ಸೂರಪ್ನೋರ್ ಮಗ....

ಸೂರಪ್ನೋರ್ ಮಗ....

ಹಾಗೇ ಸುಮ್ಮನೆ-2

ಕಡೂರು ತಾಲೂಕಿನ ಒಂದು ಹೋಬಳಿ ಯಗಟಿ....ಯಂಗಟಿ ಎಂಬ ಮಹಿಳೆಯಿಂದಾಗಿ ಯಗಟಿ ಎಂಬ ಹೆಸರು ಬಂದಿತು ಎಂದು ಪ್ರತೀತಿ. ಇಲ್ಲಿರುವ ವೀರನಾರಾಯಣ ಸ್ವಾಮಿ ದೇವಾಲಯ ಪ್ರಸಿದ್ಧವಾದುದು. ಈ ಗ್ರಾಮಕ್ಕೆ ಹೊಂದಿಕೊಂಡಂತಿರುವ "ಪುರ" ಎಂಬ ಗ್ರಾಮದಲ್ಲಿರುವ ಮಲ್ಲಿಕಾರ್ಜುನ ದೇಗುಲ ವಿಶೇಷವಾದುದು. ಇಲ್ಲಿನ ಗಂಗೋಧ್ಭವ ಬಹು ಖ್ಯಾತಿ. ಯಗಟಿ ಯಲ್ಲಿನ ವೀರನಾರಾಯಣ ಸ್ವಾಮಿ ದೇಗುಲವನ್ನು ಕರ್ಣಾಟಭಾರತ ಕಥಾಮಂಜರಿ ಬರೆದ ಕುಮಾರವ್ಯಾಸನ ವಂಶಜರು ಸುಮಾರು 15-16 ನೇ ಶತಮಾನದಲ್ಲಿ ಸಂಭವಿಸಿದ ರಾಜಕೀಯ ಕ್ಷೋಬೆಯಲ್ಲಿ ಗದಗನ್ನು ತೊರೆದಾಗ ಯಗಟಿಯಲ್ಲಿ ನೆಲೆಸಿದರು. ತಮ್ಮ ಆರಾಧ್ಯ ದೈವ ವೀರನಾರಾಯಣನ ವಿಗ್ರಹವನ್ನು ಅಲ್ಲಿಂದಲೇ ತಂದು ದೇಗುಲ ನಿರ್ಮಿಸಿ ಪ್ರತಿಷ್ಟಾಪಿಸಿದರು. ಮತ್ತು ಆ ವಂಶಜರು ಶಾನುಭೋಗ ವೃತ್ತಿ, ಕೃಷಿ ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಂಡರು. ಕುಮಾರವ್ಯಾಸ ಮಹಾಕವಿಯ ಸುಸಂಸ್ಕೃತ ನಡವಳಿಕೆ ಈ ವಂಶದ ಆಸ್ತಿ. ಪ್ರತೀ ವರ್ಷ ಕುಮಾರವ್ಯಾಸ ಜಯಂತಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಇಂತಹ ವಂಶದಲ್ಲಿ ಹುಟ್ಟಿದವರು ಸೂರ್ಯನಾರಾಯಣ. ಹಿಂದೆ ಯಗಟಿ ಯ ಶಾನುಭೋಗರಾಗಿದ್ದ ಇವರು ಸುತ್ತಮುತ್ತಲೆಲ್ಲ ಸೂರಪ್ನೋರು ಎಂದೇ ಪ್ರಸಿದ್ಧಿ. ಇವರ ಮಗ ಇಲ್ಲಿನ ಹಿರಿಯರ ಬಾಯಲ್ಲಿ "ಸೂರಪ್ನೋರ ಮಗ" !.....ಹಳ್ಳಿಗರ ಬಾಯಲ್ಲಿ ಸೂರಪ್ಪಾರ್ ಮಗ....
ಅವರು ಬೇರಾರೂ ಅಲ್ಲ..."ಜಾತಿ ರಾಜಕಾರಣ ಅಲ್ಲ-ಪ್ರೀತಿ ರಾಜಕಾರಣ" ಎಂಬ ಹೊಸ ಕಲ್ಪನೆಯನ್ನು ಕೊಟ್ಟು,ಕರ್ನಾಟಕ ರಾಜ್ಯ ಕಂಡ ಅತ್ಯಂತ ಮೇಧಾವಿ ರಾಜಕಾರಣಿ ಎನಿಸಿಕೊಂಡ, ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆದ್ದು ಕಡೂರು ಶಾಸಕರಾದ , ಅಭಿಮಾನಿಗಳ ಕೈಲಿ ಮಾಷ್ಟ್ರು ಎಂದೇ ಕರೆಸಿಕೊಳ್ಳುವ ಅಪರೂಪದ ವ್ಯಕ್ತಿ ವೈ.ಎಸ್.ವಿ. ದತ್ತ...!