ಸೂತ್ರದಾರ ಶ್ರೀಕೃಷ್ಣ

ಸೂತ್ರದಾರ ಶ್ರೀಕೃಷ್ಣ

ಪುಸ್ತಕದ ಲೇಖಕ/ಕವಿಯ ಹೆಸರು
ಜಿ.ಎಂ.ಕೆ.
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ. ೩೫.೦೦, ಮುದ್ರಣ: ಜೂನ್ ೨೦೨೩

ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಏಳನೇ ಪುಸ್ತಕ ‘ಸೂತ್ರದಾರ ಶ್ರೀಕೃಷ್ಣ’. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಶ್ರೀಕೃಷ್ಣನ ವಿವರಗಳನ್ನು ಪುಟ್ಟದ್ದಾಗಿ ಈ ಪುಸ್ತಕದಲ್ಲಿ ನೀಡಿದ್ದಾರೆ. ೨೦೦೫ರಲ್ಲಿ ಪ್ರಥಮ ಮುದ್ರಣ ಕಂಡ ಈ ಕೃತಿ ಈಗ ನಾಲ್ಕನೇ ಮುದ್ರಣವಾಗಿ ಹೊರಬಂದಿದೆ. 

ಈ ಮಾಲಿಕೆಯ ಬಗ್ಗೆ ಪ್ರಕಾಶಕರು ಬೆನ್ನುಡಿಯಲ್ಲಿ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ “ಜಗತ್ತಿನ ಮಹಾಕಾವ್ಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ‘ಮಹಾಭಾರತದ ಕಥೆ' ಪ್ರಾಚೀನ ಭಾರತದ ಕಥೆಯೂ ಆಗಿದೆ. ಈ ಕಥೆಯನ್ನು ಯಾರು, ಯಾವ ಕಾಲದಲ್ಲಿ ಓದಿದರೂ ಅದು ತಮ್ಮದೇ ಕಥೆ ಎಂಬ ಭಾವ ಗಾಢವಾಗಿ ಕಾಡುತ್ತದೆ. ಏಕೆಂದರೆ ಈ ಮಹಾಕಾವ್ಯದಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು ಮಾನವ ಸಹಜ ಗುಣಗಳಿಂದ, ಭಾವಗಳಿಂದ ತೊಳಲಾಡುತ್ತ ನಮ್ಮ ಮಧ್ಯೆ ಈಗ ಕೂಡಾ ನಲಿದಾಡುತ್ತಿರುವಂತೆ ಭಾಸವಾಗುತ್ತದೆ. ಅವರ ಸಂಗದಲ್ಲಿ ನಮ್ಮ ವ್ಯಕ್ತಿತ್ವ ಇನ್ನಷ್ಟು ಹಸನಾಗುತ್ತದೆ, ಹಾಗೆಯೇ ದುಷ್ಟತನ, ಮಾತ್ಸರ್ಯದಂತಹ ದುರ್ಗುಣಗಳನ್ನು ತೊರೆಯಬೇಕೆಂಬ ಪ್ರಜ್ಞೆ ಜಾಗೃತವಾಗುತ್ತದೆ. ಮಹಾಭಾರತವನ್ನು ಕೇವಲ ದಾಯಾದಿ ಕಥೆಯೆಂದು ಭಾವಿಸದೇ ಮಾನವ ಜನಾಂಗಕ್ಕೆ ಸದಾ ಬೆಳಕು ತೋರುವ ಮಹಾಕೃತಿಯೆಂದು ವಿದ್ವಾಂಸರು ಪರಿಗಣಿಸಿದ್ದಾರೆ. ಈ ಮಾಲಿಕೆಯಲ್ಲಿ ಮಹಾಭಾರತದಲ್ಲಿ ಬರುವ ಹತ್ತು ಪ್ರಮುಖ ಪಾತ್ರಗಳ ಪರಿಚಯವನ್ನು ಕೊಡಲಾಗಿದೆ. ಕೃತಿಯ ಮಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಹೇಳಲು ಪ್ರಯತ್ನಿಸಲಾಗಿದೆ. ಪ್ರತಿ ಪಾತ್ರದ ಕಥೆಯನ್ನು ಮೊದಲಿನಿಂದ ಕಡೆಯವರೆಗೆ ಸಮಗ್ರವಾಗಿ ಆದರೆ ಸಂಕ್ಷಿಪ್ತವಾಗಿ ನಿರೂಪಿಸಲು ಪ್ರಯತ್ನಿಸಲಾಗಿದೆ. ಓದುಗರು ಈ ಕೃತಿಯನ್ನು ಆದರದಿಂದ ಸ್ವೀಕರಿಸುವರೆಂಬ ನಂಬಿಕೆ ನಮ್ಮದು" ಎಂದಿದ್ದಾರೆ. 

