‘ಮಯೂರ' ಹಾಸ್ಯ - ಭಾಗ ೫೨

ತೂಕಕ್ಕೆ ಹಾಕ್ತಾರಾ?
ಎದುರು ಮನೆಯ ಪುಟ್ಟಿ ನಮ್ಮ ಮನೆಯ ನಿತ್ಯದ ಅತಿಥಿ. ಪ್ರತಿ ತಿಂಗಳೂ ದಿನಪತ್ರಿಕೆಗಳನ್ನು ಹಾಗೂ ಹಳೆಯ ಪುಸ್ತಕಗಳನ್ನು ತೂಕಕ್ಕೆ ಹಾಕಿ, ಲೆಕ್ಕ ಹಾಕುವಾಗ ಪುಟ್ಟಿಯೂ ಜೊತೆಗಿರುತ್ತಿದ್ದಳು. ಒಂದು ದಿನ ಅವಳು ನಮ್ಮ ಮನೆಯಲ್ಲಿದ್ದಾಗ ನಾವೆಲ್ಲಾ ‘ತುಲಾಭಾರ'ದ ವಿಚಾರವಾಗಿ ಚರ್ಚೆ ಮಾಡ್ತಾ ಇದ್ದೆವು. ಅರವತ್ತು ವರ್ಷ ತುಂಬಿ ನಿವೃತ್ತಿಯ ಅಂಚಿನಲ್ಲಿರುವ ನನಗೆ ತುಲಾಭಾರ ಮಾಡಬೇಕೆಂದು ಮನೆಯಲ್ಲಿ ಮಾತನಾಡುತ್ತಿದ್ದರು. ಯಾವಾಗ ಮಾಡುವುದು, ಯಾವ ದೇವಸ್ಥಾನ, ನನ್ನ ತೂಕಕ್ಕೆ ಎಷ್ಟು ಅಕ್ಕಿ, ಬೆಲ್ಲ ಬೇಕಾಗಬಹುದು...ಇತ್ಯಾದಿ ವಿಷಯಗಳನ್ನು ಬೆರಗಿನಿಂದ ಕೇಳಿಸಿಕೊಳ್ಳುತ್ತಿದ್ದ ಪುಟ್ಟಿ, “ಅಜ್ಜಾ, ನಿಮ್ಮನ್ನೂ ತೂಕಕ್ಕೆ ಹಾಕ್ತಾರಾ?” ಎಂದು ಕೇಳಬೇಕೇ?
-ವಾ. ಮುರಳೀಧರ
***
ಆನೆ ಆಶೀರ್ವಾದ
ಸುಮಾರು ೮೦-೮೫ ವರ್ಷ ವಯಸ್ಸಿನ ದಂಪತಿ ನಮ್ಮನೆಯ ಪಕ್ಕದಲ್ಲಿದ್ದಾರೆ. ಅವರ ಬದುಕು ನಮಗೆಲ್ಲಾ ಮಾದರಿ. ಹೀಗಾಗಿ ಹೊಸದಾಗಿ ಮದುವೆಯಾದ ನನ್ನ ಮಗ ಹಾಗೂ ಸೊಸೆಯನ್ನು ಆಶೀರ್ವಾದ ಪಡೆಯಲೆಂದು ಅವರ ಮನೆಗೆ ಕರೆದುಕೊಂಡು ಹೋಗಿದ್ದೆ. ಆಗ ಆ ಯಜಮಾನ ‘ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ. ನೋಡಮ್ಮ ಮಗು, ನಿನ್ನ ಅತ್ತೆ ಮತ್ತು ಮಾವ ಇಷ್ಟು ವರ್ಷ ನಾಲ್ಕು ಜನ ಮೆಚ್ಚುವಂತೆ ‘ಆನೆ'ಯನ್ನು ಕಾಪಾಡಿಕೊಂಡು ಜೀವನ ಮಾಡಿದ್ದಾರೆ. ನೀವೂ ಹಾಗೇ ಏನೇ ಬಂದರೂ ‘ಆನೆ'ಯನ್ನು ಚೆನ್ನಾಗಿ ನೋಡಿಕೊಳ್ಳಿ.’ ಎಂದಾಗ ಮಗ-ಸೊಸೆ ತಬ್ಬಿಬ್ಬು. ನಂತರ ಯಜಮಾನತಿ ನಗುತ್ತಾ ‘ಇವರು ಎಲ್ಲಾ ಕಡೆ ತಮಾಷೆನೆ. ‘ಆನೆ' ಅಂದರೆ ಆರೋಗ್ಯ-ನೆಮ್ಮದಿ ಕಣಮ್ಮ' ಅಂತ ವಿವರಿಸಿದ ಮೇಲೆ ಎಲ್ಲರ ಮುಖದಲ್ಲೂ ನಗು ಮೂಡಿತ್ತು.
