‘ಮಲಬಾರ್ ಪೈಡ್ ಹಾರ್ನ್ ಬಿಲ್’ ಗಳಿಗೂ ಆಗಾಗ ‘ನಶೆ’ ಏರುತ್ತದೆ!
ಹಾರ್ನ್ ಬಿಲ್ ಹಕ್ಕಿಗೆ ‘ನಶೆ’ ಏರುತ್ತದೆಯೇ?! ಆಗಾಗ ಏರುತ್ತದೆ! ಏರಿದ್ದು ಇಳಿಯುವವರೆಗೆ ಆಗಸಕ್ಕೆ ಲಗ್ಗೆ ಹಾಕಬಲ್ಲ ಈ ಕೌತುಕದ ಪಕ್ಷಿ ಭೂಮಿಗಿಳಿಯುತ್ತದೆ!
ವನ್ಯಜೀವಿಗಳ ಖ್ಯಾತ ಛಾಯಾಗ್ರಾಹಕ ನರೇಂದ್ರ ಪಾಟೀಲ್ ಕವಳೇಶ್ವರ ಗುಡ್ಡದಲ್ಲಿ ಕ್ಲಿಕ್ಕಿಸಿದ ಅಪರೂಪದ ಫೊಟೋ ಇದು. ಖ್ಯಾತ ಪರಿಸರಪ್ರೇಮಿಗಳಾದ ಪ್ರೊ. ಗಂಗಾಧರ ಕಲ್ಲೂರ ಹಾಗೂ ಪ್ರೊ. ಆಂಟೋನಿ ಅವರೊಂದಿಗೆ ಕವಳೇಶ್ವರ ಗುಡ್ದದಲ್ಲಿ ಚಾರಣ ಕೈಗೊಂಡಾಗ ‘ನಶೆ ಏರಿದ್ದರಿಂದ’ ಸುಸ್ತು ಹೊಡೆದು - ಬಳಲಿ, ನೆಲಕ್ಕೊರಗಿದ್ದ ಮಲಬಾರ್ ಪೈಡ್ ಹಾರ್ನ್ ಬಿಲ್ ಪಕ್ಷಿ ಕೈಗೆ ಸಿಕ್ಕಾಗ ತೆಗೆದ ಛಾಯಾಚಿತ್ರವದು. ಆಕಸ್ಮಿಕವಾಗಿ ಕೈಗೆ ಸಿಕ್ಕ, ನಿಸರ್ಗದ ಕೌತುಕವೊಂದರ ಆರೈಕೆಯಲ್ಲಿ ಅವರು ತೊಡಗಿದ ಮಾನವೀಯ ಕಳಕಳಿಯ ದೃಷ್ಯವಿದು.
ಮಲಬಾರ್ ಪೈಡ್ ಹಾರ್ನ್ ಬಿಲ್ (ಮಂಗಟ್ಟೆ ಹಕ್ಕಿ) ಪಶ್ಚಿಮ ಘಟ್ಟದ ಕಾಡುಗಳಿಗೆ ಹೊಂದಿಕೊಂಡಿರುವ ಹಳಿಯಾಳ, ದಾಂಡೇಲಿ ಹಾಗೂ ಅಂಬಿಕಾನಗರಗಳಲ್ಲಿ ಕಾಡಿನ ಆರೋಗ್ಯ ಸೂಚಕ ಪಕ್ಷಿಯಾಗಿ ಗುರುತಿಸಲ್ಪಡುತ್ತದೆ. ಈ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರೆ ಕಾಡು ಆರೋಗ್ಯಪೂರ್ಣವಾಗಿದೆ ಎಂದರ್ಥ. ಸಂಖ್ಯೆ ಕ್ಷೀಣಿಸಿದ್ದರೆ ಕಾಡಿನ ಯಾವುದೋ ಭಾಗದಲ್ಲಿದ್ದ ಹಣ್ಣಿನ ಮರಗಳು ಆಹುತಿಯಾಗಿವೆ; ಹಾಗಾಗಿ ಕಾಡಿನ ಸಮತೋಲನ ತಪ್ಪಿ ಅನಾರೋಗ್ಯ ಅಪ್ಪಳಿಸಿದೆ ಎಂದು ಗಣಿಸಲಾಗುತ್ತದೆ.
