ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದತ್ತ ಸಾಗುತ್ತಿರುವ‌ ಹಾದಿಯಲ್ಲಿ...

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದತ್ತ ಸಾಗುತ್ತಿರುವ‌ ಹಾದಿಯಲ್ಲಿ...

ಇಡೀ ಸಂಸತ್ ಸದಸ್ಯರ ಮೇಲೆ ನಮ್ಮದೂ ಒಂದು ಅವಿಶ್ವಾಸ ನಿರ್ಣಯ. ಇತ್ತೀಚಿನ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಿಂದ  ಆಡಳಿತ ಮತ್ತು ವಿರೋಧ ಪಕ್ಷಗಳು ಸಾಧಿಸಿದ್ದೇನು? ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯ ಐದಾರು ದಿನಗಳ ಕಾಲ ಬಿರುಸಿನ ಆರೋಪ ಪ್ರತ್ಯಾರೋಪಗಳಲ್ಲಿ ಕೊನೆಯಾಗಿ ಮುಕ್ತಾಯವಾಯಿತು. ಅದರ ಫಲಿತಾಂಶ ಏನು? ಸಾರ್ವಜನಿಕರ ಕೋಟ್ಯಾಂತರ ಹಣ ಖರ್ಚು ಮಾಡಿ 545 ಸಂಸತ್ ಸದಸ್ಯರು ಮತ್ತು ಅದರಲ್ಲೇ ಒಂದು ಸಚಿವ ಸಂಪುಟ ಎಲ್ಲರೂ ಸೇರಿ ಚರ್ಚೆಗಳನ್ನು ಮಾಡಿ ಏನಾದರೂ ಪರಿಹಾರ ದೊರೆಯಿತೇ?

ಮೊದಲನೆಯದಾಗಿ, ಸಂಸತ್ತು ನ್ಯಾಯಾಲಯವಲ್ಲ. ಅದು ಸರಿ ತಪ್ಪುಗಳ ವಕೀಲಿಕೆಯ ವೇದಿಕೆಯಲ್ಲ. ದೇಶದ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಸದನ. ಆದರೆ ಆಗಿದ್ದು ಮಾತ್ರ ದೊಡ್ಡ ದುರಂತ. ಚುನಾವಣಾ ಪ್ರಚಾರ ಭಾಷಣದಂತೆ ವಿರೋಧ ಪಕ್ಷಗಳು ಆಡಳಿತ ಪಕ್ಷದ ಮೇಲೆ ಆರೋಪ, ಅದಕ್ಕೆ ವಿರುದ್ಧವಾಗಿ ಆಡಳಿತ ಪಕ್ಷಗಳು ವಿರೋಧ ಪಕ್ಷಗಳ ಮೇಲೆ ಆರೋಪ. ಇಷ್ಟು ಮಾತ್ರಕ್ಕಾಗಿ ಲೋಕಸಭೆ ಕಾರ್ಯನಿರ್ವಹಿಸಬೇಕಿತ್ತೇ, ಯಾವುದಾದರೂ ಒಂದು ನ್ಯೂಸ್ ಚಾನಲ್ ಸಾಕಾಗಿತ್ತು.

ಎರಡನೆದಾಗಿ, ವಿಪರ್ಯಾಸವೆಂದರೆ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಚರ್ಚೆಗಳು ನಡೆದರೆ ಅದು ಸಾಮಾನ್ಯ. ಆದರೆ ಕಾರ್ಯ ಪ್ರವೃತ್ತರಾಗಬೇಕಾದ ಪ್ರಧಾನ ಮಂತ್ರಿ, ಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಸಂಸತ್ ಸದಸ್ಯರು ಕೇವಲ ಆರೋಪ ಪ್ರತ್ಯಾರೋಪ ಮಾಡುತ್ತಾ ತಮ್ಮ ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನಿಸಿದರೆ ಹೇಗೆ?

ಮುಖ್ಯವಾಗಿ ಮಣಿಪುರದ ಗಲಭೆಗಳ ವಿಷಯವಾಗಿ ಚರ್ಚೆಗಳಾಗಿ ಏನಾದರೂ ಪರಿಹಾರ ಸಿಗಬೇಕಿತ್ತು. ದುರಾದೃಷ್ಟವಶಾತ್ 545 ಸದಸ್ಯರಿಗಳಿಂದ ಅದಕ್ಕೆ ಯಾವುದೇ ಪರಿಹಾರ ಸಿಗಲಿಲ್ಲ. ನಿನ್ನೆ ಕೂಡ ಅಲ್ಲಿ ಮಹಿಳೆಯೊಬ್ಬರಿಂದ ಸಾಮೂಹಿಕ ಅತ್ಯಾಚಾರದ ಬಗ್ಗೆ ದೂರು ದಾಖಲಾಗಿದೆ. ಹಾಗೆ ನೋಡಿದರೆ ಇಡೀ‌ ಲೋಕಸಭೆಯ ಮೇಲೆಯೇ ಅವಿಶ್ವಾಸ ನಿರ್ಣಯ ಮಂಡಿಸಬೇಕಾಗಿದೆ. ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ಮಾತನಾಡಿದ ರೀತಿ ಗಮನಿಸಿದರೆ ಇಬ್ಬರೂ ಅಜನ್ಮ ಶತ್ರುಗಳಂತೆ, ಬದ್ದ ವೈರಿಗಳಂತೆ, ಬೀದಿ ಜಗಳದಂತೆ ದ್ವೇಷ ಕಾರುತ್ತಿದ್ದರು. ಉಳಿದ‌ ಸದಸ್ಯರು ಮೇಜು ಕುಟ್ಟಿ ಅದಕ್ಕೆ ಪ್ರೋತ್ಸಾಹಿಸುತ್ತಿದ್ದರು.