-ಜಯಮಾಲಾ ಎನ್. ಪೈ
***
ಚಡ್ಡಿ ದೋಸ್ತ್
ಮೊಮ್ಮಗ ಧೀರಜ್ ತನ್ನ ಸ್ನೇಹಿತ ಅನಿರುದ್ಧನನ್ನು ಮನೆಗೆ ಕರೆದಿದ್ದ. ಅನಿರುದ್ಧ ಬಾಗಿಲಿಗೆ ಬರುತ್ತಿದ್ದಂತೆ, ‘ಏನೊ ನೀನು ಪ್ಯಾಂಟು ಹಾಕ್ಕೊಂಡು ಬಂದಿದ್ದೀಯಾ...' ಅಂತ ರೇಗಿದ. ‘ಪ್ಯಾಂಟ್ ಹಾಕಿದ್ರೆ ಏನಾಯ್ತು?’ ಎಂದು ಅನಿರುದ್ಧ ಕೇಳಿದ್ದಕ್ಕೆ ಈತ. ‘ನಾನು ನಮ್ಮ ಅಜ್ಜಿ-ತಾತನಿಗೆ ನನ್ನ ಚಡ್ಡಿ ದೋಸ್ತ್ ಬರ್ತಿದ್ದಾನೆ ಅಂತ ಹೇಳಿದ್ದೆ...ನೀನು ನೋಡಿದ್ರೆ ಪ್ಯಾಂಟು ಹಾಕ್ಕೊಂಡು ಬಂದಿದ್ದೀಯಾ’ ಎಂದು ಅಸಮಧಾನ ಹೊರಹಾಕಿದಾಗ ನಮಗೆಲ್ಲ ನಗು ತಡೆಯುವುದೇ ಕಷ್ಟವಾಯಿತು.
-ಕೃಷ್ಣ ಸುಬ್ಬರಾವ್
***
ಬಕ್ಕ ತಲೆಯ ಪ್ರಯೋಜನ !
ನನ್ನ ಹೆಂಡತಿಗೆ ಜ್ಯೋತಿಷಿಗಳ ಮೇಲೆ ಭಾರೀ ನಂಬಿಕೆ. ಅವತ್ತೊಂದು ದಿನ ಜ್ಯೋತಿಷಿಯೊಬ್ಬ ಟಿವಿಯಲ್ಲಿ ತಲೆಯಲ್ಲಿ ಎರಡು ಸುಳಿಗಳಿದ್ದವರು ಎರಡು ಮದುವೆ ಆಗುತ್ತಾರೆ ಎಂದು ಹೇಳುತ್ತಿದ್ದ. ಅದನ್ನು ನೋಡುತ್ತಿದ್ದ ನನ್ನ ಹೆಂಡತಿ ಕೂಡಲೇ ಎದ್ದು ಬಂದು ಸೋಫಾ ಮೇಲೆ ಕುಳಿತಿದ್ದ ನನ್ನನ್ನು ಬಗ್ಗಿಸಿ ತಲೆ ನೋಡಿದಳು. ನನ್ನ ತಲೆಯಲ್ಲಿ ಎರಡು ಸುಳಿ ಇದ್ದಿದ್ದು ನೆನಪಾಗಿ ಎದೆ ಧಸಕ್ಕೆಂದಿತು. ಮುಂದೇನಾಗುವುದೋ ಎಂದುಕೊಳ್ಳುವಾಗಲೇ ಅವಳು, ‘ಮದುವೆಯಾಗಿ ೨೫ ವರ್ಷಗಳಾದರೂ ನಿಮಗೆ ಸುಳಿಯೆಷ್ಟಿದೆ ಎಂದು ನೋಡಲೇ ಇಲ್ಲ. ಛೇ...ಈಗ ಸುಳಿಯಿರುವ ಜಾಗದಲ್ಲೇ ತಲೆ ಬೋಳಾಗಿದೆ.’ ಎಂದು ಪಶ್ಚಾತ್ತಾಪ ಪಟ್ಟಳು. ನಾನು ನೆಮ್ಮದಿಯ ನಿಟ್ಟುಸಿರು ಬಿಟ್ಟೆ.
-ರಮಣ್ ಶೆಟ್ಟಿ ರೆಂಜಾಳ್
(ಕೃಪೆ: ಮಯೂರ ಜನವರಿ ೨೦೨೦)