ಹಿಡಿಂಬೆ ಎಂಬ ಮಾತೃ ಹೃದಯ
ಇವತ್ತು ಯಾಕೋ ಮನಸ್ಸು ಸರಿ ಇಲ್ಲ, ಏನೋ ಕಸಿವಿಸಿ, ಯಾಕೋ ನನ್ನ ಗಂಡ ಹಾ ಅದೇ ನನ್ನನ್ನು ದೂರ ಮಾಡಿ ಹೋಗಿರುವ ಇದ್ದರೂ ಇಲ್ಲದಂತಿರುವ ಭೀಮನ ನೆನಪು ಬಹಳ ಕಾಡುತ್ತಿದೆ, ನನಗೆ ನನ್ನವರೆಂದು ಅದರಲ್ಲೂ ನನ್ನ ಜೀವನವೇ ಆಗಿ ಇರುವವನು ಒಬ್ಬನೇ ಮಗ. ಇರುವುದು ಘೋರವಾದ ಕಾಡು, ಕಣ್ಣು ಹಾಯಿಸಿದೆಡೆಗೆ ಕಾಣುವುದೆಲ್ಲ ಹಚ್ಚ ಹಸಿರ ಕಾಡು, ಭೀಕರ ಕಾಡು ಪ್ರಾಣಿಗಳು. ನನ್ನ ಕುಲವನ್ನು ಬೆಳಗಬೇಕಾದವ, ನನ್ನ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಸಾಗಿಸಬೇಕಾಗಿರುವವನೂ ಆ ಮಗನೇ. ಆ ನನ್ನ ಮಗ ಘಟೋತ್ಕಚ ರಾಕ್ಷಸ ಕುಲದವನಾದರೂ ತಾಯಿಯ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ, ವೀರಾಧಿವೀರ ಗಂಡುಗಲಿ. ಇತರರಿಗೆ ಸಿಂಹ ಸ್ವಪ್ನವಾದರೂ ನನಗೆ ಪುಟ್ಟ ಮುಗ್ಧ ಮಗು. ಈ ತಾಯಿಯ ಪ್ರಪಂಚವೇ ಮಗ, ಈ ಮಗನ ಪ್ರಪಂಚವೂ ತಾಯಿಯೇ. ನನ್ನ ಮಗ ನಾನು ಪಟ್ಟ ಕಷ್ಟವನ್ನು, ನನ್ನ ನೋವನ್ನು, ನಲಿವನ್ನು ಕಾಣುತ್ತ, ನಾನು ಅತ್ತಾಗ ಅಳುತ್ತ, ನಕ್ಕಾಗ ನಗುತ್ತ ಬೆಳೆದವ. ಒಮ್ಮೇಲೆ ನೂರಾರು ಜನರನ್ನು ಕೊಲ್ಲಬಲ್ಲಂತಹ ಬಲವಂತ, ಯುದ್ಧಕ್ಕೆ ನಿಂತರೆ ಇಡೀ ವೈರಿಪಡೆಯನ್ನು ನುಂಗಿಹಾಕಬಹುದಾದಂತ ವೀರಾಧಿವೀರ, ಇನ್ನೂ ಮದುವೆಯಾಗಿಲ್ಲ, ಆ ವಯಸ್ಸೂ ಅಲ್ಲ! ಹಾಗಂತ ಗೊಂಬೆಗಳೊಂದಿಗೂ ಆಡುವ ವಯಸ್ಸಲ್ಲ. ನನ್ನ ರಾಜ್ಯವನ್ನು ಉತ್ತುಂಗಕ್ಕೇರಿಸುವ ಮಗನಿವನು ಎಂಬ ಹೆಮ್ಮೆ ಇದೆ ನನಗೆ! ಅದಕ್ಕಿಂತ ಇನ್ನೇನು ಸಂಭ್ರಮ ಬೇಕು? ಅಲ್ಲದೇ ಇನ್ನೊಂದು ಕಾರಣವೂ ಇದೆ, ಇನ್ನೆಷ್ಟು ದಿನ ಇವನನ್ನು ಹೀಗೆಯೇ ಬಿಡುವುದು? ಇವನಿಗೂ ಮದುವೆ ಮಾಡಬೇಕು, ಅವನಿಗೂ ಒಂದು ಆಸರೆ, ನನಗೂ ತನ್ನವರೆನಿಸಿಕೊಳ್ಳುವ ಒಂದು ಹೆಣ್ಣು ಜೀವ ಮನೆಗೆ ಬರುವುದು ಎಂಬ ಅಭಿಲಾಷೆ.
