ಹೆಜ್ಜೆ ಗುರುತು (ವಿಶ್ವಕಥಾಕೋಶ -೯)

ಹೆಜ್ಜೆ ಗುರುತು (ವಿಶ್ವಕಥಾಕೋಶ -೯)

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕರು: ನಿರಂಜನ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೬೫.೦೦, ಮುದ್ರಣ: ೨೦೧೧

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.

ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.

ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ ಸಂಕಲನವನ್ನು ಸಂಪಾದಿಸುವ ಗುರುತರವಾದ ಹೊಣೆಯನ್ನು ಹೊತ್ತವರು ಖ್ಯಾತ ಸಾಹಿತಿಯೂ, ಸ್ವತಃ ಶ್ರೇಷ್ಟ ಕಥೆಗಾರರೂ ಆದ ನಿರಂಜನರು.”

ಇದು ವಿಶ್ವಕಥಾಕೋಶದ ಮೊದಲ ಮುದ್ರಣದ ಸಮಯದಲ್ಲಿ ಬರೆದ ಪ್ರಕಾಶಕರ ನುಡಿ. ಈ ಕಥಾಕೋಶದ ಎಲ್ಲಾ ಪ್ರತಿಗಳು ಮುಗಿದು ಹೋದ ಕಾರಣ, ಹೊಸ ಓದುಗರಿಗೂ ಪುಸ್ತಕ ದೊರೆಯಬೇಕು ಎಂಬ ಸದಾಶಯದಿಂದ ೨೦೧೧ರಲ್ಲಿ ಎಲ್ಲಾ ಪುಸ್ತಕಗಳ ದ್ವಿತೀಯ ಮುದ್ರಣ ಮಾಡಲಾಯಿತು. ಆ ಸಮಯದಲ್ಲಿ ಪ್ರಕಾಶಕರ ನುಡಿ ಹೀಗಿದೆ. 

“ನವಕರ್ನಾಟಕ ಪ್ರಕಾಶನದ ೫೦ರ ಸಂಭ್ರಮದಲ್ಲಿ ‘ವಿಶ್ವಕಥಾಕೋಶ'ದ ಇಪ್ಪತ್ತೈದು ಸಂಪುಟಗಳನ್ನು ಪುನರ್ಮುದ್ರಿಸಿ ಓದುಗರ ಕೈಗಿಡುತ್ತಿದ್ದೇವೆ. ಮೂವತ್ತು ವರ್ಷಗಳ ಕಾಲ ಅಲಭ್ಯವಾಗಿದ್ದ ಜಗತ್ತಿನ ಸಾಹಿತ್ಯ ಕಥಾ ಕಣಜ ಬೆಳಕು ಕಾಣುವ ಸಮಯದಲ್ಲಿ ಈ ಯೋಜನೆಯ ಹೊಣೆ ಹೊತ್ತ ಶ್ರೇಷ್ಟ ಕಥೆಗಾರ, ಸಾಹಿತಿ ನಿರಂಜನರು ನಮ್ಮೊಂದಿಗೆ ಇದ್ದಿದ್ದರೆ, ನವಕರ್ನಾಟಕದ ಚಿನ್ನದ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಈ ಸಂಪುಟಗಳನ್ನು ಅವರಿಗೆ ಅರ್ಪಿಸಿ, ಅವರನ್ನು ನೆನೆಯುತ್ತೇವೆ.”

ಈ ಸಂಪುಟದ ಬೆಲೆ ಕೈಗೆಟಕುವಂತಿದೆ. ಅದಕ್ಕೆ ಕಾರಣ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾದ ಶ್ರೀಮತಿ ಸುಧಾ ಮೂರ್ತಿಯವರು. ಈಗ ನಮ್ಮ ಕೈಯಲ್ಲಿರುವುದು ವಿಶ್ವಕಥಾಕೋಶದ ಒಂಬತ್ತನೆಯ ಸಂಪುಟ ‘ಹೆಜ್ಜೆ ಗುರುತು’'. ವಿಶ್ವಕಥಾಕೋಶದ ೯ನೇ ಸಂಪುಟದಲ್ಲಿ ರಷ್ಯ ಹಾಗೂ ನೆರೆಹೊರೆ ದೇಶಗಳ ಕಥೆಗಳಿವೆ. ‘ಹೆಜ್ಜೆ ಗುರುತು' ಸಂಪುಟದಲ್ಲಿ ೧೭ ಕಥೆಗಳಿವೆ. ಸಂಕಲನಕಾರ ಗುರುತಿಸಬೇಕಾದ ವಿವಿಧ ಅಂಶಗಳಲ್ಲಿ ಗ್ರಂಥವಿಸ್ತಾರವೂ ಒಂದು. ಹೀಗಾಗಿ ಪೂಷ್ಕಿನ್, ಗಗೋಲರ ನೀಳ್ಗತೆಗಳನ್ನು ಅನಿವಾರ್ಯವಾಗಿ ಈ ಸಂಪುಟದಿಂದ ಕೈ ಬಿಟ್ಟಿದ್ದಾರೆ. ಆದರೂ ರಷ್ಯಾ ಕ್ರಾಂತಿ ಪೂರ್ವ ಕಾಲದ ಐದು ಶ್ರೇಷ್ಟ ಕಥೆಗಳು ಈ ಸಂಕಲನದಲ್ಲಿವೆ. ಉಳಿದ ೧೨ ಕಥೆಗಳು ಕ್ರಾಂತಿಯ ಅನಂತರದ ಸೃಷ್ಟಿ. ಸಮಾಜಿಕ, ಆರ್ಥಿಕ, ರಾಜಕೀಯ, ಸಾಹಿತ್ಯಕ, ಸಾಂಸ್ಕೃತಿಕ ಹಿನ್ನಲೆ ನೀಡುವ ಪ್ರಸ್ತಾವನೆಯೂ, ಇಲ್ಲಿರುವ ಹದಿನೇಳು ಕಥೆಗಳೂ ಓದುಗರಿಗೆ ಹೊಸತನದ ಅನುಭವ ನೀಡುತ್ತವೆ.

