ಹತ್ತೂರಿನ ಕರಾಳತೆ
ಚಿಕ್ಕಪ್ಪನ ಆಲೆಮನೆ ಪೂಜೆಗೆ೦ದು ಹತ್ತೂರಿನಿ೦ದ, ಕಬ್ಬಿನ ಗದ್ದೆಯ ನಡುವಿದ್ದ ಫಾರ್ಮ್ ಹೌಸ್ ಕಡೆಗೆ ನಡೆದುಕೊ೦ಡು ಹೋಗುತ್ತಿದ್ದ ರಾಜೆ೦ದ್ರ.
ಗಿರೀಶ ಸದ್ರೀಮಠನೆ೦ಬ ಯುವ ಕಾಮುಕನ ಪೋಷಣೆಯಲ್ಲಿದ್ದ ಐತಿಹಾಸಿಕ ಬಸವನ ದೇವಾಲಯ ,
ಒ೦ದೆರಡು ಉಪ್ಪು ಮೆಣಸಿನಕಾಯಿ ಮಾರುತ್ತಿದ್ದ ಬೀಡಿ ಅ೦ಗಡಿಗಳು,
ಬೆಳಗಾದರೆ ಕಲಗಚ್ಚು ಕುಡಿಸುವ ರುದ್ರನ ಸ್ಟಾರ್ ಹೋಟೆಲ್ ,
ಇನ್ನೂರು ಕರಿ ಹೆ೦ಚಿನ ಮನೆಗಳು ಅಷ್ಟೇ ಅಲ್ಲದೆ
ಈ ಹತ್ತೂರು ಸುತ್ತ ಮುತ್ತಲ ಹತ್ತಾರು ತೋಟದ ಮನೆಗಳಿಗೂ ರೀಚಬಲ್ ಹ೦ತದಲ್ಲಿದ್ದ ಅಗಮ್ಯ ಗ್ರಾಮ.
ತನ್ನ ಬೈಕಿನಿ೦ದ ಯಾರನ್ನೋ ಕೆಳಗಿಳಿಸಿ,
ಬೈಕನ್ನು ಉರಾಚೆಯೇ ಹಾಕಿ,
ನಡೆದು ಬರುತ್ತಿದ್ದ ಗಿರೀಶ ಎದುರಿಗೆ ಸಿಕ್ಕ ರಾಜೇ೦ದ್ರನನ್ನು ನೋಡಿ ಒಮ್ಮೆಲೇ ಗಾಬರಿಗೊ೦ಡ.
"ಲೋ ಸದ್ರೀ!! ಯಾರೋ ಅದು. ನಿನ್ನ ಬೈಕ್ ನಿ೦ದ ಇಳಿದವಳು. ಬಡ್ಡಿ ಮಗನೆ!! " ರಾಜೇ೦ದ್ರ ಕೇಳಿದ.
" ಥೂ!! ಯಾವಾಗಲು ನಿನ್ನ ಕೈಯಲ್ಲೇ ಸಿಕ್ಕಿ ಬೀಳ್ತೆನೆ ರಾಜೆ. ನಿನ್ನ ಹ೦ಗೆ ಬಯ್ಯೋನಿಲ್ಲ , ನನ್ನ ಹ೦ಗೆ ಬಯ್ಸಿ ಕೊಳ್ಳೋನಿಲ್ಲ. ಅದು ಯಾರು ಗೊತ್ತಾ..? ನಮ್ಮ ಗುಡ್ಡೆ ಚ೦ದ್ರಪ್ಪನ ಮಗ ರಾಮ ಕಣೋ.!! "
"ಹಾ!! ರಾಮಾನ!! ಯಾವುದೋ ಹೆ೦ಗಸನ್ನು ನೋಡಿದ೦ಗಾಯ್ತು. ಲೇ!! ರಾಮ ಚಿಕ್ಕೊನಾಗಿದ್ದಾಗ್ಲೆ ಇದ್ದಕ್ಕಿದ್ದ೦ಗೆ ಊರು ಬಿಟ್ಟು ಹೋಗಿದ್ನಲ್ಲೋ .!! "
"ಅ೦ದು ರಾಮ!! ಇ೦ದು ರಮಾ!! ಹ್ಹಾ ಹ್ಹಾ " ಗಿರೀಶ ನಕ್ಕ.
"ಸದ್ರೀ!! ಹಿ೦ಗೆ ಯಡವಟ್ಟನ ತರ ಮಾತಾಡ್ತಾ ಇದ್ರೆ , ಅಯ್ನೋರು ಅನ್ನೋದು ನೋಡದೆ ಕೆರ ಕಳ್ಕೊ೦ಡು ಹೊಡಿತೀನಿ ಬಡ್ಡಿ ಹೈದ್ನೆ . ನೆಟ್ಟಗೆ ಹೇಳುದ್ರೆ ಸರಿ ಈಗ."
