ಹಸಿವು

ಹಸಿವು

ಅಡುಗೆ ಮನೆಯಿಂದ ಸೆರಗನ್ನು ಗಟ್ಟಿಯಾಗಿ ಹಿಡಿದು ಸರ ಸರ ಹೊರನಡೆದ ಮನೆ ಕೆಲಸದ ನಿರ್ಮಲಳನ್ನು ಆ ಮನೆಗೆ ಹೊಸದಾಗಿ ಮದುವೆಯಾಗಿ ಬಂದಿದ್ದ ಸೊಸೆ ಶ್ರೀಲತಾ ಅನುಮಾನದಿಂದ ನೋಡುತ್ತಾಳೆ. ಮಾರನೆಯ ದಿನವೂ ಮನೆಕೆಲಸದವಳು ಎಲ್ಲ ಕೆಲಸ ಮುಗಿಸಿ ಹೋಗುವಾಗ ಸೆರಗನ್ನ ಗಟ್ಟಿ ಹಿಡಿದು ಸರ ಸರ ಹೋಗುತ್ತಾಳೆ .‌

ಈ ಬಾರಿ ಸೊಸೆ ಶ್ರೀಲತಾ ಅನುಮಾನ ಬಂದು ಅತ್ತೆಗೆ ಹೇಳುತ್ತಾಳೆ  “ಮನೆಕೆಲಸದವಳು ಬಹುಶಃ ದಿನಾ ಏನನ್ನೋ ಕದ್ದು ಹೋಗುತ್ತಿದ್ದಾಳೆ ಒಮ್ಮೆ ವಿಚಾರಿಸಿ ಅತ್ತೆ" ಅನ್ನುತ್ತಾಳೆ . 

ಆಗ ಅತ್ತೆ,” ನಿರ್ಮಲ ಆ ತರಹದವಳಲ್ಲ. ಪಾಪ, ಅವಳ ಗಂಡ ಗಾರೆ ಕೆಲಸಕ್ಕೆ ಹೋದಾಗ ಆಯ ತಪ್ಪಿ ಬಿದ್ದು ಸೊಂಟ ಮುರಿದುಕೊಂಡು ಕೆಲಸಕ್ಕೆ ಹೋಗಲಾರದೆ ಮನೆಯಲ್ಲೇ ಇದ್ದಾನೆ. ಇಬ್ಬರು ಮಕ್ಕಳಂತೆ ಅವಳಿಗೆ. ಅದಕ್ಕೆ ಮನೆ ಕೆಲಸಕ್ಕೆ ಬರುತ್ತಿದ್ದಾಳೆ.‌ ಕಳೆದ ಎರಡು ವರ್ಷಗಳಿಂದ ನಮ್ಮ ಮನೆಯಲ್ಲಿ‌ ಕೆಲಸ ಮಾಡುತ್ತಿದ್ದಾಳೆ. ಇದುವರೆಗೆ ಯಾವ ವಸ್ತುವೂ ಕಳುವಾಗಿಲ್ಲ ಎಂದಿರುವಾಗ ನಾವು ಅನುಮಾನ ಪಟ್ಟು ಕೇಳುವುದು ಸರಿಯೇ?” ಅನ್ನುತ್ತಾರೆ. ಅದಕ್ಕೆ  ಶ್ರೀಲತಾ “ಇಲ್ಲ ಅತ್ತೆ, ನಾನೇ ನೋಡಿದೆ ಸೆರಗಿನಲ್ಲಿ ಏನೋ ಹಿಡಿದಿದ್ದಳು” ಅನ್ನುವಳು. 

