ಹಿಮದರಾಶಿಯ ಮಡಿಲಲ್ಲಿ ನಿಂತು...... ಹಿಮವದ್ ಗೋಪಾಲಸ್ವಾಮಿ ಬೆಟ್ಟ........

ಹಿಮದರಾಶಿಯ ಮಡಿಲಲ್ಲಿ ನಿಂತು...... ಹಿಮವದ್ ಗೋಪಾಲಸ್ವಾಮಿ ಬೆಟ್ಟ........

ಬರಹ

ದ್ವಾಪರದ ಕೃಷ್ಣನ ವೇಣುಗಾನಕ್ಕೆ ಗೋವುಗಳೆಲ್ಲಾ ಅವನ ಸುತ್ತಲು ಬಂದು ಸೇರುತ್ತಿದ್ವಂತೆ. ಇಂದು ಅದೇ ಕೃಷ್ಣ, ಬೆಟ್ಟದ ತುದಿಯಲ್ಲಿ ನಿಂತು ತನ್ನ ಕೊಳಲಿನಿಂದ ಸುಮಧುರ ಗಾನ ಸುಧೆ ಹರಿಸ್ತಿದ್ದಾನೆ, ಪ್ರಕೃತಿ ದೇವತೆ ಅವನ ಸುತ್ತಲು ಅಮೋಘವಾಗಿ ನರ್ತಿಸುತ್ತಿದ್ದಾಳೆ, ಈ ಗಾನ ಮತ್ತು ನೃತ್ಯ ನೋಡಲು ನೀವು ಸೇರಬೇಕಾದ ಸ್ಥಳ: ಹಿಮವದ್ ಗೋಪಾಲ ಸ್ವಾಮಿ ಬೆಟ್ಟ, ಮಾರ್ಗ:ಬೆಂಗಳೂರು-ಮೈಸೂರು-ಗುಂಡ್ಲುಪೇಟೆ-ಅಲ್ಲಿಂದ ಕೇವಲ ೨೨ ಕಿ.ಮೀ. ಬಂಡಿಪುರದಿಂದ ೧೦ ಕಿ,ಮೀ. ಸಮಯ: ಬೆಳಿಗ್ಗೆ: ೭ ರಿಂದ ಸಂಜೆ ೫ (ಇದು ಅರಣ್ಯ ಇಲಾಖೆ ವಿಧಿಸಿರುವ ಸಮಯ) ಪ್ರವೇಶ ಧನ ಕಾರಿನಲ್ಲಾದರೆ ೫೦ ರೂಪಾಯಿ,ಬೈಕಿನಲ್ಲಾದರೆ ೨೫ ರೂಪಾಯಿಗಳು. ಬೆಂಗಳೂರಿನಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಸಹ ಬೆಟ್ಟಕ್ಕೆ ನೇರವಾಗಿ ಬಸ್ಸೊಂದು ಸಂಚರಿಸುತ್ತದೆ.

               ಜಗತ್ತಿನಲ್ಲಿ ಸಮಸ್ಥ ಸೌಂದರ್ಯವನ್ನು ಒಂದಡೆ ರಾಶಿ ಹಾಕಿದ್ರೆ ಅದೇ ಹಿಮವದ್ ಗೋಪಾಲ ಸ್ವಾಮಿ ಬೆಟ್ಟ. ಮೂಲತಃ ಪಶ್ಚಿಮ ಘಟ್ಟಗಳ ಸಾಲಿಗೆ ಸೇರಿದ್ರು, ತನ್ನ ಅನುಪಮ ಸೌಂದರ್ಯದಿಂದ, ತನ್ನದೆ ಆದ ಪ್ರತ್ಯೇಕ ಸಾಲಿನಲ್ಲಿ ನಿಲ್ಲುತ್ತೆ. ಬೆಂಗಳೂರಿನಿಂದ ೫ ಘಂಟೆಗಳ ಪ್ರಯಾಣದ ಅವಧಿಯಲ್ಲಿ(೨೦೫ ಕಿ,ಮೀ.) ಇಂತಹ ರುದ್ರ-ರಮಣೀಯ ಸ್ಥಳ ಇದೆ ಅಂದ್ರೆ ಆಶ್ಚರ್ಯ ಆಗಬಹುದು.