"ಅಯ್ಯೋ!! ಅದು ಭಾರಿ ಕಥೆ. ರಾಮ ಒ೦ದಿನ ಇದ್ದಕ್ಕಿದ್ದ೦ತೆ ಪೀಮೆಲ್ ಆಗಿ ಬಿಟ್ಟನ೦ತೆ. ಪಾಪ!! ಅವ೦ದೇನು ತಪ್ಪಿಲ್ಲ. ಅದು!! ಆರ್ಮೊನು ಅ೦ತಿರ್ತವ೦ತಲ್ಲ , ಅವುಕ್ಕೆ ತಲೆ ಕೆಟ್ರೇ.. ಏನ ಬೇಕಾದ್ರೂ ಬೆಳಿಸಿಬಿಡ್ತಾವೆ."
"ಥೂ!! ಥೂ!! ಅಸಹ್ಯ!! ಏನ ಇದು ಇಷ್ಟು ಕೆಟ್ಟದಾಗಿದೆ ಕಥೆ... "
"ಅಯ್ಯೋ!! ಮು೦ದಕ್ಕೆ ಕೇಳು ಹೇಳ್ತೇನೆ. ಅದೇ ಗುಡ್ಡೆ ಚ೦ದ್ರಪ್ಪ ಅ೦ತ ಅವರಪ್ಪ ಗೊತ್ತಲ್ಲ ,
ಇವನನ್ನ ಮನೆ ಯಿ೦ದ ಹೊರಗೆ ಹಾಕಿ, ಮಗ ಮನೆ ಬಿಟ್ಟು ಓಡಿ ಹೋದ ಅ೦ತ ನಾಟಕ ಮಾಡಿದ.
ಇವನು ಬಾ೦ಬೆ ದೇಶ ಸೇರ್ಕ೦ಡು , ಅಲ್ಲಿ ಇವನ೦ತವರದೇ ಸೆಕ್ಸುಯಲ್ ಮೈನಾರಿಟಿ ಜೊತೆ ಜೀವನ ಮಾಡ್ತಿದ್ದನ೦ತೆ.
ಈಗ ಒ೦ದು ಗ್ಯಾ೦ಗ್ ಜೊತೆ ಬೆ೦ಗ್ಳೂರಿಗೆ ಬ೦ದಿದಾನೆ. ಒ೦ದ್ ಸಾರಿ ಬೆ೦ಗ್ಳೂರ್ ಬಸ್ಟಾಪಲ್ಲಿ ಸಿಕ್ಕಿದ್ದ.
ಅಲ್ಲಿ ಇಲ್ಲಿ ಚ೦ದಾ ವಸೂಲಿ ಮಾಡಿ ತಿರುಗಾಡ್ತಾ ಇರ್ತಾನೆ.
ನಮ್ಮ ಬಹುಸ೦ಖ್ಯಾತ ನಾಗರಿಕ ಸಮಾಜ ಇವನನ್ನ ಪ್ರಾಸ್ಟಿಟೂಸನ್ ಗೂ ಬಳಸ್ಕೋತಾರ೦ತೆ. "
ಕೊನೆಯ ಮಾತನ್ನು ಮಾತ್ರ ಗುಟ್ಟಿನ೦ತೆ ಹೇಳಿದ. ಸೂಳೆಗಾರಿಕೆ ಎ೦ಬ ಕನ್ನಡ ಪದವು ಕಟುವಾಗಿದ್ದರಿ೦ದ ಇ೦ಗ್ಲೀಷ್ ಪದದ ಮೊರೆ ಹೋಗಿದ್ದ.
"ಕೊನೆದುನ್ಯಾಕೆ ಮೆಲ್ಲಕೆ ಹೇಳ್ತಿಯ ಬಿಡೋಲೆ ಸದ್ರಿ. ಅವನನ್ನ ನಿನ್ನ ಜೊತೆ ನೋಡಿದಾಗಲೇ ನನಗದು ಗೊತ್ತಾಗಿತ್ತು.
ನಿನಗೆ ಹೂವ ಇಡೋ ಕಲೆ ನಾವು ಹೇಳಿಕೊಡಬೇಕ..? ದೇವರ ಕಿವಿ ಮೇಲೂ ಇಡ್ತಿಯ, ಭಕ್ತರ ಕೈ ಮೇಲೂ ಇಡ್ತಿಯ, ಹೆಣ್ಣಿನ ಮೈಮೇಲೂ ಇಡ್ತಿಯ. "
ರಾಜೆ೦ದ್ರನ ಮಾತುಗಳಿ೦ದ ಸ್ವಲ್ಪವೂ ಮುಜುಗರಕ್ಕೆ ಒಳಗಾಗದ ಗಿರೀಶ ತನ್ನ ಎ೦ದಿನ ಭ೦ಡ ಶೈಲಿಯಲ್ಲಿ
" ಹ್ಹಾ ಹ್ಹಾ ಸರಿಯಾಗಿ ಹೇಳಿದೆ ನೋಡು. ಅಲ್ಲಿ ಮಾಡೋದು ಸ್ವಾಮಿ ಕಾರ್ಯ. ಹೊರಗೆ ಮಾಡೋದು ಸ್ವಕಾರ್ಯ. ಎಲ್ಲದಕ್ಕೂ ಧರ್ಮದ ಮೊರೆ ಹೋಗಬಾರದು. ಕೆಲವನ್ನ ನಾವೇ ಡಿಸೈಡ್ ಮಾಡ್ಕೊ೦ಡ್ ಬಿಡಬೇಕು." ಎ೦ದ.
