ಸ್ಟೇಟಸ್ ಕತೆಗಳು (ಭಾಗ ೧೩೫೨) - ಸಾವಿನ ಬೆಲೆ

ಹೋರಾಟದ ಎಲ್ಲ ಲಕ್ಷಣಗಳು ಕಾಣಲಾರಂಬಿಸಿತು. ಇನ್ನು ಸುಮ್ಮನಿದ್ದರೆ ಸಮಸ್ಯೆ ಬಿಗಡಾಯಿಸುತ್ತೆ ಅನ್ನಿಸೋಕೆ ಆರಂಭವಾಯಿತು. ನೇರ ಹೋರಾಟಗಾರರ ಮುಂದೆ ನಿಂತು ಅವರ ಮಾತನ್ನ ಕೇಳಲಾರಂಬಿಸಿದೆ. ನಮಗೆ ನ್ಯಾಯ ಬೇಕು, ಸಾವಿಗೆ ಪರಿಹಾರ ಬೇಕು. ನಿಮಗೆ ನಮ್ಮ ಸಾವು ಅಷ್ಟೇನು ದೊಡ್ಡದು ಅನ್ನಿಸಿರಲಿಕ್ಕಿಲ್ಲ ಆದರೆ ನಮಗೆ ನಮ್ಮವರ ಸಾವು ತುಂಬಾ ನಷ್ಟ ಉಂಟು ಮಾಡಿದೆ. ನಮ್ಮ ತಪ್ಪೇನಿದೆ ನೀವೆ ಹೇಳಿ. ನೀವು ಸಕ್ಕರೆ ಡಬ್ಬಿ ಅರ್ದಂಬರ್ದ ತೆರೆದಿಟ್ಟದ್ದು ಯಾಕೆ? ಅದಲ್ಲದೆ ನಮಗೆ ಆಹಾರ ಸಿಕ್ಕಾಗ ಪಡೆದುಕೊಳ್ಳುವುದು ನಮ್ಮ ಹಕ್ಕಲ್ಲವೆ, ನಾವು ಸಕ್ಕರೆ ಪಡೆದುಕೊಂಡೆವು, ಆಮೇಲೆ ನೀವು ಮುಚ್ವಳ ಹಾಕುವ ಮೊದಲು ನಮ್ಮವರನ್ನ ಹೊರಗಡೆ ಹಾಕಿ ಮುಚ್ಚಳ ಗಟ್ಟಿ ಮಾಡಬೇಕಿತ್ತು. ನೀವು ಯಾವುದೇ ಮಾಹಿತಿ ನೀಡದೆ ಏಕಾ ಏಕಿ ಮುಚ್ಚಳ ಹಾಕಿ ನಮ್ಮವರ ಸಾವಿಗೆ ಕಾರಣವಾಗಿದ್ದೀರಿ, ಅದರಲ್ಲಿ ಕೆಲವರು ಎರಡು ದಿನದ ಹಿಂದೆ ಮದುವೆಯಾದವರು ಇದ್ದರು, ಕೆಲವರ ತಂದೆ, ಅಣ್ಣ, ಗೆಳೆಯ, ಚಿಕ್ಕಪ್ಪ, ದೊಡ್ಡಪ್ಪ ಹೀಗೆ ಮನೆಯ ಆಧಾರಸ್ಥಂಬಗಳೆಲ್ಲ ಸಾವಿಗೀಡಾದ ಮೇಲೆ ಆ ಮನೆಯ ಸ್ಥಿತಿ ಏನು? ಮನೆಯವರಿಗೆ ಏನಂತ ಉತ್ತರ ಕೊಡೋದು ಕೆಲವರ ಹೆಣವೂ ಸಿಕ್ಕಿಲ್ಲ, ನಾವು ಇರುವೆಗಳು ನಮ್ಮ ಸಾವಿಗೆ ಬೆಲೆ ಇಲ್ಲ, ನಿಮ್ಮ ಸಾವಿಗೆ 10, 20 ಲಕ್ಷಗಳು ಪರಿಹಾರ ಸಿಗ್ತವೆ, ನಮ್ಮ ಸಾವಿಗೆ? ನನ್ನಲ್ಲಿ ಉತ್ತರವಿರಲಿಲ್ಲ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