ಸೋಲೊಪ್ಪದ ಬಾಲಕ

ಸೋಲೊಪ್ಪದ ಬಾಲಕ

ಪರೀಕ್ಷೆಯ ತರಾತುರಿಯಲ್ಲಿ ಎಲ್ಲವನ್ನು ತಯಾರಿಸುತ್ತಾ, ಶಾಲೆಯಲ್ಲಿ ಮಕ್ಕಳಿಗೆ ಪಾಠವನ್ನು ಹೇಳಿಕೊಡುತ್ತಾ, ಬಿಡುವಿನ ಸಮಯದಲ್ಲಿ ಕೊಠಡಿ ನಿರ್ವಹಣೆ ಅಷ್ಟು ಸುಲಭದ ಕೆಲಸವೇನಲ್ಲ ಎನ್ನುವುದು ಶಿಕ್ಷಕರಿಗಂತೂ ತಿಳಿದಿರುವ ವಿಷಯ. ಹೀಗೆ ಒಂದು ದಿನ ಮಕ್ಕಳನ್ನು ಸುಮ್ಮನಿರಿಸುವ ಸಮಯದಲ್ಲಿ ಒಂದು ದಾರಿ ಹುಡುಕಿ ಎಲ್ಲರೂ ಶಾಲೆಯಲ್ಲಿ ನಾವು ಹೇಳಿಕೊಟ್ಟ ಪದ್ಯಗಳಲ್ಲದೆ ನಿಮಗೆ ಗೊತ್ತಿರುವ ಪದ್ಯಗಳನ್ನು ಒಬ್ಬೊಬ್ಬರಾಗಿ ಬಂದು ಹೇಳಿ ಎಂದು ಕರೆದಾಗ, ಕೆಲವು ಮಕ್ಕಳು ಬಂದು, ಇದು ನನ್ನ ಅಜ್ಜಿ ಹೇಳಿಕೊಟ್ಟದ್ದು, ಇದು ನನ್ನ ಅಮ್ಮ ಹೇಳಿ ಕೊಟ್ಟದ್ದು, ನನ್ನ ಅಣ್ಣ ಹೇಳಿಕೊಟ್ಟದ್ದು ಎಂದು, ಶಾಲೆಯಲ್ಲಿ ಹೇಳಿಕೊಡದ ಹಲವು ಹಾಡುಗಳನ್ನು, ಮತ್ತು ಪದ್ಯಗಳನ್ನು ಹೇಳಿದರು.... ಅದರಲ್ಲೊಬ್ಬ ಓಡಿ ಬಂದು "ನಾನು ಸಹ ಹೇಳುತ್ತೇನೆ ಮಾತಾಜಿ" ಎಂದು ತರಗತಿ ಪುಸ್ತಕದ ಇಂಗ್ಲಿಷ್ ಪದ್ಯಗಳನ್ನು ಹೇಳಲಾರಂಭಿದ.. 