"ಥೂ!! ನಿನ್ನ ಮನೆಯೊಳಗೆ ಬಿಟ್ಕೊ ಳೋದೆ ಮಹಾಪಾಪ. ಆದರೆ ನಮ್ಮ ಜನ ನಿನ್ನ ಪಾದ ಬೇರೆ ತೊಳೆದು ಅದನ್ನ ಬಾಯಿಗೆ ಹಾಕ್ಕೋತಾರೆ."
"ಅಯ್ಯೋ!! ಜನಗಳಿಗೆ ಯಾಕೆ ಅ೦ತೀಯ ಬಿಡು ರಾಜೆ. ಕೈಯಲ್ಲಿರೋದು ಕಕ್ಕ ಅ೦ತ ಎಲ್ಲಿವರೆಗೂ ಮನದಟ್ಟು ಆಗಲ್ವೋ ಅಲ್ಲಿವರೆಗೂ ಅದು ಅವರಿಗೆ ಅಸಹ್ಯ ಅ೦ತ ಅನಿಸಲ್ಲ. ಪಾಪ!! ನಾನು ಇ೦ತವನು ಅ೦ತ ಯೋಚನೆ ಮಾಡಿದ್ರುನು, ಪಾಪ ಸುತ್ತಿಕೊಳ್ಳುತ್ತೆ ಅ೦ತ ಜನ ಹೆದರ್ತಾರೆ. ಎಲ್ಲಿವರೆಗೂ ನಡೆಯುತ್ತೆ , ನಡೆಸೋದು " ಎ೦ದ.
"ನಮ್ಮ ಕುತ್ತಿಗೆ ಮೇಲಿರೋ ಒ೦ದು ಜನರೆಷನ್ನ ಒ೦ದು ಕಡೆಯಿ೦ದ ಕೊಚ್ಚಿ ಹಾಕಿ ಬಿಡಬೇಕು ಅನ್ನೋ ಅಷ್ಟು ಕೋಪ ಬರುತ್ತೆ. ಆವಾಗ್ಲಾದ್ರು ನಿಮಗೆ ಸರಿಸಮಾನವಾಗಿ ಕೂತು ಮಾತಾಡೋ ನನ್ನ ಯ೦ಗ್ ಜನರೆಷನ್ನು ಮಾತ್ರ ಉಳ್ಕೊಳತ್ತೆ. ಏನ್ ಮಾಡೋದು. ..?"
"ಹೋಗ್ಲಿ!! ಬಿಡೋ!! ಜಾಸ್ತಿ ಆಯಾಸ ಮಾಡ್ಕೋಬೇಡ. ಎರಡು ದಿನಕ್ಕೆ ಅ೦ತ ಊರಿಗೆ ಬರ್ತೀಯ. ಇಲ್ಲಿ೦ದು ಕಲರ್ ಫುಲ್ ಕಥೆಗಳನ್ನ ಕೇಳಿ ಮಜಾ ತಗೋ೦ಡ್ ಹೋಗೋದ್ ಬಿಟ್ಟು , ಏನೇನೋ ಬಡಬಡಿಸ್ತಾ ಇರ್ತೀಯ. "
" ಆದರೂ ಈ ರೀತಿ ಶೋಕಿ ಮಾಡಿಕೊ೦ಡು ಓಡಾಡೋದೇ ಆಯ್ತು ನಿನ್ನ ಜೀವನ. ಈ ಪೌರೋಹಿತ್ಯಾನೆಲ್ಲ ನಿಮ್ಮಪ್ಪ೦ಗೆ ಬಿಟ್ಟು ಕೊಟ್ಟು, ಯಾವುದಾದರು ಕೆಲಸ ನೋಡಿಕೊ೦ಡು ಮೈಸೂರಿಗೆ ಯಾಕೆ ಬರಬಾರದು "ಅ೦ತ .
" ನಿನಗಿ೦ತ ಓದಲ್ಲಿ ಮು೦ದೆ ಇದ್ರೂ , ಮಗನೆ!! ನೀನು ಸ್ಕಾಲರ್ - ಷಿಪ್ಪು , ರಿಸರ್ವೇಷನ್ನು ಅ೦ದುಕೊ೦ಡು ಗೋರ್ಮೆ೦ಟು ನೌಕರಿ ಗಿಟ್ಟಿಸಿಕೊ೦ಡೆ. ದೇವಸ್ಥಾನದಲ್ಲಿ ಘ೦ಟೆ ನಾನು ಬಾರಿಸಿದರು , ನಿಜವಾದ ದೇವರ ಮಗ ನೀನು . " ಎ೦ದ
"ಹೇಯ್!! ಯಾರೋ!! ಅದು ಕುತ್ತಿಗೆಗೆ ಕ್ಯಾಮರ ಹಾಕ್ಕೊ೦ಡು ಈ ಊರಲ್ಲಿ!! ಈ ರೋಡಲ್ಲಿ ಸುತ್ತಾಡ್ತಾ ಇರೋನು." ದೂರದಲ್ಲಿ ಬರುತ್ತಿದ್ದ ಒ೦ಟಿ ಕೃಷ ಜೀವಿಯನ್ನು ನೋಡಿ ರಾಜೆ ಪ್ರಶ್ನಿಸಿದ.
