ಸ್ಟೇಟಸ್ ಕತೆಗಳು (ಭಾಗ ೧೦೭೧)- ಕಾಲ ನಿರ್ಣಯ

ಸ್ಟೇಟಸ್ ಕತೆಗಳು (ಭಾಗ ೧೦೭೧)- ಕಾಲ ನಿರ್ಣಯ

ನಿರ್ಧಾರ ಅವನದು. ನಾವು ಬರಿಯ ಪಾಲಕರಷ್ಟೇ. ಅವನ ದಿನಚರಿಯ ಪಟ್ಟಿಯಲ್ಲಿ ಆ ನಿರಾಕಾರ ಹೀಗಿರಬೇಕು ಅನ್ನೋದನ್ನ ನಿರ್ಧಾರ ಮಾಡಿರುತ್ತಾನೆ. ನಾವದನ್ನ ಅನುಸರಿಸ್ತಾ ಹೋಗ್ತಾ ಇರ್ತವೇ. ಕೆಲವೊಂದು ಸಲ ನಾವು ಅಂದುಕೊಂಡದ್ದೇ ಒಂದು, ಆಗುವುದೇ ಇನ್ನೊಂದು. ಅವತ್ತು ದೇವರ ಸನ್ನಿಧಾನದಲ್ಲಿ ಕುಳಿತು ಊಟ ಸೇವಿಸಬೇಕು ಅಂತ ತುಂಬಾ ಸಮಯದ ಆಸೆಯನ್ನು ಒತ್ತಿಟ್ಟುಕೊಂಡು ಹಾಗೆ ಹೊರಟಿದ್ವಿ. ದೇವಸ್ಥಾನದ ಬಳಿ ತಲುಪಿದ್ದಾಗ ಅಲ್ಲಿಯ ಜನಜಂಗುಳಿ ಕಂಡು ಇವತ್ತು ಮಧ್ಯಾಹ್ನ ಊಟವಾಗುವ ಯಾವ ಲಕ್ಷಣವೂ ಕಾಣದೇ ಇರೋ ಕಾರಣದಿಂದ ದೇವಾಲಯವನ್ನರಸಿ ಹೊರಟಿದ್ವಿ. ಹಾಗೆಯೇ ದೇವಾಲಯಕ್ಕೆ ಹೋಗುತ್ತಿರುವ ದಾರಿಯಲ್ಲಿ ಪರಿಚಯದವರೊಬ್ಬರ ಮನೆಯ ಪೂಜೆ ಮುಗಿದು ಊಟದ ಹೊತ್ತಾಗಿತ್ತು. ಹಾಗೆ ದಾರಿಯಲ್ಲಿ ನಿಂತಿದ್ದವರು ಕರೆದು ತುಂಬ ಪ್ರೀತಿಯಿಂದ ಉಪಚರಿಸಿ ಅನ್ನದಾನವನ್ನು ಮಾಡಿದ್ರು, ದೇವರ ದರ್ಶನವೂ ಹತ್ತಿರದಿಂದ ಆಗಿತ್ತು. ಹೊಟ್ಟೆ ತುಂಬಾ ಉಂಡ ನಮಗೆ ಪ್ರೀತಿಯ ಒಂದಷ್ಟು ಮಾತುಗಳು ಸಿಕ್ಕಿಬಿಡ್ತು. ದೇವರ ಆ ದಿನದ ಮಧ್ಯಾಹ್ನದ ಊಟ ಆ ಮನೆಯಲ್ಲಿ ನಿರ್ಧಾರವಾಗಿರುವುದು ವಿಧಿಲಿಖಿತ. ಒಂದಷ್ಟು ಜನರ ಭೇಟಿಯು ಕೂಡ ಕಾಲ ನಿರ್ಣಯ. ಹಾಗಾಗಿ ನಾವು ಅವನು ಬರೆದ ನಿಯಮಗಳನ್ನ ಹಾಗೆ ಪಾಲಿಸ್ತಾ ಹೋಗಬೇಕು. ಕೆಲವೊಂದನ್ನು ಕೂಡದೇ ಇರುವುದ್ದಕ್ಕೆ, ಆತ ಇನ್ನೊಂದು ಹೊಸತನ್ನು ಕಾದಿರಿಸಿದ್ದಾನೆ ಎನ್ನುವ ನಂಬಿಕೆಯಲ್ಲಿ ಮುಂದುವರೆಯಬೇಕು. ಯಾಕೆಂದರೆ ನಾವು ಅವನ ಮಕ್ಕಳು, ಮಕ್ಕಳಿಗೆ ಯಾವತ್ತಾದರೂ ಕೆಟ್ಟದು ಬಯಸ್ತಾರಾ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