ಅತ್ತೆಗೆ ಅನುಮಾನ ಬಾರದೆ ಇದ್ದರೂ ಸೊಸೆ ಮಾತಿಗೆ ಹೂಂ, ನೋಡುವಾ ಅನ್ನುವಳು. ಮತ್ತೆ ಮಾರನೆಯ ದಿನ ನಿರ್ಮಲ ಎಲ್ಲ ಕೆಲಸ ಮುಗಿಸಿ ಮತ್ತೆ ಸೆರಗನ್ನು ಬಿಗಿ ಹಿಡಿದು ಅಮ್ಮ ಬರ್ತೀನಿ, ಅಂತ ಅವಸರದಲ್ಲಿ ಹೊರಗೆ ಹೋಗುವಳು, ಇದನ್ನು ಗಮನಿಸಿದ ಅತ್ತೆ ಯಾಕೆ ಹೀಗೆ ಗಡಿಬಿಡಿಯಲ್ಲಿ ಹೋದಳು ಎಂದು ಅಡುಗೆ ಮನೆಗೆ ಹೋಗಿ ಎಲ್ಲ ವಸ್ತು ಪದಾರ್ಥಗಳನ್ನು ನೋಡುವಳು ಎಲ್ಲ ಇರುತ್ತದೆ ಯಾವ ವಸ್ತುವೂ ಕಾಣೆಯಾಗಿರುವುದಿಲ್ಲ. ಮಾಡಿದ ಅಡುಗೆಯೂ ಹಾಗೇ ಇರುತ್ತದೆ. ಮತ್ತೇಕೆ ಸೆರಗಿನಲ್ಲಿ ಏನನ್ನೋ ಬಚ್ಚಿಟ್ಟು ಕೊಂಡ ಹಾಗಿತ್ತು ಅಂತ ಅಂದು ಕೊಳ್ಳುವಳು. 

ಮಾರನೆಯ ದಿನವೂ ನಿರ್ಮಲ ಕೆಲಸ ಮುಗಿಸಿದ ನಂತರ ಸೆರಗನ್ನ ಹಿಡಿದು ಹೋಗುವಳು. ಮನೆ ಯಜಮಾನಿ ಅತ್ತೆ ಅಡುಗೆ ಮನೆಯನ್ನು ಹುಡುಕಾಡಿದರೆ ಎಲ್ಲಾ ವಸ್ತುಗಳು ಹಾಗೆ ಇರುತ್ತಿತ್ತು. ಮತ್ತೆ ಪಾತ್ರೆಗಳಲ್ಲಿದ್ದ ಊಟ ಸಹ ಇರುತಿತ್ತು . ಯಾವುದೂ ಕಾಣೆಯಾಗಿರುವುದಿಲ್ಲ. 

ಮತ್ತ್ಯಾಕೆ ನಿರ್ಮಲ ಹಾಗೆ ವರ್ತಿಸುವಳು ಕಂಡು ಹಿಡಿಯ ಬೇಕು ಎಂದು ಅಡುಗೆ ಮನೆಗೆ ಸಿಸಿ ಕ್ಯಾಮೆರಾ ಹಾಕಿಸುವಳು. ಮಾರನೆಯ ದಿನ ಊಟದ ನಂತರ ಎಲ್ಲರೂ ಹೊರಗೆ ಬರದೆ ರೂಮ್ ನಲ್ಲಿಯೇ ಇರುವರು. ಇದನ್ನು ಗಮನಿಸಿದ ನಿರ್ಮಲ ಯಾವುದೇ ಗಡಿಬಿಡಿ ಇಲ್ಲದೆ ಕೆಲಸ ಮುಗಿಸಿ ಮತ್ತೆ ಸೆರಗನ್ನು ಕೈಗಳಲ್ಲಿ ಬಿಗಿಯಾಗಿ ಹಿಡಿದು ಹೋಗುವಳು.  ಅತ್ತೆ ಮತ್ತೆ ಸೊಸೆ ಹಾಗೂ ಮನೆಯವರೆಲ್ಲ ಕ್ಯಾಮೆರಾದ ಫೂಟೇಜ್ ನೋಡಲು ಉತ್ಸುಕರಾಗಿರುತ್ತಾರೆ. ಈಗ ನಿರ್ಮಲ ರೆಡ್ ಹ್ಯಾಂಡ್ ಆಗಿ ಸಿಕ್ಕಿಬೀಳುತ್ತಾಳೆ ಎಂದು ಯೋಚನೆ ಮಾಡಿ ವಿಡಿಯೋ ನೋಡುತ್ತಾರೆ . 