ನಾನು ಕುಲದಿಂದ ರಾಕ್ಷಸಿ ಒಪ್ಪುತ್ತೇನೆ. ಆದರೆ, ತಾಯಿ ತಾಯಿಯೇ, ಅಲ್ಲವೇ? ಅಲ್ಲದೇ ನನಗೇನು ಕಡಿಮೆ? ವೀರಾಧಿವೀರ, ವಾಯುಪುತ್ರ, ಮಹಾ ಪ್ರಚಂಡ, ಶ್ರೀಕೃಷ್ಣನ ಕೃಪಾಕಟಾಕ್ಷವನ್ನು ಪಡೆದಿರುವ, ವಿಶ್ವವೇ ಮೆಚ್ಚುವ ಪಾಂಡು ಪುತ್ರ ‘ಭೀಮ’ ನನ್ನ ಗಂಡ ಎಂಬ ಹೆಮ್ಮೆ ಇದೆಯಾದರೂ, ಘಟೋತ್ಕಚನೆಂಬ ಮಗನ ಜನನ ಬೀಜವನ್ನು ಬಿತ್ತಿಹೋದ ಪುಣ್ಯಾತ್ಮ ಈ ಕಡೆ ತಿರುಗಿಯೂ ನೋಡಿಲ್ಲ, ಸೌಜನ್ಯಕ್ಕಾದರೂ ನೀನು ಹೇಗಿದ್ದಿಯಾ? ಎಂದು ಕೇಳಿಲ್ಲ. ನನ್ನ ನೆನಪಾಗದಿದ್ದರೂ ಬೇಡ, ಪಾಪ ತಂದೆಯಿದ್ದೂ ಅನಾಥನಂತೆ, ನಾಲ್ಕು ಜನ ಅತ್ಯುತ್ಕೃಷ್ಟ ಕಲಿಗಳು ದೊಡ್ಡಪ್ಪ, ಚಿಕ್ಕಪ್ಪರಾಗಿದ್ದರೂ ಸಹಿತ ಯಾರ ಪ್ರೀತಿಯೂ ಸಿಗಲಾರದಂತಹ ತಪ್ಪನ್ನು ನನ್ನ ಮಗನೇನು ಮಾಡಿದ್ದ? ಭೀಮ ಗಂಡಸು ಹೋಗಲಿ, ಅವನ ತಾಯಿ ಕುಂತಿಗಾದರೂ ನನ್ನ ಸ್ಥಿತಿಯ ಅರಿವಾಗಬೇಡವೇ? ನಾನು ಹಿಡಿಂಬಿ, ರಾಕ್ಷಸ ಕುಲದವಳು, ಅನಾರ್ಯಳೇ ಆಗಿರಬಹುದು, ನಾನು ಅವಳ ಸೊಸೆ ಎಂಬುದು ಸುಳ್ಳೇ? ಹೋಗಲಿ ನನ್ನನ್ನು ಅವಳ ಸೊಸೆ ಎಂದು ಒಪ್ಪಿಕೊಳ್ಳಲು ಕುಂತಿಗೆ ಪ್ರತಿಷ್ಠೆ ಅಡ್ಡ ಬಂದಿರಬಹುದು, ಆದರೆ ಒಂದು ಬಾರಿಯಾದರೂ ನನ್ನನ್ನು ಭೇಟಿ ಮಾಡಿ ಕ್ಷೇಮ ಸಮಾಚಾರವನ್ನು ಕೇಳಿ ಬಾ ಎಂದು ಹೇಳಬೇಡವೇ? ಇವರೆಲ್ಲ ಹುಲುಮಾನವರು, ಮನುಷ್ಯರಿಂದ ತಪ್ಪಾಗುವುದು ಸಹಜ, ಅದರಲ್ಲೇನು ಉತ್ಪ್ರೇಕ್ಷೆ ಇಲ್ಲ. ಆದರೆ, ದೇವಾನುದೇವತೆಗಳಿಂದಲೇ ಪೂಜೆಗೊಳಗಾಗುವ, ತನ್ನ ತಾಯಿಗೆ ಬಾಯಿಯಲ್ಲಿಯೇ ವಿಶ್ವವನ್ನು ತೋರಿಸಿದ ಶ್ರೀ ಕೃಷ್ಣ ಪರಮಾತ್ಮನಿಗಾದರೂ ಈ ತಾಯಿಯ, ಗಂಡನಿಂದ ಪರಿತ್ಯಕ್ತಳಾದ ಒಂದು ಹೆಣ್ಣಿನ ವೇದನೆ ಅರ್ಥವಾಗಲಿಲ್ಲವೇ? ಅವನಾದರೂ ಒಂದು ಬಾರಿಯಾದರೂ ನನ್ನ ಬಗ್ಗೆ ಭೀಮನಿಗೆ ನೆನಪಿಸಿದ್ದರೆ, ಅವನ ಮಾತನ್ನು ಮೀರುವ ಧೈರ್ಯವಾಗಲಿ, ಸ್ಥೈರ್ಯವಾಗಲಿ ಇತ್ತೆ? ಎಂಬುವುದರ ಬಗ್ಗೆ ಕೋಪವು ಇದೆ. ಆದರೂ ಗಂಡನ ಮೇಲಿನ ಪ್ರೀತಿ ಕಿಂಚಿತ್ ಕಡಿಮೆಯಾಗಿಲ್ಲ. ಅವನು ಮತ್ತೆ ಬರುವನು ಎಂಬ ನಂಬಿಕೆಯಲ್ಲಿಯೇ ಕಾಲ ಕಳೆಯುತ್ತಿದ್ದೇನೆ. ನಾನು ರಾಕ್ಷಸಿಯೂ ಹೌದು, ಗಂಡನೊಬ್ಬನಿಗೇ ಮೀಸಲಾದ ಪತಿವೃತೆಯೂ ಹೌದು...
ಅಯ್ಯೋ ಯಾಕೆ ನಾನು ಹೀಗೆಲ್ಲ ಒಬ್ಬಳೇ ಮಾತನಾಡಿಕೊಳ್ಳುತ್ತಿದ್ದೇನೆ? ಏನಾಗಿದೆ ಇಂದು ನನಗೆ? ಮತ್ತೆ ಯಾರೊಂದಿಗೆ ಮಾತನಾಡಲಿ, ಯಾರಿದ್ದಾರೆ ಈಗ ನನ್ನೊಂದಿಗೆ, ಯಾಕೆ ಮಗ ಇನ್ನೂ ಮನೆಗೆ ಬಂದಿಲ್ಲ? ಇಷ್ಟೊತ್ತಿಗೆಲ್ಲ ಬಂದಿರುತ್ತಿದ್ದನಲ್ಲ, ಊಟದ ಸಮಯವಾಗಿದೆ, ಪಾಪ ಏನಾದರೂ ತಿಂದಿರುತ್ತಿತ್ತಾನೊ ಇಲ್ಲವೋ? ನನ್ನ ಮಗನಿಗೆ ಏನಾದರೂ ತೊಂದರೆಯಾಗಿದೆಯೇ? ಛೆ ಛೆ ಅವನಿಗೆ ಏನೂ ಆಗುವುದಿಲ್ಲ, ಅವನು ವೀರ ಸುಪುತ್ರ. ಹಾಂ! ದೂರದಲ್ಲಿ ಯಾರೋ ಬರುತ್ತಿರುವಂತೆ ಕಾಣುತ್ತಿದೆಯಲ್ಲ, ಈಗ ನನಗೆ ಸಮಾಧಾನವಾಯಿತು. ಅರೆ, ಅವನೊಂದಿಗೆ ಬರುತ್ತಿರುವ ಆ ದೈತ್ಯದೇಹಿ ಯಾರು!?
