‘ಕಂಪ್ಯೂಟರ್ ಪಿತಾಮಹ' ಚಾರ್ಲ್ಸ್ ಬ್ಯಾಬೇಜ್

‘ಕಂಪ್ಯೂಟರ್ ಪಿತಾಮಹ' ಚಾರ್ಲ್ಸ್ ಬ್ಯಾಬೇಜ್

ಕಂಪ್ಯೂಟರ್ ಈಗ ಸರ್ವೇ ಸಾಮಾನ್ಯವಾದ ಸಾಧನವಾಗಿದೆ. ನಮ್ಮೆಲ್ಲಾ ದಿನಚರಿಗಳು ಪ್ರಾರಂಭವಾಗುವುದು ಮತ್ತು ಕೊನೆಗೊಳ್ಳುವುದು ಕಂಪ್ಯೂಟರ್ ಸಹಾಯದಿಂದಲೇ. ಈಗಂತೂ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಆದರೆ ೧೯ನೇ ಶತಮಾನದಲ್ಲಿ ಕಂಪ್ಯೂಟರ್ ಎಂಬ ಕಲ್ಪನೆಯನ್ನು ಮೂಡಿಸಿ, ಅದರಲ್ಲಿ ಪ್ರಯೋಗ ಮಾಡಿದವರೇ ಚಾರ್ಲ್ಸ್ ಬ್ಯಾಬೇಜ್. ಈತ ವಿಜ್ಞಾನಿಯೂ ಹೌದು, ಗಣಿತಜ್ಞನೂ ಹೌದು. 

ಶ್ರೀಮಂತ ಬ್ಯಾಂಕರ್ ಒಬ್ಬರ ಮಗನಾಗಿ ಲಂಡನ್ ನ ಟೀನ್ ಮೌತ್ ಎಂಬಲ್ಲಿ ೧೭೯೨ರ ಡಿಸೆಂಬರ್ ೨೬ರಂದು ಜನಿಸಿದರು. ಇವರು ೧೮೧೦ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಸೇರಿ ಅಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ಕೇಂಬ್ರಿಡ್ಜ್ ನಲ್ಲಿ ಕಲಿಯುತ್ತಿರುವ ಸಂದರ್ಭದಲ್ಲಿ ಹರ್ಷೆಲ್ ಎಂಬ ವಿದ್ವಾಂಸನ ಪರಿಚಯವಾಗಿ ಅವರ ಜೊತೆ ಸೇರಿ ೧೮೧೫ರಲ್ಲಿ ಅನಲಿಟಿಕ್ ಸೊಸೈಟಿಯನ್ನು ಪ್ರಾರಂಭಿಸುತ್ತಾರೆ. ಶ್ರೀಮಂತ ಮನೆತನದಿಂದ ಬಂದ ಕಾರಣ, ಇದಕ್ಕೆ ತಗಲಿದ ಎಲ್ಲಾ ವೆಚ್ಚವನ್ನು ಸ್ವತಃ ಬ್ಯಾಬೇಜ್ ರು ಭರಿಸುತ್ತಾರೆ. 

ಯೂರೋಪ್ ಖಂಡದಲ್ಲಿ ನಡೆಯುತ್ತಿದ್ದ ಹೊಸ ಹೊಸ ಅನ್ವೇಷಣೆಗಳನ್ನು ಇಂಗ್ಲೆಂಡ್ ನಲ್ಲೂ ಪರಿಚಯಿಸುವ ಉದ್ದೇಶ ಬ್ಯಾಬೇಜ್ ಅವರಿಗಿತ್ತು. ಅಲ್ಲಿ ನಡೆಯುತ್ತಿದ್ದ ವೈಜ್ಞಾನಿಕ ಅನ್ವೇಷಣೆಗಳು, ಗಣಿತದಲ್ಲಿ ಆಗುತ್ತಿದ್ದ ಹೊಸ ಹೊಸ ಬದಲಾವಣೆಗಳು ಇವೆಲ್ಲವನ್ನೂ ಇಂಗ್ಲೆಂಡ್ ಜನತೆಗೆ ಪರಿಚಯಿಸಲಾರಂಭಿಸಿದರು. ಇವರ ಈ ಕಾರ್ಯವನ್ನು ಗಮನಿಸಿ ಇವರನ್ನು ೧೮೧೬ರಲ್ಲಿ ರಾಯಲ್ ಸೊಸೈಟಿಗೆ ಆಯ್ಕೆ ಮಾಡಲಾಯಿತು. 

