ಹಿರಿಯರ ನೆನಪಿನ ಹಬ್ಬ ಮಹಾಲಯ ಅಮಾವಾಸ್ಯೆ ಅಥವಾ ಪಿತೃಪಕ್ಷ...

ಹಿರಿಯರ ನೆನಪಿನ ಹಬ್ಬ ಮಹಾಲಯ ಅಮಾವಾಸ್ಯೆ ಅಥವಾ ಪಿತೃಪಕ್ಷ...

ಇತಿಹಾಸದ ಸಾವಿರಾರು ವರ್ಷಗಳ ಅನುಭವಗಳು ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಒಂದು ಕ್ರಮಬದ್ಧ ಜೀವನಶೈಲಿ ರೂಪಿಸುವಲ್ಲಿ ಮಹತ್ವದ ಪಾಠ ಕಲಿಸುತ್ತವೆ. ಅದು ಮೂಡ ನಂಬಿಕೆಗಳಾಗದೆ ಸಹಜ ಸಾರ್ವತ್ರಿಕ ಸತ್ಯಗಳಾಗಿದ್ದರೆ ಅದರಿಂದ ಸಾಕಷ್ಟು ಪ್ರಯೋಜನ ಪಡೆಯಬಹುದು.

ನಮ್ಮ ಹಿರಿಯ ತಲೆಮಾರುಗಳನ್ನು ಪ್ರತಿ ವರ್ಷ ನೆನಪಿಸುವ ಮತ್ತು ಅವರ ಆದರ್ಶಗಳನ್ನು ಮೆಲುಕು ಹಾಕುವ ಹಾಗು ನಮ್ಮ ಮುಂದಿನ ಪೀಳಿಗೆಯವರಿಗೆ ಪರಿಚಯಿಸುವ ಒಂದು ಹಬ್ಬ ಈ‌ ಮಹಾಲಯ ಅಮಾವಾಸ್ಯೆ. ನಗರ ಮತ್ತು ಗ್ರಾಮೀಣ ಪ್ರದೇಶ ಎಂಬ ಭೇದವಿಲ್ಲದೆ ಬಹುತೇಕರ ಮನೆಯಲ್ಲಿ ಆಚರಿಸಲಾಗುತ್ತದೆ. ತೀರಿಹೋದ ಹಿರಿಯರ ನೆನಪಿಗಾಗಿ ಅವರ ಇಷ್ಟದ ಊಟ ಬಟ್ಟೆ ವಸ್ತುಗಳು ಇತ್ಯಾದಿಗಳನ್ನು ಇಟ್ಟು ಅವರಿಗೆ ಅರ್ಪಿಸಿದಂತೆ ಮಾಡಿ ನಾವೇ ಉಪಯೋಗಿಸುವುದು. ಜ್ಯೋತಿಷಿಗಳಂತು ಟಿವಿಗಳಲ್ಲಿ ಇದರ ಬಗ್ಗೆ ಇಲ್ಲಸಲ್ಲದ ಅನೇಕ ಮೌಢ್ಯಗಳನ್ನು ಹೇಳಿ ಜನರನ್ನು ಮತ್ತಷ್ಟು ದಿಕ್ಕು ತಪ್ಪಿಸುತ್ತಿದ್ದಾರೆ. ಬದಲಾದ ಕಾಲಮಾನದಲ್ಲಿ ಇದರ ಆಚರಣೆಯನ್ನು ಮತ್ತಷ್ಟು ವಿಶಾಲ ಮತ್ತು ಮಾನವೀಯಗೊಳಿಸಬಹುದು ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ...

ವ್ಯಕ್ತಿಯ ಸಾವೇ ಅವರ ಕೊನೆ. ಬದುಕಿದ್ದಾಗ ಎಷ್ಟೇ ಪ್ರಮುಖನಾಗಿದ್ದರೂ ಉಸಿರು ನಿಂತ ನಂತರ ಆತನ ದೇಹ ಪ್ರಕೃತಿಯಲ್ಲಿ ಲೀನವಾಗುತ್ತದೆ. ಅನಂತರ ನಾವು ಮಾಡುವ ಯಾವ ಕ್ರಿಯೆಗಳು ಚಟುವಟಿಕೆಗಳು ಅವನಿಗೆ ಅರಿವಾಗುವುದಿಲ್ಲ. ಅವೆಲ್ಲಾ ಬದುಕಿರುವವರ ಮಾನಸಿಕ ನೆಮ್ಮದಿಗಾಗಿ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳು. ಹೌದು ನಿಜ, ಸತ್ತ ವ್ಯಕ್ತಿ ಅದರಲ್ಲೂ ನಮ್ಮ ತಾತ ಅಜ್ಜಿ ಅಪ್ಪ ಅಮ್ಮ ಆಗಿದ್ದರೆ ಅವರನ್ನು ಅವರ ಒಳ್ಳೆಯ ಆದರ್ಶ ಗುಣಗಳನ್ನು ನೆನಪಿಸಿಕೊಳ್ಳುವುದು ಮತ್ತು ಅದನ್ನು ಪಾಲಿಸುವುದು ಬದುಕಿರುವ ಮುಂದಿನ ಪೀಳಿಗೆಯವರ ಕರ್ತವ್ಯ. ಅದರಲ್ಲಿ ಎರಡು ಮಾತಿಲ್ಲ.

