆ.ಬೆಲೆ ಇನ್ನೂರೈವತ್ತು ಡಾಲರುಗಳ ಹತ್ತಿರವಿದೆ.ಸಾವಿರದಎಂಭತ್ತು ಪಿಕ್ಸೆಲ್ಗಳ ಸ್ಪಷ್ಟತೆಯ ವಿಡಿಯೋಗಳನ್ನಿದು ಪ್ರದರ್ಶಿಸಬಲ್ಲುದು.
----------------------------------------
ತ್ರೈಮಾಸಿಕ ಫಲಿತಾಂಶ:ಗೂಗಲ್ಗೆ ಅವಸರ
ಗೂಗಲ್ ಕಂಪೆನಿಯ ಈ ತ್ರೈಮಾಸಿಕದ ಫಲಿತಾಂಶ ಗುರುಗುಂಟಿರಾಯರು ಗುರ್ರ್ ಎನ್ನುವ ಹಾಗಿದ್ದರೂ,ಅದನ್ನು ಪ್ರಕಟಿಸಲು ಗೂಗಲ್ ಅವಸರ ಪ್ರದರ್ಶಿಸಿ,ಪೇಚಿಗೀಡಾಗಿದೆ.ಶೇರು ಮಾರುಕಟ್ಟೆ ಮುಚ್ಚಿದ ನಂತರ ಫಲಿತಾಂಶ ಪ್ರಕಟವಾಗಬೇಕಿತ್ತು.ಅದನ್ನು ಮೂರು ಗಂಟೆ ಮೊದಲೇ ಪ್ರಕಟಿಸಲಾಯಿತು.ಕಂಪೆನಿಯ ವ್ಯವಹಾರ ಅತ್ಯುತ್ತಮವಾಗಿ ವೃದ್ಧಿಯಾಗಿದ್ದರೂ,ಲಾಭಾಂಶದಲ್ಲಾಗಿರುವ ಇಳಿಕೆಯಿಂದ ಜನರು ಗೂಗಲ್ ಫಲಿತಾಂಶದ ಬಗ್ಗೆ ತೃಪ್ತರಾಗದಂತಾಯಿತು.ಕಂಪೆನಿ ಶೇರುಗಳು ಶೇಕಡಾ ಒಂಭತ್ತರಷ್ಟು ಕುಸಿತ ಕಂಡವು.
----------------------------------------------
ಸ್ಪೆಕ್ಟ್ರಮ್ ಹರಾಜು:ಪ್ರಕ್ರಿಯೆ ಆರಂಭ
ಹರಾಜಿನಲ್ಲಿ ಭಾಗವಹಿಸುವ ಕಂಪೆನಿಗಳು ಅರ್ಜಿ ಸಲ್ಲಿಸಲು ನಿಗದಿಯಾದ ಅವಧಿಯು ಶನಿವಾರ ಮುಕ್ತಾಯವಾಯಿತು.ಏರ್ಟೆಲ್,ಐಡಿಯಾ,ವೊಡಾಫೋನ್,ಟಾಟಾಟೆಲಿ ಕಂಪೆನಿಗಳು ಹರಾಜಿನಲ್ಲಿ ಭಾಗವಹಿಸಲು ತೀರ್ಮಾನಿಸಿವೆ.ಆದರೆ ಅಂಬಾನಿ ಸಹೋದರರ ರಿಲಾಯೆನ್ಸ್ ಇಂಡಸ್ಟ್ರಿಯಾಗಲೀ,ಅನಿಲ್ ಅಂಬಾನಿಯ ರಿಲಾಯೆನ್ಸ್ ಕಮ್ಯುನಿಕೇಶನ್ ಆಗಲಿ ಶುಕ್ರವಾರದ ವರೆಗೆ ಹರಾಜಿನಲ್ಲಿ ಭಾಗವಹಿಸಲು ಆಸಕ್ತಿ ಪ್ರದರ್ಶಿಸಲಿಲ್ಲ.ಬಹುಶ: ತ್ರೀಜಿ ಮತ್ತು ಫೋರ್ಜಿಯ ದತ್ತಾಂಶ ಸೇವೆಯ ಬಗ್ಗೆಯೇ ಹೆಚ್ಚಿನ ಗಮನ ನೀಡಿ,ತಮ್ಮ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳಲು ತೀರ್ಮಾನಿಸಿರುವ ಈ ಕಂಪೆನಿಗಳು ಟೂಜಿ ಹರಾಜಿನಲ್ಲಿ ಭಾಗವಹಿಸಲು ತೀರ್ಮಾನಿಸಿರುವ ಹಾಗಿದೆ.ಹೇಗಿದ್ದರೂ ರಿಲಾಯೆನ್ಸ್ ಕಮ್ಯುನಿಕೇಶನ್ಸ್ ಕಂಪೆನಿಯು ಟೂಜಿಯಲ್ಲಿ ಜಿ ಎಸ್ ಎಂ ಮತ್ತು ಸಿಡಿಎಂಏ ಎರಡೂ ಸ್ಪೆಕ್ಟ್ರಮ್ಗಳನ್ನು ಇದೀಗಲೇ ಪಡೆದಿದೆ.ಅದರ ಲೈಸೆನ್ಸ್ ಏನೂ ರದ್ದಾಗಿಲ್ಲ.ಆದರೆ ಸುಮಾರು ನೂರೈವತ್ತು ಕಂಪೆನಿಗಳು ಹರಾಜಿನಲ್ಲಿ ಭಾಗವಹಿಸದಿದ್ದರೆ,ತಮ್ಮ ಸೇವೆಯನ್ನು ಮುಂದುವರಿಸಲು ಸಾಧ್ಯವಿಲ್ಲ.ನವಂಬರ್ ಎರಡನೇ ವಾರ ಹರಾಜು ನಡೆಯಲಿದ್ದು,ಜನವರಿ ವೇಳೆಗೆ ಸ್ಪೆಕ್ಟ್ರಮ್ ಬಟವಾಡೆಯಾಗಬೇಕಿದೆ.ಲೈಸೆನ್ಸ್ ರದ್ದಾಗಿದ್ದರೂ ಹರಾಜಿನಲ್ಲಿ ಭಾಗವಹಿಸಲು ತೀರ್ಮಾನಿಸಿರುವ ಕಂಪೆನಿಯೆಂದರೆ ಶ್ಯಾಮ್ ಟೆಲಿಕಾಂ.ಇದು ಲೈಸೆನ್ಸ್ ರದ್ಧತಿ ಬಗ್ಗೆ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದು,ತನ್ನ ಪರ ನ್ಯಾಯವಿದೆ ಎನ್ನುವ ನಿಲುವಿನ ಕಾರಣ ಹರಾಜಿನಲ್ಲಿ ಭಾಗವಹಿಸದಿರಲು ತೀರ್ಮಾನಿಸಿದೆ.
------------------------------
ಆಕ್ಟಿವ್ ಸಿಸ್ಟಮ್800 ಎನ್ನುವ ಹೊಸ ಸಾಧನ
ಡೆಲ್ ಕಂಪ್ಯೂಟರ್ ಇದೀಗ ನೆಟ್ವರ್ಕಿಂಗ್,ಸ್ಮರಣ ಸಾಮರ್ಥ್ಯ ಮತ್ತು ಗಣಕಸಾಮರ್ಥ್ಯ ಎಲ್ಲವನ್ನೂ ಹೊಂದಿರುವ ಸಾಧನವನ್ನು ಪರಿಚಯಿಸಿದೆ.ಆಕ್ಟಿವ್800 ಎನ್ನುವ ಹೆಸರಿನಲ್ಲಿ ಇದನ್ನು ಒದಗಿಸಲಾಗುವುದು.ಡೇಟಾಸೆಂಟರುಗಳಲ್ಲಿ ಬಳಸುವ ಈ ಸಾಧನದಿಂದಾಗಿ ಕ್ಲೌಡ್ ಸೇವೆಗಳ ನಿರ್ವಹಣೆ ಸುಲಭವಾಗಲಿದೆ.
---------------------------------------------
ಟೂಜಿ ಹಗರಣ:ಪ್ರಧಾನಿ ತಪ್ಪಿಸಬಹುದಿತ್ತೇ?
