ಸ್ಟೇಟಸ್ ಕತೆಗಳು (ಭಾಗ ೧೬೯) - ಪ್ರಿಯತಮ

ಸ್ಟೇಟಸ್ ಕತೆಗಳು (ಭಾಗ ೧೬೯) - ಪ್ರಿಯತಮ

"ಇಂದಿನ ದಿನದ ಅಂತ್ಯ ಸಮೀಪಿಸುತ್ತಿದೆ ಅಂದರೆ ಸಂಜೆಯಾಗುತ್ತಿದೆ. ನನ್ನ ಮನದೊಳಗೆ ಕೊರತೆಯೊಂದು ಸಣ್ಣ ಕಂಪನವನ್ನು ಎಬ್ಬಿಸುತ್ತಿದೆ. ಅಂದರೆ ನಿನ್ನ ಮಾತಿನ ರಂಗು ಮನದಲ್ಲಿ ಬಿದ್ದಿಲ್ಲವೆಂದರ್ಥ. ಈ ಯೋಚನೆಯಲ್ಲಿ ಅವಳ ಕರೆಗೆ ಕಾದು ಕುಳಿತಿದ್ದಾನೆ ಪ್ರೀತಮ. ಇವನ ಪ್ರೀತಿ ಎಲ್ಲರಂತಲ್ಲ, ಅಂದರೆ ಪ್ರೀತಿ ಯಾರಿಗೂ ಕಂಡುಬರುವುದಿಲ್ಲ, ದಿನಗಟ್ಟಲೆ ಮಾತನಾಡುವುದಿಲ್ಲ, ಅವಳಿಗೋಸ್ಕರ ಬದಲಾಗಿಲ್ಲ, ಯಾರ ಬಳಿಯೂ ಸಾರಿ ಹೇಳಿಲ್ಲ, ಅವಳೊಂದಿಗೆ ಕೂತು ಮಾತಾಡಿಲ್ಲ, ಜೊತೆಗೆ ಒಂದಿಷ್ಟು ದೂರ ನಡೆದಿಲ್ಲ, ಕಿರುಬೆರಳನ್ನ ಮುಟ್ಟಿಲ್ಲ. ಆದರೆ  ದಿನದಲ್ಲೊಮ್ಮೆ ಎರಡು ನಿಮಿಷದ ಕುಶಲೋಪರಿಯಿಂದ ಅವಳ ಸ್ವರವನ್ನೊಮ್ಮೆ ಎದೆಯ ಸದ್ದಿಗೆ ಕೇಳಿಸಿ ಕೆಲಸದಲ್ಲಿ ತೊಡಗುತ್ತಾನೆ. ಒಪ್ಪಿಗೆಯ ಪತ್ರ ಮನೆಯಿಂದ ಸಿಕ್ಕಿಲ್ಲ. ಅದೊಂದು ಭಯದ ಕಂಪನ ಆಗಾಗ ಎಚ್ಚರಿಸುತ್ತಿರುತ್ತವೆ. ಆಸೆಗಳ ಹೂವಿಗೆ ನೀರೆರೆದು ಸೊಂಪಾಗಿ ಬೆಳೆಸಿದ್ದಾನೆ. ಇದನ್ನ ಚಿವುಟುತ್ತಾರೋ ಬೆಳೆಸುತ್ತಾರೋ ಯಾವುದೂ ಗೊತ್ತಿಲ್ಲ. ಆದರೆ ಪ್ರೀತಿಯಲ್ಲಿ ಬದುಕಿದ್ದಾನೆ. ಅವಳ ಯಶಸ್ಸಿಗೆ ಪ್ರಾರ್ಥಿಸುತ್ತಾನೆ. ಪ್ರೀತಿಗಿಂತ ಪರಮ ಸತ್ಯ ಇನ್ಯಾವುದಿಲ್ಲ ಅನ್ನುವ ಸೂತ್ರವೊಂದನ್ನು ಗಟ್ಟಿಯಾಗಿ ನಂಬಿದ್ದಾನೆ . ಕಾಲ ನಿರ್ಧರಿಸುವ ಮುಹೂರ್ತಕ್ಕೆ ತನ್ನವಳಿಗೆ ಮೂರುಗಂಟು ಹಾಕಿ ಏಳು ಹೆಜ್ಜೆ ನಡೆಯುವ ದೃಢವಿಶ್ವಾಸದಲ್ಲಿ ಅವಳ ಕರೆಗೆ ಈ ಇಳಿ ಸಂಜೆ ಕಾದುಕುಳಿತಿದ್ದಾನೆ. ಅವನಾಗಿಯೇ ಕರೆ ಮಾಡುವಂತಿಲ್ಲ. ಅವಳು ಹೇಳಿದ್ದಾಳೆ ಅಲ್ಲವೇ? ಅದನ್ನ ಪಾಲಿಸುತ್ತಾನೆ ನಮ್ಮ ಪ್ರಿಯತಮ... ಪ್ರೀತಮ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