ಸ್ಟೇಟಸ್ ಕತೆಗಳು (ಭಾಗ ೧೩೨೫) - ಬರೆದಿಟ್ಟ

ಅಲ್ಲೊಂದು ದೊಡ್ಡ ಪುಸ್ತಕ. ಅದರಲ್ಲಿ ಆ ಊರಿನಲ್ಲಿರುವ ದೊಡ್ಡ ದೊಡ್ಡ ಓದಿದವರ ತಿಳಿದವರ ಕಥೆಗಳನ್ನು ಬರೆದಿಡಲಾಗಿದೆ. ಅಲ್ಲಿರುವ ಕಥೆಗಳೆಲ್ಲವೂ ಕೂಡ ಸಾಧನೆಯ ಕಥೆಗಳು. ಅದು ಆ ಊರಿನಲ್ಲಿ ಒಂದಷ್ಟು ಹಣ ಸಂಪಾದನೆ ಮಾಡಿ ಕಿಸೆ ತುಂಬಿಸಿಕೊಂಡವರ ಕಥೆಗಳಷ್ಟೇ. ಆ ಕಥೆ ಇನ್ನು ಮುಂದೆ ವರ್ಷಗಳನ್ನ ದಾಟಿ ಸಾವಿರ ವರ್ಷಗಳನ್ನು ಮೀರಿ ಮುಂದಿನ ಕಾಲಕ್ಕಾಗುವಾಗ ಸತ್ಯವಾಗಿ ಬಿಡುತ್ತದೆ. ಅದೇ ಅಂತಿಮ. ಆ ಕಾರಣಕ್ಕೆ ದುಡ್ಡಿದ್ದವರು ಬರೆಯೋಕೆ ತಿಳಿದವರು, ಬರೆದಿಟ್ಟಿದ್ದಾರೆ. ಆದರೆ ಅದೇ ಸಮಯದಲ್ಲಿ ದುಡ್ಡಿಲ್ಲದೆ ಅಕ್ಷರ ಜ್ಞಾನವಿಲ್ಲದೆ ಕೆಲಸ ಮಾಡಿದವರು ಹಲವರಿದ್ದಾರೆ. ಅವರ್ಯಾರಿಗೂ ಸಾಧನೆಯ ಹಂಗಿರಲಿಲ್ಲ. ಒಂದಷ್ಟು ಜನರಿಗೆ ಸಹಾಯ ಮಾಡುವ ಮನಸ್ಸಿತ್ತು ಮಾತ್ರ. ಅವರು ಮಾಡಿದ ಕೆಲಸಗಳಲ್ಲಿ ಅವರು ಹೆಸರನ್ನ ಬಯಸಲೇ ಇಲ್ಲ. ಹಾಗಾಗಿ ಅವರ ಬಗ್ಗೆ ಇನ್ನೊಂದಷ್ಟು ವರ್ಷಗಳು ದಾಟಿದ ನಂತರ ಯಾರಿಗೂ ನೆನಪಿರುವುದಿಲ್ಲ. ಒಟ್ಟಿನಲ್ಲಿ ಅಕ್ಷರ ಜ್ಞಾನ ದುಡ್ಡು ಇದ್ದವನ ವಿಷಯಗಳು ನನ್ನ ಕಾಲಕ್ಕೆ ತಲುಪಿದೆ. ಹಾಗೆ ಮುಚ್ಚಿ ಹೋದ ಮರೆತು ಹೋದ ಘಟನೆಗಳು ಎಷ್ಟಿದೆಯೋ ಗೊತ್ತಿಲ್ಲ. ಅನ್ನುತ್ತಾ ಮಂಜು ಹಳೆಯ ಗತಕಾಲಗಳನ್ನ ನೆನಪಿಸಿಕೊಳ್ಳುತ್ತಾ ಕೂತಿದ್ದ. ಆತ ಹೊಸದಾಗಿ ಬರೆಯಬೇಕೆಂದುಕೊಳ್ಳುತ್ತಿದ್ದ ಕಾದಂಬರಿಯ ಮೊದಲ ಅಧ್ಯಾಯವನ್ನ ಹೊಸತೊಂದು ಯೋಚನಾ ಶೈಲಿಯಲ್ಲಿ ಆರಂಭಿಸಿ ಜನರ ಮುಂದಿಟ್ಟ. ಈ ಬರವಣಿಗೆ ಜನರ ಮನಸ್ಸಿಗೆ ತಲುಪಿದಾಗ ಹೊಸ ಹೊಸ ವಿಚಾರಗಳು ಬೆಳಕಿಗೆ ಬರಲೂಬಹುದು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