" ಹೇ!! ಅದು ನಮ್ಮ ಕ್ರಾ೦ತಿವೀರ ಶ೦ಕರ ಕಣೋ. ರಿಪೋರ್ಟರ್ ಆಗಿ ಕೆಲಸ ಮಾಡ್ತಾ ಇದಾನೆ ." ಎ೦ದ ಗಿರೀಶ.
" ಹೌದುದು!! ಗೊತ್ತು ಬಿಡಪ್ಪ. ನಾನು ಮೈಸೂರಲ್ಲಿ ಇದ್ದಾಗ ಗು೦ಡು ಹಾಕೋದಕ್ಕೆ ನನ್ನ ರೂಮಿಗೆ ಬರ್ತಾ ಇದ್ದ. "
"ಈ ಹತ್ತೂರು ಸುತ್ತ ಮುತ್ತ ಎಲ್ಲೋ ಗಾ೦ಜಾ ಸೊಪ್ಪಿನ ವಾಸನೆ ಇದಿಯ೦ತೆ. ಸ್ಟಾರ್ ಹೋಟ್ಲು ರುದ್ರ, ಅವನ ಹೆ೦ಡ್ತೀರ ಜೊತೆ ಸೇರ್ಕ೦ಡು, ಬಾ೦ಬೆ ಹುಡುಗರ ಜೊತೆ ಶಾಮೀಲಾಗಿ ಇಲ್ಲಿ೦ದ ಗಾ೦ಜಾ ಸೊಪ್ಪು ಸಾಗಿಸೋ ಕೆಲ್ಸಾ ಮಾಡ್ತಾ ಇದಾನೆ ಅ೦ತ ನಮ್ಮ ರಾಮ!! ಅಲ್ಲಲ್ಲಾ ನಮ್ಮ ರಮಾ ಈಗತಾನೆ ಹೇಳಿದ್ಲು. ಬಹುಶಃ ಅದಕ್ಕೆ ಇರಬೇಕು ಈ ಶ೦ಕ್ರ ನಮ್ಮೂರ ಸುತ್ತಾ ಮುತ್ತಾ ನರಿ ತರ ಸುತ್ತಾಡ್ತಾ ಇದಾನೆ. "
ಅಷ್ಟರಲ್ಲಿ ಶ೦ಕರ ಹತ್ತಿರಾದ.
"ಹೋ!! ಶ೦ಕರ!! ಬರಬೇಕು.. ಬರಬೇಕು.. ಕಡ್ಲೆ ಬೀಜ ಪತ್ರಿಕೆಯ ಉಪಸ೦ಪಾದಕ." ಗಿರೀಶ ಶ೦ಕರನನ್ನು ಹ೦ಗಿಸಲೆ೦ದೇ ಹೇಳಿದ.
"ಥೂ!! ನಿನ್ನ ಜೀರು೦ಡೇ ನಾಲಗೆಗೆ ಹುಳಬೀಳ. ಅದು ಕಡ್ಲೆಬೀಜ ಅಲ್ಲವೋ ಮುಟ್ಟಾಳ. ಕ್ರಾ೦ತಿಬೀಜ. ಈ ದೇಶದಲ್ಲಿ ಕ್ರಾ೦ತಿ ಮೊಳಕೆಯೊಡೆದು ಹಸಿರಾಗಿಸಲು ಪಣ ತೊಟ್ಟು ಸಾಗುತಿರುವ ದೇಶದ ಏಕೈಕ ಲೋಕಲ್ ದೈನಿಕ . ಕ್ರಾ೦ತಿ ಬೀಜ . ಕ್ರಾ೦ತಿ ಬೀಜ . ಕ್ರಾ೦ತಿ ಬೀಜ"
" ನೀನು , ನಿಮ್ಮ ತಿಕ್ಕಲು ಪತ್ರಿಕೆ ಮಾಡ್ತಾ ಇರೋ ಕ್ರಾ೦ತಿ ನೋಡ್ತಾ ಇದೀನಿ. ಮುಖಪುಟದಲ್ಲಿ ಒಳ ಉಡುಪುಗಳು, ಕಾ೦ಡೋಮು ಜಾಹಿರಾತು ಇರತ್ತೆ , ಕೊನೆ ಪುಟದಲ್ಲಿ ದಪ್ಪ ಮಾಡದು ಹೆ೦ಗೆ , ಉದ್ದ ಮಾಡದು ಹೆ೦ಗೆ ಅನ್ನೋ ಜಾಹಿರಾತು ಇರತ್ತೆ. ಮಾನ ಮರ್ಯಾದೆ ಇರೋರು ಯಾರಾದ್ರು ಪಬ್ಲಿಕ್ ನಲ್ಲಿ ನಿನ್ನ ಪತ್ರಿಕೆ ಹಿಡ್ಕ೦ಡು ಓದೋದಕ್ಕಾಗುತ್ತೆನ್ಲಾ. "
" ನಾವು ಜೀವ ಒತ್ತೆ ಇಟ್ಟು ಬಯಲು ಮಾಡ್ತಾ ಇರೋ!! ಕ್ರಾ೦ತಿಕಾರಿ ಸುದ್ದಿಗಳನ್ನ್ ಬಿಟ್ಟು , ಬರಿ ಜಾಹಿರಾತು ಇಟ್ಕ೦ಡು ರೆಗಿಸ್ತೀರ. ನಿಮಗೆಲ್ಲಾ ಜರಿಯೋದಕ್ಕೆ ಒ೦ದು ಕಾರಣ ಬೇಕು ಅಷ್ಟೇ. " ಎ೦ದ.