ಓಹ್ ಅದು ಅವರೇನಾ? ನನ್ನ ಕಣ್ಣು ನನಗೆ ಸುಳ್ಳು ಹೇಳುತ್ತಿದೆಯಾ? ಅಥವಾ ನನನ್ನ ಮನಸ್ಸಿನೊಳಗಿರುವ ರೂಪ ಜೀವ ತಳೆದು ಬರುತ್ತಿದೆಯಾ? ಅದು ಮರಿಚಿಕೆಯಾ? ಸಾಧ್ಯವಿಲ್ಲ, ಇದು ಮರುಭೂಮಿಯಲ್ಲ. ಅಂದರೆ....ಅಂದರೆ ಅವನು ನಿಜವಾಗಿಯೂ ಅವನೇ! ಪಾಂಡವ........., ವಾಯುಪುತ್ರ ಬಲ ಭೀಮ, ನನ್ನ ಗಂಡ. ಹಾಂ.... ಹೌದು ಆತನೇ ಬರುತ್ತಿದ್ದಾನೆ, ಅದೂ ಮಗನೊಟ್ಟಿಗೆ, ಬೆಳಗಿನಿಂದ ನನ್ನ ಕಸಿವಿಸಿಗೆ ಇದೆ ಕಾರಣವೇ? ಏನಾದರಾಗಲಿ ನನ್ನ ಪತಿರಾಯ ಬರುತ್ತಿದ್ದಾನಲ್ಲ, ಅದೇ ಖುಷಿ. ಬರಲಿ ಅವನು, ಅವನೊಂದಿಗೆ ನಾನು ಮಾತನಾಡುವುದೇ ಇಲ್ಲ, ಅವನು ನನ್ನನ್ನು ರಮಿಸಿ ಎಷ್ಟು ವರುಷಗಳುರುಳಿವೆ? ಇಲ್ಲ, ಇಲ್ಲ ಅವನೊಂದಿಗೆ ನಾನು ಮುನಿಸಿ ಕೊಂಡಿದ್ದು ನಿಜವೆಂದು ತಿಳಿದು ಹಾಗೆ ಹೋದರೆ ಅವನನ್ನು ಭಕ್ತಿಯಿಂದ ಬರಮಾಡಿಕೊಳ್ಳಬೇಕು, ಅವನು ಬಂದೇ ಬರುವನು ಎಂಬ ನಂಬಿಕೆ ಸುಳ್ಳಾಗಲಿಲ್ಲ, ಬರುವುದಷ್ಟೇ ಅಲ್ಲ ತನ್ನ ಮಗನನ್ನೂ ಒಪ್ಪಿಕೊಂಡಿದ್ದಾನೆ, ಅಪ್ಪಿಕೊಂಡಿದ್ದಾನೆ, ಇನ್ನಾದರೂ ತನ್ನ ಜೀವನ ಖುಷಿಯಲ್ಲಿ ಕಳೆಯುವುದು, ಅಬ್ಬಾ ನಾನು ಎಂಥ ಪುಣ್ಯವಂತೆ, ಬಹಳ ದಿನಗಳ ನಂತರ ಮರಳಿದ ಗಂಡ, ವಯಸ್ಸಿಗೆ ಬರುತ್ತಿರುವ ಮಗ, ನಾಳೆ ಅವನ ಮದುವೆ, ನಂತರ ಸೊಸೆ, ಮೊಮ್ಮಕ್ಕಳು, ವಂಶವೂ ಬೆಳೆಯುವುದು, ಜೀವನವೂ ಸಾರ್ಥಕ.
ಅಯ್ಯೋ....ಎಂಥ ಘಾತಕವಿದು? ಅವನು ನನ್ನ ಮೇಲಿನ ಪ್ರೀತಿಗಾಗಿ ಇಲ್ಲವೇ ಮಗನ ಮೇಲಿಮ ಮಮಕಾರಕ್ಕಾಗಿ ಬಂದಿಲ್ಲ....ಅವನು ಬಂದದ್ದು ವ್ಯಾಪಾರಕ್ಕಾಗಿ, ತಾನು ಯುದ್ಧದಲ್ಲಿ ಗೆಲ್ಲಲು ಬೇಕಾಗಿರುವ ಸಾಧನಕ್ಕಾಗಿ, ಘಟೋತ್ಕಚನೇ ನನ್ನ ಲೋಕ, ಆದರೆ ಅವರಪ್ಪನಿಗೆ ಅವನೊಬ್ಬ ಸಾಮಾನ್ಯ ಸೈನಿಕ, ಅವನು ಸತ್ತರೆ ಭೀಮನಿಗೆ ಯಾವನೋ ಒಬ್ಬ ರಣ ಸೈನಿಕ ಸತ್ತಂತೆ, ಅದೇ ನನಗೆ..., ಮಗನ ಒಂದು ಕೂದಲು