ಸ್ಟೇಟಸ್ ಕತೆಗಳು (ಭಾಗ ೧೩೨) - ಶಿಕ್ಷಣ-ಸಂಸ್ಕಾರ
ವ್ಯರ್ಥವಾಗಿ ಎಸೆದಿದ್ದನ್ನು ಆಯೋನು ಅವನು. ಆ ದಿನ ಭಯಗೊಂಡು ರಸ್ತೆ ಬದಿ ರಾಶಿಯಾಗಿದ್ದು ಮಣ್ಣನ್ನು ಹರಡುತ್ತಿದ್ದಾನೆ, ಕೈ ಹಾಕಿ ಒಳಗೇನಿದೆ ಅಂತ ನೋಡುತ್ತಿದ್ದಾನೆ. ನೋಡುವಾಗ ಬುದ್ಧಿ ಭ್ರಮಣೆಯಾಗಿದೆ ಎಂದೆನಿಸುತ್ತಿದೆ. ಆದರೆ ಮಣ್ಣು ಕೆದರಿದಂತೆ ಒಳಗಿಂದ ಪುಟ್ಟ ಗಿಡವೊಂದು ತಲೆಯೆತ್ತಿ ಉಸಿರಾಡಿತು. ಅದು ಇನ್ನೂ ಹಸಿರಾಗಿಯೇ ಇತ್ತು. ಆತ ಪಕ್ಕದ ಮಣ್ಣಿನ ರಾಶಿಯ ಕಡೆಗೆ ಓಡಿದ. ಅಲ್ಲಿ ಅಂತಹ ಹಲವು ರಾಶಿಗಳಿದ್ದವು. ಅಲ್ಲಿಯೂ ಕೆದರುತ್ತಿದ್ದ. ಬೆವರ ಹನಿಗಳು ಎಲೆಯ ಮೇಲೆ ಇಳಿಯುತ್ತಲೇ ಇದ್ದವು. ಅವನಿಗೆ ಭಯವಿದೆ?. ಅವನ ಮನೆಯವರು ಉಸಿರುಗಟ್ಟಿಸಿ ಕೊಲ್ಲಲು ಯತ್ನಿಸಿದಾಗ ಆದ ಸಂಕಟದ ಅರಿವಿದೆ. ಆ ದಿನದಿಂದ ಬೀದಿಯೇ ಬದುಕುವ ಮನೆ ಆಯ್ತು. ಈಗ ಆ ಗಿಡಗಳಿಗೂ ಅದೇ ನೋವಾಗಬಾರದೆಂದು ಗಾಳಿ ನೀಡೋ ಗಿಡಕ್ಕೆ ಗಾಳಿ ನೀಡುತ್ತಿದ್ದಾನೆ. ಆಯುವವನ ಮನದೊಳಗಿನ ಯಾತನೆ ಸರಕಾರಿ ಕಚೇರಿಯೊಳಗಿನ ಕಾಯುವವನ ಹೃದಯದ ಬಾಗಿಲನ್ನು ಯಾಕೆ ತಟ್ಟಲಿಲ್ಲ. "ಶಿಕ್ಷಣ ಸಂಸ್ಕಾರ ಕಲಿಸಲಿಲ್ಲ" ಅನ್ನೋದು ಮತ್ತೊಮ್ಮೆ ಸಾಬೀತಾಗುತ್ತಿದೆ. ಹೀಗೇ ಮುಂದುವರಿದರೆ....
-ಧೀರಜ್ ಬೆಳ್ಳಾರೆ
ಚಿತ್ರ: ಇಂಟರ್ನೆಟ್ ತಾಣ
- Log in to post comments