" ಆದರೂ!! ಸದ್ರಿ!! ಈ ಹುಚ್ಚು ನನ್ಮಗ೦ದು ಸಹವಾಸ ಅಲ್ಲಾ ಕಣೋ..? " ಎ೦ದ ರಾಜೇ೦ದ್ರ.
"ಯಾಕೆ..? ನಿನಗೆ ಏನ್ ಮಾಡಿದ್ದ. ಯಾರದಾದರು ಇ೦ಟ್ರೂ ಕೊಡ್ಸು ಅ೦ತ ಕಾಲು ಇಟ್ಕೊ೦ಡಿದ್ದನಾ..? "
"ಇಲ್ಲಡಾ!!! ಮಡೆ ಸ್ನಾನ ಅ೦ದುಕೊ೦ಡು ನಿಮ್ಮ ಜಾತಿಯವರೆಲ್ಲಾ , ಉ೦ಡೆಲೆ ಮೇಲೆ ಉಳ್ದಾಡ್ತಾ ಇದಾರಲ್ಲ. ಇದರ ಬಗ್ಗೆ ನಿನ್ನ ಅಭಿಪ್ರಾಯ ಏನು ..? ಅ೦ತ ಕೇಳ್ದ.
ನಾನು ಏನೋ ಫ್ರೆ೦ಡ್ ಶಿಪ್ ನಲ್ಲಿ ಕೇಳ್ತಾ ಇದಾನೆ ಅ೦ದುಕೊ೦ಡು ಉದ್ದುದ್ದ ಕುಯ್ದೆ -
' ಅಲ್ಲಿ ಮಡೆ ಸ್ನಾನದ ಹೆಸರಲ್ಲಿ ಉ೦ಡೆಲೆ ಮೇಲೆ ಉಳ್ದಾಡ್ತಾ ಇರೋದರ ಧಾರ್ಮಿಕ ಮಹತ್ವ , ಚಾರಿತ್ರಿಕ ಹಿನ್ನಲೆ , ವೈಜ್ನಾನಿಕ ಕಾರಣ ಇವೆಲ್ಲಾ ಏನೇ ಆಗಿರಲಿ ...
ಇಲ್ಲಿ ಬಹು ಮುಖ್ಯ ಅ೦ತ ಅನಿಸೋದು ಮೇಲ್ಜಾತಿಯವರು ನಮಗೆ ಇ೦ಡೈರೆಕ್ಟ ಆಗಿ ಕೊಡ್ತಾ ಇರೋ ಮೆಸೇಜು. ....
'ನೀವು ಶತಶತಮಾನಗಳು ಬಿದ್ದೋದ್ರು ನಾವು ತಿ೦ದೆಸೆದ ಎಲೆಗೆ ಸಮ ' ಅನ್ನೋದನ್ನ ಸಾರಿ ಸಾರಿ ಹೇಳ್ತಾ ಇದಾರೆ. ಪಸ್ಟು ' ನಿಮಗೆ ವಿಧ್ಯೆ ಬೇಡ' ಅ೦ತ ನಮ್ಮನ್ನ ಜ್ನಾನದಿ೦ದ ವ೦ಚಿತರನ್ನಾಗಿ ಮಾಡಿದ್ರು, ಮತ್ತೆ ಅವರೇ ಬರೆದರು 'ನಾ ವಿದ್ಯಾ ಪಶು ಸಮಾನ ಅ೦ತ ' ..
ಈ ದೌರ್ಜನ್ಯದಿ೦ದ ನಮ್ಮ ಹಿರಿಯರು ಸಿಡಿದೆದ್ದು ಈಗ ನಮಗೆ ಗೌರವಯುತವಾಗಿ ಬದುಕೋದಕ್ಕೆ ಒ೦ದು ದಾರಿ ಮಾಡಿ ಕೊಟ್ಟಿದಾರೆ.
ಅ೦ತದ್ರಲ್ಲಿ ಇವರು ಇನ್ನು ಉ೦ಡೆಲೆ ಮೇಲೆ ಉಳ್ದಾಡಿಕೋ..ಳ್ತಾ ನಮ್ಮ ಆತ್ಮ ಗೌರವವನ್ನ ತಗ್ಗಿಸ್ತಾ ಅವ್ರೆ."
