ಹಣಕ್ಕಿಂತ ಮಿಗಿಲಾದದ್ದು ಯಾವುದು?

ಹಣಕ್ಕಿಂತ ಮಿಗಿಲಾದದ್ದು ಯಾವುದು?

ಈ ಕಥೆಯನ್ನು ಓದಿ...ಒಂದು ನದಿ. ನದಿಯ ಪಕ್ಕ ಒಂದು ಸುಂದರ ತೋಟ ಇತ್ತು. ತೋಟದಲ್ಲಿ ಒಂದು ಕುಟೀರವಿತ್ತು. ಆ ಕುಟೀರದಲ್ಲಿ ಋಷಿ ದಂಪತಿ ವಾಸವಾಗಿದ್ದರು. ಆತ ಚೆನ್ನಾಗಿ ಹಾಡುತ್ತಿದ್ದನು. ಮಕ್ಕಳಿಗೆ ಕಲಿಸುವುದು ಬಿಟ್ಟು ಬೇರೆ ಏನು ಗೊತ್ತಿರಲಿಲ್ಲ. ಅಲ್ಲಿಗೆ ಒಬ್ಬ ರಾಜ ಭೇಟಿ ನೀಡಿದ. ಋಷಿಗಳನ್ನು ನೋಡಿ ಸಂತೋಷ ಪಟ್ಟು, ಋಷಿಗಳಿಗೆ ಸತ್ಕರಿಸಬೇಕೆಂದು ತೀರ್ಮಾನಿಸಿದನು. ಗುರುಗಳ ಹತ್ತಿರ ಹೋಗಿ ಕೇಳಿದ, "ಗುರುಗಳೇ ತಮ್ಮಂತವರು ನಮ್ಮ ರಾಜ್ಯದಲ್ಲಿರುವುದೇ ನಮ್ಮ ಸೌಭಾಗ್ಯ. ನಮ್ಮ ರಾಜ್ಯದಲ್ಲಿ ಇರುವಾಗ ಯಾವುದೇ ಕೊರತೆ ಆಗಬಾರದು. ಅದಕ್ಕಾಗಿ ತಮ್ಮಲ್ಲಿ ವಿನಂತಿ ಏನೆಂದರೆ ತಮ್ಮಲ್ಲಿ ಏನು ಕೊರತೆ ಇದೆ ಹೇಳಿ. ನಾನು ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತೇನೆ" ಎಂದನು. ಆಗ ಗುರುಗಳು ಹೇಳಿದರು, "ನನಗೆ ಏನೂ ಕೊರತೆ ಇಲ್ಲ" ಎಂದರು. ನಮ್ಮನ್ನೇನಾದರೂ ಕೇಳಿದ್ದರೆ ಬಿಟ್ಟಿ ಬರುತ್ತದೆ ಎಂದು, ಇರುವುದರ ಜೊತೆಗೆ ಮತ್ತೊಂದು ಹೆಚ್ಚುವರಿಯಾಗಿ ಇರಬೇಕೆಂದು ಪಟ್ಟಿಯನ್ನೇ ನೀಡುತ್ತಿದ್ದೆವು. ಆದರೆ ಋಷಿ ಹಾಗೆ ಮಾಡಲಿಲ್ಲ. ಆಗ ರಾಜ ಹೇಳಿದ ತಾವು ಇರುವುದು ಸಣ್ಣ ಕುಟೀರ, ಅದು ಹುಲ್ಲಿನಿಂದ ಮಾಡಿರುವುದು. ಹೇಳಿ ಗುರುಗಳೇ ಮುಜುಗರ ಪಟ್ಟುಕೊಳ್ಳಬೇಡಿ. ರಾಜನೇ ಖುದ್ದಾಗಿ ಬಂದು ತಮ್ಮ ಕೊರತೆ ಪೂರೈಸುವುದಾಗಿ ಹೇಳುವಾಗ ಹೇಳಿ ಗುರುಗಳೇ. ಅದಕ್ಕೆ ಋಷಿ ಹೇಳಿದ, "ಪ್ರೇಮವೇ ತುಂಬಿದ ಬಳಿಕ ಕೊರತೆ ಎಲ್ಲಿದೆ. ಪ್ರೇಮವೇ ಸಂಪತ್ತು. ಅದು ಇರುವಾಗ ಎಲ್ಲಾ ಸಂಪದ್ಭರಿತವಾಗಿರುತ್ತದೆ. ಪ್ರೇಮ ಕೊರತೆಯಾದರೆ ಕೊರತೆ. ನನಗೇನು ಕೊರತೆ ಇಲ್ಲ. ನನ್ನ ಪತ್ನಿ ಇದ್ದಾಳೆ. ಅವಳಿಗೆ ಏನಾದರೂ ಕೊರತೆ ಇದ್ದರೆ ಪೂರೈಸಿ" ಎಂದರು. ರಾಜ ಋಷಿಯ ಪತ್ನಿ ಬಳಿ ಬರುತ್ತಾನೆ. ಆಕೆಯ ಸೀರೆ ಹರಿದಿತ್ತು. ಕೆಲಸ ಮಾಡುತ್ತಾ ಕುಳಿತಿದ್ದಳು. ರಾಜ ಕೇಳಿದ, "ತಾವು ಋಷಿಗಳ ಪತ್ನಿ. ತಮ್ಮಂತವರು ನಮ್ಮ ರಾಜ್ಯದಲ್ಲಿರುವುದೇ ಸೌಭಾಗ್ಯ. ನಮ್ಮ ರಾಜ್ಯದಲ್ಲಿರುವಾಗ ತಮ್ಮಂಥವರು ಕೊರತೆಯಿಂದ ಬೀಳಬಾರದು. ಏನಾದರೂ ಬೇಕಾದರೆ ಹೇಳಿ, ರಾಜನೇ ನಿಮ್ಮ ಮುಂದೆ ಸಹಾಯ ಮಾಡುತ್ತೇನೆ ಎಂದಾಗ ಮುಜುಗರ ಪಟ್ಟುಕೊಳ್ಳದೆ ಕೇಳಿ" ಎಂದನು. ಆಗ ಋಷಿ ಪತ್ನಿ ಹೇಳಿದ್ದು ಹೀಗಿದೆ,

"ಹುಲ್ಲಿನದಾದರೇನು, ಹಾಸಲು ಚಾಪೆ ಇದೆ. ಮಣ್ಣಿನದಾದರೆ ಏನು, ನೀರು ಇಡಲು ಕೊಡ ಇದೆ. ಹರಿದರೆ ಏನಾಯಿತು, ಮೈ ಮುಚ್ಚಲು ಬಟ್ಟೆ ಇದೆ. ಇದಕ್ಕಿಂತ ಮಿಗಿಲಾಗಿ ಸದೈವ ಸಂತೋಷದಿಂದಿರುವ ಪತಿ ಇದ್ದಾರೆ. ನನಗೇನು ಕೊರತೆ" ಎಂದಳು. ಮನಸ್ಸಿನಲ್ಲಿ ಮತ್ತು ಹೊರಗೆಲ್ಲ ಪ್ರೀತಿಯ ಸದ್ಭಾವ ತುಂಬಿರುವಾಗ ಕೊರತೆ ಎಲ್ಲಿ ಕಾಣುತ್ತದೆ. ನಿಜವಾದ ಸಂಪತ್ತು ಏನಾದರೂ ಇದ್ದರೆ ಅದು ಪ್ರೀತಿ. ಅಲ್ಲವೇ?

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