‘ಬಿಡುಗಡೆಯ ಹಾಡುಗಳು’ (ಭಾಗ ೨೬) - ಬಿ. ನೀಲಕಂಠಯ್ಯ

ಬಿ. ನೀಲಕಂಠಯ್ಯ ಎನ್ನುವ ಕವಿಯ ಒಂದು ಮುದ್ರಿತ ಪುಸ್ತಕದಿಂದ ಆಯ್ದ ಲಾವಣಿ. ನೀಲಕಂಠಯ್ಯ ಇವರ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಈ ಲಾವಣಿಯ ಧಾಟಿ ಖಡೀಚಾಲ್ ಆಗಿದೆ.
ಕಾಂಗ್ರೆಸ್ ಲಾವಣಿ
ಶೃಂಗಾರದ ನವರಂಗದ ಮೈಸೂರ್ ಕಾಂಗ್ರೆಸ್ ಘನವೆನ್ನುವನೊಬ್ಬ ।
ಕಾಂಗ್ರೆಸ್ ನ ಸಂಗ್ರಾಮವ ಕೇಳಿದ ಆಂಗ್ಲರಿಗಾಯಿತು ಅಬ್ಬಬ್ಬಾ ॥ಪ॥
ಅಬ್ಬಬ್ಬಾ ಈ ದಬ್ಬಾಳಿಕೆ ಅವನೊಬ್ಬನ ದೆಶೆಯಿಂದೆನ್ನುತ್ತಲೊಬ್ಬಾ ।
ದಬ್ಬಾಳಿಕೆಯನು ಎಬ್ಬಿಸಿದವ ನಿಜ ತಬ್ಬಲಿ ಎಂದನು ಮತ್ತೊಬ್ಬ ॥
ಒಬ್ಬನಿಂದಲ್ಲವು ಶಿಬ್ಬಂದಿಬಳಾ ಕಬ್ಬಕ್ಕಿ ಎಂತಿಹರೆನುತೊಬ್ಬ ।
ಕೊಬ್ಬಿದ ದರ್ಪದ ಮೊಬ್ಬಿನೊಳಿರುವರ ಹಬ್ಬ್ವಿದೆಂದನು ಹುಡುಗನೊಬ್ಬ ।
ದಬ್ಬಾಳಿಕೆಸುಳಿ ಅಬ್ಬರ ಅಣಗಲಿ ದಬ್ಬೆಯು ಬಿತ್ತೆನಗೆನುತೊಬ್ಬ ।
ದಬ್ಬಾಳಿಕೆ ಮಹ ಬೊಬ್ಬೆಯ ಕೇಳುತ ತಬ್ಬಿಬ್ಬಾದನು ಕಡೆಗೊಬ್ಬ ।
ದೊಡ್ಡುಡನ್
ಎಂತ ಕಾರ್ಯವಿದು ಎಂತ ಚೋದ್ಯವಿದು ಹೊಂತಕಾರಿಗಳೆಯೋಚಿಪುದು ।
ಅಂತುಯಿಂತು ಈ ಶಾಂತಿಯಸಮರವು ಕ್ರಾಂತಿಯ ರೂಪಾವರಿಸಿಹುದು ।
ಅಂತರದೊಳಗಿನ ಅನಂತ ಆಸೆಗೆ ಅನರ್ಥ ಫಲ ಕೈಸೇರುವುದು ।
ಇಂತ ಭ್ರಾಂತಿಯನು ಕಂತೆಯಕಟ್ಟಿಸಿ ಸಂತೆಗೆ ಸಾಗಿಸೆ ಸುಖವಹುದು ॥
ಉಡನ್
ನ್ಯಾಯವೆಂಬುದೆ ಸಾಧನ ಕಾಂಗ್ರೆಸ್ಸಿನ ಘನ ಧ್ಯೇಯ ।
ಧ್ಯೇಯವಿದೊಂದೆ ಶಾಂತಿಯೆ ಸಮರದೊಳಿಡುವುದೆ ಕಾಯ ।