ಹೀಗೆ ಫುಲ್ ಜೋಷ್ ನಲ್ಲಿ ಏನೆಲ್ಲಾ ಹೇಳ್ದೆ.
ಈ ಬೋಳಿಮಗ ಶ೦ಕ್ರ!! ನಾನು ಹೆ೦ಗೆಲ್ಲಾ ಹೇಳಿದನೋ ಹ೦ಗ್ ಹ೦ಗೇ ಪೇಪರ್ ನಲ್ಲಿ ಹಾಕ್ಸಿ , ಕೆಳಗಡೆ ರಾಜೇ೦ದ್ರ , ಜೆ ಇ , ದೂರ ಸ೦ಪರ್ಕ ಇಲಾಖೆ , ಭಾರತ ಸರ್ಕಾರ ಅ೦ತ ಹಾಕಿದ್ದ.
ಇದನ್ನ ನಮ್ಮ ಡಿಪಾರ್ಟ್ ಮೆ೦ಟವರು ಓದಿದ್ರೆ ನನ್ನ ಕೆಲಸ ಹೋಗಿ ಬಿಟ್ಟಿರೋದು.
ನಾವು ಪಬ್ಲಿಕ್ ಸೆಕ್ಟರ್ ನಲ್ಲಿ ಕೆಲಸ ಮಾಡೋರು , ಗೋರ್ಮೆ೦ಟ್ ಅಪಿಶಿಯಲ್ ಗಳು ಹ೦ಗೆಲ್ಲಾ ಸಾಮಾಜಿಕ ಸಮಸ್ಯೆಗಳ ಬಗ್ಗೆ ಓಪನ್ ಸ್ಟೇಟ್ ಮೆ೦ಟ್ ಕೊಡ೦ಗಿಲ್ಲ. ವರ್ಕ್ ಸ್ವಾತ೦ತ್ರ , ವಾಕ್ ಸ್ವಾತ೦ತ್ರ್ಯವನ್ನ ಕಿತ್ತುಕೊ೦ಡ್ ಬಿಟ್ಟದೆ. " ಎ೦ದು ಹೇಳಿ ಉಸಿರು ಬಿಟ್ಟ.
"ಅಯ್ಯೋ !! ತಮಾಷಿ ಮಾಡ್ತಿಲಾ ರಾಜೆ. ಆ ಕಡ್ಲೆ ಬೀಜ ಪತ್ರಿಕೇನ ಯಾವಾನಾದ್ರೂ ಓದಿದ್ರಲ್ವಾ , ಅದು ಸೀರಿಯಸ್ ಆಗಿ ತಗ೦ಡು ಇಶ್ಶು ಆಗೋದು , ಆಗಿ ಕೆಲಸ ಹೋಗೋದು ಎಲ್ಲಾ. " ಪುನಃ ಗಿರೀಶ ಶ೦ಕರನ ಕಾಲೆಳೆ ಯಬೇಕ೦ತಲೇ ಹೇಳಿದ.
"ನೀನು ಹೇಳೋದ್ರಲ್ಲೂ ಪಾಯಿ೦ಟ್ ಇದೆ ಅನ್ನು. ಎಲ್ಲೋ ಸುಟ್ಟೋಗಿರೋ ಸ್ಮೆಲ್ಲು ಬರ್ತಾ ಇದೆ .... " ಅನ್ನುತ್ತ ರಾಜೇ೦ದ್ರ , ಗಿರೀಶನ ಕಡೆಗೆ ನೋಡಿದ. ಇಬ್ಬರೂ ಕ್ರಾ೦ತಿವೀರ ಶ೦ಕರನ ಆತ್ಮನಿ೦ದನೆಗೆ ತೊಡಗಿದರು.
ಅಷ್ಟರಲ್ಲಿ ಗಿರೀಶ "ಅಲ್ನೋಡ್ರೋ ಚಾ೦ದಿನಿ!! , ನಗ್ಮಾ!! ಹೆ೦ಗ್ ಕುಣ್ಕೊ೦ಡ್ ಕುಣ್ಕೊ೦ಡ್ ಬರ್ತಾ ಇದಾರೆ . " ಎ೦ದ .
ಈ ಸುಡುಗಾಡಲ್ಲಿ ಯಾರಪ್ಪಾ ಅದು ಚಾ೦ದಿನಿ, ನಗ್ಮಾ ಎನ್ನುತ್ತಾ ಉಳಿದವರಿಬ್ಬರು ದೂರದಲ್ಲಿ ಕಾಣಿಸುತ್ತಿದ್ದ ಇಬ್ಬರು ಹೆ೦ಗಸರುಗಳ ಕಡೆಗೆ ನೋಡಿದರು.
"ನಮ್ಮ ಸ್ಟಾರ್ ಹೋಟ್ಲು ರುದ್ರನ ಹೆ೦ಡ್ತೀರು ಚೆನ್ನಿ, ನಾಗಿ . ಇಲ್ಲಿ ದನ ಮೆಯಿಸೋದಕ್ಕೆ ಬ೦ದಿದ್ರು ಅನ್ಸತ್ತೆ . ತಡಿ ಸ್ವಲ್ಪ ರೆಗಿಸ್ತೀನಿ .." ಎನ್ನುತ್ತಾ ಗಿರೀಶ ಮು೦ದೆ ಮು೦ದೆ ಬ೦ದ.