ವಿಡಿಯೋದಲ್ಲಿ ಎಂದಿನಂತೆ ನಿರ್ಮಲ ಮನೆಯವರೆಲ್ಲರ ಊಟದ ನಂತರ ಎಲ್ಲ ತಟ್ಟೆ ತೆಗೆದು ಸಿಂಕ್ ಬಳಿ ಇಡುತ್ತಾಳೆ. ಮೊದಲೇ ಶ್ರೀಮಂತರ ಮನೆ ತಟ್ಟೆಗಳಲ್ಲಿ ಅರ್ಧ ಊಟ ಹಾಗೆ ಬಿಟ್ಟಿರುತ್ತಾರೆ. ಆಗ ನಿರ್ಮಲ ಆ ತಟ್ಟೆಗಳಲ್ಲಿ ಇದ್ದ ಉಳಿದ ಆಹಾರವನ್ನು ಒಂದು ಪ್ಲಾಸ್ಟಿಕ್ ಕವರ್ ಗೆ ಹಾಕಿ ಪ್ಯಾಕ್ ಮಾಡುತ್ತಾಳೆ. ಅದನ್ನು ಬದಿಯಲ್ಲಿಟ್ಟು ಉಳಿದ ಎಲ್ಲಾ ಕೆಲಸ ಮುಗಿಸಿ ಆ ಕವರ್ ಅನ್ನು ಸೆರಗಲ್ಲಿ ಮುಚ್ಚಿಟ್ಟು ಕೈಯಲ್ಲಿ ಸೆರಗನ್ನ ಹಿಡಿದು ಸರ ಸರ ಹೊರಗೆ ಹೋಗುತ್ತಾಳೆ . 

ಇದನ್ನ ನೋಡಿದ ಮನೆಯವರೆಲ್ಲರೂ ಏನೂ ಅರ್ಥ ವಾಗದೆ ನಿರ್ಮಲ ಇದೇಕೆ ಎಂಜಲು ತಟ್ಟೆಯ ಊಟ ಕಟ್ಟಿ ಕೊಂಡು ಹೋಗುತ್ತಾಳೆ ಏನಿದು ಅರ್ಥವಾಗುತ್ತಿಲ್ಲ ಅಂತ ಯೋಚಿಸುತ್ತಾರೆ. ಮತ್ತೆ ಮಾರನೆಯ ದಿನದ ವಿಡಿಯೋ ನೋಡಿದಾಗಲೂ ನಿರ್ಮಲ ಎಂಜಲು ತಟ್ಟೆಯ ಊಟ ಕಟ್ಟಿ ಕೊಂಡು ಹೋಗುತ್ತಾಳೆ. 

ಇದರ ರಹಸ್ಯ ಏನು ಎಂದು ತಿಳಿದುಕೊಳ್ಳಲು ಅತ್ತೆ ತಮ್ಮ ಕಾರ್ ಡ್ರೈವರ್ ನ ಕರೆದು “ನೋಡು ನೀನು ನಿರ್ಮಲಾಳನ್ನ ಫಾಲೋ ಮಾಡಿ ಅವಳು ಪಾರ್ಸಲ್ ತೆಗೆದು ಕೊಂಡ ಊಟ ಏನು ಮಾಡುತ್ತಾಳೆ ಅಂತ ನೋಡಿ ನನಗೆ ಹೇಳಬೇಕು” ಅನ್ನುತ್ತಾಳೆ. ಡ್ರೈವರ್ ಫಾಲೋ ಮಾಡುತ್ತಾನೆ ನಿರ್ಮಲಾ ಹೋಗುತ್ತಿರುತ್ತಾಳೆ. ಒಂದು ಮನೆಗೆ ಹೋಗುತ್ತಾಳೆ. ಡ್ರೈವರ್ ಕಾರ್ ನಿಲ್ಲಿಸಿ ಆ ಮನೆಯ ಕಿಟಕಿ ಯಿಂದ ಎಲ್ಲ ನೋಡುತ್ತಾನೆ.

ನಿರ್ಮಲ ಸೆರಗಿನಲ್ಲಿ ಇದ್ದ ಪಾರ್ಸಲ್ ತೆರೆದಾಗ ಡ್ರೈವರ್ ವಿಡಿಯೋ ಮಾಡುತ್ತಾನೆ. ಡ್ರೈವರ್ ತಾನು ತೆಗೆದ ವಿಡಿಯೋವನ್ನ ಅತ್ತೆಗೆ ಕಳಿಸುತ್ತಾನೆ. ಅತ್ತೆ ಆ ವಿಡಿಯೋ ನೋಡಲು ಮನೆಯವರನ್ನೆಲ್ಲಾ ಕರೆಯುತ್ತಾಳೆ. ವಿಡೀಯೋದಲ್ಲಿ ಏನಿರುತ್ತೆ?