೧೮೩೦ರಲ್ಲಿ ಇವರು ಬರೆದ ಒಂದು ಪುಸ್ತಕ ಬಹಳ ಚರ್ಚೆಗೆ ಕಾರಣವಾಯಿತು. ಇವರು ತಮ್ಮ ಪುಸ್ತಕದಲ್ಲಿ ವಿಜ್ಞಾನದ ಬೆಳವಣಿಗೆಗೆ ಫ್ರಾನ್ಸ್ ಸರಕಾರ ನೀಡುವಷ್ಟು ಸಹಕಾರ ಇಂಗ್ಲೆಂಡ್ ಸರಕಾರ ನೀಡುತ್ತಿಲ್ಲ ಎಂಬ ವಿಚಾರವನ್ನು ಪ್ರತಿಪಾದಿಸಿದ್ದರು. ಇದರಿಂದ ಇವರಿಗೆ ಬಹಳ ವಿರೋಧಗಳು ತಲೆದೋರಿದವು. ಆದರೆ ಇವರ ಶೋಧನೆಗಳು ಜನರ ಬಾಯಿ ಮುಚ್ಚಿಸುವಲ್ಲಿ ಸಫಲವಾದುವು. ೧೯೪೦ರಲ್ಲಿ ಇವರು ಅಂದಿನ ಅಂಚೆ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಯನ್ನು ತರುವಂಥಹ ‘ಆಪರೇಶನ್ ರಿಸರ್ಚ್’ ಎಂಬ ಕಾರ್ಯಕ್ರಮವನ್ನು ಅನುಷ್ಟಾನಕ್ಕೆ ತಂದರು. ಇದರಿಂದ ಅಂಚೆ ವ್ಯವಸ್ಥೆಯಲ್ಲಿ ಬಹಳ ಸುಧಾರಣೆಗಳಾದುವು. ಜೀವ ವಿಮಾ ಇಲಾಖೆಯವರು ಬಳಸುವ ‘ಆಕ್ಚ್ಯೂರಿಯನ್ ಟೇಬಲ್' ಅನ್ನು ಇವರು ಕಂಡು ಹಿಡಿದರು. ಇದರಿಂದ ಜೀವ ವಿಮಾ ವಿಭಾಗದಲ್ಲಿ ಕೆಲಸಗಳು ಇನ್ನಷ್ಟು ಸುಲಭವಾಗಿ ನಡೆಯಲು ಪ್ರಾರಂಭಿಸಿದವು. 

