ಸ್ಟೇಟಸ್ ಕತೆಗಳು (ಭಾಗ ೭೧೧) - ಅರ್ಥ

ಸ್ಟೇಟಸ್ ಕತೆಗಳು (ಭಾಗ ೭೧೧) - ಅರ್ಥ

ನಾ ಚಲಿಸುವ ದಾರಿಯ ಬದಿಯ ಒಂದು ಮರ ಅದ್ಯಾಕೋ ಬೇಸರದಿಂದ ಬಾಡಿ ನಿಂತಿತ್ತು. ಎಲ್ಲದಕ್ಕೂ ಒಂದು ಕಾರಣವಿರಬೇಕಲ್ಲ. ಹಾಗಾಗಿ ಕಾರಣ ಕೇಳಿದ್ದಕ್ಕೆ ಆ ಮರಕ್ಕೆ ಒಂದಷ್ಟು ನೋವಂತೆ, ಪ್ರತಿ ವರ್ಷವೂ ಹಣ್ಣು ಕೊಡುತ್ತಿದ್ದೇನೆ ಜನರಿಗೆ ಗಾಳಿ ಕೊಡ್ತಾ ಇದ್ದೆ ಕೆಲವೊಂದು ಕಾರಣಗಳಿಗೆ ನನ್ನ ಎಲೆಗಳನ್ನ ಉದುರಿಸಿ ಸಹಾಯ ಮಾಡ್ತಾ ಇದ್ದೆ. ನನಗೂ ಒಂತರ ನೆಮ್ಮದಿ ಬದುಕಿಗೊಂದು ಅರ್ಥ ಸಿಗುತ್ತಲ್ಲ ಅಂತ. ಆದರೆ ಇತ್ತೀಚಿಗೆ ನನ್ನ ಹಣ್ಣಿನಿಂದ ಯಾರಿಗೂ ಉಪಯೋಗ ಆಗ್ತಾಯಿಲ್ಲ, ಅಲ್ಲದೆ ನನಗೆ ಹಣ್ಣು ಬಿಡುವುದಕ್ಕೆ ಸಾಧ್ಯವಾಗುವ ಸವಲತ್ತು ಈ ನೆಲದಿಂದ ಸಿಗುತ್ತಾ ಇಲ್ಲ. ನನ್ನ ಪಕ್ಕದಲ್ಲಿ ಹರಿಯುತ್ತಿದ್ದ  ಸಣ್ಣ ನೀರಿನ ತೊರೆಯಿಂದ ನೀರು ಕುಡಿದು ಬಲಾಢ್ಯನಾಗ್ತಾ ಇದ್ದೆ, ಆ ನೀರಿನ ತೊರೆಯನ್ನ ಕಾಂಕ್ರೀಟ್ ಹಾಕಿ ಮುಚ್ಚಿ ಒಳಗಿಳಿಯದ ಹಾಗೆ ಮಾಡಿಬಿಟ್ಟಿದ್ದಾರೆ. ನನ್ನೊಬ್ಬನ ನೆರಳು ಸಾಕಾಗ್ತಾನೇ ಇಲ್ಲ, ನನ್ನ ಅಣ್ಣ ತಮ್ಮಂದಿರನ್ನು ಕಡಿದು ಸಾಗಿಸಿಬಿಟ್ಟಿದ್ದಾರೆ. ನನಗೀಗ ನೋವಾಗ್ತಾ ಇರೋದು ನನ್ನ ಬದುಕಿಗೊಂದು ಅರ್ಥ ಸಿಗುತ್ತಾ ಇಲ್ಲ. ಹುಟ್ಟಿಗೊಂದು ಮೌಲ್ಯವಿಲ್ಲ. ಅದಕ್ಕೆ ಅದಕ್ಕೆ ಪ್ರತಿದಿನವೂ ವ್ಯಥೆ ಪಡುತ್ತಿದ್ದೇನೆ .ಅದರ ಮಾತನ್ನು ಕೇಳಿದಾಗ ನನ್ನ ಹುಟ್ಟಿನ ಅರ್ಥವನ್ನು ಯೋಚನೆ ಮಾಡುವ ಸ್ಥಿತಿ ನನ್ನದಾಯಿತು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