ಸ್ಟೇಟಸ್ ಕತೆಗಳು (ಭಾಗ ೧೩೫೫) - ಹೀಗಿದೆ

ಸ್ಟೇಟಸ್ ಕತೆಗಳು (ಭಾಗ ೧೩೫೫) - ಹೀಗಿದೆ

ಸಂಸಾರ ಆಗಬೇಕಾಯಿತು ಬದುಕು ಅರ್ಥವಾಗುವುದಕ್ಕೆ ಹೀಗೆ ಮಾತುಗಳನ್ನ ಆರಂಬಿಸಿದವ ಅಶೋಕ. ಮಳೆ ಇಲ್ಲದ ಊರನ್ನು ಬಿಟ್ಟು ಮಳೆ ಸದಾ ನೆಲೆಯೂರಿರುವ ಕರಾವಳಿಗೆ ಬಂದು ಈಗಷ್ಟೇ ತಿಂಗಳುಗಳಾಗಿದೆ. ಆತ ಈ ಊರಿಗೆ ಹೊಸಬನೇನಲ್ಲ. ಸುಮಾರು ಏಳು ವರ್ಷಗಳ ಹಿಂದೆ ಈ ಊರಿನಲ್ಲಿ ಕೆಲಸವನ್ನ ಮಾಡಿ ಅನುಭವ ಪಡೆದವ. ಆಗ ಸಂಸಾರದ ಭಾರ ಹೆಗಲ ಮೇಲಿರಲಿಲ್ಲ. ದುಡಿದದ್ದನ್ನು ವಾರದ ಅಂತ್ಯದಲ್ಲಿ ಮಜಾ ಮಾಡಿ ಖಾಲಿ ಮಾಡಿ ಖಾಲಿಯಾದ ಕಿಸೆಯನ್ನ ತುಂಬಿಸಿಕೊಳ್ಳುವುದಕ್ಕೆ ಮುಂದಿನ ವಾರ ದುಡಿಯುತ್ತಿದ್ದ. ಮನೆಯಲ್ಲಿ ಅಪ್ಪ ಅಮ್ಮ ಎಷ್ಟೇ ಹೇಳಿದರು ಉಳಿತಾಯದ ಬಗ್ಗೆ ಯೋಚನೆಯೂ ಇರಲಿಲ್ಲ. ಮದುವೆಯ ಬಂಧ ಬಿಗಿಯಾದ ಕೂಡಲೇ ಹೂಡಿಕೆಯ ಬಗ್ಗೆ ಯೋಚನೆ ಆರಂಭವಾಯಿತು. ತನ್ನೂರಲ್ಲಿ ಮಕ್ಕಳ ಜೊತೆ ಕೆಲಸ ನೋಡಿಕೊಂಡಿದ್ದವ ಹೆಗಲು ಭಾರವಾದಾಗ ಮತ್ತೆ ಕರಾವಳಿಗೆ ಕಾಲಿಟ್ಟ. ಈಗ ರಜೆಯನ್ನು ಹಾಕದೆ ದುಡಿಮೆಯನ್ನು ಆರಂಭಿಸಿದ್ದಾನೆ. ಎಲ್ಲಾ ಆಸೆಗಳನ್ನು ಕಟ್ಟಿ ಹಾಕಿ ಪ್ರತಿ ರುಪಾಯಿಗಳನ್ನ ಶೇಖರಿಸಿಡುತ್ತಿದ್ದಾನೆ. ಮಕ್ಕಳ ಬಗ್ಗೆ ಕನಸು ದೊಡ್ಡದಿದೆ ಮನೆ ನಿಭಾಯಿಸಬೇಕಿದೆ ನಾವು ಜವಾಬ್ದಾರಿ ಹೊತ್ತುಕೊಳ್ಳದೆ ಬದುಕು ರುಚಿಸುವುದಿಲ್ಲ ಸರ್. ಹೀಗಂದವ ಜೋರು ಮಳೆಯಲ್ಲಿ ಕೆಲಸದ ಕಡೆಗೆ ಹೆಜ್ಜೆ ಇಟ್ಟ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