ಸೌಂದರ್ಯೋಪಾಸನೆ

ಸೌಂದರ್ಯೋಪಾಸನೆ

ಬರಹ

ಬಸ್ ಸ್ಟಾಂಡಿನಲ್ಲಿ ಗೆಳೆಯನೊಬ್ಬನನ್ನು ಕಾಯುತ್ತ ನಿಂತಿದ್ದೆ . ದೂರದಲ್ಲಿ ಕೆಲವು ಕನ್ಯಾಮಣಿಯರು ಬರುತ್ತಿದ್ದರು . ನಾನು ಟೆನ್ಷನ್ ನಲ್ಲಿದ್ದುದರಿಂದ ಅವರೆಡೆ ಅಷ್ಟು ಗಮನ ಹರಿಸಲಿಲ್ಲ . ಅವರಲ್ಲೊಬ್ಬಳು ನಾನು ಅವಳನ್ನು ಗಮನಿಸಲೇಬೇಕೆಂಬ ಹಠ ತೊಟ್ಟಿದ್ದಳೋ ಏನೋ , ಏರುದನಿಯಲ್ಲಿ ಅವಳ ಮಾತು - ನಗು ಸಾಗಿತ್ತು .ಆದರೂ ನಾನು ಗಮನಿಸದವನಂತೆ ನಿಂತಿದ್ದೆನು. ಆದರೆ ಅವಳೂ ಬಿಡದೆ ಹತ್ತಿರ ಬಂದು ಟೈಮ್ ಎಷ್ಟು ಎಂದು ಕೇಳಿದಳು .ನಾನು 4:20 ಎಂದೆನು. ಅದಕ್ಕವಳು ನಿಮ್ಮ ವಾಚ್ 10 ನಿಮಿಷ ಮುಂದಿದೆ ಸರಿಮಾಡಿಕೊಳ್ಳಿ ಎಂದು ಹೇಳಿ ಗೆಳತಿಯರೊಡನೆ ನನ್ನನ್ನು ಅಣಕಿಸುತ್ತಾ ನಡೆದಳು . ಮತ್ತೆ ಹಿಂದಿರುಗಿ " ಕ್ಷಮಿಸಿ , ನೀವು ಕವನ ಬರೆಯುತ್ತೀರಲ್ಲಾ ??" ಎಂದು ಕೇಳಿದಳು .ನಾನು ಇವಳು ಎಲ್ಲೋ ನನ್ನ ಕವನಗಳನ್ನು ಓದಿರಬೇಕೆಂದುಕೊಂಡು ಪ್ರಶಂಸೆಯನ್ನು ನಿರೀಕ್ಷಿಸುತ್ತಾ ಹೌದು ಎಂದೆನು. ಆಗ ಅವಳು " ನನ್ನ ಬಗ್ಗೆ ಕವನ ಬರೆಯುತ್ತೀರಾ ?" ಎಂದು ವ್ಯಂಗ್ಯವಾಗಿ ಅನುನಾಸಿಕದಲ್ಲಿ ಕುಹಕವಾಡುತ್ತಾ ಹೋದಳು . ಹೀಗೆ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಎರಡು ಬಾರಿ ನನ್ನನ್ನು ತಬ್ಬಿಬ್ಬಾಗಿಸಿ ಹೋದಳು . ನನಗೋ ಕೆಟ್ಟ ಕೋಪ ಬಂತು . ಅವಳ ಸೊಕ್ಕನಡಗಿಸಿ ನನ್ನ ಲೇಖನಿ ಎಷ್ಟು ಹರಿತ ಎಂದು ಅವಳಿಗೆ ಮನದಟ್ಟು ಮಾಡುವ ಸಂಕಲ್ಪ ತೊಟ್ಟೆನು .