೧೮೨೨ರಲ್ಲಿ ಕಂಪ್ಯೂಟರ್ ತಯಾರಿಕೆಗೆ ನಾಂದಿ ಹಾಡಿದ ಇವರು ಭವಿಷ್ಯದಲ್ಲಿ ಈ ಸಾಧನ ಬಹಳಷ್ಟು ಉಪಕಾರಿ ಎಂದು ಸಾರಿದರು. ಅವರ ಭವಿಷ್ಯವಾಣಿ ಸುಳ್ಳಾಗಲಿಲ್ಲ. ಈಗ ಎಲ್ಲೆಡೆ ಕಂಪ್ಯೂಟರ್ ಅನಿವಾರ್ಯತೆ ಇದೆ. ಆ ಕಾರಣದಿಂದ ಇವರನ್ನು ಕಂಪ್ಯೂಟರ್ ಜನಕ, ಕಂಪ್ಯೂಟರ್ ಪಿತಾಮಹ ಎಂದು ಕರೆಯುತ್ತಾರೆ. ಕಂಪ್ಯೂಟರ್ ಜೊತೆಗೆ ಇವರು ‘ಹೀಲಿಯೋಗ್ರಾಫ್' ಎಂಬ ಸಾಧನ (ಸೂರ್ಯನ ಬೆಳಕಿನಲ್ಲಿ ಕನ್ನಡಿಗಳನ್ನು ಉಪಯೋಗಿಸಿಕೊಂಡು ಸಂಕೇತಗಳನ್ನು ಕಳುಹಿಸಲು ಅನುಕೂಲವಾದ ಸಾಧನ) ವನ್ನು ಕಂಡು ಹಿಡಿದರು. ಕಣ್ಣಿನ ಒಳಗಡೆ ಪರೀಕ್ಷೆ ನಡೆಸಲು ಅನುಕೂಲವಾಗುವಂಥಹ ‘ಆಫ್ತಾಲ್ಮೋಸ್ಕೋಪ್' ಸಾಧನವನ್ನು ಕಂಡು ಹಿಡಿದ ಕೀರ್ತಿಯೂ ಬ್ಯಾಬೇಜ್ ಆವರಿಗೆ ಸಲ್ಲುತ್ತದೆ. ಇವರು ೧೮೭೧ರ ಅಕ್ಟೋಬರ್ ೧೮ರಂದು ನಿಧನ ಹೊಂದಿದರು. ಆದರೆ ಇವರು ಕಂಡು ಹಿಡಿದ ಹಲವಾರು ಸಾಧನಗಳು ಈಗಲೂ ನಮ್ಮ ಕೆಲಸ ಕಾರ್ಯಗಳನ್ನು ಸುಗಮವಾಗಿ ಹಾಗೂ ವೇಗವಾಗಿ ಮಾಡಲು ಸಹಾಯ ಮಾಡುತ್ತಿವೆ.

ಚಾರ್ಲ್ಸ್ ಬ್ಯಾಬೇಜ್ ಅವರು ಕೇವಲ ವಿಜ್ಞಾನಿ, ಗಣಿತಜ್ಞರಾಗಿರಲಿಲ್ಲ. ಉತ್ತಮ ಹಾಸ್ಯ ಪ್ರಜ್ಞೆ ಹಾಗೂ ಕಾವ್ಯಜ್ಞಾನವನ್ನೂ ಹೊಂದಿದ್ದ ವ್ಯಕ್ತಿಯಾಗಿದ್ದರು. ಇವರ ಜೀವನದ ರಸ ಪ್ರಸಂಗಗಳ ಬಗ್ಗೆ ‘ಸೂತ್ರ' ಪತ್ರಿಕೆಯಲ್ಲಿ ಒಂದು ಪುಟ್ಟ ಸನ್ನಿವೇಶವನ್ನು ನೀಡಲಾಗಿದೆ. ಆ ಪತ್ರಿಕೆಯ ಕೃಪೆಯಿಂದ ಅದನ್ನು ಇಲ್ಲಿ ನೀಡುತ್ತಿದ್ದೇವೆ.

