ಸ್ಟೇಟಸ್ ಕತೆಗಳು (ಭಾಗ ೮೨೫)- ಪಯಣ

ಸ್ಟೇಟಸ್ ಕತೆಗಳು (ಭಾಗ ೮೨೫)- ಪಯಣ

ಬಾಂಧವ್ಯದ ಕೊಂಡಿಗಳು ಹಾಗೆಯೇ ಜೋಡಣೆಯಾಗುತ್ತವೆ. ಅದಕ್ಕೆ ವರ್ಷಾನುಗಟ್ಟಲೆಯ ಪರಿಚಯ, ಅವರ ಬಗ್ಗೆ ಸಂಪೂರ್ಣ ತಿಳುವಳಿಕೆ, ಅವರಿಂದ ಆಗುವ ಲಾಭ ನಷ್ಟಗಳ ಅರಿವು ಇರಬೇಕೆಂದೇನೂ ಇಲ್ಲ. ವ್ಯಕ್ತಿಯ ಜೊತೆ ಮುಖತಃ ಭೇಟಿಯಾದಾಗ ಅವರ ಕಣ್ಣುಗಳು, ಅವರ ಮಾತುಕತೆ, ಬಾಂಧವ್ಯವನ್ನು ಹೆಚ್ಚಿಸುತ್ತದೆ. ಪರಿಚಯವಿಲ್ಲದ ಊರಿನಲ್ಲಿ ಕಾರ್ಯಕ್ರಮ ಒಂದಕ್ಕೆ ಭಾಗವಹಿಸಲು ತೆರಳಿದ್ದವರಿಗೆ ಅಲ್ಲಿಂದ ಇನ್ನೊಂದು ಊರಿಗೆ ಬರುವ ದಾರಿ ಗೊತ್ತಾಗದೆ ಹಾಗೆ  ಮಾರ್ಗ ಬದಿಯಲ್ಲಿ ನಿಂತಿದ್ದವರಿಗೆ ಆತ್ಮೀಯರು ಕರೆದಂತಾಯಿತು. ವಿಷಯ ಕೇಳಿ ತಾವು ಚಲಿಸುವ ದಾರಿಯಲ್ಲಿ ಅವರನ್ನ ಇಳಿಸಿ ಹೋಗುವುದಾಗಿ ತಿಳಿಸಿದರು. ಇಬ್ಬರೂ ಅಪರಿಚಿತರೆ, ಆದರೆ ಮಾತುಕತೆಗಳು ಬೆಳೆದಂತೆಲ್ಲ ಆಸಕ್ತಿಗಳು ವಿಚಾರಗಳು ಊರುಗಳು ಹವ್ಯಾಸಗಳು ಎಲ್ಲವೂ ಇಬ್ಬರಿಗೂ ಆತ್ಮೀಯ ಅನ್ನಿಸೋದಿಕ್ಕೆ ಆರಂಭ ಅನ್ನಿಸಿದವು. ಮಾತಿನಿಂದ ಯೋಚನೆಗಳು ವಿಚಾರಗಳು ಹೆಚ್ಚಾಗಿ ಇಬ್ಬರ ಪರಿಚಯವು ಬದುಕಿನ ದಾರಿಗೆ ಅವಶ್ಯವಾದ ವಿಚಾರ ಅನ್ನಿಸಿತು. ಇಳಿಯುವ ತಾಣದಲ್ಲಿ ಅವರು ಇಳಿದು ಕಾರು ಮುಂದೆ ಹೊರಟಿತು. ಅಪರಿಚಿತ ಊರಿನಲ್ಲಿ ಅಪರಿಚಿತರೂ ಕೂಡ ದಾರಿ ತೋರಿಸುತ್ತಾರೆ ಅಪರಿಚಿತರು ಪರಿಚಿತರಾಗಿ ಅಗತ್ಯಗಳಿಗೆ ಜೊತೆಯಾಗುವ ಅವರ ಬದುಕಿನ ದಾರಿಗೆ ಒಂದಷ್ಟು ಸ್ಪೂರ್ತಿ ನೀಡುವ ಘಟನೆಗಳು ನಡೆಯುವುದಕ್ಕೆ ಭಗವಂತ ಜೋಡಿಸಿದ ಸಣ್ಣ ಕೊಂಡಿಯೊಂದು ಇದಾಗಿತ್ತು. ಹಾಗಾಗಿ ಪರಿಚಿತರ ಬಳಗವನ್ನು ಹೆಚ್ಚಿಸಿಕೊಂಡು ಮಾತುಕತೆಗಳನ್ನಾಡುತ್ತಿದ್ದರೆ ಬದುಕಿನ ದಾರಿಗೆ ಬೆಳಕಾಗುವ ಮನಸ್ಸುಗಳು ಜೊತೆಯಾಗುವ ಸಂಭವ  ಇರುತ್ತದೆ. ಕಣ್ಬಿಟ್ಟು ಮನಸ್ಸಿಟ್ಟು ಹೃದಯದಿಂದ ಆಲಿಸುವ ವಿವೇಚನೆ ನಮ್ಮಲ್ಲಿರಬೇಕಷ್ಟೆ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