ಸ್ಟೇಟಸ್ ಕತೆಗಳು (ಭಾಗ ೧೩೪೮) - ಜನಾ ಸಿಗ್ತಾ ಇಲ್ಲ

ಸ್ಟೇಟಸ್ ಕತೆಗಳು (ಭಾಗ ೧೩೪೮) - ಜನಾ ಸಿಗ್ತಾ ಇಲ್ಲ

ಸರ್, ನಮ್ಮ ಹೋಟೆಲ್ ಗೆ ಕೆಲಸಕ್ಕೆ ಯಾರೂ ಬರ್ತಿಲ್ಲ, ಬಂದವರು ವಾರ ನಿಂತ್ರೆ ಹೆಚ್ಚು, ಹೀಗಾದರೆ ಹೇಗೆ ಸರ್ ಹೋಟೆಲ್‌ ನಡೆಸೋದು, ತುಂಬಾ ಕಷ್ಟ ಆಗ್ತಾ ಇದೆ.ಹೋಟೆಲ್ ಶುರುವಾದಂದಿನಿಂದ ಹೊರಗಡೆ ಕೆಲಸಕ್ಕೆ‌ ಜನ‌ ಬೇಕಾಗಿದ್ದಾರೆ ಅಂತ ಬೋರ್ಡ್ ಹಾಕಿದ್ದನ್ನ  ಇನ್ನೂವರೆಗೂ ತೆಗೆಯೋದ್ದಕ್ಕೆ ಅವಕಾಶವೇ ಸಿಕ್ಕಿಲ್ಲ, ನೀವೇ ಯಾರಾದ್ರೂ ತಿಳಿದವರು ಇದ್ರೆ ಹೇಳಿ ಸರ್.‌ ಸಂಬಳ ಚೆನ್ನಾಗಿ ಕೊಡ್ತೇನೆ. 

ಹೊಟೇಲ್ ಯಜಮಾನರ ಮಾತು ಕೇಳಿ ನೋಡುವ ಸರ್ ಎಂದವರೇ ಆಚಾರ್ಯರು ಟೀ ಕುಡಿಯುವುದ್ದಕ್ಕೆ ಟೇಬಲ್ ಒಂದರಲ್ಲಿ ಆಸೀನರಾದರು...ಕಾರಣ ಯೋಚಿಸುತ್ತಾ ಟೀ ಖಾಲಿಯಾಗ್ತಾ ಇತ್ತು. ಆಗಲೇ ಯಜಮಾನರ ಮಾತು ಕೇಳಿತು, ಸರಿಯಾಗಿ ಕೆಲಸ ಮಾಡೋ‌ ನಾಯೀ... ಎಷ್ಟು ಸಲ‌ ಹೇಳಿದರೂ ತಲೆಗೆ ಹೋಗೋದಿಲ್ಲ ಹಂದಿಗಳಿಗೆ, ಕೆಲಸ ಕೇಳ್ಕೊಂಡು ಬರ್ತಾವೆ ಹಣೆಬರಹ ಕೆಟ್ಟವರು, ನಿಮ್ಗೆಲ್ಲ ಕೆಲಸ‌ ಕೊಟ್ಟದ್ದೇ ತಪ್ಪಾಯ್ತು, ಏನೂ ಬರೀ ತಿನ್ನೋದೇನಾ ಅಥವಾ ಸ್ವಲ್ಪಾನಾದ್ರೂ ಕೆಲಸ ಮಾಡ್ತೀಯಾ.. ಇನ್ನೂ ಸುಸಂಸ್ಕೃತ ಮಾತುಗಳು ಕೇಳುತ್ತಾನೇ ಇದ್ದವು , ಆಚಾರ್ಯರು ಹೋಟೆಲ್ ಇಂದ ದೂರ ಬಂದರೂ ಮಾತುಗಳು ಮುಗಿದಿರಲಿಲ್ಲ... ಆಚಾರ್ಯರಿಗೆ ಅರ್ಥವಾಯಿತು ಯಾಕೆ‌ ಕೆಲಸಕ್ಕೆ ಜನ ಬರ್ತಾ ಇಲ್ಲ ಅಂತ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