ಹಳ್ಳಿಯ ವಿಚಾರ

ಊರ ದಾರಿ ಬರೀ ಕಪ್ಪು ವಾಸನೆ ಹಬ್ಬಿ
ಹೊಳೆಯುತ್ತಿದೆ; ಬಿಸಿಲ ಝಳ ನೆಲ ತಬ್ಬಿ
ಬರುವ ಮಂತ್ರಿಯ ಕಾರು ಕುಲುಕದಿರಲಿ
ಬಂದು ಹೋದಾಗ ದಾರಿ ಉಳಿಯದಿರಲಿ ||೦೧||
ಗಬ್ಬೆದ್ದು ನಾರುತ್ತಿರುವ ಮೋರಿಗೂ ಮುಕ್ತಿ
ತೋರುತ ಅಭಿಮಾನಿಗಳು ಒಗ್ಗಟ್ಟಿನಾ ಶಕ್ತಿ;
ಜನಕೆ ಹಡಗು ನೀಡಿರೆಂದು ಕೇಳಿದರಾಯ್ತು,
ಮಳೆಗಾಲಕ್ಕೆ ದಾರಿಯೂ ಹೊಳೆಯಾಯ್ತು ||೦೨||
ಓಲೈಸಲು ಇಲ್ಲಸಲ್ಲದಾ ಬೀಜದ ಮೊಳಕೆ
ಚಿಗುರಿ ತಿಳಿದಿದೆ ಮಾವಲ್ಲ ಬೇವು ಯಾಕೆ?
ಪ್ರಗತಿಯ ಪಥಕ್ಕೆ ಸಾಣೆ ಹಿಡಿವ ಬಯಕೆ
ತಿರುಗೋ ರಾಟೆವೂ ಜಡವಿಟ್ಟಿದೆ ಮನಕೆ ||೦೩||
ಛಾವಣಿ ಸೂರು ಸೋರುತ ಹಾಡಿದೆ ರಾಗ
ಜೋಗುಳ ಸದ್ದಿಗೆ ಬಿದ್ದಿರುವ ಆಲಸಿ ಮಗ
ರವಿಯ ಮುಖ ಸ್ಪಷ್ಟದಲಿ ಕಾಣುವ ಜಾಗ
ನಕ್ಷತ್ರ ಎಣಿಸಲೂ ಸರಳ ಒಳಗೆ ಮಲಗೀಗ ||೦೪||
ಹಳ್ಳಿಯ ಸೊಬಗು ಸವಿಯಲು ಅಂದವಿದೆ;
ಕೊರತೆಯ ನೀಗಿಸುವ ಛಲವಿರೆ ಸುಖವಿದೆ
ದೂರದ ಬೆಟ್ಟವೂ ಕಾಣಿಸುವುದು ಸುಂದರ;
ಹತ್ತುವ ವ್ಯಕ್ತಿಗೆ ಕೇಳಬೇಕು ಅದರ ವಿಚಾರ||೦೫||
-ದ್ಯಾವಪ್ಪ ಮಾದರ, ಕಾರವಾರ
ಚಿತ್ರ ಕೃಪೆ: ಇಂಟರ್ನೆಟ್ ತಾಣ