ನಿರ್ಮಲಾ ಸೆರಗಿಂದ ತಂದಿದ್ದ ಕವರ್ ನ್ನು ಬಿಚ್ಚಿ ಅದನ್ನು ಒಂದು ತಟ್ಟೆಗೆ ಹಾಕುತ್ತಾಳೆ. ನಂತರ ಮಕ್ಕಳನ್ನ ಊಟಕ್ಕೆ ಕರೆಯುತ್ತಾಳೆ. ಅನಾರೋಗ್ಯದಲ್ಲಿ ಸದಾ ಹಾಸಿಗೆಯ ಮೇಲೆ ಇದ್ದ ಗಂಡನಿಗೂ ಊಟ ಕೊಡುತ್ತಾಳೆ.‌ ವಯಸ್ಸಾದ ಅವಳ ಅತ್ತೆಗೂ ಊಟ ಕೊಡುತ್ತಾಳೆ. 

ಅವಳ ಅತ್ತೆ, “ಇವತ್ತು ಏನು ವಿಶೇಷ ನಿಮ್ಮ ಯಜಮಾನಿ ಮನೇಲಿ ಪಾಪ ಆಯಮ್ಮ ದಿನಾ ನಮಗೆಲ್ಲ ಇಷ್ಟೊಂದು ರುಚಿ ರುಚಿ ಯಾದ ಊಟ ಕಳಿಸುತ್ತಾರೆ. ನಿಮ್ಮ ಯಜಮಾನಿ ಅವರ ಗಂಡ ಮಕ್ಕಳು ತಣ್ಣಗೆ ಇರಲಿ, ದೇವರು ಚೆನ್ನಾಗಿ ಇಟ್ಟಿರಲಿ ಅವರ ಮನೆಯವರನ್ನೆಲ್ಲ” ಎಂದು ಹೇಳುತ್ತಾ ಊಟ ಮಾಡುತ್ತಾಳೆ . 

ವಿಡಿಯೋದಲ್ಲಿ ಈ ದೃಶ್ಯ ನೋಡಿದ ಆ ಶ್ರೀಮಂತ ಕುಟುಂಬದವರೆಲ್ಲರ ಕಣ್ಣುಗಳಿಂದ ನೀರು ಬರುತ್ತದೆ. ಮನೆಯ ಯಜಮಾನಿ ಅತ್ತೆಗೆ ಮತ್ತೆ ಸೊಸೆಗೆ ಬಹಳ ದುಃಖವಾಗುತ್ತದೆ. ಇದ್ಯಾಕೆ ನಿರ್ಮಲ ಹೀಗೆ ಮಾಡಿದಳು ಮಾಡಿದಳು. ಉಳಿದಿದ್ದ ಅಡಿಗೆಯನ್ನೇ ತೆಗೆದು ಕೊಂಡು ಹೋಗ ಬಹುದಿತ್ತಲ್ವಾ ಅಂತ ಮಾತಾಡಿಕೊಳ್ಳುತ್ತಾರೆ. ನಮ್ಮ ಎಂಜಲಿನ ಊಟ ಮಾಡಿದರಲ್ಲಾ ಎಂದು ಬಹಳ ದುಃಖಿತರಾಗುತ್ತಾರೆ.

ಮತ್ತೆ ಮಾರನೆಯ ದಿನ ಊಟದ ನಂತರ ನಿರ್ಮಲ ಎಲ್ಲ ತಟ್ಟೆ ಸಿಂಕ್ ಬಳಿ ಇಡುತ್ತಾಳೆ.‌ ಆದರೆ ಅತ್ತೆ ರೂಮಿಗೆ ಹೋಗದೆ ನೇರ ಅಡುಗೆ ಮನೆಗೆ ಹೋಗುತ್ತಾಳೆ. ಆಗ ಪಾಪ ನಿರ್ಮಲಾಗೆ ಉಳಿದ ಆಹಾರವನ್ನು ಕಟ್ಟಿಡಲು ಕಷ್ಟವಾಗುತ್ತದೆ. ಮನೆ ಗುಡಿಸಿ ಒರೆಸಿ ಪಾತ್ರೆ ತೊಳೆಯಲೋಗುತ್ತಾಳೆ. ಆಗಲೂ ಅತ್ತೆ ಅಡುಗೆ ಮನೆಯಲ್ಲೇ ಇರುತ್ತಾಳೆ. ನಿರ್ಮಲಾ ತಟ್ಟೆಗಳಲ್ಲಿದ್ದ ಊಟ ನೋಡಿ ಕವರ್ ಗೆ ಹೇಗೆ ಹಾಕಿಕೊಳ್ಳುವುದು ಅಂತ ಹಾಗೆ ಇಟ್ಟಿರುತ್ತಾಳೆ. ಆಗ ಅತ್ತೆ “ಏನ್ ನೋಡ್ತಿದ್ದೀಯ, ಈ ಎಂಜಲು ತಟ್ಟೆಯಲ್ಲಿರುವ ಉಳಿದ ಊಟ ಒಂದು ಬಟ್ಟಲಿಗೆ ಹಾಕಿ ಅದನ್ನು ಡಸ್ಟ್ ಬಿನ್ ಗೆ ಹಾಕು” ಅನ್ನುತ್ತಾಳೆ.