ಮಲಬಾರ್ ಪೈಡ್ ಹಾರ್ನ್ ಬಿಲ್ ಹಕ್ಕಿಗೆ ಹಿಂದಿ ಭಾಷೆಯಲ್ಲಿ ‘ಧನ್ ಛಿರಿ’, ಬಂಗಾಳಿಯಲ್ಲಿ ‘ಬಾಗ್ಮಾ ಧನೇಶ್’, ಓರಿಯಾದಲ್ಲಿ ‘ಕುಛಲಾ ಖಾ’, ಮರಾಠಿಯಲ್ಲಿ ‘ವಯೇರಾ’, ಕೊಂಕಣಿಯಲ್ಲಿ ‘ಕನಾರಿ’, ತಮಿಳಿನಲ್ಲಿ ‘ಇರಟ್ಟಾಯ್ ಛೋಂಡು ಕುರುವಿ’, ಮಲಯಾಳಿಯಲ್ಲಿ ‘ವೆಝಂಬಾಲ್’ಎಂದು ಕರೆಯಲಾಗುತ್ತದೆ. ಅಂಜೂರ ಜಾತಿಯ ಅತ್ತಿ, ಆಲ, ಬಸರಿ ಸೇರಿದಂತೆ ಎಲ್ಲ ತರಹದ ಕಾಡಿನ ಹಣ್ಣಿನ ಮರಗಳಲ್ಲಿ ಗುಂಪು ಗೂಡಿ ಮಕ್ಕಳಂತೆ ಗಲಾಟೆ ಎಬ್ಬಿಸಿ ಹಣ್ಣುಗಳನ್ನು ಹೆಕ್ಕುವುದು ನಯನ ಮನೋಹರ ದೃಷ್ಯ. ಅನಿವಾರ್ಯ ಪ್ರಸಂಗಗಳಲ್ಲಿ ಹಲ್ಲಿ, ಓತಿಕ್ಯಾತ, ಇಲಿ, ಮರಿ ಹೆಗ್ಗಣ ಮರಿ ಪಕ್ಷಿಗಳನ್ನು ಸಹ ಹಾರ್ನ್ ಬಿಲ್ ಕಬಳಿಸಬಲ್ಲುದು ಎನ್ನುತ್ತಾರೆ ಡಾ. ಸಲೀಂ ಅಲಿ. ಮಂಗಟ್ಟೆ ಹಕ್ಕಿ ಕೂಗಿದಾಗ ಕೇಕೆ ಹೊಡೆದು ನಕ್ಕ ಹಾಗೆ ಭಾಸವಾಗುತ್ತದೆ. ಮರದಿಂದ ಮರಕ್ಕೆ ಹಾರುವಾಗ ರೆಕ್ಕೆ ಬಡಿದು ತೇಲುವ ಅವುಗಳ ಕ್ಷಮತೆ ಹೆಲಿಕಾಪ್ಟರ್ ನೆನಪಿಸುವಂತಿರುತ್ತದೆ.
ಮಲಬಾರ್ ಪೈಡ್ ಹಾರ್ನ್ ಬಿಲ್ ತಿನ್ನುವ ಹಣ್ಣುಗಳು ಅತ್ಯಂತ ಮಾಗಿದ್ದು, ಕಳೆತ ಹಾಗೂ ಇನ್ನೇನು ಕೊಳೆಯುವ ಸ್ಥಿತಿ ತಲುಪಿದ್ದರೆ; ಮತ್ತು, ಅದು ದೀರ್ಘ ಕಾಲದ ಉಪವಾಸದ ನಂತರ ಏಕಾಏಕಿ ಗರಿಷ್ಠ ಪ್ರಮಾಣದಲ್ಲಿ ಅಂತಹ ಕಳೆತ ಹಣ್ಣುಗಳನ್ನು ತಿಂದಾಗ ಆಯ ತಪ್ಪಿ ನೆಲಕ್ಕೊರಗುತ್ತದೆ. ಹಾಗೆ ತಲೆ ಸುತ್ತಿದಾಗ ಕೂಡಲೇ ಸುಧಾರಿಸಿಕೊಳ್ಳಲು ಅದಕ್ಕೆ ನೀರು ದೊರಕದೇ ಹೋದಾಗ ಹಕ್ಕಿಯ ಜಠರದಲ್ಲಿ ಕಳೆತ-ಕೊಳೆತ ಹಣ್ಣುಗಳ ‘Fermentation‘ ದಿಂದಾಗಿ ‘ಅಲ್ಕೋಹಾಲ್’ ಉತ್ಪತ್ತಿಯ ಪ್ರಮಾಣ ಹೆಚ್ಚಾಗಿ ಬವಳಿ ಬಂದಂತಾಗಿ ಬೃಹತ್ ದೇಹಿ ಧರಾಶಾಯಿ ಆಗುತ್ತದೆ ಎನ್ನುತ್ತಾರೆ ಪ್ರೊ. ಗಂಗಾಧರ ಕಲ್ಲೂರ.