ಮರುದಿನ ಬೆಳಿಗ್ಗೆ ಎದ್ದವನೇ ದಿನಪತ್ರಿಕೆಯ ಗ್ರಹಗತಿ ಅಂಕಣದ ಮೇಲೆ ಕಣ್ಣಾಡಿಸಿದೆ . ನನ್ನ ಭವಿಷ್ಯದಲ್ಲಿ ಸುಂದರ ಸಂಜೆ ಎಂದು ಬರೆದಿತ್ತು . ಮೊದಲೇ ನನ್ನದು ಕನ್ಯಾರಾಶಿ ....... ಹೀಗೆ ಸಾವಿರ ಕನಸುಗಳ ಸ್ವಪ್ನಲೋಕದಲ್ಲಿ ತೇಲುತ್ತಾ ಕ್ಯಾಂಟೀನ್ ಕಡೆಗೆ ಹೋಗುತ್ತಿದ್ದೆನು. ಆ ಬಸ್ ಸ್ಟ್ಯಾಂಡ್ ಹುಡುಗಿ ಗೆಳತಿಯರೊಡನೆ ಬರುತ್ತಿದ್ದಳು . ಮೊದಲನೆ ಬಾರಿ ಅವಳನ್ನು ಅಷ್ಟಾಗಿ ಗಮನಿಸಿರಲಿಲ್ಲ . ಈಗ ಒಮ್ಮೆ ಆಪಾದಮಸ್ತಕ ಗಮನಿಸಿದೆನು . ಒಮ್ಮೆಲೇ ಕಣ್ಣಿಗೆ ಕತ್ತಲೆ ಕವಿದಂತಾಯಿತು . ನೆರಳಿನಲ್ಲಿ ಕುಳಿತು ಸ್ವಲ್ಪ ಸುಧಾರಿಸಿಕೊಂಡೆನು .ನಾನು ರಾಹುಕಾಲದಲ್ಲಿ ಎದ್ದೆನೋ ಅಥವಾಆ ಜ್ಯೋತಿಷಿ ಯಾವ ಡಿಫೆಕ್ಟಿವ್ ಕವಡೆ ಉರುಳಿಸಿ ಗುಣಾಕಾರ ಹಾಕಿದನೋ ತಿಳಿಯದು , ನನ್ನ ದಿನಭವಿಷ್ಯ ತಲೆಕೆಳಗಾಗಿತ್ತು . ಆಕೆಯನ್ನು ನೋಡುತ್ತಿದ್ದಂತೆ ನಮ್ಮ ಕುಲಪುರೋಹಿತ ನಾಗೇಶ ಭಟ್ಟರು ಹೇಳುತ್ತಿದ್ದ ಮಾರಿಯಮ್ಮ ಜಟಕಾ ಉಮ್ಮಲ್ತಿ ಭೂತಗಳ ಚಿತ್ರಣ ಸ್ಲೋ ಮೋಶನ್ ನಲ್ಲಿ ಸ್ಮ್ರತಿಪಟಲದಲ್ಲಿ ಹಾದುಹೋಯಿತು . ಆದರೂ..... ಅವಮಾನ .... ಸೇಡು... ಬಿಡಲಾಗುತ್ತದೆಯೇ ?? ಆಕೆಯ ಬಗ್ಗೆ ಬರೆಯಬೇಕೆಂದರೆ ಮಾಹಿತಿ ಬೇಕು . ಹಾಗೋ ಹೀಗೋ ಹುಚ್ಚು ಧೈರ್ಯ ಮಾಡಿಕೊಂಡು ಬಾಲ್ಯದಲ್ಲಿ ಅಪ್ಪನ ಒತ್ತಾಯಕ್ಕೆ ಮಣಿದು ಕಂಠಪಾಠ ಮಾಡಿದ್ದ ರಾಮರಕ್ಷಾ ಸ್ತೋತ್ರ ಪಠಿಸುತ್ತಾ ಆಕೆಯ ಬಳಿ ಹೋದೆನು .