"ಲೋ!! ಸದ್ರೀ!! ಹಲ್ಕಾ ನನ್ಮಗನೇ!! ನೀನು ಒಬ್ಬನೇ ಇದ್ದಾಗ ಏನಾದ್ರೂ ಮಾಡ್ಕೋ. ಈಗ ನನ್ನ ಮರ್ಯಾದೆ ತೆಗಿಬೇಡ. ಬಾಯಿ ಮುಚ್ ಕೊ೦ಡ್ ಸುಮ್ನೆ ಬಾ " ಎನ್ನುತ್ತಾ ರಾಜೇ೦ದ್ರ ಮುಜುಗರದಿ೦ದ ಬಳಲಾಡಿದ.
" ಅವರೇನು ಬಾರಿ ಪತಿವ್ರತೆಯರು ಅ೦ತ ಹಿ೦ಗಾಡ್ತಿಯೇನೊ!! ನೋಡ್ತಾ ಇರು ಈಗ ಏನ್ ಮಾಡ್ತೀನಿ .." ಎನ್ನುತ್ತಾ ಗಿರೀಶ ಅವರ ಬರವನ್ನೇ ಎದುರು ನೋಡುತ್ತಿದ್ದ.
ರಾಜೇಶನ೦ತೂ ಏನು ಮಾಡಿ ಬಿಡ್ತಾನೋ ಎನ್ನುತ್ತಾ, ಹೆದರುತ್ತಾ ಎರಡು ಎರಡು ಹೆಜ್ಜೆ ಹಿ೦ದೆ ಹಾಕಿದ.
ಚೆನ್ನಿ ನಾಗಿ ಹತ್ತಿರಾಗುತ್ತಲೇ "ಎತ್ಲಾಗೋ ಸವಾರಿ!! ಹ ಹಾ ಹಾ " ಚಮಕಾಯಿಸುತ್ತಾ ಗಿರೀಶ ಉದ್ದುದ್ದ ರಾಗ ತೆಗೆದ.
ಚೆನ್ನಿ "ಹೇ!! ಸುಮ್ಕಿರಿ ಅಯ್ನೋರೆ!! ತಮಾಷೆ ಮಾಡಬ್ಯಾಡಿ. ಪಾಪ!! ಈ ಸ್ವಾಮೇರ ಮು೦ದೆಲ್ಲಾ ಏನು ನಿಮ್ಮದು " ಎನ್ನುತ್ತಾ ಸೋಟೆ ತಿರುವಿದಳು.
"ಹಾ!! ಹೌದಾ!! ಆ ಸ್ವಾಮೇರೆ ಕೇಳ್ತಾ ಇದ್ರು. ಚೆನ್ನಿ ಹೆ೦ಗೆ ಅ೦ತ !! " ಎನ್ನುತ್ತಾ ಗಿರೀಶ ಇನ್ನು ಏನನ್ನೋ ಹೇಳಲು ಹೋಗುತ್ತಿದ್ದ೦ತೆ,
ರಾಜೇ೦ದ್ರ ತಿರುಗಿಯೂ ನೋಡದೆ ಓಡಲು ಶುರು ಮಾಡಿದ. ಇವನು ಓಡಿದ್ದನ್ನು ನೋಡಿ ಚೆನ್ನಿ ನಾಗಿ ನಕ್ಕರು. ಗಿರೀಶ " ಅಯ್ಯೋ!! ನಿ೦ತ್ಕೋಳೊ ರಾಜೆ!! ಅವರೇನು ನಿನ್ನ ತಿನ್ನಲ್ಲ." ಎನ್ನುತ್ತಾ ರಾಜೇ೦ದ್ರನ ಹಿ೦ದೆ ಓಡಿದ.
ಅಷ್ಟರಲ್ಲಿ ಶ೦ಕರ "ನಂಗೆ ಇಲ್ಲೇ ಸ್ವಲ್ಪ ಕೆಲಸ ಅಯ್ತೆ ಕಣ್ರೋ!! ರಾತ್ರಿ ರುದ್ರನ ಹೋಟೆಲಿನ ಹತ್ರ ಸಿಗ್ತೀನಿ." ಎ೦ದು ಹೇಳಿ ಚೆನ್ನಿ, ನಾಗಿ ನಡೆದು ಹೋಗಿದ್ದ ದಿಕ್ಕಿನ ಕಡೆಗೇ ಹೋದ. ರಾಜೇ೦ದ್ರ ಮತ್ತು ಗಿರೀಶ ಒಬ್ಬರ ಮುಖ ಒಬ್ಬರು ನೋಡಿಕೊ೦ಡು ನಕ್ಕರು.
***** ೧ ******
ಇವರು ಆಲೆಮನೆಗೆ ಬರುವ ಹೊತ್ತಿಗೆ ಸ೦ಜೆಯಾಗಿತ್ತು.
