ಹೆತ್ತ ತಾಯಿಗೆ ಬೆಂಕಿ ಇಡಲಾಗದವ..

ಹೆತ್ತ ತಾಯಿಗೆ ಬೆಂಕಿ ಇಡಲಾಗದವ..

ಆತ ಅಂದು ಬೆಳಿಗ್ಗೆಯೇ busy ಯಾಗಿದ್ದ ಇಂದಿನ ಕಾರ್ಯಕ್ರಮದಲ್ಲಿ ಅತ್ಯಂತ ಶ್ರೇಷ್ಠ ಕೆಲಸವೊಂದನ್ನು ಮಾಡುವವನಿದ್ದ. ಆತ ... ಹೌದು ಆ ಗೋಶಾಲೆಯ ಅನಾಥ ಗೋವೊಂದನ್ನು ದತ್ತು ಸ್ವೀಕರಿಸುವ ಪವಿತ್ರ ಕೆಲಸ ಇಂದಿನ ಅವನ ಲೀಸ್ಟ್ ನಲ್ಲಿತ್ತು. ಅದಕ್ಕೆoದೇ ಮೀಡಿಯಾ ಕವರೇಜ್, ಫೋಟೋಗಾಗಿ ಒಂದಿಷ್ಟು ಜನ ಎಲ್ಲವೂ ವ್ಯವಸ್ಥೆ ಆಗಿತ್ತು. ಇನ್ನೇನು ಕಾರ್ಯಕ್ರಮಕ್ಕೆ ಹೊರಡಬೇಕು ಆ ವೃದ್ದಾಶ್ರಮದಿಂದ ಅಮ್ಮನ ಕಾಲ್ ಬರುತಿತ್ತು. 

ಕಳೆದ ವಾರ ಮಾತಾಡಿದ್ದೆ ಮತ್ತೆ ಕಿರಿಕಿರಿ ಎಂದು ಯೋಚಿಸಿದವನೇ, ಕಾಲ್ ಕಟ್ ಮಾಡಿದ. ಮತ್ತೆ ಮತ್ತೆ ಕಾಲ್ ಬರುತ್ತಿತ್ತು, ಸಿಟ್ಟಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿಬಿಟ್ಟ ಈತ … ತನ್ನ ಗೋವಿನ ದತ್ತು ಸ್ವೀಕಾರ ಕಾರ್ಯಕ್ರಮ ಅದ್ಭುತವಾಗಿ ಮುಗಿಸಿದ. ತಾನೆಣಿಸಿದಂತೆ ಎಲ್ಲವೂ ಆದಾಗ ಸಮಯ ಸಂಜೆ 5 ಆಗಿತ್ತು. ಆಗ ನೆನಪಾಗಿತ್ತು ಬೆಳಗ್ಗೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು ತಕ್ಷಣ ಆನ್ ಮಾಡಿದ. ಅಮ್ಮಂದು 10 ಕಾಲ್, ಆ ವೃದ್ದಾಶ್ರಮದ 6 ಕಾಲ್, ಮನೆ ಇಂದ ತಮ್ಮ, ತಂಗಿ ಚಿಕ್ಕಪ್ಪ ಎಲ್ಲರ ಕಾಲ್ ಗಳು ಬಂದಿದ್ದವು. ಏನೋ ನೆನಪಾಗಿ ತಕ್ಷಣ ಮನೆಗೊಂದು ಕಾಲ್ ಮಾಡಿದ. ಬೆಳಿಗ್ಗೆ ಆಶ್ರಮದಲ್ಲಿ ನಿನ್ನಮ್ಮ ತೀರಿಕೊಂಡಿದ್ದಾರೆ, ಚಂಡಾಲ ಸಾಯುವ ಕೊನೆಗಳಿಗೆ ಯಲ್ಲಿ ನಿನ್ನೊಂದಿಗೆ ಮಾತಾಡ ಬಯಸಿದ್ದಳು ಆಕೆ, ನೀನು ಬರಲಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿದೆ. ಕೊನೆಯ ಪಕ್ಷ ಆಕೆಯನ್ನು ಸುಡುವಾಗಲಾದರೂ ಬರುತ್ತೀಯ ಎಂದು ಕಾದೆವು ಅದಕ್ಕೂ ಬರಲಿಲ್ಲ ನೀನು, ಎಂದು ಸಿಟ್ಟಲ್ಲಿ ಫೋನ್ ಕಟ್ ಮಾಡಿದರು ಚಿಕ್ಕಪ್ಪ. 

ಆತನಿಗೂ ದುಃಖವಿತ್ತು ಓಡೋಡಿ ಬಂದ ಅಮ್ಮನ ಮುಖ ನೋಡಲು. ಆದರೆ ಸಮಯ ಅದಾಗಲೇ ಮೀರಿ ಆಗಿತ್ತು, ಪೂರ್ತಿ ಶರೀರ ಸುಟ್ಟು ಬೂದಿಯಷ್ಟೇ ಅಲ್ಲಿ ಉಳಿದಿತ್ತು. ಅಲ್ಲೇ ಕುಸಿದು ಕೂತ ಆ ಬೂದಿಯನ್ನೇ ನೋಡುತ್ತಾ… ಪ್ರಚಾರಕ್ಕಾಗಿ ಗೊಮಾತೆಯನ್ನು ದತ್ತು ಸ್ವೀಕರಿಸುವ ಗಡಿ ಬಿಡಿಯಲ್ಲಿ ಆತ ತನ್ನ ಸ್ವಂತ ತಾಯಿಯನ್ನೇ ಮರೆತು ಬಿಟ್ಟಿದ್ದ.

ಇಂತಹ ಪ್ರಚಾರ ಪ್ರೀಯರು ಅದೆಷ್ಟು ಜನ ಇಲ್ಲ ಹೇಳಿ, ಅನಾಥ ಗೋವನ್ನು ದತ್ತು ಪಡೆಯುವುದು ನಿಜಕ್ಕೂ ಪುಣ್ಯದಕೆಲಸ. ಅದು ನಿಸ್ವಾರ್ಥ ಸೇವೆಯಾಗಿದ್ದರೆ ಮಾತ್ರ ಪುಣ್ಯ ಅದು ಬಿಟ್ಟು ಕೇವಲ ಪ್ರಚಾರಕ್ಕಾಗಿ, ಸೇವೆಯ ಮುಖವಾಡ ತೊಡುವ ಇಂತಹ ಕೆಲವು ಮಂದಿ ತಮ್ಮೊಳಗೆ ಮತ್ತೆ ಮತ್ತೆ ಪ್ರಶ್ನಿಸ ಬೇಕಿದೆ. ಹೆತ್ತ ತಾಯಿಗೆ ಬೆಂಕಿ ಇಡಲಾಗದವ... ಗೋಮಾತೆಯ ದತ್ತು ಸ್ವೀಕರಿಸಿ ಫಲವೇನು? 

-ಡಾ. ಶಶಿಕಿರಣ್ ಶೆಟ್ಟಿ, ಉಡುಪಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