ಸೌಹಾರ್ದ ಸ್ವಾತಿ ಮುತ್ತು

ಸೌಹಾರ್ದ ಸ್ವಾತಿ ಮುತ್ತು

ಕವನ

ಕೇಸರಿ ಹಸಿರು ನೀಲಿ ಬೇಲಿ ಜೋಡಿಸಿ |
ಚಡಿ ್ಡಟೋಪಿ ಗಡ್ಡ ಸಿದ್ಧಾಂತ ಸಂಸ್ಕರಿಸಿ |
ಕುಟಿಲ ಬಂಡವಾಳಶಾಹಿ ನೀತಿ ಪರಿಷ್ಕರಿಸಿ |
ಧರ್ಮಾಂಧ ಉಗ್ರವಾದಿ ಮುಖವಾಡ ಭೇದಿಸಿ |
ಬಾ ಕುಣಿಯೋಣ ಸವಿ ಗೆಳೆತನ ಪಾನಕ ಸೇವಿಸಿ ||

ಕೇಸರಿ ಹಸಿರು ನೀಲಿ ಬೇಲಿ ಜೋಡಿಸಿ |
ಬಾ ಕುಣಿಯೋಣ ಸವಿಗೆಳೆತನ ಪಾನಕ ಸೇವಿಸಿ ||

ಕಣ್ಣೆದುರಿನ ಭಾವೈಕ್ಯದ ದೇವನ ನೋಡದೆ |
ಅಲ್ಲೇ ನಿರ್ಮಿಸಬೇಕೆ ಮನೆ? ಕಾಣದದೇವನಿಗೆ |
ಕೆಡವಿದರೆಂದೋ ಎಂದು ಬೇಡ ಕೆಡುವುವುದು |
ಮಂದಿರ ಮಸೀದಿಗಳು ಅಕ್ಕಪಕ್ಕವೇ ಇರಲಿ |
ಮಿತ್ರತ್ವದ ಬೇರುಗಳು ಎಂದೂ ಕೊರಡಾಗದಿರಲಿ ||

ಕೇಸರಿ ಹಸಿರು ನೀಲಿ ಬೇಲಿ ಜೋಡಿಸಿ |
ಬಾ ಕುಣಿಯೋಣ ಸವಿಗೆಳೆತನ ಪಾನಕ ಸೇವಿಸಿ ||

ಹಿಂದೂ ಮುಸ್ಲಿಮ್ ಕ್ರೈಸ್ತ ಜೈನ ದಾರಿ ಅನೇಕ |
ನಾಮ ಹಲವು ದೇವನೊಬ್ಬನೇ ಗುರಿ ಒಂದೇ |
ಅರಿತು ತಿರುಳು ಬೀಗ ಜಡಿದಾಗ ದ್ವಂದ್ವ ನಿಲುವಿಗೆ |
ಪ್ರೀತಿ ಸ್ನೇಹ ವಿಶ್ವಾಸದಸ್ತ್ರ ಲಭಿಸದಿರುವುದೇ?
ಸೌಹಾರ್ದ ಸ್ವಾತಿ ಮುತ್ತು ಮಡಿಲಿಗೆ ಬೀಳದಿರುವುದೇ?

ಕೇಸರಿ ಹಸಿರು ನೀಲಿ ಬೇಲಿ ಜೋಡಿಸಿ |
ಬಾ ಕುಣಿಯೋಣ ಸವಿಗೆಳೆತನ ಪಾನಕ ಸೇವಿಸಿ ||

Comments

Submitted by sktotnalli Thu, 06/05/2014 - 13:17

ಸಂಪದ ಸ್ನೆಹಿತರಿಗೆ ವಂದನೆಗಳು,ನನ್ನ ಮೊದಲ ಆನ್ ಲೈನ್ ಕವಿತೆಗೆ ಪ್ರತಿಕ್ರಿಯೆ ನೀಡಲು ಕೋರಿಕೆ.