Excuse me ...... ಎಂದೆನು .ಅದಕ್ಕವಳು Yes... What can i do for u ?? ಎಂದು ವ್ಯಂಗ್ಯವಾಗಿ ನಕ್ಕಳು . ಅವಳ ದ್ವನಿಯನ್ನು ಕೇಳಬೇಕಿತ್ತು ........ ನಾನು ಉಪಮೆಯಲ್ಲಿ ಸ್ವಲ್ಪ weak .... ಆದರೂ ಶಕ್ತಿ ಮೀರಿ ಉಪಮೆ ಕೊಡುವುದಾದರೆ 3 ದಿನ ಉಪವಾಸವಿದ್ದ ನಾಯಿಗೆ ಕಲ್ಲು ಹೊಡೆದರೆ ಅದು ಅಳುವ ದ್ವನಿಯನ್ನು ಹೋಲುತ್ತಿತ್ತು . ನಿನ್ನ ಹೆಸರೇನಮ್ಮಾ ........?? ಎಂದು ಕೇಳಿದೆನು . "ಶುಭಾಂಗಿ" ಎಂದು ಉಲಿದಳು. ಇಂತಹ ಸುಂದರ ಶಬ್ದಗಳ ಅಪಪ್ರಯೋಗದಿಂದ ಕನ್ನಡಮ್ಮನ ಮೇಲಾಗುತ್ತಿದ್ದ ಅವ್ಯಾಹತ ಶೋಷಣೆಗೆ ಮರುಗಿದೆನು . ಯಾರಮ್ಮಾ ಈ ಹೆಸರಿಟ್ಟಿದ್ದು ?? ಎಂದು ಕೇಳಿದೆನು .ಅದಕ್ಕವಳು ನನ್ನ ಹಿರಿಯಕ್ಕನ ಹೆಸರು ಶ್ವೇತಾಂಗಿ ಎರಡನೇ ಅಕ್ಕ ಲತಾಂಗಿ ಹೀಗೆ ಕರೆಯಲು ಪ್ರಾಸಬದ್ದ ಹಾಗೂ ಇಂಪಾಗಿರಲೆಂದು ನನ್ನ ಅತ್ತೆ ನನಗೆ ಶುಭಾಂಗಿ ಎಂದು ಹೆಸರಿಟ್ಟರು ಎಂದಳು . ಪ್ರಾಸದ ಅಷ್ಟೊಂದು ಹುಚ್ಚಿದ್ದರೆ "ಕೋಡಂಗಿ " ಎಂದಾದರೂ ಹೆಸರಿಡಬಹುದಾಗಿತ್ತು ಎಂದು ಯೋಚಿಸಿದೆನು .

ನಿನ್ನ ವಯಸ್ಸೆಷ್ಟು ?? ಎಂದು ಕೇಳಬಾರದ ಪ್ರಶ್ನೆಯನ್ನು ಕೇಳಿಬಿಟ್ಟೆನು . ಅವಳು ಸ್ವಲ್ಪ ದುರುಗುಟ್ಟಿ ನೋಡಿ 21 ವರ್ಷ ಕೆಲವು ತಿಂಗಳು ಮತ್ತು ಕೆಲವು ದಿನ ಎಂದಳು . ನಾನು ಇನ್ನೂ ನೇರವಾಗಿ ಎಷ್ಟು ತಿಂಗಳು ಎಷ್ಟು ದಿನ ಎಂದು ಕೇಳಿದೆನು . 37 ತಿಂಗಳು 420 ದಿನ ಎಂದು ಉತ್ತರ ಬಂದಿತು . ಇಷ್ಟು ಹೇಳಿ ಆಕೆ ನೀರು ಕುಡಿಯುವ ನೆಪದಿಂದ ಆಚೆ ಹೋದಳು .ನಾನು ಆಕೆಯ ಸ್ನೇಹಿತೆಯರಿಂದ ಈ ವಿಚಾರಗಳನ್ನು ತಿಳಿದೆನು ....

ಸೆಪ್ಟೆಂಬರ್ 11 ನೇ ತಾರೀಕು "ಕುದುರೆಮುಖ" ದಲ್ಲಿ "ಮೃಗಶಿರಾ" ನಕ್ಷತ್ರದಲ್ಲಿ ಈಕೆಯ ಜನನವಾಯಿತು .ಬ್ರಹ್ಮ ಆ ದಿನ ಕೆಟ್ಟ ಮೂಡ್ ನಲ್ಲಿದ್ದ ಎಂದು ಕಾಣುತ್ತದೆ ,ಇವಳ assembly ಯಲ್ಲಿ ತುಂಬಾ ತಪ್ಪು ಮಾಡಿಬಿಟ್ಟ. ಹೆಸರು ಕೇವಲ ಅಂಕಿತವಾಗಿದ್ದರೂ ಊರು ನಕ್ಷತ್ರಗಳು ಅನ್ವರ್ಥವಾಗಿರುವುದನ್ನು ಕಂಡು ನೆಮ್ಮದಿಯ ನಿಟ್ಟುಸಿರಿಟ್ಟೆನು . ಹಾಗೂ WTC ದುರಂತಕ್ಕೆ ಎರಡು ದಶಕಗಳ ಹಿಂದೆ ಭಾರತದಲ್ಲಾಗಿದ್ದ ಈ ದುರಂತಕ್ಕೆ ಅಷ್ಟು ಪ್ರಚಾರ ಯಾಕೆ ಸಿಗಲಿಲ್ಲವೆಂದು ಯೋಚಿಸಿದೆನು .