ಹೀಗೆ ಆಯತಪ್ಪಿ ನೆಲಕ್ಕೊರಗಿದ ಸಂದರ್ಭದಲ್ಲಿ ಕಾಡಿನ ಸೀಳು ನಾಯಿಗಳಿಗೆ, ನರಿ, ತೋಳಗಳಿಗೆ, ಹೈನಾ ಹಾಗೂ ಈ ಭಾಗದ ಕಪ್ಪು ಚಿರತೆಗಳಿಗೆ ಮಲಬಾರ್ ಪೈಡ್ ಹಾರ್ನ್ ಬಿಲ್ ಆಹುತಿಯಾಗುವ ಸಂಭವ ಹೆಚ್ಚು. ಬೃಹದಾಕಾರದ ಈ ಪಕ್ಷಿ ತನ್ನೆಲ್ಲ ಶಕ್ತಿ ಒಗ್ಗೂಡಿಸಿಕೊಂಡು ಹಾರಲು ಕನಿಷ್ಟ ವಿಶಾಲ ಜಾಗೆಯ ವರೆಗೆ ತೆವಳಬೇಕಾಗುತ್ತದೆ. ಕವಳೇಶ್ವರ ಗುಡ್ಡದಲ್ಲಿ ಹೀಗೆ ನೆಲಕ್ಕೊರಗಿ ಹಾರಲು ಪ್ರಯಾಸ ಪಡುತ್ತಿದ್ದ ಹಾರ್ನ್ ಬಿಲ್ ಸುದೈವದಿಂದ ಇವರಿಗೆ ಸಿಕ್ಕಿತ್ತು. ಅತ್ಯಂತ ಜಾಗರೂಕತೆಯಿಂದ ಬಂಧಿಸಿದ ಪ್ರೊ. ಕಲ್ಲೂರ್ ಸುಮಾರು ೨ ಲೀಟರ್ ನೀರಿನಲ್ಲಿ ಗ್ಲುಕೋಸ್ ಸೇರಿಸಿ ಬಾಟಲಿಯಿಂದ ಕೊಕ್ಕಿನ ಮೂಲಕ ಕುಡಿಸಿ ಪ್ರಥಮ ಚಿಕಿತ್ಸೆ ನೀಡಿದಾಗ ಪ್ರಜ್ಞಾ ಸ್ಥಿತಿಗೆ ಮರಳಿತು. ಒಂದು ಗಂಟೆಯ ನಂತರ ಹಕ್ಕಿಯ ಜಠರದಲ್ಲಿದ್ದ ಎಲ್ಲ `fermented' ದ್ರವ ಉಚ್ಛಿಷ್ಠ ರೂಪದಲ್ಲಿ ಹೊರಬಂದು ಹಾರ್ನ್ ಬಿಲ್ ತುಸು ಗೆಲುವಾಯಿತು.
ಖುಷಿಯಿಂದ ಚಾರಣ ಪ್ರಿಯರೆಲ್ಲ ಈ ಮಂಗಟ್ಟೆಯನ್ನು ಕವಳೇಶ್ವರದ ಸಾವಿರ ಮೆಟ್ಟಿಲುಗಳ ಮೇಲೆ ಒಯ್ದು ಅಲ್ಲಿಂದ ರೆಕ್ಕೆ ಅಗಲಿಸಿ ಹಾರಿ ಬಿಟ್ಟರು. ಗೆಲುವಾಗಿದ್ದ ಹಾರ್ನ್ ಬಿಲ್ ತುಸು ದೂರ ಕೆಳ ಮಟ್ಟದಲ್ಲಿ ಹಾರಿ ನಂತರ ಆಗಸಕ್ಕೆ ಚಿಮ್ಮಿ ಹಾರಿತು!