ಆದರೆ, ಎಂದೋ ಸತ್ತಿರುವ ನಮ್ಮ ಹಿರಿಯರ ಹೆಸರಿನಲ್ಲಿ ಅನವಶ್ಯಕವಾಗಿ ಅವರಿಗೆ ತಲುಪದಿರುವ ಕಾರ್ಯಗಳನ್ನು ಸಂಪ್ರದಾಯವೆಂಬತೆ ಹಣ ಮತ್ತು ಸಮಯ ವ್ಯರ್ಥಮಾಡುವ ಬದಲು, ಜೀವಂತವಿರುವ ನಮ್ಮ ಅಜ್ಜ ಅಜ್ಜಿ ಅಪ್ಪ ಅಮ್ಮ ಚಿಕ್ಕಪ್ಪ ದೊಡ್ಡಮ್ಮ ಮುಂತಾದ ನಮ್ಮ ಅವಲಂಬಿತರ ಬದುಕಿನ ಕೊನೆಯ ಹಂತದಲ್ಲಿರುವ  ಹಿರಿಯ ಚೇತನಗಳಿಗೆ ಮಹತ್ವ ನೀಡಿ ವೃದ್ಧಾಪ್ಯದಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವುದು ಹೆಚ್ಚು ಉಪಯುಕ್ತವಲ್ಲವೇ. ಅದರಲ್ಲೂ ಇಂದಿನ ಆಧುನಿಕ ಜೀವನದಲ್ಲಿ ನೆಮ್ಮದಿಯ ಆಶ್ರಯಕ್ಕಾಗಿ ಪರಿತಪ್ಪಿಸುತ್ತಿರುವ ನಮ್ಮ ಪೋಷಕರಿಗೆ ನೆರವಾಗುವುದು ಸತ್ತ ವ್ಯಕ್ತಿಗೆ ನಾವು ತೋರಿಸುವ ಗೌರವಕ್ಕಿಂತ ಹೆಚ್ಚು ಮಾನವೀಯವಲ್ಲವೆ?

ಇದ್ದಾಗ ಅವರನ್ನು ಸರಿಯಾಗಿ ನೋಡಿಕೊಳ್ಳದೆ ತುಚ್ಚವಾಗಿ ಕಂಡು ಸತ್ತನಂತರ ಅವರಿಗಾಗಿ ಏನು ಮಾಡಿದರೇನು ಫಲ. ವಾಸ್ತವ ನೆಲೆಯಲ್ಲಿ ಆಗಿಹೋದವರನ್ನು ಮಾನಸಿಕವಾಗಿ ಗೌರವಿಸಿ ಕೃತಜ್ಞತೆ ಅರ್ಪಿಸೋಣ. ಆದರೆ ಅದರ ಜೊತೆಗೆ ನಮ್ಮೆಲ್ಲಾ ತನು ಮನ ಧನಗಳನ್ನು ಭೌತಿಕವಾಗಿ ನಮ್ಮೊಂದಿಗಿರುವ ನಮ್ಮ ಆತ್ಮೀಯ ಹಿರಿಯ ಜೀವಗಳಿಗೆ ಮೀಸಲಿಡೋಣ.

ಈ ಹಬ್ಬವನ್ನು ಹೆಚ್ಚು ಮಾನವೀಯ, ಜೀವಪರಗೊಳಿಸೋಣ. ಇದಕ್ಕಾಗಿ ಹೆಚ್ಚು ಶ್ರಮವೇನು ಪಡಬೇಕಾಗಿಲ್ಲ. ಕೇವಲ ಒಂದು ಸಣ್ಣ ಜೀವಪರ ನಿಲುವಿನಿಂದ ಇದು ಸಾಧ್ಯ. ಬದಲಾವಣೆ ಇಲ್ಲಿಂದಲೇ, ನಮ್ಮಿಂದಲೇ ಪ್ರಾರಂಭವಾಗಲಿ. ಅನುಭವದಿಂದ ಮೂಡಿದ ಸಾಂಪ್ರದಾಯಿಕ ವೈಚಾರಿಕ ಆಚರಣೆಗಳು ಕಾಲದ ಪರೀಕ್ಷೆಯಲ್ಲಿ ಮತ್ತಷ್ಟು ಹೊಳಪು ಮೂಡಿ ಹೆಚ್ಚು ಪ್ರಯೋಜನಕಾರಿಯಾಗಲಿ ಎಂಬ ಆಶಯವಷ್ಟೆ.

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