ನಿರ್ಮಲಾ ಮನದೊಳಗೇ ಅಳುತ್ತಾ “ಅಯ್ಯೋ ಇವತ್ತು ಮನೆಗೆ ಏನೂ ತೆಗೆದು ಕೊಂಡು ಹೋಗಲು ಆಗಲ್ಲ, ಮನೆಯವರೆಲ್ಲ ಉಪವಾಸ ಇರಬೇಕಾಗುತ್ತದೆ” ಎಂದು ಯೋಚಿಸುತ್ತಾ ಇರುವಾಗ ಅತ್ತೆ ಮತ್ತೊಮ್ಮೆ ಜೋರಾಗಿ “ಯಾಕೆ ತಡಮಾಡುತ್ತೀಯಾ? ಬೇಗ ಬೇಗ ಬಟ್ಟಲಿಗೆ ಹಾಕು” ಅಂದಾಗ ನಡುಗುವ ಕೈಯಿಂದ ಒಲ್ಲದ ಮನಸ್ಸಿಂದ ತಟ್ಟೆಗಳಲ್ಲಿದ್ದ ಎಲ್ಲಾ ಊಟವನ್ನು ಬಟ್ಟಲಿಗೆ ಹಾಕಿ ಕಸದ ಡಬ್ಬಿಗೆ ಎಸೆಯುವಾಗ ಕರುಳೇ ಕಿತ್ತಂತಾಗುತ್ತದೆ ನಿರ್ಮಲಾಳಿಗೆ. ಆಕೆಯ ಮನದಲ್ಲಿ ಹಸಿವಿನಲ್ಲಿರುವ ಮಕ್ಕಳು ಕಾಣಿಸುತ್ತಾರೆ . 

ಇಂದು ನಮಗೆಲ್ಲಾ ಉಪವಾಸವೇ ಗತಿ ಎಂದು ಎಲ್ಲ ಕೆಲಸ ಮುಗಿಸಿ “ಅಮ್ಮ ಬರುತ್ತೇನೆ” ಅಂತ ಹೇಳಿ ಬಹಳ ದುಃಖತಪ್ತಳಾಗಿ ಹೊರಗೆ ಹೋಗಿ ಚಪ್ಪಲಿ ಹಾಕಿ ಭಾರವಾದ ಹೆಜ್ಜೆ ಹಾಕುತ್ತಾ ಹೋಗುವಾಗ ಮನೆಯ ಯಜಮಾನಿ ಜೋರಾಗಿ “ನಿರ್ಮಲಾ” ಅಂದಾಗ ಗಾಬರಿಯಿಂದ ಆಕೆ ಹಿಂದೆ ತಿರುಗುತ್ತಾಳೆ . 

ಅತ್ತೆ ನಿರ್ಮಲಾಳ ಹತ್ತಿರ ಬಂದು ಒಂದು ಬ್ಯಾಗ್ ಅನ್ನು ಕೊಡುತ್ತಾಳೆ. ನಿರ್ಮಲಾ “ಏನಿದು?” ಅಂದಾಗ ಯಜಮಾನಿ “ಇದರಲ್ಲಿ ಇರುವ ಬಾಕ್ಸ್ ಗಳಲ್ಲಿ ಊಟ ಇದೆ. ಮನೆಗೆ ತೆಗೆದು ಕೊಂಡು ಹೋಗಿ ಮನೆಯವರಿಗೆಲ್ಲಾ ಕೊಡು. ಇನ್ನು ಮುಂದೆ ಹೋಗುವಾಗ ಉಳಿದ ಊಟವನ್ನು ತೆಗೆದು ಕೊಂಡು ಹೋಗು/ ಆದರೆ ಒಂದು ಮಾತು, ಎಂಜಲು ತಟ್ಟೆಯ ಊಟ ಮಾತ್ರ ತೆಗೆದುಕೊಳ್ಳಬಾರದು” ಅಂದಾಗ ನಿರ್ಮಲಾ ಯಜಮಾನಿಯ ಕಾಲಿಗೆ ಬಿದ್ದು, ಕ್ಷಮೆ ಕೇಳುತ್ತಾಳೆ . 