ರಣ ಹದ್ದಿನ ಗಾತ್ರದ ಈ ಹಕ್ಕಿಗೆ ಅಗಾಧವಾದ ಕೊಕ್ಕಿನ ಮೇಲೆ ಖಡ್ಗ ಮೃಗಕ್ಕಿರುವಂತೆ ಕೊಂಬು. ಕುತ್ತಿಗೆ ಹಾಗೂ ರೆಕ್ಕೆಗಳ ಬಣ್ಣ ಕಪ್ಪು. ಕೆಲವು ಮಂಗಟ್ಟೆಗಳಿಗೆ ಕುತ್ತಿಗೆ ಹಾಗೂ ಎದೆಯ ಮೇಲೆ ಬಿಳಿ ಪಟ್ಟಿಗಳಿರುತ್ತವೆ. ಗಲ್ಲದ ಬಳಿ ಕೆಂಪು ಪಟ್ಟಿ ಸಹ ಇರಬಹುದು. ಉದ್ದವಾದ ಬಿಳಿ ಬಾಲದ ತುದಿಯಲ್ಲಿ ಕಪ್ಪು ಪಟ್ಟಿಗಳು ಹಕ್ಕಿಯ ಸೌಂದರ್ಯಕ್ಕೆ ಕಿರೀಟವಿಟ್ಟಂತೆ ಭಾಸವಾಗುತ್ತದೆ. ರೆಕ್ಕೆಗಳ ಅಂಚಿನಲ್ಲಿರುವ ಬಿಳಿ ಪಟ್ಟಿಗಳು ಹಕ್ಕಿ ಹಾರಿದಾಗ ಸ್ಪಷ್ಟವಾಗಿ ಕಾಣುತ್ತವೆ. ನಮ್ಮ ದೇಶದ ಹಿಮಾಲಯದ ತಪ್ಪಲಿನಲ್ಲಿ, ಕರ್ನಾಟಕದ ಮುಕುಟವಾಗಿರುವ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಇವು ಕಂಡುಬರುತ್ತವೆ. ಪರಿಸರ ಹಾನಿ, ಹಣ್ಣಿನ ಮರಗಳ ಕೊರತೆ ಹಾಗೂ ಶಿಕಾರಿಗಳ ದೆಸೆಯಿಂದ ಈ ದೊಡ್ಡ ಮಂಗಟ್ಟೆ ಹಕ್ಕಿಗಳು ವಿನಾಶದ ಅಂಚಿಗೆ ತಲುಪಿವೆ ಎನ್ನುತ್ತಾರೆ ತಜ್ಞರು.
ಪ್ರೊ. ಕಲ್ಲೂರ್ ಅಭಿಪ್ರಾಯ ಪಡುವಂತೆ -"ಮಾರ್ಚ್ ತಿಂಗಳಿನಿಂದ ಜೂನ್ ವರೆಗೆ ಮಂಗಟ್ಟೆಗಳು ಸಂತಾನಾಭಿವೃದ್ಧಿಯಲ್ಲಿ ತೊಡಗಿಕೊಳ್ಳುತ್ತವೆ. ಕೆಲವೊಮ್ಮೆ ಫೆಬ್ರುವರಿ ತಿಂಗಳಿನಲ್ಲಿಯೂ ಅವುಗಳ ಸಂಸಾರ ಆರಂಭಗೊಳ್ಳಬಹುದು. ಆದರೆ, ಕಾಡು ಈಗ ಮೊದಲಿನಂತೆ ಉಳಿದಿಲ್ಲ. ಮಾನವ ನಿರ್ಮಿತ ‘ಮ್ಯಾನ್ ಗ್ರೋವ್’ಮಾದರಿ ಪಶ್ಚಿಮ ಘಟ್ಟದ ಅಳಿದು-ಉಳಿದ ಕಾಡಿನಲ್ಲಿ ಸಾಮಾಜಿಕ ಅರಣ್ಯೀಕರಣದ ಹೆಸರಿನಲ್ಲಿ ಸ್ಥಳೀಯ ಜೈವಿಕ ಸಂರಚನೆ ಹಾಗೂ ಸೂಕ್ಷ್ಮತೆ ಅರಿಯದೇ (ಇದು ನಮ್ಮ ಅರಿವಿಗೆ ಮೀರಿದ ವಿಚಾರವೂ ಹೌದು; ಮಿತಿಯೂ ಹೌದು. ಲಕ್ಷಾಂತರ ಸೂಕ್ಷ್ಮ ಕೊಂಡಿಗಳನ್ನು ತನ್ನೊಳಗೆ ಬೆಸೆದುಕೊಂಡಿರುವ ಸಂಕೀರ್ಣ ವ್ಯವಸ್ಥೆ ಅದು.) ವೃಕ್ಷಾರೋಪಣ ಕಾರ್ಯಕ್ರಮ ಮಾಡಿದೆವು. ಫಲವಾಗಿ ಕಾಡಿನ ಹಣ್ಣಿನ ಗಿಡಗಳು ಹೇಳಹೆಸರಿಲ್ಲದಂತಾದವು. ಹಾಗಾಗಿ ಬದುಕಲು ಅನಿವಾರ್ಯವಾಗಿ ಹಣ್ಣಿನ ಗಿಡಗಳನ್ನು ಅರಸಿಕೊಂಡು ನೂರಾರು ಕಿಲೋ ಮೀಟರ್ ಗಂಡು ಮಂಗಟ್ಟೆ ಹಕ್ಕಿ ಕ್ರಮಿಸಬೇಕಾದ ಅನಿವಾರ್ಯತೆ ಇಂದು ಬಂದೊದಗಿದೆ. ಇದು ಕಾಡಿಗೆ ತಗುಲಿರುವ ಅನಾರೋಗ್ಯದ ಸೂಚಕವಲ್ಲದೇ ಮತ್ತೇನು?"
ಮಲಬಾರ್ ಪೈಡ್ ಹಾರ್ನ್ ಬಿಲ್ ಹಕ್ಕಿಯ ವಿಶೇಷವೆಂದರೆ ಸಂತಾನಾಭಿವೃದ್ಧಿ ಕಾಲಕ್ಕೆ ಹೆಣ್ಣು ಹಕ್ಕಿ ಕಾಡಿನ ಮಧ್ಯದ ದೊಡ್ಡ ಮರವನ್ನು ಹುಡುಕುತ್ತದೆ. ಅತ್ಯಂತ ಎತ್ತರದಲ್ಲಿ ಪೊಟರೆ ಕೊರೆದು ತಾನು ಅದರೊಳಗೆ ಇಳಿಯುತ್ತದೆ. ಘೇಂಡಾಮೃಗದಂತೆ ಕೊಕ್ಕಿನ ಮೇಲೆ ದೊಡ್ಡ ಕೊಂಬಿರುವ ಕಾರಣ ಆ ಹದ್ದಿನ ಗಾತ್ರದ ಹಕ್ಕಿಗೆ ಇಡಿಯಾಗಿ ಆ ಬಿಲದೊಳಗೆ ತೂರಿಕೊಳ್ಳುವುದು ಸಾಧ್ಯವಾಗದ ಮಾತು. ಹಾಗಾಗಿ ಹೆಣ್ಣು ಮಂಗಟ್ಟೆ ಸಮರ್ಪಕವಾದ ಆಕಾರಕ್ಕೆ ಗೂಡನ್ನು ತರಲು ಗಂಡಿನ ಸಹಾಯದಲ್ಲಿ ಪೊಟರೆ ಕೊರೆಯುತ್ತ ಹೋಗುತ್ತದೆ. ಗೂಡು ಸಮರ್ಪಕವಾಗಿದೆ ಎನಿಸಿದಾಗ ಹೆಣ್ಣು ಮಂಗಟ್ಟೆ ಒಳಹೊಕ್ಕು ಕೇವಲ ಒಂದು ಮೊಟ್ಟೆ ಇಡುತ್ತದೆ. (ಕೆಲವೊಮ್ಮೆ ೨ ಮೊಟ್ಟೆಗಳನ್ನು ಸಹ ಇಟ್ಟ ಉದಾಹರಣೆಗಳಿವೆ; ನಾಲ್ಕು ಮೊಟ್ಟೆ ಇಟ್ಟ ದಾಖಲೆ ಸಹ ಇದೆ, ಆದರೆ ಮರಿ ಮಾತ್ರ ಒಂದು ಬದುಕಬಹುದು) ಮೊಟ್ಟೆಯ ಬಣ್ಣ ಬಿಳಿ ಹಾಗೂ ಕಟ್ಟಿಗೆ ಕಂದು ಬಣ್ಣ ಹೋಲುತ್ತದೆ.
