ಸ್ಟೇಟಸ್ ಕತೆಗಳು (ಭಾಗ ೧೧೬) - ಕರ್ತವ್ಯ

ಕಾಡನ್ನು ಭಾಗ ಮಾಡಿಕೊಂಡು ಸಾಗಿದ ರಸ್ತೆಯ ಮೇಲೆ ಬಸ್ಸು ಓಡುತ್ತಿತ್ತು. ಎತ್ತರದಿಂದ ನೋಡಿದರೆ ಹಸಿರು ಬಣ್ಣದ ನಡುವೆ ಬಿಳಿಬಣ್ಣವೊಂದು ಓಡಾಡಿದಂತೆ ಭಾಸವಾಗುತ್ತಿತ್ತು. ನಾನೀಗ ಹೇಳು ಘಟನೆ ಆ ಬಸ್ಸಿನ ಚಾಲಕನದು. ಅತ್ಯುತ್ಸಾಹಿ ಜೀವನ ಪಯಣಿಗ ಆತ. ಇಂದೇಕೋ ಕಣ್ಣುಗಳು ಹನಿಗಳನ್ನು ಹೊತ್ತು ಕಾದಿವೆ. ಅವನೊಂದಿಗೆ ಕೂತು ಮಾತನಾಡಿದರೆ ತುಟಿ ನಗುತ್ತದೆ ಹೊರತು ಅವನ ಕಣ್ಣಲ್ಲ. ವೈರಾಗ್ಯದ ಕಣ್ಣೀರಲ್ಲ ಅದು. ಕೊನೆಗೂ ಮಾತಾಡಿದ "ಧಣಿಗಳಿಗೆ ಮಾತು ಕೊಟ್ಟಿದ್ದೇನೆ ಇವತ್ತು ನಾನೇ ಚಾಲಕನಾಗ್ತೇನೆ ಅಂತ. ಮನೆಯಲ್ಲಿ ತಂಗಿ ಮದುವೆ ತರಾತುರಿಯಲ್ಲಿ ನಿರ್ಧಾರವಾಯಿತು. ಅದು ಇದೇ ದಿನ. ಬೇರೊಬ್ಬ ಚಾಲಕನನ್ನು ಕಳಿಸೋಕೆ ಸಾಧ್ಯವೇ ಇಲ್ಲ. ಎಲ್ಲರೂ ಬೇರೆ ಕೆಲಸದಲ್ಲಿದ್ದಾರೆ. ಮದುವೆ ಮಂಟಪದಲ್ಲಿ ತಾಳಿಕಟ್ಟುವ ಶಾಸ್ತ್ರ ಮುಗಿದ ಕೂಡಲೆ ಅವನ ಕೈಯಲ್ಲಿ ಅವಳ ಕೈಯನ್ನು ಇಟ್ಟು ಹೊರಟೆ.
ಅದಕ್ಕೆ ಎರಡು ಕಾರಣ ಒಂದು ಈ ಗಾಡಿಯನ್ನು ನಾನೇ ಚಲಾಯಿಸಬೇಕು, ಇನ್ನೊಂದು ಒಡಹುಟ್ಟಿದವಳನ್ನ ಪರರ ಮನೆಗೆ ಕಳುಹಿಸಿಕೊಡಬೇಕು ಅಲ್ಲೇ ನಿಂತಿದ್ದರೆ ನನ್ನ ಅಳುವಿಗೆ ಕೊನೆಯೇ ಇರುತ್ತಿರಲಿಲ್ಲ. 'ಹಾಗಾಗಿ ಕರ್ತವ್ಯ ಮುಖ್ಯ ಅನಿಸ್ತು'. ಅನ್ನಕೊಟ್ಟ ದನಿಗಳಿಗೆ ನೋವಾಗಬಾರದಲ್ಲವೇ? ಅವನ ಕಣ್ಣು ಮತ್ತೆ ರಸ್ತೆ ಜೊತೆಗೂಡಿತ್ತು. ಬಸ್ಸು ಗುರಿಯ ಕಡೆಗೆ ಸಾಗುತ್ತಿದೆ ನಿರ್ಭಯವಾಗಿ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