ಕೊಂಕಿದರೂ, ಜಗತ್ಪ್ರಳಯವಾದಂತೆ, ನನ್ನ ಜೀವನವೇ ನಶಿಸಿದಂತೆ. ಅದು ಭಿಮನಿಗೆ ಎಂದಿಗೂ ಅರ್ಥವಾಗುವುದಿಲ್ಲ. ಏಕೆಂದರೆ ತಾಯಿ, ಅಣ್ಣತಮ್ಮಂದಿರು, ಎಲ್ಲಕ್ಕಿಂತಲೂ ಮಿಗಿಲಾದ ಶ್ರೀಕೃಷ್ಣನ ಸಂಗ ಅವನಿಗಿದೆ. ಬಾಯಿ ಬಿಟ್ಟರೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ‘ಧರ್ಮ’ ಎಂಬ ಕಾರಣವಿದೆ. ಆದರೆ, ಆದರೆ ನನಗೆ ಅವುಗಳಾವವೂ ಇಲ್ಲ, ಬೇಕಾಗಿಯೂ ಇಲ್ಲ. ನನ್ನ ಮಗನೊಬ್ಬನಿದ್ದರೆ ಸಾಕು, ಅವನೇ ಬೇಕು. ಅದೂ ಅಲ್ಲದೇ ಸಾಯಲಿಕ್ಕಾಗಿಯೇ ಮಗನನ್ನು ಕಳಿಸಬೇಕು ಎಂದು ಗೊತ್ತಿದ್ದೂ ನನ್ನ ಜೀವನ, ನನ್ನ ಲೋಕವೇ ಆಗಿರುವ ಮಗನನ್ನು ಹೇಗೆ ಕಳಿಸುವುದು, ನನ್ನನ್ನು ಬಿಡಿ ಯಾವ ತಾಯಿ ಹೃದಯ ಇದಕ್ಕೆ ಒಪ್ಪುತ್ತದೆ? ನನ್ನ ಮಗ ಘಟೋತ್ಕಚ ವೀರನೇನೋ ಹೌದು, ಆದರೆ ನಗರದ ಕುತ್ಸಿಕ ಬದ್ಧಿಯನ್ನು, ಮೋಸದ ಆಟವನ್ನು ತಿಳಿಯದ ಮುಗ್ಧ, ಅದೂ ವೀರಾಧಿವೀರರನ್ನು, ಬೃಹತ್ ಸ್ಯನ್ಯವನ್ನು ಹೊಂದಿರುವ ಕೌರವರ ವಿರುದ್ಧದ ಯುದ್ಧಕ್ಕೆ ಹೇಗೆ ಕಳಿಸುವುದು? ಗಂಡನೆಂಬ ತ್ರಿಲೋಕ ವೀರ, ಮಹಾನುಭಾವ ನಾಚಿಕೆ ಬಿಟ್ಟು ನನ್ನ ಮಗನನ್ನೇ ಕೇಳುತ್ತಿದ್ದಾನಲ್ಲ.......ಹೇಗೆ ನಾನು ಒಪ್ಪಲಿ? ಆದರೂ ಬೇಡವೆನ್ನು ಅಧಿಕಾರ ನನಗಿಲ್ಲ.
ಅಯ್ಯೋ.....ನನ್ನ ಮಗ ಘಟೋತ್ಕಚ ಯುದ್ಧ ಭೂಮಿಯಲ್ಲಿ ಮರಣವನ್ನಪ್ಪಿದನೇ?
ರಾಘವೇಂದ್ರ ಗುಡಿ
This article is also published in -
http://thesundayindian.com/kn/story/a-mother-called-hidimbe/1403/
Comments
ಉ: ಹಿಡಿಂಬೆ ಎಂಬ ಮಾತೃ ಹೃದಯ
In reply to ಉ: ಹಿಡಿಂಬೆ ಎಂಬ ಮಾತೃ ಹೃದಯ by venkatb83
ಉ: ಹಿಡಿಂಬೆ ಎಂಬ ಮಾತೃ ಹೃದಯ
ಉ: ಹಿಡಿಂಬೆ ಎಂಬ ಮಾತೃ ಹೃದಯ
In reply to ಉ: ಹಿಡಿಂಬೆ ಎಂಬ ಮಾತೃ ಹೃದಯ by sathishnasa
ಉ: ಹಿಡಿಂಬೆ ಎಂಬ ಮಾತೃ ಹೃದಯ