'ಸೂತ್ರದಾರ ಶ್ರೀಕೃಷ್ಣ' ಕೃತಿಯು ಸೆರೆಮನೆಯಲ್ಲಿ ಕೃಷ್ಣನ ಜನನದ ಮೂಲಕ ಪ್ರಾರಂಭವಾಗುತ್ತದೆ. ದೇವಕಿ ಮತ್ತು ವಸುದೇವರ ಎಂಟನೇ ಸಂತಾನದಿಂದ ಆತನ ಸೋದರ ಮಾವ ಕಂಸನಿಗೆ ಮರಣ ಎಂಬ ಅಶರೀರವಾಣಿಯನ್ನು ನಂಬಿದ ಕಂಸ ತನ್ನ ತಂಗಿ ಮತ್ತು ಆಕೆಯ ಗಂಡನನ್ನು ಸೆರೆಮನೆಯಲ್ಲಿಡುತ್ತಾನೆ. ಸಾಕ್ಷಾತ್ ವಿಷ್ಣುವಿನ ಅವತಾರವಾದ ಶ್ರೀಕೃಷ್ಣನು ಎಂಟನೇ ಮಗುವಾಗಿ ಸೆರೆಮನೆಯಲ್ಲಿ ಜನ್ಮ ತಾಳಿದರೂ ಗೋಕುಲದಲ್ಲಿ ನಂದ ಮತ್ತು ಯಶೋಧೆಯ ಮಗನಾಗಿ ಬೆಳೆಯುತ್ತಾನೆ. ಕಂಸನ ಹತ್ಯೆ, ರುಕ್ಮಿಣಿಯ ಜೊತೆ ವಿವಾಹ, ದ್ರೌಪದಿಯ ಸ್ವಯಂವರದಲ್ಲಿ ಪಾಂಡವರ ಜೊತೆ ಸಮಾಗಮ, ತನ್ನ ತಂಗಿ ಸುಭದ್ರೆಯ ಜೊತೆ ಅರ್ಜುನನ ವಿವಾಹ, ಖಾಂಡವವನ ದಹನಕ್ಕೆ ಸಹಕಾರ, ನೂರು ತಪ್ಪುಗಳನ್ನು ಮನ್ನಿಸಿದ ನಂತರವೂ ತಪ್ಪು ಮಾಡುವುದನ್ನು ಮುಂದುವರೆಸಿದ ಶಿಶುಪಾಲನ ವಧೆ, ದ್ರೌಪದಿಯ ವಸ್ತ್ರಾಪಹರಣ ಸಮಯದಲ್ಲಿ ಅಕ್ಷಯ ವಸ್ತ್ರದ ದಾನ, ಕುರುಕ್ಷೇತ್ರ ಯುದ್ಧವನ್ನು ತಡೆಯಲು ಕೃಷ್ಣ ನಡೆಸಿದ ಸಂಧಾನ ಪ್ರಯತ್ನ, ಕುರುಕ್ಷೇತ್ರ ಯುದ್ಧಕ್ಕೂ ಮುನ್ನ ಅರ್ಜುನನಿಗೆ ನೀಡಿದ ಗೀತೋಪದೇಶ, ಯುದ್ಧ ಗೆದ್ದ ಬಳಿಕ ಕೊನೆಯಲ್ಲಿ ಶ್ರೀಕೃಷ್ಣನ ಅಂತಿಮ ದಿನಗಳು ಮುಂತಾದ ಪ್ರಸಂಗಗಳನ್ನು ಬಹಳ ಸೊಗಸಾಗಿ ವರ್ಣಿಸಲಾಗಿದೆ. 

ಕೃತಿಗೆ ಪುಟಗಳ ಮಿತಿ ಇರುವುದರಿಂದ ಸಂಕ್ಷಿಪ್ತವಾಗಿ ಶ್ರೀಕೃಷ್ಣನ ಮಾಹಿತಿಯನ್ನು ನೀಡಲಾಗಿದೆ. ಇದು ಮಕ್ಕಳಿಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ಪೌರಾಣಿಕ ಪ್ರಬಂಧ, ಭಾಷಣ, ನಾಟಕ ರಚನೆಗೆ ಸಹಕಾರಿಯಾಗಬಲ್ಲದು. ಪುಸ್ತಕದ ಒಳಪುಟಗಳಲ್ಲಿ ಅಲ್ಲಲ್ಲಿ ಸೊಗಸಾದ ರೇಖಾಚಿತ್ರಗಳನ್ನು ನೀಡಲಾಗಿದೆ. ೫೦ ಪುಟಗಳ ಈ ಪುಟ್ಟ ಕೃತಿಯು ‘ಸೂತ್ರದಾರ ಶ್ರೀಕೃಷ್ಣ'ನ ಬಗ್ಗೆ ಬಹಳಷ್ಟು ವಿಷಯಗಳನ್ನು ಚುಟುಕಾಗಿ ತಿಳಿಸುವಲ್ಲಿ ಸಹಕಾರಿಯಾಗಿದೆ.