              ನಾವೊಂದಷ್ಟು ಜನ ಹವ್ಯಾಸಿ ರಂಗಭೂಮಿ ಕಲಾವಿದರು ಅಲ್ಲಿಗೆ ಹೊರಟುನಿಂತಾಗ, ನಮಗೆ ಸಿಕ್ಕ ಮಾಹಿತಿ ಅಷ್ಟಕ್ಕಷ್ಟೆ, ಬೆಂಗಳೂರಿನಿಂದ ಮೈಸೂರು ರಸ್ತೇಲಿ ಹೋಗ್ತಾ, ಶ್ರೀರಂಗಪಟ್ಟಣದ  ರಂಗನಾಥ, ನಿಮಿಷಾಂಭ    ಮೈಸೂರಿನ ಚಾಮುಂಡಿ ದರ್ಶನ ಪಡೆದು ಗುಂಡ್ಲುಪೇಟೆಗ್ ಹೋಗಿ, ವಸತಿ ಗೃಹವೊಂದರಲ್ಲಿ ತಳವೂರಿದ್ವಿ, ಅದು ಕೈಗೆಟಕುವ ಬೆಲೆ, ೩೫೦ ರಿಂದ ೭೦೦ ರೂಪಾಯಿಗಳವರೆಗು ಇಬ್ಬರು ಮಲಗುವ ಕೋಣೆ ದೊರೆಯುತ್ತೆ. ಇದಿಷ್ಟು ಕಾರ್ಯಕ್ರಮ ಮುಗಿದದ್ದು ೪ ಘಂಟೆಗೆ, ಇನ್ನು ಸಮಯ ಇತ್ತಲ್ಲಾ, ಸೀದಾ ಅಲ್ಲಿಂದ ೨೨ ಕೀ,ಮಿ ದೂರದ ಹಿಮವದ್ ಗೋಪಾಲ ಸ್ವಾಮಿ ಬೆಟ್ಟಕ್ಕೆ ಹೊರಟ್ವಿ. ಈ ಸ್ಥಳದ ಹೆಸರು ಕೇಳಿದ್ರೆ, ಅದು ಇನ್ನೊಂದು ಚಾಮುಂಡಿ ಬೆಟ್ಟಾನೋ, ನಂದಿನೋ, ಸಾವನದುರ್ಗಾನೋ ಅಂತ ಅಂದ್ಕೊಡ್ರೆ, ಅದು ತಪ್ಪಾಗುತ್ತೆ. ನಾವು ಆರಂಭದಲ್ಲಿ ಹಾಗೆ ಅಂದ್ಕೊಡಿದ್ವಿ. ಅಲ್ಲಿಗೆ ಹೋಗಿ ಬಂದವರೆಲ್ಲ ಒಂದೆ ಮಾತು. ಅಲ್ಲಿ ಉಳಿದುಕೊಳ್ಳಕ್ಕೆ ಜಾಗ ಇಲ್ಲ. ತಿನ್ನೋಕೆ ಕುಡಿಯೋಕೆ ಏನೂ ಸಿಗೋಲ್ಲ.  ಇದು ಮೇಲ್ನೋಟಕ್ಕೆ ಆರೋಪ ಅನ್ನಿಸ್ತದೆ. ಆ ಜಗವನ್ನೆ ಹಾಗೆ ಇಟ್ಟಿರೋದು ನಿಜಕ್ಕೂ ಒಳ್ಳೇದೆ. ಇಲ್ದಿದ್ರೆ, ಚಾಮುಂಡಿ ಬೆಟ್ಟದ ಥರ, ಅಲ್ಲೊಂದು ಸಂತೆನೆ ನೆರೆದಿರ್ತಿತ್ತು. ಬೆಟ್ಟದ ಪ್ರವೇಶದಲ್ಲೆ ಅರಣ್ಯ ಇಲಾಖೆಯ  ಚೆಕ್ ಪೋಸ್ಟಿದೆ. ಅಲ್ಲಿ ಶುಲ್ಕ ಕಟ್ಟುವಾಗ, ಮಧ್ಯಪಾನ, ಧೂಮಪಾನ, ಮಾಂಸಾಹಾರಕ್ಕೆ ಅವಕಾಶವಿಲ್ಲ. ಸಂಜೆ ೬ ಘಂಟೆ ಮೇಲೆ ಅಲ್ಲಿ ಇರೋಹಾಗಿಲ್ಲ. ರಾತ್ರಿ ವಾಸ್ತವ್ಯ ಅಂತೂ ಇಲ್ಲವೇಇಲ್ಲಾಂತ ವನಪಾಲಕರೆ ಎಚ್ಚರಿಸ್ತಾರೆ. ಸಂಜೆ ೭ ರ ನಂತರ ಕಾಡಾನೆಗಳ ಸಂಚಾರ ಶುರುವಾಗತ್ತೆ. ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಎಚ್ಚರಿಕೆ ಅದು. ಮೇಲು ನೋಟಕ್ಕೆ ಇಂತ ಎಚ್ಚರಿಕೆ  ಸಲಹೆಗಳು ಎಲ್ಲ ಕಡೆ ಮಾಮೂಲು ಅಂತ ಅನ್ನಿಸಿದ್ರು ಸ್ವಲ್ಪ ಹೊತ್ತಿನಲ್ಲೆ ಅದು ನಿಜವಾಗುವ ಅನುಭವ ನಮಗಾಯ್ತು.

