ಹಾಸ್ಯದಲೆ ಕೊಲ್ಲೆ ಪೂರ್ತಿ, ಸಿದ್ದಹಸ್ತ ನರಸಿಂಹಮೂರ್ತಿ
ನಿನ್ನೆ ತಾನೆ ಹಾಸ್ಯ ಬರಹಗಾರ ಶ್ರಿ. ಎಂ. ಎಸ್. ನರಸಿಂಹಮೂರ್ತಿಗಳ ಹುಟ್ಟುಹಬ್ಬ (20.ಅಕ್ಟೊಬರ). ಆ ನೆನಪೋಲೆ ಮೊನ್ನೆಯೆ ಬಂದರೂ ಕಾರ್ಯಬಾಹುಳ್ಯದಲ್ಲಿ ಸಿಕ್ಕಿ ಮರೆತುಬಿಟ್ಟಿದ್ದೆ. ಹಾಸ್ಯ ಬರಹ, ಟಿ.ವಿ. ಸೀರಿಯಲ್ಲುಗಳ ತುಣುಕು ನೆನಪಿದ್ದರೂ ಬರಹದಲ್ಲಿ ಮೆಲುಕು ಹಾಕುವಷ್ಟು ಸರಕು ಇರಲಿಲ್ಲ ಬೇರೆ. ಹಾಗೆಯೆ ಅಂತರ್ಜಾಲದಲ್ಲಿ ಹುಡುಕಿದರೆ, ಸ್ವಲ್ಪ ವಿವರಗಳು ಸಿಕ್ಕರೂ ಪುಟ್ಟ ಕಾವ್ಯವೊಂದಕ್ಕೆ ಸಾಕಾಗಬಹುದು ಎನಿಸಿತು - ಆ ಅನಿಸಿಕೆಯ ಫಲಿತವೆ ಈ ಪದ್ಯ. ಹಾಸ್ಯ ಲೇಖಕರಿಗೆ ಹಾಸ್ಯಭರಿತ ಬರಹ ಬರೆಯುವುದು ಕಷ್ಟವೆ ಆದರು, ಇಲ್ಲಿ ಅವರದೆ ಕೃತಿ, ಟೀವಿ ಸರಣಿಯ ಹೆಸರು ಬಳಸಿರುವುದರಿಂದ, ಹಾಸ್ಯಕ್ಕಲ್ಲದಿದ್ದರೂ, ಆ ಹೆಸರುಗಳ ನೆನಪಿಂದಾದರೂ ನಗೆ ಬರಬಹುದೆಂದುಕೊಂಡಿದ್ದೇನೆ. ಏನಿಲ್ಲವೆಂದರೂ, ಸತತ ನಗೆಯುಣಿಸಿದ ವ್ಯಕ್ತಿತ್ವಕ್ಕೆ ಒಂದು ಪುಟ್ಟ ಕೃತಜ್ಞತೆ ಹೇಳಿದಂತಾದರೂ ಆದೀತು :-)
ಹಾಸ್ಯದಲೆ ಕೊಲ್ಲೆ ಪೂರ್ತಿ, ಸಿದ್ದಹಸ್ತ ನರಸಿಂಹಮೂರ್ತಿ
ವಿಶಾಲು ಜೊತೆ ನಕ್ಕು ನಲಿಸೊ, ಸಂಪ್ರದಾಯ ಪದ್ದತಿ ||
ಬ್ಯಾಂಕಲ್ಲಿ ಕೆಲಸ ಎಣಿಸುತ ಗುಣಿಸುತ, ಬಂತೆಲ್ಲಿ ಭಾರಿ
ಒತ್ತಡದಲ್ಲೆ ನಗೆಯ, ಉಳಿತಾಯ ಖಾತೆ ತೆರೆಸಿದ ಪರಿ ||
ಕೈಗೆ ಸಿಕ್ಕವರೆಲ್ಲಾ ಚೆಂಡು, ಅಯ್ಯೊ "ಪಾಪ ಪಾಂಡು"
ಚಿಕ್ಕ ಮಕ್ಕಳ ಹಾಗಾಡಿಸುತಾ "ಸಿಲ್ಲಿ-ಲಲ್ಲಿಗು" ಬೆಂಡು ||
ಅಸೀಮ ಭಕ್ತಿಯಲೆ ಬರೆದು "ಪಾಂಡುರಂಗ ವಿಠಲ"
ಪರಶಿವನ ಕೋಪವ ತಣಿಸೆ "ಪಾರ್ವತಿ ಪರಮೇಶ್ವರ" ||
ನಗುವಲೆ ಹುಚ್ಹಿಡಿಸೊ ತರ, ಬಂದೂಕಿನ "ಕ್ರೇಜೀ ಕರ್ನಲ್"
ಟೀವಿಯೆಪಿಸೋಡು ಎಣಿಸಲೇಳುಸಾವಿರ ಮೀರಿದ ಮೈಲು! ||
ಟೀವಿ ಸಾಲದ ದುಃಖಾ ಪಾಪ, ಚಿತ್ರಕತೆ ಬರೆಯುವಾ ಕೈ ಚಳಕ
"ಅತಿ ಮಧುರ ಅನುರಾಗ" ಹಾಡಿ "ಗಿಡ್ಡುದಾದ" ಸಿನಿಮಾ ಜಳಕ ||
ತೀರದ ರೋಷಕೆ ಅಟ್ಟುತ "ಯಮಲೋಕದಲಿ ವೀರಪ್ಪನ್" ತಳ್ಳು
ಅದ ಮೊದಲೆ ಮಾಡದವರ ಸರಿಬೈದು "ಕತ್ತೆಗಳು ಸಾರ್ ಕತ್ತೆಗಳು" ||
ನಗಿಸುವಿರೆಲ್ಲಿಂದ ನರಸಿಂಹಮೂರ್ತಿಗಳೆ ಏನಿದೆಯೊ ಗುಟ್ಟು
ನಗಿಸುತಲೆ ಇರಿ ಹೇಗಾದರು , ಮಾಡುತೇನಾದರು ಎಡವಟ್ಟು ||
ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
(ನರಸಿಂಹಮೂರ್ತಿಯವರ ಕುರಿತು ಹೆಚ್ಚಿನ ವಿವರಕ್ಕೆ ಈ ಪರಿಚಯ ಲೇಖನ ನೋಡಿ:
http://kanaja.in/archives/dinamani/ಎಂ-ಎಸ್-ನರಸಿಂಹಮೂರ್ತಿ)