ಸ್ಟೇಟಸ್ ಕತೆಗಳು (ಭಾಗ ೧೩೪೪) - ಸಾವಿನ ಸಂಭ್ರಮ

ಸಾವಿನ ವ್ಯಾಪಾರಿ ಆ ದಾರಿಯಲ್ಲಿ ಹಾದು ಹೋಗುವವನಲ್ಲ. ಅದಲ್ಲದೆ ಆ ಪ್ರದೇಶದಲ್ಲಿ ಹೋಗುವ ಆಸೆಯೂ ಇರಲಿಲ್ಲ. ಎಲ್ಲರೂ ಸಂಭ್ರಮದಲ್ಲಿದ್ದರು. ಹಲವು ವರ್ಷಗಳ ಕನಸು ನನಸಾದ ಉತ್ಸಾಹ ಅವರಲ್ಲಿತ್ತು. ಆದರೆ ಅವರದೇ ತಪ್ಪಿಗಾಗಿ ಸಾವಿನ ವ್ಯಾಪಾರಿಯನ್ನ ಬಳಿಗೆ ಕರೆಸಿಕೊಂಡು ಬಿಟ್ರು. ಸಾವಿನ ವ್ಯಾಪಾರಿ ನಿಂತು ಮತ್ತೆ ಮತ್ತೆ ಹೇಳಿದ ನಿಮ್ಮ ಸಂಭ್ರಮ ಒಪ್ಪಿಕೊಳ್ಳಬೇಕಾಗಿದೆ, ಆ ಕಾರಣಕ್ಕೆ ಸಾವನ್ನ ಹತ್ತಿರ ಕರೆಸಿಕೊಂಡು ಅತಿರೇಕದಲ್ಲಿ ವರ್ತಿಸುವುದು ಸರಿಯಲ್ಲ. ಗೆದ್ದವರು ಅವರ ಬಹುಮಾನ ಪಡೆದು ಮನೆಗೆ ಮರಳುತ್ತಾರೆ. ದೊಡ್ಡ ಪದಕಗಳು ಗೋಡೆಯಲ್ಲೊಂದು ಕಡೆ ನೇತು ಬಿದ್ದಿರುತ್ತವೆ, ಗೆದ್ದ ನೆನಪುಗಳು ಮನಸಲ್ಲಿ ಉಳಿದುಬಿಡುತ್ತವೆ ಆದರೆ ನಿಮ್ಮ ಮನೆಗೆ ನಾನು ಪ್ರವೇಶಿಸಿದ ಸುದ್ದಿ ಜೀವನ ಪರ್ಯಂತ ಹಾಗೆ ಉಳಿದುಬಿಡುತ್ತದೆ. ತಪ್ಪು ನಿಮ್ಮದು ದಯವಿಟ್ಟು ನನ್ನನ್ನು ದೂರಬೇಡಿ. ನೀವು ಮಾಡಿದ ಅನಾಚಾರಕ್ಕೆ ಬೆಲೆ ತೆತ್ತಿದ್ದೀರಿ, ಇನ್ನು ಕೆಲವರು ಬದುಕಿ ಓಡಾಡುತ್ತಿದ್ದೀರಲ್ಲ ನೀವು ಮಾಡಿದ ತಪ್ಪಿಗೂ ಅಲ್ಲಿ ಪ್ರಾಣ ಕಳೆದುಕೊಂಡವರಿದ್ದಾರೆ. ಬದುಕಿನ ಪರಿಚಯವಿಲ್ಲದ ಮಗುವು ಸೇರಿದಂತೆ ಹಲವರನ್ನು ಬಳಿಗೆ ಕರೆದುಕೊಳ್ಳುವ ದುಸ್ತಿತಿ ನನ್ನದಾಗಿದೆ, ನನಗೆ ನಿಮ್ಮನ್ನ ನನ್ನ ಬಳಿಗೆ ಕರೆದುಕೊಳ್ಳುವುದಕ್ಕೆ ಅಷ್ಟೇನು ಆಸಕ್ತಿ ಇಲ್ಲ ನೀವಾಗಿಯೇ ನನ್ನ ಹುಡುಕಿಕೊಂಡು ಬರುತ್ತಿರುವುದೇನಕ್ಕೆ, ಸಾವಿನ ವ್ಯಾಪಾರಿಯ ಪ್ರಶ್ನೆಗೆ ಉತ್ತರವಿಲ್ಲದೆ ಮೌನವಾದವು ಸುತ್ತ ನಿಂತ ಮನಸ್ಸುಗಳು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