ಯಜಮಾನಿ “ನೋಡು ನಿರ್ಮಲಾ ಊಟ ಕೇಳಿದ್ದರೆ ಕೊಡುತ್ತಿದ್ದೆವಲ್ಲಾ, ಎಂಜಲ ತಟ್ಟೆಯದು ಯಾಕೆ ತೆಗೆದುಕೊಳ್ಳಲು ಹೋದೆ?” ಅಂದಾಗ ಅಳುತ್ತಾ ನಿರ್ಮಲಾ, “ಅಮ್ಮ, ನನ್ನ ಗಂಡ ಮೇಲಿಂದ ಬಿದ್ದು ಏಳಲಾಗದ ಪರಿಸ್ಥಿತಿ. ಇಬ್ಬರು ಮಕ್ಕಳು, ವಯಸ್ಸಾದ ಅತ್ತೆ. ನಾವು ಬಡವರು. ನಿಮ್ಮಂತಹ ಶ್ರೀಮಂತರ ಮನೆಯಲ್ಲಿ ರುಚಿ ರುಚಿಯಾದ ಅಡುಗೆ ಮಾಡುವಿರಿ . ಅಂತಹ ಅಡುಗೆ ನಾವು ತಿನ್ನಲು ಸಾಧ್ಯವೇ ಇಲ್ಲ. ನಿಮ್ಮ ಮನೆಯಲ್ಲಿ ಬರೀ ತಟ್ಟೆಯಲ್ಲೇ ಎಲ್ಲ ಊಟ ಬಿಡ್ತಾರೆ, ಎರಡು ಸ್ಪೂನ್ ತಿಂದು. ಎಂಜಲು ಸರಿಯಾಗಿ ಆಗಿರಲ್ಲ ಬರೀ ತುಪ್ಪ, ಗೋಡಂಬಿ, ಬಾಸುಮತಿ ಅನ್ನ ಅಂತಹ ಊಟ ಕಸದ ಡಬ್ಬಿಗೆ ಹಾಕಲು ಮನಸ್ಸೇ ಬರ್ತಿರಲಿಲ್ಲ. ವಿಧ ವಿಧವಾದ ಅಡಿಗೆ ಮಾಡುತ್ತೀರಿ.‌ ಅಂತ ಊಟ ನಾವು ತಿನ್ನಲು ಸಾಧ್ಯವಾ? ನೀವೆಲ್ಲ ದಿನಾ ಸ್ನಾನ ಮಾಡಿ ನೀಟಾಗಿ ಇರ್ತೀರಿ ನೀವು ಬಿಟ್ಟ ಊಟ ಚೆನ್ನಾಗಿ ಇರುತ್ತೆ ಅದಕ್ಕೆ ಅದನ್ನು ಬಿಸಾಡಲಾಗದೆ ಮನೆಗೆ ತೆಗೆದು ಕೊಂಡು ಹೋಗುತ್ತಿದ್ದೆ” ಅನ್ನುತ್ತಾಳೆ.