ಕಳೆದವಾರ ಸಂಸತ್ತಿನ ಜಂಟಿ ಸದನಗಳ ಸಮಿತಿಯ ಸಭೆಯಲ್ಲಿ ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ಚಂದ್ರಶೇಖರನ್ ಅವರು ಸಾಕ್ಷ್ಯ ಹೇಳಿದಾಗ ಬಯಲಾದ ಸಂಗತಿಯಿಂದ ಟೂಜಿ ಹಗರಣದಲ್ಲಿ ಪ್ರಧಾನಿಯವರ ಪಾತ್ರದ ಬಗ್ಗೆ ಹೊಸ ಸಾಕ್ಷಿಗಳು ಲಭ್ಯವಾಗಿವೆ.ಟೂಜಿ ಸ್ಪೆಕ್ಟ್ರಂ ಹಂಚಿಕೆಯನ್ನು ಹರಾಜಿನ ಮೂಲಕ ನಡೆಸದಿರಲು ತೀರ್ಮಾನಿಸಿದ್ದರೂ,ಆರಂಭಿಕ ಶುಲ್ಕವನ್ನು ಸಾವಿರದಾರ್ನೂರು ಕೋಟಿಯ ಬದಲಿಗೆ ಮೂವತ್ತಾರು ಸಾವಿರ ಕೋಟಿಗೆ ಏರಿಸುವುದು ಅಗತ್ಯವೆಂದು ತಾವು ಪ್ರಧಾನಿಯವರಿಗೆ ತಿಳಿಸಿದ್ದಾಗಿ ಕಾರ್ಯದರ್ಶಿ ಬಾಯಿಬಿಟ್ಟಿದ್ದಾರೆ.ಹಳೆಯದರ ಮೊದಲಬಾರಿ ಸ್ಪೆಕ್ಟಂ ಹಂಚಿಕೆಯಾದಾಗ ನಿಗದಿತವಾದ ದರವಾಗಿತ್ತು.ಅದರ ನಂತರ ಐದಾರು ವರ್ಷಗಳ ನಂತರವೂ ಹಳೆಯ ದರವನ್ನು ಮುಂದುವರಿಸುವುದು ಸೂಕ್ತವೇ ಎಂದು ಪ್ರಧಾನಿ ಕ್ಯಾಬಿನೆಟ್ ಕಾರ್ಯದರ್ಶಿಯವರಿಗೆ ವಿವರಣೆ ಬಯಸಿ ಪತ್ರ ಬರೆದದ್ದಕ್ಕೆ ಹೊಸ ದರದ ಪ್ರಸ್ತಾಪವನ್ನು ಚಂದ್ರಶೇಖರನ್ ಅವರು ಮಾಡಿದ್ದರು.ಮಾತ್ರವಲ್ಲ,ಹೊಸದರವು ಹೇಗೆ ಪ್ರಸ್ತುತವೆನ್ನುವ ವಾದವನ್ನೂ ಮಂಡಿಸಲಾಗಿತ್ತು.ಮೊಬೈಲ್ ಸಂಪರ್ಕ ಬೇಡಿಕೆ,ನೂರೈವತ್ತರಷ್ಟು ಕಂಪೆನಿಗಳು ಸ್ಪೆಕ್ಟ್ರಂಗಾಗಿ ಬೇಡಿಕೆ ಸಲ್ಲಿಸಿರುವುದು ಮುಂತಾದ ಕಾರಣಗಳಿಂದ ಆ ದರ ಸೂಕ್ತವೆಂದು ಚಂದ್ರಶೇಖರನ್ ಹೇಳಿದ್ದರು.ಹಾಗಾದರೆ ಪ್ರಧಾನಿ ಹಳೆಯ ಆರಂಭಿಕ ಶುಲ್ಕ ದರದಲ್ಲೇ ಹಂಚಿಕೆ ಮಾಡಲು ಅನುಮತಿಸಿರುವುದು,ಹಗರಣಕ್ಕೆ ಅವರೇ ಕಾರಣವೇ ಎನ್ನುವುದು ಸ್ಪಷ್ಟವಿಲ್ಲ.ಬಹುಶ: ಪ್ರಧಾನಿಯವರು,ಕ್ಯಾಬಿನೆಟ್ ಕಾರ್ಯದರ್ಶಿಯವರು ನೀಡಿದ ಅಭಿಪ್ರಾಯವನ್ನು ಆಗಿನ ಟೆಲಿಕಾಂ ಸಚಿವ ರಾಜಾರಿಗೆ ಕಳುಹಿಸಿ,ಸೂಕ್ತ ನಿರ್ಧಾರ ಕೈಗೊಳ್ಳಲು ಹೇಳಿರಬಹುದು.ಪ್ರಧಾನಿಯವರು ಇತರ ಸಚಿವರ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲವಾಗಿ,ಅವರು ಇದರ ಬಗ್ಗೆ ಹೆಚ್ಚು ಒತ್ತಡ ಹೇರಿರಲಿಕ್ಕಿಲ್ಲವೆನ್ನುವುದು ಸಹಜ.ಅದರೆ ಇಂತಹ ಅಭಿಪ್ರಾಯವನ್ನು ಕ್ಯಾಬಿನೆಟ್ ಕಾರ್ಯದರ್ಶಿಯವರು ನೀಡಿದ್ದರು ಎನ್ನುವ ವಿಷಯವೇ ಇದುವರೆಗೆ ಬಹಿರಂಗವಾಗಿರಲಿಲ್ಲ ಎನ್ನುವುದು ಆಶ್ಚರ್ಯಕರವಲ್ಲವೇ?
