‘ಮಯೂರ' ಹಾಸ್ಯ (ಭಾಗ - ೪)

ಇನ್ನೂ ಸತ್ತಿಲ್ಲ!
ಸುಮಾರು ೪೦ ವರ್ಷ ಹಿಂದಿನ ಘಟನೆ. ನಾನಾಗ ಬೆಂಗಳೂರಿನ ಪೀಣ್ಯ ದಾಸರಹಳ್ಳಿಯಲ್ಲಿ ಪಶುವೈದ್ಯ ಪರೀಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೆ. ಅಲ್ಲಿನ ಜಿಲ್ಲಾ ಪಂಚಾಯ್ತಿ ಸದಸ್ಯರೊಬ್ಬರು ನನ್ನನ್ನು ಕರೆಸಿ “ನೋಡಪ್ಪಾ, ಇವರ (ರೈತರೊಬ್ಬರನ್ನು ತೋರಿಸಿ) ಹಸು ಸತ್ತುಹೋಗಿದೆಯಂತೆ. ಇನ್ಸೂರೆನ್ಸ್ ಬರಲು ಏನು ಬೇಕೋ ಎಲ್ಲಾ ಮಾಡಿಕೊಡಪ್ಪ" ಎಂದರು. ಪೋಸ್ಟ್ ಮಾರ್ಟಮ್ ಮಾಡಿ ಅದರ ವರದಿಯನ್ನು ಕೊಡಬೇಕಾಗಿದ್ದರಿಂದ ಮಲ್ಲೇಶ್ವರದ ಸಹಾಯಕ ನಿರ್ದೇಶಕರಿಗೆ ಫೋನ್ ಮಾಡಿ ಅವರನ್ನು ಕರೆಸಿಕೊಂಡು ಆ ರೈತನ ಮನೆ ಹುಡುಕಿಕೊಂಡು ಹೋದೆವು. ಅಲ್ಲಿ ನೋಡಲಾಗಿ ಒಂದು ವಯಸ್ಸಾದ ಹಸು ಮಲಗಿಕೊಂಡು ಮೆಲುಕು ಹಾಕುತ್ತಿತ್ತು. ನಾವು ಮನೆಯವರಿಗೆ, ‘ಸತ್ತ ಹಸು ಎಲ್ಲಿ?’ ಎಂದು ಕೇಳಿದೆವು. ಅದಕ್ಕೆ ಮನೆಯವರು ವಯಸ್ಸಾದ ಆ ಹಸುವನ್ನು ತೋರಿಸುತ್ತಾ, ‘ನೀವು ಬರುವುದರೊಳಗೆ ಸತ್ತುಹೋಗಿರುತ್ತದೆ ಎಂದುಕೊಂಡಿದ್ದೆವು. ಇನ್ನೂ ಸತ್ತಿಲ್ಲ ಸರ್' ಎನ್ನಬೇಕೇ?!
-ಕೆ.ಸಿದ್ದಯ್ಯ, ಬೆಂಗಳೂರು
***
ಏಟು ಕೊಟ್ಟರು !
ಊರಿಗೆ ಹೋಗಬೇಕಾದುದರಿಂದ ರೈಲಿನಲ್ಲಿ ಸ್ಠಳ ಕಾದಿರಿಸಲು ಹೋಗಿದ್ದ ಶ್ರೀಧರ ಮನೆಗೆ ವಾಪಾಸು ಬಂದ ಮೇಲೆ ಅವರಮ್ಮ ಕೇಳಿದರು “ರಿಸರ್ವೇಷನ್ ಆಯ್ತೇನಪ್ಪಾ?”
ಶ್ರೀಧರ ಹೇಳಿದ “ಏಟು ಕೊಟ್ಟರು ಅಮ್ಮ". ಅಲ್ಲೇ ನಿಂತಿದ್ದ ಪುಟ್ಟಿ ಕೇಳಿದಳು ‘ಯಾಕೆ ಮಾವ, ಸೀಟು ಕೊಡುವ ಬದಲು ಏಟು ಕೊಟ್ಟರು?’
ಗಲಿಬಿಲಿಗೊಂಡಿದ್ದ ಪುಟ್ಟಿಗೆ ಶ್ರೀಧರ ನಿಧಾನವಾಗಿ ವಿವರಿಸಿದ “ ಸೀಟು ಕೊಟ್ಟರು ಪುಟ್ಟಿ, ‘ಏ’ ಅಂದರೆ ಭೋಗಿ ಹೆಸರು ‘ಟು' ಅಂದರೆ ಸೀಟು ನಂಬರು" ಅಷ್ಟೇ (A-2)
ಪುಟ್ಟಿ ‘ಓ, ಹೌದಾ?’ ಎಂದಾಗ ಎಲ್ಲರಿಗೂ ನಗು ತಡೆಯಲಾಗಲಿಲ್ಲ.
-ಎಂ. ಆರ್. ರಘುನಾಥ್, ಬೆಂಗಳೂರು
***
ಫ್ಯಾನು ಹೋಗಿದೆ…
ನಮ್ಮ ಮನೆಯ ಫ್ಯಾನು ಹಾಳಾಗಿತ್ತು. ನಮ್ಮ ಮನೆಯವರು ಬ್ಯಾಂಕಿನಿಂದ ಮನೆಗೆ ಬಂದಾಗ, ‘ರೀ ಫ್ಯಾನ್ ಹೋಗಿಬಿಟ್ಟಿದೆ' ಎಂದೆ. ಅವರು ಗಂಭೀರವಾಗಿ ‘ಮನೆಯಲ್ಲಿ ಇಷ್ಟೊಂದು ಜನ ಇದ್ದರೂ ಅದನ್ನು ಹೋಗಲು ಯಾಕೆ ಬಿಟ್ಟಿರಿ? ಒಬ್ಬರಾದರೂ ತಡೆಯಬಾರದೇ?’ ಎಂದಾಗ ನನಗೆ ಒಂದು ಕ್ಷಣ ತಬ್ಬಿಬ್ಬು. ಆಮೇಲೆ ಅರ್ಥವಾದಾಗ ಎಲ್ಲರೂ ನಕ್ಕಿದ್ದೇ ನಕ್ಕಿದ್ದು. ಫ್ಯಾನ್ ಕೆಟ್ಟಿದೆ ಎಂದು ಹೇಳುವುದಕ್ಕೆ ನಾನು ಫ್ಯಾನು ಹೋಗಿದೆ ಎಂದಿದ್ದೆ!.
-ನೀಲಮ್ಮ ಕುಮಾರಪ್ಪ, ಲಿಂಗಸಗೂರು
***
(ಮಯೂರ, ಅಕ್ಟೋಬರ್ ೨೦೧೬ ಸಂಗ್ರಹಿತ)
ಚಿತ್ರ ಕೃಪೆ: ಗಣೇಶ ಆಚಾರ್ಯ