ಕಾಯವಿಟ್ಟಂತೆ ಪ್ರಮುಖರ ಸುಕೀರ್ತಿ ಪುಂಜದ ಛಾಯ ।
ಛಾಯ ಪ್ರಜ್ವಲ ಭಾರತ ದೇಶದ ಉನ್ನತಿ ನ್ಯಾಯಾ ॥
ಗುಲ್ಲುಡನ್
ಪ್ರಜೆಗಳಾಜನ್ಮ ಹಕ್ಕನಿಟ್ಟು । ನಿಜದೆ ಸ್ವಾತಂತ್ರ್ಯಗಳನು ಕೊಟ್ಟು ।
ರಾಜ್ಯವನ್ನಾಳಲು ಬಿಕ್ಕಟ್ಟೂ । ಪೂಜ್ಯ ಬಾಂಧವರ ಬಂಧನದಲಿ ಬಿಡಲತಿ ಫಲವುಂಟೂ ।
ಶ್ಲೋಕ
ಎಂದು ಬೇಡುತ ಬಂದ ಜನರಿಗೆ ಬಂಧನವೆ ನಿಜವೆಂದರು ।
ಮುಂದಿನೊಳು ನೂರ್ನಲ್ವತ್ನಾಲ್ಕನೆ ಸೆಕ್ಷನ್ ಜಾರಿಗೆ ತಂದರು ॥
ಚಾಲ್
ಇಂಗ್ಲೆಂಡ್ ದೇಶದ ಇಂಗ್ಲೀಷರಿಂದಲಿ ಕಂಗೆಟ್ಟಿವು ನಾವೆನುತೊಬ್ಬ ।
ಕಾಂಗ್ರೆಸ್ ಸೆಶನ್ ಸಂಗ್ರಾಮವ ಕೇಳಿದ ಆಂಗಲ್ಲರಿಗಾಯಿತು ಅಬ್ಬಬ್ಬಾ ।
ಅಟ್ಟಹಾಸದಿಟ ನಲವತ್ತೈದನೆಯ ಸೆಕ್ಷನ್ ಜಾರಿಯ ಒಳಗುಟ್ಟು ।
ಬೆಟ್ಟದಿ ಸೆಕ್ಷನ್ ಶವವನು ಮಾಡಿ ಹೊತ್ತನು ಸಂಭಾಜಿ ಶ್ರಮಪಟ್ಟು ॥
ಬಿಟ್ಟರೆ ಸಿಕ್ಕದ ಕೊಟ್ರೆ ನಂಜಪ್ಪನ ತಟ್ಟನೆ ಹಿಡಿದರು ಕಣ್ಣಿಟ್ಟು ।
ಕೊಟ್ಟರು ಸಜವನು ಹೊಸಕೋಟಿಯ ಮಹದೇವಶಾಸ್ತ್ರಿಗಳ ಹಿಡಿದಿಟ್ಟು ।
ಕಷ್ಟ ಕಷ್ಟಮಹ ಕಷ್ಟವಿದೆನ್ನುವ ಎಷ್ಟೋ ಜನರಿಗೆ ಛಡಿಪೆಟ್ಟು ।
ಇಷ್ತರೊಳಗೆ ನೂರೇಳನೆ ಸೆಕ್ಷನ್ ಬಿಟ್ಟರು ತಟ್ಟನೆ ಗುರಿಯಿಟ್ಟು ॥
ದೊಡ್ಡುಡನ್
ಒಡನೆಯೆ ಶಿದ್ದಲಿಂಗಯ್ಯನವರನು ಹಿಡಿದರು ಖಾನೂನ್ ಅನುಸರಿಸಿ ।
ಬಿಡದೆಲೆ ಸೀತಾರಾಮ ಶಾಸ್ತ್ರಿಗಳನಿಡಿದರು ಕೇಸಿನ ಕ್ರಮನಡೆಸಿ ।
ತಡಕು ತಗಡೂರ್ ರಾಮಚಂದ್ರನು ಹಿಡಿದು ತಿಜನರಂಜೊತೆಗೊಳಿಸಿ ।
ಹಿಡಿಯಿರಿ ಸೆರೆಮನೆದಾರಿ ನೀವೆನ್ನುತ ನುಡಿದರು ದರ್ಪದಿ ದಡಬಿಡಿಸಿ ॥
(ಇನ್ನೂ ಇದೆ)