ಮೊಟ್ಟೆ ಇಟ್ಟ ತಕ್ಷಣ ಕೇವಲ ಕೊಕ್ಕು ಮಾತ್ರ ಹೊರಬರುವಂತೆ ವ್ಯವಸ್ಥೆ ಮಾಡಿಕೊಂಡು ಬಾಯಿಯ ಜೊಲ್ಲು, ಗಿಡದ ರಾಳ ಹಾಗೂ ಅಂಟು ಬಳಸಿ ಇಡೀ ಬಾಗಿಲನ್ನು ಭದ್ರವಾಗಿ ಮುಚ್ಚಿಕೊಂಡು ಬಿಡುತ್ತದೆ. ಗಂಡು ಮಂಗಟ್ಟೆ ತನ್ನ ಪತ್ನಿಗೆ ಆಹಾರ ಒದಗಿಸುವ ಸೇವಕನ ಕೆಲಸಕ್ಕೆ ಅಣಿಯಾಗುತ್ತದೆ. ಇತ್ತ ಪೊಟರೆಯೊಳಗೆ ಹೆಣ್ಣು ಮಂಗಟ್ಟೆ ಮೊಟ್ಟೆಗೆ ಕಾವು ಕೊಡುತ್ತ, ತನಗೆ ಹಾಗೂ ಮೊಟ್ಟೆ ಒಡೆದು ಜೀವ ತಳೆಯಲಿರುವ ಮರಿಗೆ ಜಾಗೆ ಸಾಲದು ಎಂಬ ಕಾರಣಕ್ಕೆ ತನ್ನೆಲ್ಲ ಪುಕ್ಕಗಳನ್ನು ಕಿತ್ತು ಹೊರಗೆಸೆದು ಸಂಪೂರ್ಣ ಬೋಳಾಗಿ ಹಾರಲಾಗದ ಸ್ಥಿತಿಗೆ ತಲುಪುತ್ತದೆ. ಹಾಗೆಯೇ, ಚಿಕ್ಕ ಗರಿಗಳನ್ನು ಬಳಸಿ ತನ್ನ ಮರಿಗೆ ಪೊಟರೆಯ ಒಳಗೆ ‘ಬೆಡ್’ಸಹ ನಿರ್ಮಾಣ ಮಾಡುತ್ತದೆ. ಮೊಟ್ಟೆಯೊಡೆದು ಮರಿ ಹೊರಬಂದು ಹಾರುವ ಸ್ಥಿತಿ ತಲುಪುವ ವೇಳೆಗೆ ತಾಯಿ ಹಕ್ಕಿ ಸಹ ತನ್ನ ರೆಕ್ಕೆಯ ಗರಿಗಳನ್ನು ಮರಳಿ ಪಡೆದುಕೊಂಡಿರುತ್ತದೆ. ಈ ಮಧ್ಯೆ, ಗಂಡು ಹಕ್ಕಿ ತನ್ನ ಕೊಕ್ಕಿನಲ್ಲಿ ನೀರನ್ನು ಹಿಡಿದು ತರಲು ಸಾಧ್ಯವಾಗದ್ದರಿಂದ ನೀರಿನ ಅಂಶ ಹೇರಳವಾಗಿರುವ ಹಣ್ಣುಗಳನ್ನೇ ಹುಡುಕಿ ತನ್ನ ಕೊಕ್ಕಿನಲ್ಲಿ ಸಿಕ್ಕಿಸಿಕೊಂಡು ತಂದು ತಾಯಿ ಹಾಗೂ ಮರಿ ಹಕ್ಕಿಗೆ ಉಣಬಡಿಸುತ್ತದೆ. ಸಮಯ ಸಿಕ್ಕಾಗ ತಾನೂ ತನ್ನ ಉದರಂಭರಣ ಮಾಡಿಕೊಳ್ಳುತ್ತದೆ. ಕೆಲವೊಮ್ಮೆ ತಾನು ಉಪವಾಸ ಉಳಿದು ತನ್ನವರಿಗಾಗಿ ಹಣ್ಣನ್ನು ಸಹ ಹೆಕ್ಕಿತರುತ್ತದೆ ಗಂಡು ಮಲಬಾರ್ ಪೈಡ್ ಹಾರ್ನ್ ಬಿಲ್!
