ಸ್ಟೇಟಸ್ ಕತೆಗಳು (ಭಾಗ ೪೬೫) - ದುಃಖ
![](https://saaranga-aws.s3.ap-south-1.amazonaws.com/s3fs-public/styles/article-landing/public/eytr.jpg?itok=RCOsCAfr)
ಆ ಮನೆಯ ಸುತ್ತ ಜನ ಸೇರಿದ್ದಾರೆ. ಊರುಗಳಿಂದ ಪಕ್ಕದ ಹಳ್ಳಿ, ತಾಲೂಕು ರಾಜ್ಯ ದೇಶ ವಿದೇಶಗಳಿಂದಲೂ ಕೂಡ ಜನಗಳು ಆಗಮಿಸುತ್ತಿದ್ದಾರೆ. ಬಂದು ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಆತ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಮಸ್ಯೇನಾ ಎದುರಿಸಲಾಗದೆ ಹೇಡಿಯಂತೆ ತನ್ನ ಉಸಿರನ್ನು ಪ್ರಕೃತಿಯೊಂದಿಗೆ ಲೀನವಾಗಿಸಿ ಕೊಂಡಿದ್ದಾನೆ. ಈಗ ಬಂದಿರುವ ಯಾರನ್ನೂ ಕೂಡ ಅವನಿಗೆ ನೋಡೋಕೆ ಆಗ್ತಿಲ್ಲ. ಬಂದವರೆಲ್ಲರೂ ಕೂಡ ಅಯ್ಯೋ ಹೀಗಾಗಬಾರದಿತ್ತು ಅನ್ನೋರೇ ಹೆಚ್ಚಿನವರು. ಆದರೆ ಅವನು ಸಮಸ್ಯೆಗಳನ್ನು ಇಟ್ಟುಕೊಂಡು ಹೆಚ್ಚಿನ ಎಲ್ಲರಿಗೂ ಕರೆ ಮಾಡಿದ್ದ, ತನ್ನ ಸಮಸ್ಯೆಯನ್ನು ವಿವರಿಸಿದ್ದ ಅವರ ಕಡೆಯಿಂದ ಸಣ್ಣ ಸಾಂತ್ವನ, ಚಿಕ್ಕ ಸಹಾಯ ನಿರೀಕ್ಷಿಸಿದ್ದ ಕೂಡ. ಆದರೆ ಯಾರಿಗೂ ಸಮಯವಿರಲಿಲ್ಲ. ಒಂದಿನಿತೂ ಮಾತನಾಡುವ ಪುರುಸೊತ್ತು ಇರಲಿಲ್ಲ. ಪ್ರತಿಯೊಬ್ಬರೂ "ಇಲ್ಲಾ ಬದಲಾಗುತ್ತೆ" ಅನ್ನುವವರೇ. ಬದುಕಿದ್ದಾಗ ಸಹಾಯಕ್ಕೆ ಬಾರದ ಜನ ಸತ್ತ ಮೇಲೆ ಮಣ್ಣು ಹಾಕಲು ಬಂದರೆ ಯಾರಿಗೆ ಏನು ಉಪಯೋಗ. ಬದುಕಿದ್ದಾಗಲೇ ಬದುಕನ್ನ ಹಂಚೋದು ಒಳ್ಳೆದು. ಸತ್ತ ಮೇಲೆ ದುಃಖವನ್ನ ಹಂಚೋದು ಯಾಕೆ ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