ಸ್ಟೇಟಸ್ ಕತೆಗಳು (ಭಾಗ ೧೯೦) - ಅರಿವು

ಸ್ಟೇಟಸ್ ಕತೆಗಳು (ಭಾಗ ೧೯೦) - ಅರಿವು

ಯೋಚನೆಗಳು ಹೆಚ್ಚಾದಷ್ಟು ಕೆಲಸಗಳು ಮುಂದುವರಿತಾಯಿಲ್ಲ. ಆಗಾಗ ನಾನು ಸ್ಥಗಿತಗೊಂಡಾಗ ಇದೇ ರೀತಿ ಮೇಡಂ  ಬಳಿ ಹೋಗ್ತೇನೆ. ಹಾಗೆ ಇವತ್ತು ತೆರಳಿದ್ದೆ. "ಮೇಡಂ ಪರಿಶ್ರಮ ಮಿತಿಮೀರಿ ಹಾಕ್ತಾ ಇದ್ದೇನೆ, ಪ್ರತಿಫಲಗಳು ಕಾಣುತ್ತಿಲ್ಲ. ಅದನ್ನು ನೋಡಿ ಪ್ರಯತ್ನಿಸುವುದೇ ಬೇಡ ಅನಿಸುತ್ತಿದೆ. ಶ್ರಮಕ್ಕೆ ತಕ್ಕ ಫಲ ಸಿಗದಿದ್ದಾಗ ಬೇಸರ ಆಗುವುದು ಸಹಜ ತಾನೆ". 

"ನೋಡು ಧೀರಜ್, ನಿನ್ನ  ಶ್ರಮ ಛಲ ಎಲ್ಲ ನೋಡ್ತಾ ಇದ್ದೇನೆ. ಒಂದು ತಿಳ್ಕೋ, ಯಾವ ಬೀಜವನ್ನು ಯಾವ ನೆಲದಲ್ಲಿ ಬಿತ್ತಬೇಕು ಅನ್ನುವುದರ ಅರಿವು ನಿನಗಿರಬೇಕು. ಬರಡು ಪ್ರದೇಶದಲ್ಲಿ ಬಿತ್ತಿದ ಬೀಜದಲ್ಲಿ ಫಲ ಸಿಗುವುದು ಸಾಧ್ಯವೇ?. ಪ್ರದೇಶಗಳಿಗನು ಗುಣವಾಗಿ, ನೆಲದ ಸತ್ವ ಬದಲಾಗುತ್ತೆ. ಅದಕ್ಕೆ ತಕ್ಕ ಬೀಜವನ್ನು ಆರಿಸಬೇಕು. ನಿನ್ನ ಪ್ರಯತ್ನಗಳು ತಪ್ಪು ಜಾಗದಲ್ಲಿ ತಪ್ಪು ಕಾಲದಲ್ಲಿ ಬಿತ್ತಿದ ಬೀಜದಂತೆ ಫಲವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಅರ್ಥವಾಗಿರಬಹುದು ಅಂದ್ಕೋತೇನೆ" 

ದೊಡ್ಡ ಮಾತುಗಳು ಸುಲಭದಲ್ಲಿ ಅರ್ಥವಾಗುವಂತದ್ದಲ್ಲ. ಯೋಚಿಸಿ ಅರ್ಥೈಸಿ, ಒಳಗಿಳಿಸಿಕೊಳ್ಳಬೇಕು.ಅದಕ್ಕಾಗಿ ಮೌನಕ್ಕೆ ಜಾರಿದೆ. ಮನಸ್ಸು ಯೋಚಿಸಲಾರಂಭಿಸಿದೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