ಇವಳ ಜನನವಾದ ತಕ್ಷಣ ಇವಳ ತಾಯಿಯ ಶುಶ್ರೂಷೆಯಲ್ಲಿದ್ದ ನರ್ಸ್ ಕಿಟಾರೆಂದು ಕಿರುಚಿ ಪ್ರಜ್ಞಾಹೀನಳಾಗಿದ್ದಳಂತೆ . ಆಮೇಲೆ ಶಾಕ್ ಟ್ರೀಟ್ ಮೆಂಟ್ ನಿಂದ ಸರಿಪಡಿಸಿದರಂತೆ . ಮೊನ್ನೆ ಇವಳು ಬೆಂಗಳೊರಿಗೆ ಹೋದಾಗ NASA ವಿಜ್ಞಾನಿಯೊಬ್ಬ ಇವಳನ್ನು ಅನ್ಯಗ್ರಹವಾಸಿಯೆಂದು ತಿಳಿದು ಹಿಡಿಯಲು ಹೋಗಿ ಜನರಿಂದ ಧರ್ಮದೇಟು ಹೊಡೆಸಿಕೊಂಡನಂತೆ. "Koi Mil Gaya" ಸಿನೆಮಾ ನೋಡಿ ಬಂದ ಈಕೆಯ ನೆರೆಹೊರೆಯ ಮಕ್ಕಳು ಈಕೆಯನ್ನು ಜಾದೂ ...... ಎಂದು ಕರೆದು ಮಾಯ-ಮಂತ್ರ ಮಾಡಲು ಪೀಡಿಸುತ್ತಿದ್ದರಂತೆ . ಇವಳು ಒಮ್ಮೆ ಮೈಸೂರು ಮೃಗಾಲಯಕ್ಕೆ ಹೋದಾಗ ಅಲ್ಲಿದ್ದ ಗೊರಿಲ್ಲಾವೊಂದು ಇವಳು ಕಣ್ಣಿಗೆ ಕಾಣುವಷ್ಟು ಕಾಲ ಇವಳನ್ನೇ ದುರುಗುಟ್ಟಿ ನೋಡಿದ್ದಲ್ಲದೆ ಬಳಿಕ 2 ದಿನ ಇವಳ ನೆನಪಿನಲ್ಲಿ ನಿದ್ರಾಹಾರಗಳನ್ನು ತ್ಯಜಿಸಿದ್ದು ವಿಚಿತ್ರವಾದರೂ ಸತ್ಯ .

