ಹನಿ ಕಡಿಯದ ಮಳೆ

ಹನಿ ಕಡಿಯದ ಮಳೆ

ಪುಸ್ತಕದ ಲೇಖಕ/ಕವಿಯ ಹೆಸರು
ಶೋಭಾ ರಾವ್
ಪ್ರಕಾಶಕರು
ಶ್ರಾವಣ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೭೫.೦೦, ಮುದ್ರಣ: ೨೦೨೨

ಸಾಹಿತಿ ಶೋಭಾ ರಾವ್ ಅವರು 'ಹನಿ ಕಡಿಯದ ಮಳೆ' ಎಂಬ ಪ್ರಬಂಧ ಮಾಲೆಯನ್ನು ರಚಿಸಿದ್ದಾರೆ. ಈ ಕೃತಿಗೆ ಮಾಲಿನಿ ಗುರುಪ್ರಸನ್ನ ಅವರು ಬೆನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಬೆನ್ನುಡಿಯಲ್ಲಿ "ಸಿಕ್ಕಿದ್ದನ್ನು ಸಿಕ್ಕ ಹಾಗೆಯೇ ಬಳಸಲಾಗದ ಕೆಸ, ಕಳಲೆ ಬದುಕಿನಲ್ಲಿ ಸಂಸ್ಕರಣದ ಅಗತ್ಯವನ್ನು ಎತ್ತಿಹಿಡಿಯುತ್ತಲೇ ಬಾಯಲ್ಲಿ ನೀರೂರಿಸುತ್ತದೆ. ಯಾರು ಪಳಗಿಸಿದರು ಮೊದಲು ಇವನ್ನು? ಮುಟ್ಟಿದರೆ ತುರಿಸುವ ಕೆಸು, ಬಾಯಿಗಿಡಲಾಗದಷ್ಟು ಕಪ್ಪಟೆ ಕಹಿ ಕಳಲೆಯನ್ನು ಇಷ್ಟು ರುಚಿಕಟ್ಟಾಗಿ ಉಣ್ಣಬಹುದು ಎಂದು ಕಂಡುಹಿಡಿದವರಾರು? ಮಲೆನಾಡಿನಲ್ಲಿ ತರಕಾರಿಯ ಹಂಗಿಲ್ಲದೆ ಅಡುಗೆ ಮಾಡಿಬಿಡುವ ಗೃಹಿಣಿಯ ಕೌಶಲ ಆ ಪರಿಸರ ತಂದಿಟ್ಟ ಅನಿವಾರ್ಯತೆ, ಸುರಿವ ಮಳೆಯಲ್ಲಿ ಹುರುಳಿ ಸಾರು, ಅಕ್ಕಿ ಕಾಳುಮೆಣಸಿನ ಸಾರು ಸುರಿದುಣ್ಣುವ ಬೆಡಗು, ಹಲಸಿನ ಹಪ್ಪಳದ ಕುರುಕು, ಹಲಸಿನ ಬಿತ್ತ, ಸೌತೆಕಾಯಿ ಹುಳಿ... ಓದು ಮುಗಿಯುವಷ್ಟರಲ್ಲಿ ಮಳೆಗಾಲದ ಮೋಹಕ್ಕೆ ಸಿಲುಕದಿದ್ದರೆ ಕೇಳಿ. ಕಾಡ ತುಂಬಾ ಹರಿದಾಡುವ ನಾಗರದ ಜೊತೆ ಅದಕ್ಕೆ ಕಿಂಚಿತ್ತೂ ತೊಂದರೆ ಕೊಡದೆ ಬದುಕುವ ಕಲೆ. ಅದನ್ನು ದೇವತೆಯಾಗಿಸಿ ಅದಕ್ಕೆಂದೇ ಜಾಗವನ್ನು ಕಾಪಿಟ್ಟು ತನ್ಮೂಲಕ ಪ್ರಕೃತಿಯ ಸ್ವಾಸ್ಥ್ಯವನ್ನು ಕಾಪಾಡುವ ರೀತಿ, ಕಾಡಿನ ನಡುವೆ ಒಂಟಿಮನೆಗಳಲ್ಲಿ ಬದುಕುವವರಿಗೆ ದನಕರುಗಳೇ ಅನುದಿನದ ಸಂಗಾತಿ. ಅವುಗಳನ್ನು ಸಾಕುವವರು ಬಿಟ್ಟು ಎಲ್ಲಿಗೂ ಹೋಗಲಾಗದ ಪರಿಸ್ಥಿತಿ ಇದ್ದರೂ ಅದರ ಬಗ್ಗೆ ಎಳ್ಳಷ್ಟೂ ಬೇಸರವಿಲ್ಲ.

