ಸ್ಟೇಟಸ್ ಕತೆಗಳು (ಭಾಗ ೧೫೫) - ಬದುಕು

ಸ್ಟೇಟಸ್ ಕತೆಗಳು (ಭಾಗ ೧೫೫) - ಬದುಕು

ಖಾರ ಬಿಸಿಲಿಗೆ ಮೈಯೊಡ್ಡಿ ನೆರಳಿನ ಆಶ್ರಯ ಪಡೆದಾಗ ಮನಸ್ಸಿನ ತಂಪು ಸಂತಸಗೊಳ್ಳುತ್ತದೆ. ರಾತ್ರಿಗೆ ಮೈಯೊಡ್ಡಿ ಅಂಬರದ ಕೆಳಗೆ ಅರ್ಧ ದಿಗಂಬರನಾಗಿ... 

ಇಷ್ಟರವರೆಗೂ ಉಳಿದಿರಲಿಲ್ಲ. ಅನಿವಾರ್ಯತೆಯೊಂದು ಇರುಳಿನ ತಂಪಿಗೆ ಆಶ್ರಯಿಸಲು ಕಾರಣವಾಯಿತು. ಅದೇನು ಸೊಗಸು ತಣ್ಣನೆಯ ಗಾಳಿ ರೋಮಗಳನ್ನು ವಾಲಾಡಿಸಿ ಚರ್ಮವನ್ನು ಮುಟ್ಟಿದಾಗ, ತಂಪಿನ ತರಂಗವು ಮನಸ್ಸಿನೊಳಗೆ ಪ್ರಫುಲ್ಲತೆಯನ್ನು ಉಂಟು ಮಾಡುತ್ತಿದೆ. ಭೂಮಿಯ ನಿದಿರೆಗೆ ತಂಪಿನ ಗಾಳಿ ಜೋಗುಳವ ಹಾಡುತ್ತಿದೆ. ಆಗಸದಿಂದ ಇಣುಕುತ್ತಿದ್ದ ಚಂದಿರ ಭೂಮಿಗೆ ಬರಲು ಆಸಕ್ತಿ ಇದ್ದರೂ ಕಾರ್ಯ ಕ್ಷಮತೆ ಅನುಮತಿ ನೀಡಲಿಲ್ಲ. ಅವನ ತಂಪಿನ ಪಿಸುಮಾತುಗಳು ಹೃದಯದ ಆಳಕ್ಕಿಳಿದು ಸ್ಥಾಯಿಯಾಗುತ್ತಿದ್ದವು. ಒಂದಷ್ಟು ಬಿಸಿಯನ್ನು ಆಸ್ವಾದಿಸಿದರೆ ತಂಪಿನ ಮಹತ್ವವನ್ನು ವಿವರಿಸಬಹುದು. ಬಿಸಿ ಕ್ಷಣಕ್ಕಾದರೂ ತಂಪು ಶಾಶ್ವತ. ಒಂದರಲ್ಲೇ ನಿಲ್ಲಬೇಡ ಮನುಜ. ಬದಲಾಗುತ್ತಿರು. ಸೂರ್ಯನ ಹಾಗೆ ನಕ್ಷತ್ರಗಳ ಮಿನುಗುವ ಅವಕಾಶವನ್ನು ಕಿತ್ತುಕೊಂಡವನಲ್ಲ.  ತನ್ನೊಂದಿಗೆ ತಾರೆಗಳ ಮಿನುಗುವಿಕೆ ಅನುಮತಿಸಿದವ ಈ ಶಶಿ. 

ನನ್ನೊಳಗಿನ ನಿದಿರೆಯ ಸುಪ್ತ ಸ್ಥಿತಿಯನ್ನು ಜಾಗೃತಗೊಳಿಸಿ ಪಕ್ಕದಲ್ಲಿ ಜೋಗುಳ ಹಾಡಿ ತೆರಳಿದ್ದ. ತಂಪಿನ ಹೊರತು ಅವನ ಸ್ಪರ್ಶಿಸಲು ಆಗಲಿಲ್ಲ. ಮೌನದ ತರಂಗಗಳ ಅನುಭವ ಅನುಭವಿಸಿದರೆ ವಿವರಿಸಬಹುದು ಅಷ್ಟೇ? ಅಂಗಳದಲ್ಲಿ ತಲೆಯೆತ್ತಿ ಚಂದಿರನ ನನ್ನ ಕಣ್ಣೊಳಗೆ ಇಳಿಸಿ ಮನಸ್ಸನ್ನು ತೆರೆದು ಕಾಯಿರಿ, ಅವನ ಅಂಶದ ಚೇತನವು ನಮ್ಮೊಳಗಿಳಿದು ಬದುಕು ಬದಲಿಸಬಹುದು…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