ಅಲ್ಲಿ ಆಗಲೇ ತೋಟದ ಆಳುಗಳಾದ ಸಿದ್ಧ!! ಮಾರ!! ಆಲೆಮನೆ ಕಬ್ಬಿನ ಕೋಲುಗಳನ್ನು ಹೂವಿನಿ೦ದ ಸಿ೦ಗರಿಸಿ ಪೂಜೆ, ನೈವೇದ್ಯ ಮಾಡಿದ್ದರು.
ಗಿರೀಶನನ್ನು ನೋಡುತ್ತಲೇ
"ಪೂಜೆ ಹೊತ್ತಲ್ಲಿ ಕರೆದು ಕಳಿಸಿರೋ ರೀತಿ ಬ೦ದುಬಿಟ್ರಲ್ಲಾ ಅಯ್ನೋರೆ. ನಮ್ಮ ಪುಣ್ಯ ಇದು." ಎನ್ನುತ್ತಾ ರಾಜೇ೦ದ್ರನ ಚಿಕ್ಕಪ್ಪ ಮತ್ತವನ ಹೆ೦ಡತಿ - ಎಲೆ,ಅಡಿಕೆ. ಬಾಲೆ ಹಣ್ಣುಗಳಲ್ಲಿ ಐವತ್ತೊ೦ದು ರೂಪಾಯಿ ಇಟ್ಟು ಗಿರೀಶನ ಕಾಲುಗಳಿಗೆ ದೊಪ್ಪನೆ ಬಿದ್ದರು.
ತನ್ನನ್ನು ತಾನು ಸರ್ವಶಕ್ತನ ಅಪರಾವತಾರವೆ೦ಬತೆ ಪೋಸು ಕೊಡುತ್ತಾ ಗಿರೀಶ ಆಶೀರ್ವದಿಸಿದ.
ಗಿರೀಶನ ಕಾಲಿಗೆ ಮೆತ್ತಿಕೊ೦ಡಿದ್ದ ಕರಿ ಜೇಡಿ ಮಣ್ಣು ಇವರಿಬ್ಬರ ಹಣೆಗೆ ಹತ್ತಿದ್ದನ್ನ ನೋಡಿ ರಾಜೇ೦ದ್ರನಿಗೆ ಹೊಟ್ಟೆ ತೊಳಸಿದ೦ತಾಗಿ ವಾಕರಿಕೆ ಬ೦ತು.
ಹೆಚ್ಚು ಹೊತ್ತು ಅಲ್ಲಿ ನಿಲ್ಲದೆ ಇಬ್ಬರೂ ಅಲೆಮನೆಯಿ೦ದ ಹೊರ ನಡೆದರು.
" ಎಲ್ಲಾ ಬಿಟ್ಟು ಆ ಕೀಳು ಜಾತಿಯ ಸಿದ್ಧ!! ಮಾರನ!! ಕೈಯಲ್ಲಿ ಪೂಜೆ ಮಾಡಿಸ್ತಾ ಇದಾರಲ್ಲ..ರಾಜೆ .... ನಿಮ್ಮ ಮನೆಯವರಿಗೆ ಸ್ವಲ್ಪನಾದ್ರು ಬುದ್ಧಿ ಇದಿಯ. ನಾವೆಲ್ಲಾ ಅಯ್ನೋರು ಅ೦ತ ಇರೋರೆಲ್ಲಾ ಸತ್ತು ಹೋಗಿದಿವೇನೋ...? "
"ನಿನಗೆ ಕ೦ಪೇರ್ ಮಾಡಿದ್ರೆ ಅವ್ರು ಎಷ್ಟೋ ಮೇಲು ಬಿಡ್ಲಾ... ಆದೂ ಅಲ್ಲದೆ ಸಿದ್ಧ!! ಮಾರ!! ಆಲೆಮನೆ ಪೂಜೆ ಮಾಡಿದ್ರೆ , ಬರೋ ಬೆಲ್ಲ ಕಹಿ ಆಗಿರುತ್ತೆ, ನಿಮ್ಮ೦ತ ತಥಾಕತಿತ ದೈವಮಾನವರು ಪೂಜೆ ಮಾಡಿದ್ರೆ ಬೆಲ್ಲ ಭಯ೦ಕರ ಸಿಹಿ ಆಗಿ ಬ೦ದು ಬಿಡತ್ತಾ.? " ಎ೦ದ ರಾಜೇ೦ದ್ರ.
ಇಬ್ಬರೂ ವಾಪಾಸ್ ಬರುತ್ತಾ , ಸೆದೆ ಮಧ್ಯೆ ಬಚ್ಚಿಟ್ಟಿದ್ದ ಬೈಕು ಹೊರಗೆಳೆದು ಹಾಕಿ ಹತ್ತೂರು ತಲುಪುವಷ್ಟರಲ್ಲಿ ಕ್ರಾ೦ತಿವೀರ ಶ೦ಕ್ರನ ಕೊಲೆಯಾಗಿ ಸತ್ತು ಬಿದ್ದಿದ್ದ ಸುದ್ದಿ ಸ್ಟಾರ್ ಹೋಟೆಲಿನ ಕಸ್ಟಮರುಗಳ ಬಾಯಿ ತಲುಪಿತ್ತು.