ನೆನಪಿಡಿ, ಅದೇ ಸಮಯದಲ್ಲಿ ಮಣಿಪುರದಲ್ಲಿ ಒಬ್ಬ ಮಹಿಳೆಯ‌ ಸಾಮೂಹಿಕ ಅತ್ಯಾಚಾರ ಮತ್ತು ಕೆಲವರ ಮೇಲೆ ಹಲ್ಲೆ ನಡೆಯುತ್ತಿತ್ತು. ಸಾಮಾನ್ಯ ಜನರಾದ ನಾವು ಮಾತು - ಬರಹಗಳಲ್ಲಿ ಒಂದಷ್ಟು ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಮಾತ್ರ ಸೀಮಿತವಾಗಿರುತ್ತೇವೆ. ನಮ್ಮ ವ್ಯಾಪ್ತಿ ಬಹುತೇಕ ಅಷ್ಟೇ. ಆದರೆ ಅಧಿಕಾರದ ಮುಖ್ಯ ಸ್ಥಾನದಲ್ಲಿ ಇರುವವರು ಸಹ ಅಸಹಾಯಕರಾಗಿ, ಸ್ವಾರ್ಥಿಗಳಾಗಿ, ಅಧಿಕಾರ ದಾಹಿಗಳಾಗಿ ಅಥವಾ ಉದ್ದೇಶ ಪೂರ್ವಕವಾಗಿ 100 ದಿನಗಳಿಂದ ನಡೆಯುತ್ತಿರುವ ಹಿಂಸೆಗೆ 545 ಜನ ಸಂಸತ್ ಸದಸ್ಯರು ಹತ್ತು ದಿನಗಳ ಕಾಲ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ‌ಅವರಿದ್ದು ಏನು ಪ್ರಯೋಜನ ಎಂದು ಪ್ರಶ್ನೆ ಮಾಡಬಹುದಲ್ಲವೇ?

ಹಿಂಸೆಯ ವಿಷಯದಲ್ಲೂ ರಾಜಕೀಯ. ಮಣಿಪುರದ ಹಿಂಸೆಗೆ ಸಮರ್ಥನೆ ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದ ಹಿಂಸೆ. ಹಾಗೆಯೇ ಮಣಿಪುರದ ಹಿಂಸೆ ಖಂಡಿಸುವಾಗ ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಮರೆಮಾಚುವುದು. ಹಿಂಸೆಯೇ ಚುನಾವಣಾ ಅಧಿಕಾರದ ಮಾನದಂಡವಾಗುವುದಾದರೆ ಈ ದೇಶದ ಭವಿಷ್ಯ ತುಂಬಾ ಕಷ್ಟವಾಗಬಹುದು. ಮೇಲ್ನೋಟಕ್ಕೆ ಆರ್ಥಿಕವಾಗಿ ದೇಶ ಅಭಿವೃದ್ಧಿ ಹೊಂದಿದಂತೆ ಭಾಸವಾಗುತ್ತಿರಬಹುದು. ಆದರೆ ಆಂತರಿಕವಾಗಿ ಕುಸಿಯುತ್ತಿದೆ. ದ್ವೇಷದ ಚುನಾವಣಾ ರಾಜಕೀಯ ಪ್ರಜಾಪ್ರಭುತ್ವದ ಆಶಯವನ್ನೇ ಬುಡಮೇಲು ಮಾಡುತ್ತಿದೆ.

ಸೂಕ್ಷ್ಮವಾಗಿ ಗಮನಿಸಿ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಸ್ವಾತಂತ್ರ್ಯದ 77 ವರ್ಷಗಳ ಇತಿಹಾಸದಲ್ಲಿ " ಕಾಂಗ್ರೇಸ್ ಆರ್ಥಿಕ ಅಪರಾಧೀಕರಣವನ್ನು ಹೆಚ್ಚು ಪ್ರೋತ್ಸಾಹಿಸಿದರೆ ಬಿಜೆಪಿ ಸಾಮಾಜಿಕ ಅಪರಾಧೀಕರಣವನ್ನು ಹೆಚ್ಚು ಪ್ರೋತ್ಸಾಹಿಸುತ್ತದೆ " ಸಾಮಾನ್ಯ ಜನರಾದ ನಾವು ಮುಗ್ದರು ಮತ್ತು ಮೂರ್ಖರಾಗಿ ಇಬ್ಬರನ್ನೂ ಪ್ರೋತ್ಸಾಹಿಸುತ್ತಲೇ ಇದ್ದೇವೆ. ಅದು ಸರಿಯೇ ತಪ್ಪೇ ಎಂದು ನಮ್ಮ ಜೀವನದ ಗುಣಮಟ್ಟವನ್ನು ಆತ್ಮಾವಲೋಕನ ಮಾಡಿಕೊಂಡು ನಿರ್ಧರಿಸುವ ವಿವೇಚನೆ ನಮಗೆ ಸೇರಿದ್ದು...

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