ಅವನು ಸ್ವಲ್ಪ ಇಂಗ್ಲಿಷ್ ಪ್ರಿಯ, ಅವನ ಮಾತೃಭಾಷೆ ಬೇರೆಯಾದ್ದರಿಂದ ಅವನಿಗೆ ಕನ್ನಡ ಉಚ್ಛರಣೆ ಸ್ವಲ್ಪ ಕಷ್ಟ. ಅವನ ಪದ್ಯಗಳನ್ನು ಕೇಳಿದ ಮಕ್ಕಳೆಲ್ಲಾ ಜೋರಾಗಿ ಅಣಕಿಸಿ ನಗಲಾರಂಭಿಸಿದರು... "ಮಾತಾಜಿ ಇವನಿಗೆ ಕನ್ನಡ ಪದ್ಯಗಳು ಗೊತ್ತೇ ಇಲ್ಲ" ಎಂದು. ಅವನ ಮುಖ ಸಪ್ಪಗಾಯಿತು. ಅವಮಾನದ ನೋವಿನಲ್ಲಿ ಕಣ್ಣಂಚಲ್ಲಿ ನೀರು ತುಂಬಿದವು.. ಆಗ ನಾನು ಒಂದು ದೊಡ್ಡ ಧ್ವನಿಯಲ್ಲಿ ಅವರೆಲ್ಲರ ಬಾಯಿ ಮುಚ್ಚಿಸಿ, ಹಾಗೆಲ್ಲ ಇನ್ನೊಬ್ಬರನ್ನು ಅವಮಾನಿಸಬಾರದು, ಅವನಷ್ಟು ಇಂಗ್ಲಿಷ್ ಪದ್ಯಗಳನ್ನು ನೀವು ಹೇಳಿ ನೋಡೋಣ? ಎಂದು ಹೇಳಿ ಸುಮ್ಮನಿರಿಸಿ, ಆ ಬಾಲಕನನ್ನು ಹತ್ತಿರ ಕರೆದು. "ಪುಟ್ಟ ಇಂಗ್ಲಿಷ್ ಪದ್ಯಗಳಂತು ನಿನಗೆ ಮೊದಲೇ ಗೊತ್ತಿದೆ ಈಗ ಯಾವುದಾದರು ಕನ್ನಡ ಪದ್ಯ ಹೇಳು" ಎಂದಾಗ ಅವನು ನನ್ನ ಮುಖವನ್ನು ದಿಟ್ಟಿಸಿ ನೋಡುತ್ತಾ ನಿಂತ! ಆಗ ಸಣ್ಣಧ್ವನಿಯಲ್ಲಿ ನಾನು ಕೇಳಿದೆ "ನಿನಗೆ ಗೊತ್ತಿಲ್ವ?" ಎಂದು.. ಆಗ ಅವನು ತನ್ನ ಸೋಲನ್ನು ಒಪ್ಪದೇ, "ಇಲ್ಲ ಮಾತಾಜಿ ನನಗೂ ಕನ್ನಡ ಪದ್ಯ ಬರತ್ತೆ" ಎಂದು ಹೇಳಿ... ಒಂದು ಉದ್ದ ಪದ್ಯ ಹೇಳಿದ... ಬೇರೆ ಮಕ್ಕಳೆಲ್ಲ ತಮ್ಮ ಕಣ್ಣುಗಳನ್ನು ಉಂಡೆ ಆಕಾರ ಮಾಡಿ ನೋಡ ತೊಡಗಿದರು... ಏಕೆಂದರೆ ಅವರಿಗೆ ಏನೂ ಅರ್ಥವಾಗಲಿಲ್ಲ... ಕಾರಣ ಅವನು ಹೇಳಿದ ಪದ್ಯ ಪದ್ಯವಲ್ಲ... ಅದು ಅವನ ನಿತ್ಯದ ದಿನಚರಿಯಾಗಿತ್ತು.... ತನಗೆ ಗೊತ್ತಿಲ್ಲ ಎಂದು ಹೇಳಿ ಸೋಲನೊಪ್ಪದ ಬಾಲಕ ಅತೀ ಬುದ್ದಿವಂತಿಕೆಯಿಂದ ತನ್ನ ದಿನಚರಿಯನ್ನೇ ರಾಗವಾಗಿ ಹಾಡಿ ಎಲ್ಲರಿಗಿಂತ ತನ್ನ ಪದ್ಯ ವಿಶೇಷವೆಂದು ತೋರಿಸಿದ...!! ಅವನ ಆ ಪದಗಳ ಜೋಡಣೆ, ರಾಗ ಜೋಡಣೆ ಕಂಡು, ನನ್ನ ಒಳಗೇ ನಾನು ನಕ್ಕೆನಾದರೂ ಅವನ ಉತ್ಸಾಹ ಕಂಡು ಖುಷಿ ಆಯಿತು.... ಅವನ ಬೆನ್ನು ತಟ್ಟಿ ಕೆನ್ನೆ ಸವರಿ "ಪುಟ್ಟ ನೀನು ಇವರೆಲ್ಲರಿಗಿಂತ ವಿಶೇಷ ಕನ್ನಡ ಪದ್ಯ ಹೇಳಿರುವೆ.. ವೆರಿ ಗುಡ್" ಎಂದು ಹೇಳಿದಾಗ ಅವನ ಮುಖದಲ್ಲಿ ಕಮಲವೇ ಅರಳಿದಂತಿತ್ತು.... ಮಕ್ಕಳ ಮನಸ್ಸು ಬಿಳಿ ಹಾಳೆಯಂತೆ ಎಂದು ಹೇಳುತ್ತಾರೆ. ಅದರಲ್ಲಿ ನಾವು ಏನು ಬೇಕಾದರೂ ಬರೆಯಬಹುದು. ಹಾಗೆ ಈ ರೀತಿಯ ಅಚಲ ಮನಸ್ಥಿತಿ ಇರುವ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ನಮ್ಮದಾಗಿದೆ ಎಂಬುವುದೇ ಹೆಮ್ಮೆಯ ವಿಚಾರ... 

-ರಮ್ಯಾ ಆರ್ ಭಟ್, ಕುಂದಾಪುರ