‘ಕಾಮಾಲೆ' ಕಾಯಿಲೆಗೆ ಒಂದಿಷ್ಟು ಮನೆಮದ್ದುಗಳು

ಕಾಮಾಲೆ ಅಥವಾ ಜಾಂಡೀಸ್ ರೋಗ ಯಕೃತ್ತು (Liver) ಭಾಗದ ಸಮಸ್ಯೆಯಿಂದ ಕಂಡು ಬರುತ್ತದೆ. ಯಾವುದೇ ಕಾಲದಲ್ಲಿ ಈ ಸಮಸ್ಯೆ ಕಂಡು ಬರಬಹುದಾದರೂ ಮಳೆಗಾಲದಲ್ಲಿ ಕಾಮಾಲೆಯ ಸಮಸ್ಯೆ ಸ್ವಲ್ಪ ಮಟ್ಟಿಗೆ ಅಧಿಕ. ಈ ಸಮಸ್ಯೆಯ ಮುಖ್ಯ ಲಕ್ಷಣ ಕಣ್ಣುಗಳ ಬಿಳಿಭಾಗ, ಉಗುರುಗಳು ಹಳದಿ ಬಣ್ಣಕ್ಕೆ ತಿರುಗುವುದು, ಮೂತ್ರದ ಬಣ್ಣ ಗಾಢ ಹಳದಿಯಾಗುವುದು. ಚರ್ಮದ ಬಣ್ಣವೂ ಹಳದಿಯಾಗುವುದು ಇತ್ಯಾದಿ. ಈ ಕಾರಣದಿಂದ ಈ ಕಾಯಿಲೆಗೆ ಹಳದಿ ರೋಗ ಎಂದೂ ಕರೆಯುತ್ತಾರೆ. ಈ ಲಕ್ಷಣಗಳ ಜೊತೆ ಶೀಘ್ರ ದೇಹದ ತೂಕ ಇಳಿಕೆ, ತೀವ್ರ ಹೊಟ್ಟೆ ನೋವು, ವಿಪರೀತ ಸುಸ್ತು, ವಾಂತಿ, ಮೈ ತುರಿಕೆಗಳಂತಹ ಸಮಸ್ಯೆಗಳು ಕಾಡತೊಡಗುತ್ತವೆ.
ಕಾಮಾಲೆ ರೋಗ ಒಂದು ಗಂಭೀರ ಕಾಯಿಲೆ. ಸರಿಯಾದ ಸಮಯದಲ್ಲಿ ಔಷಧೋಪಚಾರ ನಡೆಸದೇ ಹೋದರೆ ಮಾರಣಾಂತಿಕವಾಗುವ ಸಾಧ್ಯತೆ ಇದೆ. ಕೆಲವು ಬಾರಿ ಈ ಕಾಯಿಲೆ ಯಾವುದೇ ರೋಗ ಲಕ್ಷಣಗಳನ್ನು ಹೊರಗೆ ತೋರಿಸುವುದೇ ಇಲ್ಲ. ವ್ಯಕ್ತಿಯ ಸ್ಥಿತಿ ಗಂಭೀರವಾದಾಗಲೇ ಈ ಸಮಸ್ಯೆಯ ಅರಿವಾಗುತ್ತದೆ. ಮಲೇರಿಯಾ ಅಥವಾ ಇನ್ನಿತರ ಜ್ವರಗಳು ತೀವ್ರವಾಗಿ ಕಾಡಿದಾಗ ಜಾಂಡೀಸ್ ಕಾಡುವ ಸಾಧ್ಯತೆ ಇದೆ. ಹೈಪಟೈಟೀಸ್ ಎ ಮತ್ತು ಹೈಪಟೈಟೀಸ್ ಬಿ ಎಂಬ ವೈರಸ್ ಗಳಿಂದಾಗಿ ಜಾಂಡೀಸ್ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಕಲುಷಿತ ನೀರು ಸೇವನೆಯ ಕಾರಣದಿಂದ ಈ ವೈರಸ್ ಗಳು ನಮ್ಮ ದೇಹವನ್ನು ಪ್ರವೇಶಿಸುತ್ತವೆ. ಅದಕ್ಕಾಗಿ ನೀರನ್ನು ಸರಿಯಾಗಿ ಕುದಿಸಿ ಕುಡಿಯಬೇಕು.
ಜಾಂಡೀಸ್ ರೋಗಕ್ಕೆ ಅಜ್ಜಿ ಮದ್ದು ಅಥವಾ ಮನೆಮದ್ದು ಬಹಳ ಪರಿಣಾಮಕಾರಿ ಎನ್ನುವುದು ಹಿರಿಯರ ಮಾತು. ಕೆಲವು ಮನೆಮದ್ದುಗಳನ್ನು ಇಲ್ಲಿ ನೀಡಲಾಗಿದೆ. ಆದರೆ ಯಾವುದೇ ಮನೆಮದ್ದು ಮಾಡುವ ಮೊದಲು ರೋಗಿಯ ದೇಹ ಸ್ಥಿತಿ ಮತ್ತು ತಜ್ಞ ವೈದ್ಯರ ಶಿಫಾರಸು ಮುಖ್ಯ. ಈ ಮನೆಮದ್ದು ರೋಗಿಗೆ ಅಲರ್ಜಿಯಾಗುವ ಸಾಧ್ಯತೆಯೂ ಇಲ್ಲದ್ದಿಲ್ಲ. ಆದುದರಿಂದ ಈ ವಿಷಯವನ್ನು ಸರಿಯಾಗಿ ಗಮನಿಸಿ ಮದ್ದು ನೀಡಬೇಕು.