---------------------------
ವಿಂಡೋಸ್ 8:ಜನ ಮೆಚ್ಚುಗೆ ಗಳಿಸೀತೇ?
ವಿಂಡೋಸ್ 8 ಆಪರೇಟಿಂಗ್ ವ್ಯವಸ್ಥೆಯನ್ನು ಮೈಕ್ರೋಸಾಫ್ಟ್ ಕಂಪೆನಿಯನ್ನೇನು ಬಿಡುಗಡೆ ಮಾಡಲಿದೆ.ಸ್ಮಾರ್ಟ್ಫೋನ್,ಟ್ಯಾಬ್ಲೆಟ್,ಪಿಸಿ ಹೀಗೆ ಸರ್ವ ಸಾಧನಗಳಿಗೆಂದಿದನ್ನು ಅಭಿವೃದ್ಧಿ ಪಡಿಸಲಾಗಿದೆ.ಟ್ಯಾಬ್ಲೆಟ್,ಸ್ಮಾರ್ಟ್ಫೋನುಗಳಿಗೆ ಈ ಹೊಸ ಆಪರೇಟಿಂಗ್ ವ್ಯವಸ್ಥೆ ಚೆನ್ನಾಗಿ ಒಗ್ಗುತ್ತದೆ.ಆದರೆ ಅದೇ ಮಾತನ್ನು ತಜ್ಞರು ಪಿಸಿಗಳ ಬಗ್ಗೆ ಹೇಳುತ್ತಿಲ್ಲ.ಹಳೆಯ ಆಪರೇಟಿಂಗ್ ವ್ಯವಸ್ಥೆಯ ನೋಟಕ್ಕಿಂತ ಸಂಪೂರ್ಣ ಭಿನ್ನವಾದ ನೋಟವನ್ನಿದು ನೀಡುತ್ತದೆ.ಸ್ಟಾರ್ಟ್ ಬಟನ್ ಇದರಲ್ಲಿ ನಾಪತ್ತೆಯಾಗುತ್ತದೆ.ಬರೇ ಐಕಾನ್ಗಳು ಡೆಸ್ಕ್ಟಾಪಿನಲ್ಲಿ ಕಾಣಿಸಿಕೊಂಡು ಹಳೆಯ ತಲೆಮಾರಿನವರಿಗೆ ಪಿಸಿ ಬಳಕೆಯು ತಲೆನೋವಾಗಿಸುವ ಸಂಭವವೇ ಹೆಚ್ಚು ಎನ್ನುವುದು ಆರಂಭಿಕ ಪ್ರತಿಕ್ರಿಯೆಗಳು ಸ್ಪಷ್ಟಪಡಿಸಿವೆ.ಮೈಕ್ರೊಸಾಫ್ಟ್ ಇಂತಹ ಆಪರೇಟಿಂಗ್ ವ್ಯವಸ್ಥೆಯನ್ನು ಪಿಸಿಗಳಿಗೆ ಒದಗಿಸಿ,ತನ್ನ ಕಾಲಿನ ಮೇಲೆ ತಾನೇ ಕೊಡಲಿ ಏಟು ಹಾಕಿಕೊಳ್ಳಲಿದೆಯೇ ಎನ್ನುವವರೂ ಇದ್ದಾರೆ.
(ಈ ಅಂಕಣ ಬರಹಗಳು http://sahok567.blogspot.comನಲ್ಲೂ ಲಭ್ಯವಿವೆ.)
UDAYAVANI
*ಅಶೋಕ್ಕುಮಾರ್ ಎ