ಮರಿ ಹಾರುವ ಹಂತ ತಲುಪಿದಾಗ ತಾಯಿ ಹಕ್ಕಿ ಗೂಡಿನ ಬಾಗಿಲನ್ನು ತನ್ನ ಕೊಕ್ಕಿನಿಂದ ಒಡೆದು ತೆಗೆಯುತ್ತದೆ. ಈ ಹಂತದಲ್ಲಿ ತಾಯಿ ಹಕ್ಕಿ ಹಾಗೂ ಮರಿಯ ರೆಕ್ಕೆಗಳು ಬಲಿತದ್ದರಿಂದ ಪೊಟರೆ ಅತ್ಯಂತ ಚಿಕ್ಕದಾಗುತ್ತ ಸಾಗಿರುತ್ತದೆ. ತಂದೆ ಹಕ್ಕಿಯ ಸುಪರ್ದಿಯಲ್ಲಿ ಮರಿ ತಾನು ಕಾಡಿನ ಬದುಕಿಗೆ ಅಣಿಗೊಳ್ಳುತ್ತದೆ. ತನಗೊಂದು ಸಂಗಾತಿ ಜತೆಯಾಗುವ ವರೆಗೆ ತಂದೆ-ತಾಯಿ ಹಕ್ಕಿಗಳೊಂದಿಗೆ ಮರಿ ಅನ್ಯೋನ್ಯವಾಗಿ ಸ್ವಚ್ಛಂದವಾಗಿ ಹಾರಾಡುತ್ತ ಬಾಳುತ್ತದೆ. ಹತ್ತಾರು ಬಾರಿ ಇದೇ ಗೂಡನ್ನು ಸಂತಾನಾಭಿವೃದ್ಧಿಗೆ ತಂದೆ-ತಾಯಿ ಹಕ್ಕಿಗಳು ಬಳಸಬಹುದು ಅಥವಾ ಆ ಪೊಟರೆಯಲ್ಲಿ ಜೀವ ತಳೆದಿದ್ದ ಮರಿ ಹಕ್ಕಿ ತನ್ನ ಸಂಗಾತಿಯೊಂದಿಗೆ ಇದೇ ಪೊಟರೆಗೆ ಆಗಮಿಸಿ ಹೊಸ ಸಂಸಾರ ಹೂಡಬಹುದು!
ಕಾಡನ್ನು ಬಿಟ್ಟು ಕಾಂಕ್ರೀಟ್ ನಗರಕ್ಕೆ ಹಣ್ಣಿನ ಗಿಡಗಳನ್ನು ಹುಡುಕಿ ದೊಡ್ಡ ಕೊಕ್ಕಿನ ಹಕ್ಕಿ ಹಾರಿ ಬಂದರೆ? ದೇವರ ದಯೆಯಿಂದ ಕೆಲ ಹಣ್ಣುಗಳನ್ನು ಅದು ಸಂಗ್ರಹಿಸಿದರೂ ತನ್ನ ಪತ್ನಿಯ ಗೂಡಿಗೆ ಮರಳುವ ವರೆಗೆ ಕೊಕ್ಕಿನಲ್ಲಿ ಕಾಯ್ದಿಟ್ಟುಕೊಳ್ಳಲು ಪಡುವ ಬವಣೆ ಆ ದೇವರಿಗೇ ಪ್ರೀತಿ. ಮಾರ್ಗ ಮಧ್ಯೆ ಗಂಡು ಮಲಬಾರ್ ಪೈಡ್ ಹಾರ್ನ್ ಬಿಲ್ ಹಸಿವೆಯಾಗಿದೆ ಎಂದು ಹಣ್ಣುಗಳನ್ನು ನುಂಗುವಂತಿಲ್ಲ! ಹೈ ಟೆನ್ಶನ್ ವಿದ್ಯುತ್ ವಾಯರ್ ಗಳ ಬಗ್ಗೆ ಅರಿವಿರದ ಈ ಹಕ್ಕಿ ಅಪ್ಪಿ ತಪ್ಪಿ ಹಾರಿ ಬಂದು, ಕುಳಿತಲ್ಲಿ ಅಥವಾ ಆಯ ತಪ್ಪಿ ರೆಕ್ಕೆಗಳು ಬಡಿದಲ್ಲಿ ಅದು ಸತ್ತೇ ಹೋಗುವ ಅಪಾಯವಿದೆ. ನಗರ ಪರಿಸರಕ್ಕೆ ಹೊಂದಿಕೊಂಡಿರುವ ಪಕ್ಷಿಗಳು ಅದನ್ನು ಅಟ್ಟಿಸಿಕೊಂಡು ಹೋಗುವ ಭೀತಿ ಯಾವತ್ತೂ ಆವರಿಸಿರುತ್ತದೆ.