ಈ ಪುಸ್ತಕದಲ್ಲಿ ಇರುವ ೧೭ ಕಥೆಗಳೆಂದರೆ, ಹೆಜ್ಜೆ ಗುರುತು (ಲೆವ್ ತಲ್ ಸ್ತೋಯ್), ಕ್ರಿಸ್ ಮಸ್ ವೃಕ್ಷ ಮತ್ತು ಮದುವೆ (ಫ್ಯೂದರ್ ದಸ್ತಯೆವ್ ಸ್ಕಿ), ಗಂಟೆ ಬಾರಿಸುವ ಮುದುಕ ( ವ್ಲದಿಮೀರ್ ಕರಲ್ಯೆಂಕ), ಪಣ ( ಅಂತೋನ್ ಚೇಹವ್), ಮಕರ್ ಚಂದ್ರ ( ಮಾಕ್ಸಿನ್ ಗೋರ್ಕಿ), ಪ್ರಶಾಂತ ಹುಲ್ಲುಗಾವಲು ( ಮಿಖೈಯಿಲ್ ಶೋಲಹೆವ್), ಚಳಿಗಾಲದ ಒಂದು ರಾತ್ರಿ (ರುಸ್ತುಮ್ ಇಬ್ರಗಿಂಬೈಕವ್), ಮೂರನೆಯ ಸಹಾಯಕ (ಕಾನ್ ಸ್ತಂತಿನ್ ಸಿಮನವ್), ಸೇಬಿನ ಮರ (ನಿಕಲೈ ತೀಖನವ್), ಗೇಟಿನ ಬಳೀ ಮೂವರು ಹುಡುಗರು ( ವಿಯರ್ರಾ ಪನೋವ), ದೃಷ್ಟಿದಾತ (ಅಬ್ದುಲ್ಲಾ ಕಹ್ಹಾರ್), ದಿಗ್ರಾಸ್ಸೊ (ಇಸ್ಸಾಕ್ ಬಬಿಲ್), ಅಂತ್ಯವಿಲ್ಲದ ಪ್ರೇಮಗೀತೆ (ಅಲ್ ಬೆರ್ತ್ ಬೆಲ್ಸ್), ನಿಶಿದ್ಧ ಫಲ (ಫಜಿಲ್ ಇಸ್ಕಂದರ್), ಹಾಯಿಪಟಗಳು (ಯೂರಿಹ್ ಋತ್ ಹೆವು), ಸೈನಿಕನ ಮಗ (ಜಿಂಗೀಜ್ ಐತ್ ಮಾತವ್), ದೇವಶಿಲ್ಪಿ (ಅನೀಲ್ಯುಸ್ ಮಾರ್ಕೇವಿಚೂಸ್).

ಇಲ್ಲಿರುವ ಎಲ್ಲಾ ಕಥೆಗಳ ಲೇಖಕರ ಬಗ್ಗೆ ಪುಟ್ಟದಾದ ಮಾಹಿತಿಯನ್ನು ಕೊನೆಯ ಪುಟಗಳಲ್ಲಿ ನೀಡಲಾಗಿದೆ. ಇದರಿಂದ ಅಪರಿಚಿತರಾಗಿರುವ ಲೇಖಕರನ್ನು ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಲ್ಲಿರುವ ಕಥೆಗಳನ್ನು ಕೆ.ಎಸ್.ನಿಸಾರ್ ಅಹಮದ್ ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ದ್ವಿತೀಯ ಮುದ್ರಣವನ್ನು ಪ್ರಕಾಶಕರು ಈ ಸಂಪುಟದ ಮುಖ್ಯ ಸಂಪಾದಕರಾದ ನಿರಂಜನ ಅವರಿಗೇ ಅರ್ಪಿಸಿದ್ದಾರೆ. ಪುಸ್ತಕ ಸುಮಾರು ೨೧೦ ಪುಟಗಳನ್ನು ಹೊಂದಿದೆ. ರಷ್ಯಾ ದೇಶದ ಕಥೆಗಳನ್ನು ಓದಿ ಆನಂದಿಸಲು ಇದು ಸೂಕ್ತ ಪುಸ್ತಕವಾಗಿದೆ.