ಸ್ಟೇಟಸ್ ಕತೆಗಳು (ಭಾಗ ೧೦೪೪)- ಸರಖಾರ

ಅಲ್ಲಾ ನನಗೆ ಅರ್ಥವಾಗ್ತಾ ಇಲ್ಲ... ಈ ಸರ್ಕಾರದವರು ಮೊನ್ನೆ ತಾನೆ ಜೋರು ಮಾತಿನಲ್ಲಿ ಹೇಳಿ ಹೋದರು... ಸ್ವಲ್ಪ ದಿನ ಕಷ್ಟ ಅನುಭವಿಸಿ ಆಮೇಲೆ ಎಲ್ಲವೂ ಅದ್ಭುತವಾಗಿರುತ್ತೆ. ಆಮೇಲೆ ಯಾವ ಕಷ್ಟವೂ ಇರೋದಿಲ್ಲ. ಬದುಕು ಸುಂದರವಾಗಿರುತ್ತೆ. ಹೀಗೆ ಹೇಳಿ ವರ್ಷ ಐದಾಯಿತು. ಇಂದಿನವರೆಗೆ ನಮಗೆ ಆದ ನಷ್ಟ ತುಂಬುವವರು ಯಾರು? ಅಂಗಡಿಗಳನ್ನ ಮುಚ್ಚಿದ್ದೇವೆ. ರಸ್ತೆಯಲ್ಲಿ ಮೊನ್ನೆ ತಾನೆ ನಾಲ್ಕು ಸಾವಾಯಿತು. ಜನರ ಓಡಾಟಕ್ಕೆ ನಿತ್ಯ ತೊಂದರೆ... ಬದುಕಿನ ಅವಕಾಶದ ಬಾಗಿಲುಗಳೆಲ್ಲ ಮುಚ್ಚಿ ಹೋಗಿ ಜೀವನವೇ ಕಷ್ಟ ಅನ್ನುವಲ್ಲಿಗೆ ಬಂದು ನಿಂತಾಗಿದೆ. ಇನ್ನೂ ಕೂಡಾ ಸರಕಾರದ ಸುದ್ದಿ ಇಲ್ಲ. ಇನ್ಯಾವಗಲೋ ಒಳ್ಳೆಯದಾದರೆ ಅದರಿಂದ ನಮಗೇನು ಪ್ರಯೋಜನ. ಕಳೆದುಕೊಂಡದ್ದು ವಾಪಾಸು ದೊರಕುವುದೇ... ಈ ಪ್ರಶ್ನೆಗೆ ಉತ್ತರಿಸುವವರಿಲ್ಲ... ಸರಕಾರ ನಮಗೆ ನೋವಾದಾಗ ಮೌನವಾಗುತ್ತೆ. ನಮ್ಮ ನೋವಿಗೆ ಮಿಡಿಯದ ಸರಕಾರ ಯಾಕೆ? ಅವನ ಪ್ರಶ್ನೆಗಳು ಖಾರವಾಗಿದ್ದವು. ಆದರೆ ತಲುಪುವವರ ಕಿವಿಗಳು ಮುಚ್ಚಿದ್ದವು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