* ಬೆಳಿಗ್ಗೆ ಮತ್ತು ಸಂಜೆ ಮೂಲಂಗಿ ಮತ್ತು ಅದರ ಎಲೆಯ ರಸ ಸೇವಿಸಿ. ಉಪ್ಪು ಮತ್ತು ಕರಿಮೆಣಸು ಸೇರಿಸಿ ಮೂಲಂಗಿಯನ್ನು ಹಸಿಯಾಗಿ ತಿನ್ನಿ.
* ಈರುಳ್ಳಿಯನ್ನು ಕತ್ತರಿಸಿ ಅದಕ್ಕೆ ನಿಂಬೆ ರಸ, ಕಪ್ಪು ಉಪ್ಪು (ಕಾಲಾ ನಮಕ್) ಮತ್ತು ಕರಿಮೆಣಸು ಸೇರಿಸಿ ಬೆಳಿಗ್ಗೆ ಮತ್ತು ಸಂಜೆ ಸೇವಿಸಿ.
* ಕಾಮಾಲೆ ರೋಗಕ್ಕೆ ಕಬ್ಬಿನ ಹಾಲು ಬಹಳ ಉತ್ತಮ. ಈ ಕಾರಣದಿಂದ ಕಬ್ಬಿನ ಹಾಲಿಗೆ ನಿಂಬೆ ರಸ ಸೇರಿಸಿ ದಿನಕ್ಕೆ ಎರಡು ಸಲ ಕುಡಿಯಿರಿ.
* ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಒಂದು ಕಪ್ ನೆಲ್ಲಿಕಾಯಿ ರಸಕ್ಕೆ ಒಂದು ಚಮಚ ಜೇನು ಮಿಶ್ರ ಮಾಡಿ ಸೇವನೆ ಮಾಡಿ.
* ಪ್ರತಿ ದಿನ ಬೆಳಿಗ್ಗೆ ಮತ್ತು ಸಾಯಂಕಾಲ ೫-೬ ತುಳಸೀ ಎಲೆಗಳನ್ನು ಹಸಿಯಾಗಿಯೇ ತಿನ್ನಿರಿ.
* ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಟೊಮ್ಯಾಟೋ ರಸಕ್ಕೆ ಉಪ್ಪು ಮತ್ತು ಕರಿಮೆಣಸು ಹುಡಿ ಸೇರಿಸಿ ಕುಡಿಯಿರಿ.
* ಬಾರ್ಲಿಯನ್ನು ನೀರಿನಲ್ಲಿ ಕುದಿಸಿ ಅದನ್ನು ಸೋಸಿ, ನೀರನ್ನು ದಿನಕ್ಕೆ ೬-೮ ಬಾರಿ ಕುಡಿಯಿರಿ.
* ಪ್ರತಿ ದಿನ ಪಪ್ಪಾಯಿ ಹಣ್ಣನ್ನು ಸೇವಿಸಿ. ಪಪ್ಪಾಯಿ ಎಲೆಗಳ ರಸವನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಬಹುದು. ಆದರೆ ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅಪಾಯಕಾರಿ.
* ಬಿಸಿ ನೀರಿಗೆ ಶುದ್ಧ ಅರಸಿನ ಹುಡಿಯನ್ನು ಹಾಕಿ ಎರಡು ಬಾರಿ ಕುಡಿಯಿರಿ.
* ದಿನದಲ್ಲಿ ಎರಡು ಬಾರಿ ನಿಂಬೆ ಹಣ್ಣಿನ ಶರಬತ್ತನ್ನು ತಯಾರಿಸಿ ಕುಡಿದರೆ ಕಾಮಾಲೆ ಹತೋಟಿಗೆ ಬರುತ್ತದೆ.
* ಕಾಮಾಲೆ ರೋಗಕ್ಕೆ ಸೋರೆಕಾಯಿ ರಾಮಬಾಣ. ಸೋರೆಕಾಯಿಯ ರಸ ಅಥವಾ ಪದಾರ್ಥವನ್ನು ಮಾಡಿ ತಿನ್ನಿ.
ಕಾಮಾಲೆ ರೋಗ ತಗುಲಿದ ಬಳಿಕ ಪಥ್ಯಾಹಾರವನ್ನು ಅನುಸರಿಸುವುದು ಬಹಳ ಮುಖ್ಯ. ಹೊರಗಿನ ಆಹಾರದ ಸೇವನೆಯನ್ನು ೩-೪ ತಿಂಗಳುಗಳವರೆಗೆ ಬಿಟ್ಟು ಬಿಡಿ. ಖಾರದ ಪದಾರ್ಥಗಳು, ಫಾಸ್ಟ್ ಫುಡ್, ಜಂಕ್ ಫುಡ್, ಮದ್ಯಪಾನ ಇವುಗಳನ್ನು ದೂರವಿಡಿ. ಕಾಮಾಲೆಯು ಹೆಚ್ಚಾಗಲು ಆಲ್ಕೋಹಾಲ್ ಸೇವನೆ ಕಾರಣವಾಗುತ್ತದೆ. ಈ ಕಾರಣದಿಂದ ಮದ್ಯಪಾನ ಮಾಡಲೇ ಬಾರದು. ಕಾರ್ಬೋಹೈಡ್ರೇಟ್ ಪ್ರಮಾಣ ಅಧಿಕವಿರುವ ಆಹಾರ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಿ. ನಿಯಮಿತವಾದ ಪಥ್ಯವನ್ನು ಅಳವಡಿಸಿಕೊಂಡರೆ ಬೇಗದಲ್ಲೇ ಕಾಮಾಲೆ ರೋಗ ಗುಣವಾಗುತ್ತದೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