ನಗರ ಭೇಟಿಯ ಸಂದರ್ಭದಲ್ಲಿ ಗಂಡು ಹಕ್ಕಿ ಆಕಸ್ಮಿಕವಾಗಿ ಸಾವನ್ನಪ್ಪುವ ಅವಘಡ ಸಂಭವಿಸಿದರೆ....ರೆಕ್ಕೆ ಕಳೆದುಕೊಂಡು ಪೊಟರೆಯೊಳಗೆ ಬಂಧಿಯಾಗಿರುವ ಹೆಣ್ಣು ಹಕ್ಕಿ, ಜೀವ ತಳೆದಿರುವ ಅಥವಾ ತಳೆಯುತ್ತಿರುವ ಹಕ್ಕಿ ಮರಿ ಹತ್ತಾರು ದಿನಗಳು ಹಸಿವಿನಿಂದ ಬಳಲಿ ಪೊಟರೆಯೊಳಗೆ ಸಾವನ್ನಪ್ಪುತ್ತವೆ. ಆ ಪೊಟರೆ ಸ್ಮಶಾನವಾಗಿ ಪರಿವರ್ತಿತಗೊಳ್ಳುತ್ತದೆ. ಏಕ ಪತಿ ಹಾಗೂ ಪತ್ನಿ ವೃತಸ್ಥ ಮಂಗಟ್ಟೆಗಳು ಹಾಗೇನಾದರೂ ಅಕಾಲಿಕವಾಗಿ ಸಾವನ್ನಪ್ಪಿದರೆ ಬದುಕುಳಿದ ಹಕ್ಕಿ ಏಕಾಂಗಿಯಾಗಿ ಜೀವನ ಸವೆಸುತ್ತದೆ. ಬೇರೆ ಯಾವುದೇ ಮಂಗಟ್ಟೆ ದಂಪತಿ ಹಾಗೆ ಸ್ಮಶಾನವಾಗಿ ಪರಿವರ್ತಿತಗೊಂಡ ಪೊಟರೆಯನ್ನು ಸಂತಾನಾಭಿವೃದ್ಧಿಗೆ ಎಂದಿಗೂ ಬಳಸುವುದಿಲ್ಲ. ಅದು ಶಾಶ್ವತವಾಗಿ ತ್ಯಜಿಸಲ್ಪಟ್ಟ ಮನೆಯಾಗುತ್ತದೆ.
ಇತ್ತ ಗೂಡಿನಲ್ಲಿ ಹಾರಲಾಗದ ಸ್ಥಿತಿಯಲ್ಲಿ ಬಂಧಿಯಾದ ಹೆಣ್ಣು ಮಂಗಟ್ಟೆಗೆ ಬೇಟೆಗಾರರ ಕಾಟ ಸಹ ಇಲ್ಲವೆಂದಲ್ಲ. ಕಾಡು ಬೋಳಾಗಿ ಕೆಲವೇ ಎತ್ತರದ ಮರಗಳು ಉಳಿದಿರುವ ‘ಹೆಸರಿಗೆ ಕಾಡು’ಗಳಲ್ಲಿ ಬೇಟೆಗಾರರ ಹದ್ದಿನ ಕಣ್ಣುಗಳಿಗೆ ಎತ್ತರದ ಮರದ ಮೇಲೆ ಪೊಟರೆಯೊಳಗಿಂದ ತನ್ನ ದೊಡ್ಡ ಕೊಂಬನ್ನು ಹೊರ ಚಾಚಿ ಕುಳಿತ ತಾಯಿ ಹಕ್ಕಿಯನ್ನು ಗುರುತಿಸುವುದು ಕಷ್ಟದ ಕೆಲಸವೇನಲ್ಲ. ಸಹಜವಾಗಿ ಬೇಟೆಗಾರರ ಬಲಿಗೆ ಆಹುತಿಯಾಗುವ ಹೆಣ್ಣು ಹಕ್ಕಿ, ಅದರ ಮರಿ ಅಥವಾ ಮೊಟ್ಟೆ, ಗಂಡು ಹಕ್ಕಿಯನ್ನು ಜೀವನಪರ್ಯಂತ ಏಕಾಂಗಿ ಆಗಿಸಿಬಿಡುತ್ತದೆ.