ಚಾರ್ಲ್ಸ್ ಬ್ಯಾಬೇಜ್ ರಿಗೆ ಸಾಹಿತಿಗಳ ವಲಯದಲ್ಲಿ ಬಹಳ ಮರ್ಯಾದೆ ಇತ್ತು. ಆ ಕಾಲದ ದೊಡ್ಡ ಕವಿಯಾದ ಆಲ್ಫ್ರೆಡ್ ಲಾರ್ಡ್ ಟೆನಿಸನ್ ಕೂಡ ಬ್ಯಾಬೇಜನ ಸ್ನೇಹವಲಯದಲ್ಲಿದ್ದವನು. ಟೆನಿಸನ್ ನ ‘ದ ವಿಷನ್ ಆಫ್ ಸಿನ್' ಕವಿತೆಯಲ್ಲಿ ಒಂದು ಸಾಲು ಬರುತ್ತದೆ ‘ಪ್ರತಿ ಕ್ಷಣವೂ, ಒಬ್ಬ ಮನುಷ್ಯ ತೀರಿದಾಗ, ಜಗತ್ತಿನಲ್ಲಿ ಮನುಷ್ಯನೊಬ್ಬನ ಉದಯ’ (Every moment dies a man, every moment one is born). ಅಂದರೆ ಜಗತ್ತು ಚಲನಶೀಲ. ಹುಟ್ಟು ಸಾವು ನಿರಂತರ. ಎಷ್ಟೋ ಮಂದಿ ಹುಟ್ಟಿದರೋ ಅಷ್ಟು ಮಂದಿ ಸತ್ತರು. ಹುಟ್ಟು ಸಾವುಗಳ ಈ ಚಕ್ರ ಜಗತ್ತಿನಲ್ಲಿ ನಿರಂತರವಾಗಿ ತಿರುಗುತ್ತಲೇ ಇದೆ ಎಂಬುದು ಭಾವಾರ್ಥ. ಪದ್ಯ ಬರೆದ ಖುಷಿಯಲ್ಲಿ ಟೆನಿಸನ್ ಅದನ್ನು ಬ್ಯಾಬೇಜ್ ನ ಎದುರಲ್ಲಿ ಓದಿ ಹೇಳಿದ. ಅಭಿಪ್ರಾಯ ಕೇಳಿದಾಗ ಬ್ಯಾಬೇಜನ ಕಡೆಯಿಂದ ಒಂದು ಆಕ್ಷೇಪ ಬಂತು; ‘ಒಬ್ಬ ಮನುಷ್ಯ ತೀರಿದಾಗ ಒಬ್ಬ ಮನುಷ್ಯ ಹುಟ್ಟುತ್ತಾನೆ ಎಂಬುದು ಸರಿಯಲ್ಲ. ಸಾಯುವ ಪ್ರತಿ ಮನುಷ್ಯನಿಗೆ ಪ್ರತಿಯಾಗಿ ಒಂದರ ಮೇಲೆ ಆರನೇ ಒಂದರಷ್ಟು ಮನುಷ್ಯರು ಹುಟ್ಟುತ್ತಾರೆ' ಇದನ್ನು ಕೇಳಿ ಟೆನಿಸನ್ ಗೆ ನಗುವುದೋ ಅಳುವುದೋ ತಿಳಿಯಲಿಲ್ಲ. ‘ಅಲ್ಲಯ್ಯ ! ಇದು ಕಾವ್ಯ ಇಲ್ಲಿ ಹಾಗೆಲ್ಲ ನಿಖರ ಗಣಿತ ಹೇಳುವುದಕ್ಕೆ ಆಗುತ್ತೇನಯ್ಯಾ?’ ಎಂದು ಅವನು ಹುಸಿ ದಬಾಯಿಸಿದ ಬ್ಯಾಬೇಜನ್ನು. ಬ್ಯಾಬೇಜ್ ನ ಉತ್ತರ ಸಿದ್ಧವಿತ್ತು. ‘ಇದು ಕಾವ್ಯ ಅನ್ನೋದು ನನಗೂ ಗೊತ್ತಿದೆ. ಅದಕ್ಕೆ ಒಂದರ ಮೇಲೆ ಆರನೇ ಒಂದು  ಅಂತ ಹೇಳಿದೆ. ನಿಖರ ಬೆಲೆ ೧.೧೬೭ ಆಗುತ್ತೆ. ಆದರೆ ಅದು ಬರೆಯೋದಕ್ಕೆ ಹೋದರೆ ಕಾವ್ಯದ ಛಂದಸ್ಸು ಕೆಡುತ್ತದೆ ಎನ್ನುವುದು ನನಗೆ ಗೊತ್ತಿಲ್ಲ ಅಂತ ತಿಳಿದೆಯಾ?’ ಎಂದು ಟೆನಿಸನ್ ನ ಬಾಯಿ ಮುಚ್ಚಿಸಿದ. 

ಚಿತ್ರ ಕೃಪೆ: ಇಂಟರ್ನೆಟ್ ತಾಣ