ಯಜಮಾನಿ ಕಣ್ಣಂಚು ತೇವಗೊಳ್ಳುತ್ತದೆ. ಇನ್ಮೇಲೆ ದಿನಾ ಊಟ ತೆಗೆದು ಕೊಂಡು ಹೋಗು ಎಂದು ಹೇಳಿ ಕಳಿಸುತ್ತಾಳೆ. ಮನೆಯವರಿಗೆಲ್ಲ ಇನ್ನು ಮುಂದೆ ತಟ್ಟೆಯಲ್ಲಿ ಊಟ ಯಾರೂ ಚೂರು ಬಿಡಬಾರದು ಊಟ ಇರದ ಎಷ್ಟೋ ಜನ ತುತ್ತು ಅನ್ನಕ್ಕಾಗಿ ಬಾಯಿ ಬಿಡುವಾಗ ನಾವೆಲ್ಲ ಊಟ ವ್ಯರ್ಥ ಮಾಡಿದರೆ ಸರಿಯಲ್ಲ ಅಂತ ಹೇಳುತ್ತಾಳೆ. ಒಂದು ವೇಳೆ ಯಜಮಾನಿ ಊಟ ಕದಿಯುವಾಗ ಹಾಗೆ ಬಯ್ದಿದ್ದರೆ ನಂತರ ಸತ್ಯ ಗೊತ್ತಾಗಿದ್ದಿದ್ದರೆ ತಾನು ತಪ್ಪಾಗಿ ಬಯ್ದೆ ಅನ್ನುವ ಪಾಪಪ್ರಜ್ಞೆ ಸದಾ ಇರುತ್ತಿತ್ತು. ಪರಿಸ್ಥಿತಿಯನ್ನ ಪ್ರಮಾಣಿಸಿದ ಮೇಲೆ ಸತ್ಯ ಗೊತ್ತಾಗಿದ್ದು. ಜನ ಹೀಗೆ ಕಂಡದ್ದೇ ಸತ್ಯ ಎಂದು ತಿಳಿದು ಕೊಳ್ಳುತ್ತಾರೆ. 

ಯಾರೇ ಆಗಲಿ ಹಸಿವಿಗಾಗಿ ಊಟ ತಿಂಡಿ ಕದ್ದರೆ ಯಾರೂ ಹೊಡೆಯಬೇಡಿ . ಹೀಗೆ ಕೇರಳದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಹಸಿವಿಂದ ಅಕ್ಕಿ ಕದ್ದ ಎಂದು ಹೊಡೆದು ಹೊಡೆದು ಸಾಯಿಸಿದರು. ಒಬ್ಬ ಬನ್ ಕದ್ದ ಎಂದು ಕಂಬಕ್ಕೆ ಕಟ್ಟಿ ಹಾಕಿ ಹೊಡೆದರು. ಆದರೆ ಅವರೆಲ್ಲ ಹಸಿವನ್ನು ತಾಳಲಾರದೆ ಊಟ ಕದ್ದಿದ್ದು ಅನ್ನುವುದನ್ನು ಮರೆತು ಮಾನವೀಯತೆ ತೋರದೆ ಹೋದರು. ಹಣ, ಒಡವೆ ಕದ್ದರೆ ತಪ್ಪು. ಆದರೆ ಹಸಿವನ್ನು ತಾಳಲಾರದೆ ಊಟ ಕದ್ದರೆ ಅದು ಅವರ ತಪ್ಪಲ್ಲ. ದೇಶದ ವ್ಯವಸ್ಥೆಯ ತಪ್ಪು ಹಸಿದ ವ್ಯಕ್ತಿಯದಲ್ಲ. ಹುಟ್ಟಿದ ಪ್ರತಿ ವ್ಯಕ್ತಿಗೂ ಊಟದ ಅಗತ್ಯವನ್ನು ಪೂರೈಸುವ ಮಾರ್ಗ ಸರ್ಕಾರವೇ ಮಾಡಬೇಕು. 

ನಿಮ್ಮೆಲ್ಲರಲ್ಲೂ ಒಂದು ಮಾತು. “ಹಸಿವಿಗಾಗಿ ಯಾರಾದರು ಊಟ ತಿಂಡಿ ಕದ್ದರೆ ಕಂಬಕ್ಕೆಲ್ಲ ಕಟ್ಟಿ ಹೊಡೆಯ ಬೇಡಿ , ಸಾಧ್ಯವಾದರೆ ಒಂದು ಹೊತ್ತಿನ ಊಟ ಕೊಡಿ”

ಸೂಚನೆ: ಈ ಬರಹವನ್ನು ಬರೆದವರು ಯಾರೋ ಏನೋ? ಆದರೆ ಬರಹವನ್ನು ಓದಿದ ಬಳಿಕ ಕಣ್ಣಲ್ಲಿ ನೀರಾಡುವುದು ಖಂಡಿತಾ. ಆ ಅಪರಿಚಿತ ಬರಹಗಾರನಿಗೆ ವಂದಿಸುತ್ತಾ, ಬರಹವನ್ನು ಪ್ರಕಟಿಸುತ್ತಿದ್ದೇನೆ.

(ಸಂಗ್ರಹ) - ಪ್ರಭಾಕರ ಅಡಿಗ, ಉಡುಪಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