ಬೆಟ್ಟ ಹತ್ತೋಕೆ ಮುಂಚೆ ಮೇಲೆ ನಡುಕ ಹುಟ್ಟಿಸೋಷ್ಟು ಚಳಿಯಾಗುತ್ತೆ ಅನ್ನೋ ಯಾವ ಸೂಚನೆನೂ  ಅಲ್ಲಿನ ವಾತಾವರಣದಲ್ಲಿ ಸಿಗೋಲ್ಲ. ಎರಡು ಕಿಲೋಮೀಟರ್ ಅಂತರದಲ್ಲಿ ಶುರುವಾಗುತ್ತೆ ನೋಡಿ ತಂಡಿಯ ಅನುಭವ. ಪ್ರಾರಂಭದಲ್ಲಿ, ಹವಾನಿಯಂತ್ರಣದ ಅನುಭವ ಅನ್ನಿಸಿದ್ರು, ಆಮೇಲೆ ಗಾಳಿ ಬೀಸೋಕೆ ಶುರುವಾದ್ರೆ, ಹಲ್ಲುಗಳೆಲೆಲ್ಲಾ ಕಟಕಟಾಂತಾ  ಮೈ ನಡುಗೋಕೆ ಶುರುವಾಗುತ್ತೆ. ೬ ಕಿ.ಮಿ. ಕೆಳಗಿನ ಪ್ರದೇಶದಲ್ಲಿ ಶೆಖೆ. ಅಲ್ಲಿ ಮೇಲೆ ಗಡಗಡ ನಡುಗಿಸೋ  ಚಳಿ. ಜೂನ್‍ನಲ್ಲೆ ಹೀಗೆ ಇನ್ನು ಡಿಸೆಂಬರ್‍ನಲ್ಲಿ ಆ ಕೃಷ್ಣನೆ ಗತಿ.

ಬೆಟ್ಟದ ತುದಿ ತಲುಪುತ್ತಿದ್ದಂತೆ ಬೆಕ್ಕಸ ಬೆರೆಗಿನ ಉದ್ಗಾರ. ಅರಳಿದ ಕಂಗಳು, ಮೂಕ ವಿಸ್ಮಿತ ನೋಟ, ಮಾತು ಮರೆತ ಮೆದುಳು, ಭೂಲೋಕವೂ, ಗಂಧರ್ವ ಲೋಕವೋ, ಒಂದು ತಿಳಿಯದ ಗೊಂದಲ. ಇದು ತಕ್ಷಣಕ್ಕಾಗುವ ಅನುಭವ. ಎತ್ತಣಿಂದೆತ್ತಾ ನೋಡಿದರು ಹಚ್ಚ ಹಸುರಿನ ರಾಶಿ. ಅತ್ತ ಓಡುವಾಸೆ, ಆದರೆ ಗೋಪಾಲನನ್ನು ಕಾಣದೆ ಹೋಗುವುದಾದ್ರು ಹೇಗೆ. ದೈವ ಭಕ್ತಿ ನಮ್ಮ ಕಾಲುಗಳನ್ನು ದೇವಾಲಯದೆಡೆಗೆ ಎಳೆದರೆ, ಕಣ್ಣು ಮತ್ತು ಮನಸ್ಸು ಮಾತ್ರ ಕೃಷ್ಣನ ಲೀಲಾಲೋಕದ ಕಡೆ. ನಮಗೆ ಅರಿವಿಲ್ಲದಂತೆ ದೇವಾಲಯದ ಬಳಿ ಬಂದಿರ್ತಿವಿ.