ಆಕೆಯ ಕಣ್ಣುಗಳು ಕಮಲದ ಹೂವಿನಂತೆ ಇತ್ತು . ತುಟಿ ತೊಂಡೆ ಹಣ್ಣಿನಂತೆ ಇತ್ತು ನಿಜ ... ಆದರೆ ಯಾವ ಹಣ್ಣು - ಹೂವು ತಾನೆ 25 ವರ್ಷ ತಾಜಾ ಇರುತ್ತದೆ ನೀವೇ ಹೇಳಿ ..... ಮಾತಿನ ಮಧ್ಯೆ ಅವಳೊಮ್ಮೆ ಮುಗುಳ್ನಕ್ಕಳು ನೋಡಿ ....... ನನಗೆ ಬ್ರಹ್ಮಾಂಡ ದರ್ಶನವಾಯಿತು . 5 ಜನ ದಂತವೈದ್ಯರು ಒಂದು ತಿಂಗಳ ಅಹರ್ನಿಶಿ ಕ್ಯಾಂಪ್ ಹಾಕಿ ಮಾಡುವಷ್ಟು ಕೆಲಸ ಅಲ್ಲಿತ್ತು . Asian Paint ನ ಕಲರ್ ಲ್ಯಾಬ್ ನಲ್ಲಿ ಇಲ್ಲದ ಕೆಲವು ಬಣ್ಣಗಳು ಆಕೆಯ ದಂತಪಂಕ್ತಿಯಲ್ಲಿದ್ದವು . ಒಮ್ಮೆ ಇವಳ ದಂತಚಿಕಿತ್ಸೆಗೆ ಬಂದ ವೈದ್ಯರು ತಲೆ ತಿರುಗಿ ಬಿದ್ದು ಆಮೇಲೆ ಅವರಿಗೆ ಕಣ್ಣು - ಮೂಗುಗಳಿಗೆ ಲೋಕಲ್ ಅನಸ್ತೇಷಿಯಾ ಕೊಟ್ಟು ICU ದಲ್ಲಿ admit ಮಾಡಿದ್ದರಂತೆ . ಇದರ ನಂತರ ಉಳಿದ ದಂತವೈದ್ಯರು No Risk Ceritificate ತರದೇ ಈಕೆಯ ಚಿಕಿತ್ಸೆಗೆ ಒಪ್ಪುವುದಿಲ್ಲವೆಂದು ಶಪಥ ತೊಟ್ಟಿದ್ದಲ್ಲದೆ ಈಕೆ ನಗುವುದರ ವಿರುದ್ಧ ಕೋರ್ಟ್ ನಿಂದ Stay-Order ತಂದಿದ್ದಾರಂತೆ !!! ಮೊನ್ನೆ ಇವಳು ತನ್ನ ಸಂಬಂಧಿಯೊಬ್ಬರನ್ನು ನೋಡಲು ಪೋಲೀಸ್ ಸ್ಟೇಶನ್ ಗೆ ಹೋದಾಗ ಅಲ್ಲಿ ಜೈಲಿನಲ್ಲಿದ್ದ ಭಾರಿ ಭಯೋತ್ಪಾದಕ ಸತ್ಯವನ್ನೆಲ್ಲಾ ಹೇಳಲು ಒಪ್ಪಿದನಂತೆ . ಇದನ್ನು ತಿಳಿದ ಮಾನವ ಸಂಘಟನೆಗಳಿಂದ ಭಾರೀ ಪ್ರತಿರೋಧ ವ್ಯಕ್ತವಾಯಿತು .

ಇಷ್ಟರಲ್ಲಿ ಅವಳು ಪದೇ ಪದೇ ವಾಚ್ ನೋಡುತ್ತಿದ್ದುದನ್ನು ನಾನು ಗಮನಿಸಿದೆ . ಯಾಕೆ ಎಲ್ಲಾದರೂ ಹೋಗುವುದಿದೆಯಾ ?? ಎಂದು ಕೇಳಿದೆನು .ಹೌದು ಕಳೆದ ತಿಂಗಳು ತನ್ನ ನಿಶ್ಚಿತಾರ್ಥವಾಗಿದ್ದು ,ಎಪ್ರಿಲ್ 1 ರಂದು ತನ್ನ ಮದುವೆಯಿದೆ ,ಈ ದಿನ ತನ್ನ ಭಾವೀ ಪತಿಯೊಂದಿಗೆ Date Fix ಆಗಿದೆ ಎಂದಳು . ಆ ಮಹಾನುಭಾವನ ಗ್ರಹಚಾರಕ್ಕೆ ಕನಿಕರಿಸುತ್ತಾ ,ನಿನ್ನ ಭಾವೀ ಪತಿ ಏನು ಮಾಡುತ್ತಿದ್ದಾನೆ ?? ಎಂದು ಕೇಳಿದೆನು . ನಾಚಿಕೆಯಿಂದ ಓಡಿ ಹೋದಳು . ಕೆನ್ನೆಗಳು ಕೃಷ್ಣವರ್ಣದವಾಗಿದ್ದರಿಂದ ಕೆಂಪೇರಿದ್ದು ಕಾಣಿಸಲಿಲ್ಲ . ಅವಳ ಭಾವೀ ಪತಿ "ಪ್ರಾಣಿ ದಯಾ ಸಂಘದ ಅಧ್ಯಕ್ಷ " ಎಂದು ಅವಳ ಗೆಳತಿಯರಿಂದ ತಿಳಿಯಿತು . ಆದರೆ ಅವಳಿಗಾಗಿ ಬರೆದ " ಈ ಹಲಸಿನ ಹಣ್ಣಿನಂಥ ಹುಡುಗಿ ಬಂತು ನೋಡು " ಎಂಬ ಕವನದ ಬಗ್ಗೆ ಅವಳಿಗೆ ಹೇಳಲು ಮರೆತೇ ಹೋಗಿತ್ತು .

*******************************************ವಿಕಟಕವಿ ******************