ಮನೆ, ಮಳೆ, ಊಟ, ದನಕರು ಇವೆಲ್ಲವುಗಳೊಟ್ಟಿಗೆ ಅಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆ... ಕಡಗೋಲು, ಹಕ್ಕೆ ಮನೆ ಎಂಬ ವೈಭೋಗ, ಗೋವುಗಳ ಹಬ್ಬವೆಂದೇ ಹೇಳಲ್ಪಡುವ ದೀಪಾವಳಿ, ಕಾಪಾಡುವ ನೆಲತಾಯಿಗೊಂದು ಭೂಮಿ ಹುಣ್ಣಿಮೆ, ವರ್ಷದ ಸಡಗರಕ್ಕೊಂದು ಹುಲಿಕಲ್ ಜಾತ್ರೆ, ಜೀವನಾಧಾರಕ್ಕೆ ಮೂರು ತಿಂಗಳು ಉಸಿರಾಡಲೂ ಪುರುಸೊತ್ತು ಕೊಡದೆ ಕಾಡುವ ಅಡಕೆ ಕೊಯ್ಲು, ಪ್ರತಿಯೊಂದೂ ಶೋಭಾ ಲೇಖನಿಯಲ್ಲಿ ಕಣ್ಣಿಗೆ ಕಟ್ಟುವ ಹಾಗೆ, ಮನಸ್ಸು ಮುಟ್ಟುವ ಹಾಗೆ ಬೆಚ್ಚಗೆ ಅರಳಿವೆ.

ತಾನು ಬಿಟ್ಟು ಬಂದ ಪರಿಸರವನ್ನು ಕಟ್ಟಿಕೊಡುತ್ತಾ ನಡುನಡುವೆ ಅಲ್ಲಿಗೆ ಹಿಂತಿರುಗುವ ಕನಸು ಕಾಣುತ್ತಾ ಆ ಬದುಕಿನ ಪ್ರತಿಯೊಂದು ವಿವರಗಳಲ್ಲೂ ಅದು ಕಲಿಸುವ ಪಾಠಗಳನ್ನು ಅರಸುತ್ತಾ ಹೋಗುವ ಬರವಣಿಗೆ ನಮ್ಮನ್ನೂ ಆವರಿಕೊಂಡು ಕಾಡುತ್ತದೆ.

ಮಲೆನಾಡಿನ ಮಳೆ ಬೇರೆ ಮಳೆಗಳಿಗಿಂತ ವಿಭಿನ್ನ. ಅಲ್ಲಿ ಸುರಿಯುವ ಮಳೆ ಒಂದೆರಡು ಗಂಟೆಗಳದ್ದಲ್ಲ.ಒಂದೆರಡು ದಿನಗಳದ್ದೂ ಅಲ್ಲ. ಒಮ್ಮೆ ಹಿಡಿದರೆ ವಾರ, ಹದಿನೈದು ದಿನ ಕೆಲವೊಮ್ಮೆ ತಿಂಗಳು ಧಾರಾಕಾರವಾಗಿ ಸುರಿಯುತ್ತಲೇ ಇರುತ್ತದೆ. ಆಗಸದಿಂದ ಭೂಮಿಗೆ ಬೀಳುವ ನೀರಿನ ತಂತು ಕಡಿಯದ ಹಾಗೆ. ಅದಕ್ಕೇ ಅದನ್ನು ಹನಿ ಕಡಿಯದ ಮಳೆ ಎನ್ನುವುದು. ಈ ಪುಸ್ತಕದ ಮೊದಲ ಸಾಲಿನಿಂದ ಕಡೆಯ ಸಾಲಿನವರೆಗೂ ಪದಗಳ ಹನಿ ಕಡಿದಿಲ್ಲ. ನೆನಪುಗಳ ಹನಿ ಕಡಿದಿಲ್ಲ. ಓದುಗನ ಓದೂ ಕಡಿಯುವುದಿಲ್ಲ." ಎಂದು ತಮ್ಮ ಅನಿಸಿಕೆಯನ್ನು ಹೇಳಿಕೊಂಡಿದ್ದಾರೆ.