ಆ ಕಾಡಿನ ಸೌಂದರ್ಯಕ್ಕೆ ಮನಸೋತ ಆ ಕೃಷ್ಣನೇ ನಾಟ್ಯಭಂಗಿಯಲ್ಲಿ ನಿಂತು, ಕೊಳಲು ನುಡಿಸುತ್ತಾ ಮಂದಸ್ಮಿತವಾಗಿ ನಸುನಗುತ್ತಾ ಗರ್ಭಗುಡಿಯಲ್ಲಿ ನಿಂತಿದ್ದಾನೆ. ಅದೆಂತಹ ಸುಂದರ ಮೂರ್ತಿ. ಅವನೆದುರು ನಿಂತು ಕಣ್ಮುಚ್ಚಿದರೆ, ಕಿವಿಗೆ ಕೊಳಲಿನ ಇಂಪಿನ ದನಿ. ಮನದಲ್ಲಿ ಹೊರಗಿನ, ಪ್ರಕೃತಿಸೌಂದರ್ಯ, ಇವೆರೆಡರಲ್ಲು ಲೀನವಾಗಿ ನಾನು ನಿನ್ನೊಳಗೋ, ನೀನು ನನ್ನೊಳಗೊ ಎಂಬಂತೆ ದರುಶನ ನೀಡುವ ಆ ಭಗವಂತ. ದರುಶನ ಮುಗಿಸಿ ಅಲ್ಲಿನ ಅರ್ಚಕರು ಕೊಡುವ ಅಮೃತ ಸಮಾನವಾದ, ರುಚಿಯಾದ ಸಿಹಿ ಪೊಂಗಲ್ ಮತ್ತು ಪುಳಿಯೋಗರೆ ಎಂಬ ಪ್ರಸಾದ ಸವಿದು ಹೊರ ಬಂದ್ರೆ ಕೃಷ್ಣನ ಲೀಲಾ ಲೋಕ, ಕಾಡಿನ ರೂಪದಲ್ಲಿ ನಮ್ಮನ್ನು ಕೈ ಬೀಸಿ ಕರೆಯುತ್ತೆ. ಪುಟಿದೇಳುವ ಮನಸ್ಸು, ಚಿಗರೆಯಂತ ಉತ್ಸಾಹ, ಕಾಡಿನ ಗರ್ಭದಲ್ಲಿ ಲೀನವಾಗಿ ಬಿಡಬೇಕೆಂಬ ಬಯಕೆ. ಕಾಡಿನೊಳಗೆ ಪ್ರಯಾಣ ಶುರುವಾದ್ರೆ ಅವರ್ಣನೀಯ ಅನುಭವ. ಹಚ್ಚ ಹಸಿರಿನ ಬೋಳುಗುಡ್ಡ. ಅದರ ಹಿಂದೆ ಅಗಾಧ ಮರಗಳಿಂದ ತುಂಬಿದ ದಟ್ಟ ಹಸಿರಿನ ವನ, ಅಲ್ಲಲ್ಲಿ ಬಂಡೆಗಳು, ಕೊಳಗಳು, ಎಲ್ಲಿಂದಲೋ ಕೇಳುವ ಹಕ್ಕಿಗಳ ಗಾನ, ತಂಪಾದ ಗಾಳಿ, ಅವುಗಳ ಕೂಗು, ಸಾರಂಗ, ಜಿಂಕೆಗಳ ನೆಗೆದಾಟ. ಅಬ್ಬಬ್ಬ ಇದೇ ಇರಬೇಕು  ಕೃಷ್ಣನ ಗೋವರ್ಧನ ಗಿರಿ. ಹೀಗೆ ಮನಸ್ಸುಗಳು ಕಾವ್ಯಾತ್ಮಕವಾಗಿ ಆಲೋಚಿಸ್ತಿದ್ರೆ ಸಮಯದ ಅಭಾವ ಸಂಜೆ ಅಗ್ತಿದ್ದಂಗೆ, ವನಪಾಲಕರ ಎಚ್ಚರಿಕೆ ಮಾತುಗಳು ಜ್ಞಾಪಕಕ್ಕೆ ಬಂದು ಅಲ್ಲಿಂದ ಒಲ್ಲದ ಮನಸ್ಸಿನಿಂದ ಹಿಂದಿರುಗಿದ್ದಾಯ್ತು. ರಾತ್ರಿ ಎಲ್ಲಾ ಕನಸಿನಲ್ಲಿ ಅದೇ ದೃಶ್ಯ, ಮತ್ತೆ ಬೆಳಿಗ್ಗೆ ೫ ಘಂಟೆಗೆ ಎದ್ದು ನಿತ್ಯ ಕರ್ಮಗಳನ್ನ ಮುಗಿಸಿ ಮತ್ತೆ ಮುಂಜಾನೆ ಅಲ್ಲಿಗೆ ಹಾಜರು. ಮುಂಜಾನೆ ಭೇಟಿ ನಿಜಕ್ಕು ಅವಿಸ್ಮರಣೀಯ. ಅರಣ್ಯವೇ ಮಾಯ. ಆಗಸದಲ್ಲಿ ನಿಂತ ನಾರದನಂತೆ ನಾವುಗಳು. ಮೋಡಗಳ ಮಡಿಲಿನಲ್ಲಿ ಓಲಾಡುತ್ತಿರುವ ಅನುಭವ. ಸುತ್ತಲು ನಮ್ಮನ್ನಾವರಿಸಿದ ಹಿಮ, ಆ ಹಿಮದಲ್ಲಿ ಲೀನವಾದ ಅರಣ್ಯ. ಅದರೊಳಗೆ ನಾವು ನಮ್ಮೊಳಗೆ ಭಗವಂತ. ಅದೊಂದು ಆಧ್ಯಾತ್ಮಿಕ ಅನುಭವ. ಮಧ್ಯಾಹ್ನ ೧೧ ಘಂಟೆವರೆಗೂ ಹಿಮದ ರಾಶಿ. ಹತ್ತಿಪ್ಪತ್ತು ಅಡಿಯ ದೂರದ ದೃಶ್ಯಗಳು ಕಣ್ಮರೆ. ಗಾಳಿ ಬೀಸಿದಾಗ ಕಾಣುವ ಅರಣ್ಯ, ಅಬ್ಬಬ್ಬಾ ಇಂತಹ ರಮಣೀಯ ದೃಶ್ಯಗಳು ಅಡಿಗಡಿಗೆ ಹಿಂದಿನ ದಿನ ಸಂಜೆನೆ ಚಳಿ ಅನುಭವ ಆಗಿದ್ರಿಂದ ಬೆಚ್ಚಗಿನ ಉಡುಪು ಧರಿಸಿ ಬಂದಿದ್ರಿಂದ ಚಳಿಯಿಂದ ಸ್ವಲ್ಪ ಪಾರಾದ್ವಿ. ಆದರು ಗಡಗಡ ನಡುಗಿಸುವ ಚಳಿ. ಊಟಿ ಕೊಡೈಕೆನಾಲ್‍ನ ನೀವಾಳಿಸಬೇಕು. ಇದರ ಸೌಂದರ್ಯದ ಮುಂದೆ. ಹನ್ನೊಂದರ ನಂತರ ಶುರುವಾಯ್ತು. ಪ್ರಕೃತಿ ಮಾತೆಯ ನರ್ತನದ ದೃಶ್ಯಗಳ ಸರಮಾಲೆ. ಅಷ್ಟರಲ್ಲಿ ಅಲ್ಲಿ ನೋಡಿ ಆನೆಗಳು ಅನೋ ಉದ್ಗಾರ. ದೂರದಲ್ಲ್ ನಾಲ್ಕು ಆನೆಗಳೊಂದಿಗೆ ಬರ್ತಿದೆ ಸಣ್ಣ ಮರಿಯಾನೆಯೊಂದು. ಅದೆಂತಹ ಗಜ ಗಾಂಭೀರ್ಯ. ಝೂನಲ್ಲಿ ನೋಡೋಕ್ಕೂ ಆ ಕಾಡಿನ ಮದ್ಯ ನೋಡೊಕು. ಅದೆಂತಹ ವ್ಯತ್ಯಾಸ. ಸುಮಾರ್ ೪೫ ನಿಮಿಷ ಗಜ ಪಡೆಯ ದರ್ಶನ. ಅಷ್ಟ್ರಲ್ಲಿ ನಾವೇನ್ ಕಮ್ಮಿ ನಮ್ಮನ್ನೂ ನೋಡಿಂತ ಬಂದ್ವು ಸಾರಂಗಗಳ ಹಿಂಡು. ಅಯ್ಯಯ್ಯೊ ಬೈನಾಕುಲರ್ ತರಲಿಲ್ವೆ ಅನ್ನೋ ಸಂಕಟ. ಆದ್ರು ಕಣ್ಣಿಗೆ ಸ್ಪಷ್ಟವಾಗಿ ಗೋಚರ , ಸಾರಂಗಗಳು ಮೇಯ್ತಿದ ಬೋಳುಗುಡ್ಡದ ಪಕ್ಕದ ಗುಡ್ಡದಿಂದ ಬಂತು ನೋಡಿ ಜಿಂಕೆಗಳ ಹಿಂಡು. ಜಿಂಕೆ, ಸಾರಂಗ, ಆನೆಗಳು, ಒಂದೆಡೆ ಕೂತು ಮೂರು ವನ್ಯಜೀವಿಗಳ ಗುಂಪನ್ನು ನೋಡೋ ಸೌಭಾಗ್ಯ. ನಮ್ಮನ್ನು ಕಂಡು ಬೆದರಿದಂತೆ ವರ್ತಿಸಿದ ಆನೆಗಳ ಹಿಂಡು ಒಮ್ಮೆ ಜೋರಾಗಿ ಘೀಳಿಟ್ವು. ನಮ್ಮನ್ನು ಹೆದರಿಸಲಿಕ್ಕೆ ಶುರು ಮಾಡಿದ್ವು. ಅದಕ್ಕೇನ್ ಗೊತ್ತು. ಅವು ನಮ್ಮೆಡೆ ತಿರುಗಿ ಒಂದೆಜ್ಜೆ ಇಟ್ಟ್ವು. ನಾವು ಅಲ್ಲಿಂದ ಓಡ್ತೀವಂತಾ. ಆದರು ನಮಗು ಏನೋ ಭಂಡ ಧೈರ್ಯ. ಅಲ್ಲೆ ಇದ್ವಿ. ಕೆಲ ಕ್ಷಣದ ನಂತರ ನಮ್ಮಿಂದ ಅವಕ್ಕೇನು ತೊಂದರೆ ಇಲ್ಲಾಂತ ಗೊತ್ತಾಗಿ ಹಾಯಾಗಿ ಮರಿ ಜೊತೆ ಮೇಯ್ತಾ ಮೇಯ್ತಾ ನಲಿದಾಡೋಕೆ ಶುರು ಮಾಡಿದ್ವು. ನಮ್ಮ ಕಣ್ಣುಗಳಿಗೂ ಮತ್ತು ಕ್ಯಾಮರಾಕ್ಕೂ ಬಿಡುವು ಅಂಬೋದೆ ಇಲ್ಲಾ. ಗಜಪಡೆಯನ್ನ ಕ್ಯಾಮರಾದಲ್ಲಿ ಹೆಡೆಮುರಿಕಟ್ಟಿ ಸೆರೆಹಿಡಿದ್ದಾಯ್ತು. ಜಿಂಕೆ ಸಾರಂಗಗಳು ತುಂಬಾ ದೂರದಲ್ಲಿ ಇದ್ದಿದ್ರ್ರಿಂದ ಅಷ್ಟಾಗಿ ಚಿತ್ರೀಕರಿಸಲಿಕ್ಕಾಗಲಿಲ್ಲ. ಬೆಳಿಗ್ಗೆ ಗುಂಡ್ಲುಪೇಟೆಯಿಂದಾಚೆ ಬರ್ತಾ ಇಡ್ಲಿ ಕಟ್ಟಿಕೊಂಡು ಬಂದ್ರಿಂದ ಹಸಿವ್ ನೀಗ್ತು. ಗಡಿಯಾರ ತಿರುಗೋದೆ ತಿಳಿಯೋಲ್ಲ. ಈ ಕಾಡಿನ ಅಗಾಧತೆ ತಿಳಿದೆ ಯಾವುದೆ ತಯಾರ್ ಇಲ್ದೆ ಬಂದಿದ್ರಿಂದ ಅನಿವಾರ್ಯವಾಗಿ ಅಲ್ಲಿಂದ ತೆರಳಬೇಕಾಯ್ತು. ಕರ್ನಾಟಕದ ಅತ್ಯಂತ ಹೆಮ್ಮೆಯ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟ. ಪ್ರಚಾರದಿಂದ ತುಂಬಾ ದೂರ. ಅದರಿಂದಾನೆ ಇರಬೇಕು ಇಲ್ಲಿನ ವನ್ಯ ಸಿರಿ ತೀರ ಸಹಜವಾಗಿದೆ. ಆದರು ಈ ಸ್ಥಳ ಎಲ್ಲರಿಗೂ ತಿಳಿಬೇಕು ಆದರೆ ಮುಖ್ಯವಾಗಿ ನಮ್ಮ ಪ್ರವಾಸೋದ್ಯಮ ಇಲಾಖೆಗಂತು ಇದು ತಿಳಿಲೇ ಬಾರ್ದು. ತಿಳಿದ್ರೆ ಚಾಮುಂಡಿ ಬೆಟ್ಟದ ತರ ಇಲ್ಲು ಸಂತೆ ಕಟ್ಟಿ ಸೂರು ಪಾರು ಅಂತ ಮತ್ತೊಂದು ನಂದಿನೋ ಇಲ್ಲಾ  ದೇವರಾಜ ಮಾರ್ಕೆಟ್ಟೋ  ನಿರ್ಮಾಣ ಮಾಡ್ತಾರೆ. ಓದುಗರೆ, ಅಲ್ಲ್ ಹೋಗಿ ಅಲ್ಲಿ ಅದು ಸಿಗೋಲ್ಲ ಇದು ಸಿಗೋಲ್ಲಾಂತ ಗೊಣಗದೆ ಗುಂಡ್ಲುಪೇಟೆಲಿ ಉಳಿದು ನಮಗೆ ಬೇಕಾದಲ್ಲೆ ಅಲ್ಲೆ ತಗೊಂಡು ಬಳಸ್ಕೊಂಡು, ಅವನ್ನೆಲ್ಲಾ ಅಲ್ಲೆ ಬಿಟ್ಟು ಏನು ತೆಗೆದುಕೊಳ್ಳದೆ ಬರಿಗೈಲಿ ಅಲ್ಲಿಗ್ ಹೋಗಿ  ಊಟ ಮಾಡಬೇಕು ಅನ್ನಿಸಿದ್ರ ಬುತ್ತಿ ಕಟ್ಕೋಂಡ್ ಹೋಗಿ ದೇವಾಲಯದ ಆವರಣದಲ್ಲಿ ಖಾಲಿ ಮಾಡಿ ಉಳಿದ ತ್ಯಾಜ್ಯವನ್ನ ವಾಪಸ್ ಗುಂಡ್ಲುಪೇಟೆಗೆ ತಂದು ಅಲ್ಲೆಲ್ಲಾದ್ರು ಸೂಕ್ತಜಾಗದಲ್ಲಿ ವಿಲೇವಾರಿ ಮಾಡಿ. ದಯವಿಟ್ಟು ಈ ಯಾವ ವಿಚಾರವನ್ನ್ ಪ್ರವಾಸೋದ್ಯಮ ಇಲಾಖೆಗೆ ತಿಳಿಸಬೇಡಿ.

ಚಿತ್ರ ಮತ್ತು ಲೇಖನಃ 

 

ಶಿವಕುಮಾರ್ ಬಿ. ಎಸ್.

mahalakshmi layout

bengaluru.