ಸೌತೇ ಕಾಯಿಯಲ್ಲಿ ಇಳುವರಿಯನ್ನು ಹೆಚ್ಚಿಸುವುದು ಹೇಗೆ?

ಸೌತೇ ಕಾಯಿಯಲ್ಲಿ ಇಳುವರಿಯನ್ನು ಹೆಚ್ಚಿಸುವುದು ಹೇಗೆ?

ಸೌತೇ ಕಾಯಿ ಬೇಸಿಗೆಯ ಪ್ರಮುಖ ತರಕಾರೀ ಬೆಳೆ. ಬಹುತೇಕ ಕಾರ್ಯಕ್ರಮಗಳ ಭೋಜನದಲ್ಲಿ ಸೌತೇಕಾಯಿಗೆ ಅಗ್ರಸ್ಥಾನ. ಸೌತೇ ಕಾಯಿಯ ಇಳುವರಿ ಹೆಚ್ಚಳಕ್ಕೆ ಸೂಕ್ತ ಕ್ರಮ ಕೈಗೊಂಡಲ್ಲಿ ಶೇ.೨೦ ರಷ್ಟು ಹೆಚ್ಚುವರಿ ಇಳುವರಿ ಪಡೆಯಲು ಸಾಧ್ಯ. ಇಳುವರಿ ಹೆಚ್ಚಿದ್ದಲ್ಲಿ ಅಧಿಕ ಲಾಭವನ್ನೂ ಪಡೆಯಲು ಸಾಧ್ಯ.

ಸೌತೆಯನ್ನು ಬಿತ್ತನೆ ಮಾಡುವಾಗ ಜನವರಿ ತಿಂಗಳ ಎರಡನೇ ವಾರದ ನಂತರ ಬಿತ್ತನೆ ಮಾಡಬೇಕು. ಸಸಿಗಳು ಎರಡು ಮೂರು ಎಲೆ ಬರುವ ಸಮಯದೊಳಗೆ ಬುಡಕ್ಕೆ ಮಣ್ಣು ಏರಿಸಬೇಕು. ಯಾವುದೇ ಬಗೆಯ ನೆರಳು ಬೀಳುವ ಪ್ರದೇಶದಲ್ಲಿ ಬೆಳೆ ಬೆಳೆಸಬಾರದು. ಬಿತ್ತನೆ ಮಾಡುವಾಗ ಗರಿಷ್ಟ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಸೇರಿಸಬೇಕು. ಸಸಿಗಳು ಸುಮಾರು ಎಂಟು ಹತ್ತು ಎಲೆ ಬಂದ ನಂತರ ಚಿಗುರನ್ನು ಚಿವುಟಿ ಕವಲು ಚಿಗುರುಗಳು ಬರುವಂತೆ ಮಾಡಬೇಕು. ಮೊದಲ  ಕವಲು ಚಿಗುರುಗಳನ್ನೂ ಎಂಟು ಹತ್ತು ಎಲೆ ಬಂದ ನಂತರ ತುದಿ ಚಿವುಟುವ ಕೆಲಸ ಮಾಡಬೇಕು. ತುದಿ ಚಿವುಟಿ ಅಡ್ಡ ಚಿಗುರುಗಳು ಹೆಚ್ಚು ಬರುವಂತಾದರೆ ಅದರಲ್ಲಿ  ಹೆಚ್ಚಿನ  ಪ್ರಮಾಣದಲ್ಲಿ  ಹೂವು ಬರುತ್ತದೆ. ಸೌತೆ, ಕುಂಬಳ, ಕಲ್ಲಂಗಡಿ ಮುಂತಾದ ಬೆಳೆಗಳಲ್ಲಿ ಹೆಣ್ಣು ಮತ್ತು ಗಂಡು ಹೂವುಗಳಿದ್ದು, ಹೆಣ್ಣು ಹೂವು ಬೇಗ ಹಾಗೂ ಅಧಿಕ ಪ್ರಮಾಣದಲ್ಲಿ ಬಂದಷ್ಟು ಉತ್ತಮ ಇಳುವರಿ ಪಡೆಯಲು ಸಾಧ್ಯ.  

ಸೌತೆ ಸಾಲುಗಳಿಗೆ ಹರಿ ನೀರಾವರಿ ಮಾಡಬೇಕು. ನೀರು ಚಿಮುಕಿಸುವ ವ್ಯವಸ್ಥೆಯಿಂದ ಹೂವಿನ ಪರಾಗಕಣಗಳು ತೊಳೆದು ಹೋಗುತ್ತವೆ. ಹೆಚ್ಚು ಮಂಜು ಬೀಳುವ ಸಮಯದಲ್ಲಿ ಹನಿ ತೆಗೆಯುವ ಕೆಲಸ ಮಾಡಿದರೆ ಒಳ್ಳೆಯದು. ಬೆಳೆಯ ಅವಧಿ ೩ ತಿಂಗಳಾದ ಕಾರಣ ನಾವು ಕೊಡುವ ಗರಿಷ್ಟ ಗೊಬ್ಬರದ ಮೇಲೆ ಬಳ್ಳಿಗೆ ಉತ್ತಮ ಬೆಳವಣಿಗೆ  ಬರುತ್ತದೆ. ಪ್ರಾರಂಭದಲ್ಲಿ  ಮೇಲು ಗೊಬ್ಬರವಾಗಿ ಕೊಟ್ಟಿಗೆ ಗೊಬ್ಬರವನ್ನೂ ನಂತರ ಮಣ್ಣು ಏರಿಸುವಾಗ ಮತ್ತೆ ಗೊಬ್ಬರವನ್ನೂ ನೀಡುವುದಲ್ಲದೆ, ಅಗತ್ಯವಿದ್ದಲ್ಲಿ ರಾಸಾಯನಿಕ ಗೊಬ್ಬರವನ್ನು ವಾರ ವಾರ ವಿಭಜಿತ ಕಂತುಗಳಲ್ಲಿ ನೀಡುತ್ತಾ ಬರಬಹುದು. ಹೂವಾಗುವ ಸಮಯದವರೆಗೆ ಸಾರಜನಕ ಮತ್ತು ರಂಜಕ ಪೊಟ್ಯಾಶ್ ಸತ್ವಗಳ ಗೊಬ್ಬರವನ್ನು ಸಮ ಪ್ರಮಾಣದಲ್ಲಿ ಕೊಡುತ್ತಾ ಬರಬೇಕು. ನಂತರ ಸಾರಜನಕವನ್ನು ಮತ್ತ್ತು ರಂಜಕವನ್ನು ಕಡಿಮೆ ಮಾಡಿ ಪೊಟ್ಯಾಶ್ ಸತ್ವಾಂಶದ ಗೊಬ್ಬರವನ್ನು ಹೆಚ್ಚಿಸುತ್ತಾ ಬರಬೇಕು. ಆಗ ಕಾಯಿಗಳ ಗುಣಮಟ್ಟ  ಹಾಗೂ ರುಚಿಯು ಚೆನ್ನಾಗಿರುತ್ತದೆ.

ಸೌತೇ ಬೆಳೆಯಲ್ಲಿ  ಪ್ರಾರಂಭದ ಕಾಯಿಗಳು ಪುಷ್ಟಿಯಾಗಿರುತ್ತವೆ. ನಂತರದ ಕಾಯಿಗಳು ಗಾತ್ರ ಸಣ್ಣದಾಗಿ ಮುರುಟುವುದುಂಟು. ಇದಕ್ಕೆ ಕಾರಣ ಪೋಷಕಾಂಶದ ಕೊರತೆ. ಗಿಡದಲ್ಲಿ ಹೂ ಬಿಡುತ್ತಿರುವ ಹಂತದಿಂದ ಕಾಯಿ ಬೆಳೆಯುತ್ತಿರುವ ಸಮಯದವರೆಗೂ ಪೋಷಕಾಂಶ ನೀಡುತ್ತಿರಬೇಕು. ಬೆಳೆದ  ಕಾಯಿಗಳನ್ನು ಆಗಾಗ ಕಟಾವು ಮಾಡುತ್ತಾ, ಉಳಿದ ಕಾಯಿಗಳಿಗೆ ಆಹಾರ ಸರಬರಾಜು ಹೆಚ್ಚು ಆಗುವಂತೆ ಅನುವು ಮಾಡಿಕೊಡಬೇಕು. ಕಾಯಿಗಳಿಗೆ ನೇರವಾಗಿ ಬಿಸಿಲು ತಾಗದಂತೆ ಮರೆ ಮಾಡಬೇಕು.

ಈ ರೀತಿಯ ಕೆಲವು ಸರಳ ವಿಧಾನಗಳನ್ನು ಅನುಸರಿಸಿದರೆ ನಿಮ್ಮ ಬೆಳೆಯ ಉತ್ಪಾದನೆ ಮತ್ತು ಗುಣಮಟ್ಟ ಅಧಿಕವಾಗುತ್ತದೆ. ಉತ್ತಮ ಇಳುವರಿ ಬಂದರೆ ಉತ್ತಮ ಆದಾಯವೂ ಬರುತ್ತದೆ. ಕೆಲವೊಮ್ಮೆ ಮಾರುಕಟ್ಟೆಯ ವೈಪರೀತ್ಯಗಳಿಂದಾಗಿ ದರ ಕುಸಿತದ ಸಂದರ್ಭವೂ ಇರುತ್ತದೆ. ಇವುಗಳಿಗೆಲ್ಲಾ ನಾವು ಹೊಂದಿಕೊಳ್ಳಲೇ ಬೇಕು. ಅಕಾಲಿಕ ಮಳೆಯಿಂದಲೂ ಬೆಳೆ ನಾಶದ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ದರ ಅತ್ಯಧಿಕವಾಗಿರುತ್ತದೆ. ಕೆಲವೊಂದು ಸನ್ನಿವೇಶಗಳು ನಮ್ಮ ಕೈಯಲ್ಲಿರುವುದಿಲ್ಲ. ಆದರೆ ನಮ್ಮಿಂದ ಸಾಧ್ಯವಿರುವ ಬೆಳೆ ರಕ್ಷಣೆಯ ಉಪಾಯಗಳನ್ನು ನಾವು ಮಾಡುತ್ತಲೇ ಇದ್ದರೆ, ಉತ್ತಮ ಬೆಳೆ ನಮ್ಮ ಕೈಹಿಡಿಯುವುದರಲ್ಲಿ ಸಂದೇಹವಿಲ್ಲ.

ಚಿತ್ರಗಳು: ರಾಧಾಕೃಷ್ಣ ಹೊಳ್ಳ